ಡಿಜಿಟಲ್ ನ್ಯೂಸ್ ಪೋರ್ಟಲ್ ‘ತೆಲುಗು ಸ್ಕ್ರೈಬ್’ನ ಪತ್ರಕರ್ತ ಗೌತಮ್ ಪೋತಗೋನಿ ಅವರನ್ನು ಅಕ್ಟೋಬರ್ 7ರಂದು ಸೋಮವಾರ ತೆಲಂಗಾಣದಲ್ಲಿ ಬಂಧಿಸಲಾಗಿದೆ. ಅವರ ವಿರುದ್ದ ರಾಜಕೀಯ ಸಂಘರ್ಷ ಸೃಷ್ಟಿಗೆ ಪ್ರಯತ್ನ, ಸಾರ್ವಜನಿಕ ಸಾಮರಸ್ಯ ಕದಡುವುದು ಮತ್ತು ಸಿಎಂ ರೇವಂತ್ ರೆಡ್ಡಿಯನ್ನು ಅವಮಾನಿಸಿದ ಆರೋಪ ಹೊರಿಸಲಾಗಿದೆ.
ಗೌತಮ್ ಅವರು ತನ್ನ ಎಕ್ಸ್ ಖಾತೆಯಲ್ಲಿ ಏಳು ತಿಂಗಳ ಹಿಂದೆ, ಅಂದರೆ ಕಳೆದ ಮಾರ್ಚ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ರೈತರೊಬ್ಬರು ಮಾಜಿ ಸಿಎಂ ಕೆಸಿಆರ್ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ಹೊಗಳಿ, ಕಾಂಗ್ರೆಸ್ ನೇತೃತ್ವದ ಪ್ರಸ್ತುತ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ ದೃಶ್ಯವಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸೆಪ್ಟೆಂಬರ್ನಲ್ಲಿ ಪತ್ರಕರ್ತ ಗೌತಮ್ ಪೋತಗೋನಿ ವಿರುದ್ಧ ದಾಖಲಿಸಲಾದ ನಾಲ್ಕು ಎಫ್ಐಆರ್ಗಳನ್ನು ಆಧರಿಸಿ ಬಂಧನ ನಡೆದಿದೆ. ಅವುಗಳಲ್ಲಿ ಮೂರು ಈ ಅವರು ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿವೆ. ಮಾರ್ಚ್ನಲ್ಲಿ ವೈರಲ್ ಆದ ವಿಡಿಯೋ ಸಂಬಂಧ ಸೆಪ್ಟೆಂಬರ್ನಲ್ಲಿ ಏಕೆ ಪ್ರಕರಣ ದಾಖಲಿಸಲಾಗಿದೆ ಎಂಬುವುದು ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ.
ಮಾರ್ಚ್ 12, 2024 ರಂದು, ಗೌತಮ್ ಅವರು ನಲ್ಗೊಂಡದ ರೈತರೊಬ್ಬರ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ “ನನ್ನ ಪ್ರವಾಸದ ಸಮಯದಲ್ಲಿ, ನಾನು ನಿನ್ನೆ ಹೃದಯವಿದ್ರಾವಕ ಘಟನೆಯೊಂದನ್ನು ಎದುರಿಸಿದೆ. ನಲ್ಗೊಂಡ ಜಿಲ್ಲೆಯ ಮುಶಂಪಲ್ಲಿ ಗ್ರಾಮದ ಮಲ್ಲಯ್ಯ ಎಂಬ ರೈತ ನನಗೆ ಖುದ್ದಾಗಿ ವಿಡಿಯೋ ರೆಕಾರ್ಡ್ ಮಾಡಿ ಕೆಸಿಆರ್ ಅವರಿಗೆ ಕಳುಹಿಸುವಂತೆ ಕೇಳಿಕೊಂಡರು” ಎಂದು ಬರೆದುಕೊಂಡಿದ್ದರು.
ಗೌತಮ್ ಹಂಚಿಕೊಂಡಿದ್ದ ವಿಡಿಯೋದಲ್ಲಿ ರೈತ ಮಲ್ಲಯ್ಯ ಅವರು ಮಾಜಿ ಸಿಎಂ ಕೆಸಿಆರ್ ನೇತೃತ್ವದ ಬಿಆರ್ಎಸ್ ಸರ್ಕಾರದ ಕಾರ್ಯಕ್ರಮವಾದ ರೈತ ಬಂಧು ಅನ್ನು ಹೊಗಳಿದ್ದರು. ಬಿಆರ್ಎಸ್ ಸರ್ಕಾರ ಪರಿಚಯಿಸಿದ ರೈತರ ಹೂಡಿಕೆ ಬೆಂಬಲ ಯೋಜನೆ ಬಗ್ಗೆ ಹೆಚ್ಚು ಮಾತನಾಡಿದ್ದರು. ಪ್ರಸ್ತುತ ಆಡಳಿತದಲ್ಲಿ ತಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ ಎಂದಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ತೆಲುಗು ಸ್ಕ್ರೈಬ್ ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಟೀಕಿಸುವ ಮತ್ತು ಪ್ರತಿಪಕ್ಷ ಬಿಆರ್ಎಸ್ ಅನ್ನು ಬೆಂಬಲಿಸುವ ಸುದ್ದಿ ಸಂಸ್ಥೆಯಾಗಿದೆ.
ಶೇಕ್ ಅಶ್ರಫ್ ಎಂಬ ಉದ್ಯಮಿ ಮತ್ತು ಅನುಮಕೊಂಡ ಭಾರ್ಗವ್ ಎಂಬ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 28 ರಂದು ಖಾರ್ಕಾನಾ ಮತ್ತು ವನಸ್ಥಲಿಪುರಂ ಪೊಲೀಸ್ ಠಾಣೆಗಳಲ್ಲಿ ಗೌತಮ್ ವಿರುದ್ದ ಮೊದಲ ಮತ್ತು ಎರಡನೇ ಎಫ್ಐಆರ್ ದಾಖಲಾಗಿದೆ. ಮಂಚಾಲ್ ಪೊಲೀಸ್ ಠಾಣೆಯಲ್ಲಿ ಐ ರಾಮಚಂದ್ರ ರೆಡ್ಡಿ ಎಂಬ ರೈತ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 29 ರಂದು ಗೌತಮ್ ವಿರುದ್ಧ ಮೂರನೇ ಎಫ್ಐಆರ್ ದಾಖಲಿಸಲಾಗಿದೆ.
ಮೂವರ ದೂರುಗಳಲ್ಲೂ “ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್ಗಳನ್ನು ಹಾಕಿದ್ದು. ಅದು ನಮ್ಮ ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರವನ್ನು ಅವಹೇಳನ ಮಾಡಿದೆ” ಎಂದು ಆರೋಪಿಸಲಾಗಿದೆ.
“ಅಂತಹ ಪೋಸ್ಟ್ಗಳು ರಾಜಕೀಯ ಉದ್ವಿಗ್ನತೆ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉಂಟು ಮಾಡುತ್ತವೆ. ಸಾರ್ವಜನಿಕರ ನಡುವಿನ ಸಾಮಾರಸ್ಯ ಕೆಡಸುತ್ತವೆ. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಬಹುದು. ವಿಡಿಯೋ ಪೋಸ್ಟ್ ಮಾಡಿದವರು ಅನಗತ್ಯ ವದಂತಿಗಳನ್ನು ಹರಡುತ್ತಿದ್ದಾರೆ. ಅದು ಸಾರ್ವಜನಿಕರನ್ನು ದಾರಿ ತಪ್ಪಿಸುವಂತಿದೆ. ಅದರಿಂದಾಗಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆ” ಎಂದು ಮೂವರ ದೂರುಗಳಲ್ಲಿ ಹೇಳಲಾಗಿದೆ.
ಜೆ ಸಂಜೀವ್ ರೆಡ್ಡಿ ಎಂಬ ವ್ಯಕ್ತಿಯ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಗೌತಮ್ ಮತ್ತು ತೆಲುಗು ಸ್ಕ್ರೈಬ್ ಸಂಸ್ಥೆಯ ವಿರುದ್ದ ನಾಲ್ಕನೇ ಎಫ್ಐಆರ್ ದಾಖಲಿಸಿದ್ದಾರೆ. ಈ ದೂರಿನಲ್ಲಿ ಸುದ್ದಿ ಸಂಸ್ಥೆ ಸಿಎಂ ವಿರುದ್ಧ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಮೂರು ಯುಆರ್ಎಲ್ಗಳನ್ನು ಅಳಿಸಬೇಕು ಎಂದು ಒತ್ತಾಯಿಸಲಾಗಿದೆ. ಅವುಗಳಲ್ಲಿ ಒಂದು ಅದಿಲಾಬಾದ್ನಲ್ಲಿ ಹಿರಿಯ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸರ್ಕಾರ ಕೆಡವಬೇಕು ಎಂದು ಅವಾಚ್ಯವಾಗಿ ನಿಂದಿಸಿರುವುದು ಎಂದು ನ್ಯೂಸ್ ಮಿನಿಟ್ ವರದಿ ತಿಳಿಸಿದೆ.
ಇದನ್ನೂ ಓದಿ : ಹರಿಯಾಣ | 90ರಲ್ಲಿ 86 ಶಾಸಕರು ಕೋಟ್ಯಾಧಿಪತಿ; 12 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ – ಎಡಿಆರ್ ವರದಿ


