ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಹಗ್ಗ-ಜಗ್ಗಾಟ ಮುಂದುವರೆದಿದೆ. ಚುನಾವಣೆಗೂ ಮೊದಲು ಶಿವಸೇನೆ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಚುನಾವಣೆ ಫಲಿತಾಂಶದ ನಂತರ ವರಸೆ ಬದಲಿಸಿದೆ. ಮೈತ್ರಿ ನಿಯಮದಂತೆ ನಡೆದುಕೊಳ್ಳದ ಬಿಜೆಪಿ ನಡೆ ಶಿವಸೇನೆಗೆ ನುಂಗಲಾರದ ತುತ್ತಾಗಿದೆ. ಸಿಎಂ ಕುರ್ಚಿಗಾಗಿ ಹರಸಾಹಸ ಪಡುತ್ತಿರುವ ಶಿವಸೇನೆ, ಎನ್.ಸಿ.ಪಿ ಹಾಗೂ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದ್ದು, ಬಿಜೆಪಿಗೆ ಎಚ್ಚರಿಕೆ ನೀಡಿದೆ. ಆದರೆ ಇದ್ಯಾವುದಕ್ಕೂ ಬಗ್ಗದ ಬಿಜೆಪಿ, ಸಿಎಂ ಹುದ್ದೆ ಬಿಟ್ಟು ಕೊಡುವ ಮಾತಿಲ್ಲ ಎಂದಿದೆ.
ಈ ಜಟಾಪಟಿಯ ಮಧ್ಯೆ ಶಿವಸೇನೆ ನಾಯಕ ಕಿಶೋರ್ ತಿವಾರಿ, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ಆರ್.ಎಸ್.ಎಸ್ ಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರದಲ್ಲಿ ಆರ್.ಎಸ್.ಎಸ್. ಮಧ್ಯಸ್ತಿಕೆ ವಹಿಸಬೇಕು. ಮುಖ್ಯಸ್ಥ ಮೋಹನ್ ಭಾಗವತ್ ಅವರು, ಬಿಜೆಪಿಗೆ 50:50 ಸೂತ್ರ ಪಾಲಿಸುವಂತೆ ಬುದ್ಧಿ ಹೇಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಕ್ಕೇರಲು ಶಿವಸೇನೆ ಕಸರತ್ತು: 170 ಶಾಸಕರನ್ನು ಭೇಟಿಯಾಗಲು ಸಿದ್ಧತೆ..!
ಬಿಜೆಪಿ 50:50 ಸೂತ್ರದಂತೆ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಚುನಾವಣಾ ಪೂರ್ವದಲ್ಲಿ ಸಮಾನ ಅಧಿಕಾರ ನಿಯಮಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದ ಬಿಜೆಪಿ ಈಗ ಹಾಗೆ ನಡೆದುಕೊಳ್ಳುತ್ತಿಲ್ಲ. ಮೈತ್ರಿ ಧರ್ಮ ಪಾಲಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರ ರಚನೆ ಅಸಾಧ್ಯವಾಗಿದೆ. ನೀವೊಮ್ಮೆ ಬಿಜೆಪಿ ಜತೆ ಚರ್ಚಿಸಬೇಕು ಎಂದು ಕೇಳಿದೆ.
ಆದರೆ ಇದ್ಯಾವುದಕ್ಕೂ ಆರ್.ಎಸ್.ಎಸ್ ಉತ್ತರ ನೀಡಿಲ್ಲ. 2014ರಲ್ಲಿ ಬಿಜೆಪಿ ಹಾಕಿದ್ದ ಷರತ್ತುಗಳನ್ನು ಪಾಲಿಸಿದ್ದೇವೆ. ಈಗ ಅಡಕತ್ತರಿಯಲ್ಲಿ ಸಿಕ್ಕಂತಾಗಿದ್ದೇವೆ. ಒಂದು ವೇಳೆ ಬಿಜೆಪಿ ನಿಯಮವನ್ನು ಗಾಳಿಗೆ ತೂರಿದರೆ ಮುಂದಿನ ಹೆಜ್ಜೆಯಿರಿಸಲು ಶಿವಸೇನೆ ರೆಡಿಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಇನ್ನು ಸರ್ಕಸ್ನಲ್ಲಿ: BJP V/s ಶಿವಸೇನೆ, NCP ಮತ್ತು ಕಾಂಗ್ರೆಸ್?
ಇತ್ತ ಶಿವಸೇನೆ ವಕ್ತಾರ ಸಂಜಯ್ ರಾವತ್ ಮಾತನಾಡಿ, ರಾಜ್ಯದ ಮುಂದಿನ ಸಿಎಂ ಶಿವಸೇನೆ ಪಕ್ಷದಿಂದಲೇ ಆಗಬೇಕು. ಇದು ಆದಷ್ಟು ಬೇಗ ಆಗಲಿದೆ. ಎನ್ಸಿಪಿಯ ಶರದ್ ಪವಾರ್ ಅವರಿಗೂ ಸಿಎಂ ಸ್ಥಾನ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆ ಬದಲಾಗಲಿದೆ. ಇದು ರಾಜಕೀಯ ಹಂಗಾಮಾ ಅಲ್ಲ, ನ್ಯಾಯಕ್ಕಾಗಿ ಮತ್ತು ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ. ಸಮಾನತೆ ಮಂತ್ರ ಜಪಿಸುವ ಬಿಜೆಪಿ, ಅದನ್ನು ಅಳವಡಿಸಿಕೊಳ್ಳಬೇಕು. ಏನೇ ಆದರೂ ಜಯ ನಮ್ಮದೇ ಎಂದು ಹೇಳಿದ್ದಾರೆ.