ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆರು ಜನ ಸಶಸ್ತ್ರ ಹೋರಾಟಗಾರರು ಮುಖ್ಯವಾಹಿನಿಗೆ ಮರಳುವ ಮೂಲಕ ಕರ್ನಾಟಕವು ನಕ್ಸಲ್ ಮುಕ್ತವಾಗುವತ್ತ ಹೆಜ್ಜೆ ಇಟ್ಟಿತ್ತು. ಇಂದು, ಆ ತಂಡದ ಕೊನೆಯ ನಾಯಕ ಕೋಟೆಹೊಂಡ ರವೀಂದ್ರ ಮುಖ್ಯವಾಹಿನಿಗೆ ಮರಳುವ ಮೂಲಕ ರಾಜ್ಯ ಅಧಿಕೃತವಾಗಿ ನಕ್ಸಲ್ ಮುಕ್ತವಾಗಿದೆ.
ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ನಾಯಕ ರವೀಂದ್ರ ಅವರು ಇಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ಅವರು ಇಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ. ರವೀಂದ್ರಗೆ ಚಿಕ್ಕಮಗಳೂರು ಜಿಲ್ಲಾಡಳಿತ ₹7 ಲಕ್ಷ ಪ್ಯಾಕೇಜ್ ಘೋಷಣೆ ಮಾಡಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ, ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ಅವರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹಾಗೂ ಶಾಂತಿಗಾಗಿ ನಾಗರೀಕರ ವೇದಿಕೆ ಸದಸ್ಯರು ಹರಸಾಹಸ ಪಟ್ಟಿದ್ದರು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಗೆ ಒಪ್ಪಿರುವ ರವಿಂದ್ರ ಅವರ ಮೇಲೆ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಇವರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 14 ಪ್ರಕರಣಗಳು ಸೇರಿ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಪ್ರಕರಣಗಳು ದಾಖಲಾಗಿವೆ.
“17 ವರ್ಷಗಳ ಹಿಂದೆ ಮೂಲಭೂತ ಹಕ್ಕುಗಳಿಗಾಗಿ ನಕ್ಸಲ್ ಚಳವಳಿಗೆ ದುಮುಕಿದ್ದೆ. ವಾಸದ ಮನೆ ಸೇರಿದಂತೆ ಮೂಲಭೂತ ಸೌಕರ್ಯ ನೀಡಲು ಸರ್ಕಾರ ವಿಫಲವಾಗಿತ್ತು. ಈಗ ಸ್ವಲ್ಪ ಬದಲಾವಣೆ ಕಂಡು ಬರುತ್ತಿದೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧಾರ ಮಾಡಿದ್ದೇನೆ. ಸರ್ಕಾರಕ್ಕೆ ನನ್ನ ಬೇಡಿಕೆಯ ಕುರಿತು ಪತ್ರ ನೀಡಿದ್ದೇನೆ” ಎಂದು ರವೀಂದ್ರ ಹೇಳಿದ್ದಾರೆ.
“ಆದಿವಾಸಿಗಳಿಗೆ ಹಾಗೂ ಕಾಡಂಚಿನ ಜನರಿಗೆ ಜಮೀನಿನ ಹಕ್ಕು ಪತ್ರ ನೀಡಬೇಕು ಹಾಗೂ ಅವರು ವಾಸಿಸುವ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಬೇಕು” ಎಂಬ ಎರಡು ಪ್ರಮುಖ ಬೇಡಿಕೆ ಇಟ್ಟಿದ್ದಾರೆ.
ಈ ಸಂದರ್ಭದಲ್ಲಿ ಶಾಂತಿಗಾಗಿ ನಾಗರೀಕರ ವೇದಿಕೆಯ ನೂರ್ ಶ್ರೀಧರ್, ಕೆಎಲ್ ಅಶೋಕ್, ನಗರಗೆರೆ ರಮೇಶ್, ವಿಎಸ್ ಶ್ರೀಧರ್, ನಕ್ಸಲ್ ಪುನರ್ವಸತಿ ಸಮಿತಿಯಿಂದ ಕೆಪಿ ಶ್ರೀಪಾಲ್ ಹಾಗೂ ಗೌಸ್ ಮೊಹಿಯುದ್ದೀನ್, ಹಾಗಲಗಂಚಿ ವೆಂಕಟೇಶ್ ಮತ್ತು ಇಸಾಬೆಲ್ಲಾ ಇದ್ದರು.
ಶರಣಾಗತಿ ಬಳಿಕ ರವೀಂದ್ರ ಅವರನ್ನು ಡಿವೈಎಸ್ಪಿ ವಶಕ್ಕೆ ಒಪ್ಪಿಸಲಾಗಿದೆ; ಶೃಂಗೇರಿ ಪೊಲೀಸ್ ಠಾಣೆಗೆ ಅವರನ್ನು ಒಪ್ಪಿಸುವ ಸಾಧ್ಯತೆ ಇದೆ.
ನಕ್ಸಲ್ ರವೀಂದ್ರ ಶರಣಾಗಿರುವುದು ಉತ್ತಮ ಬೆಳವಣಿಗೆ ಎಂದು ಕಾನೂನು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಮನಸ್ಸು ಪರಿವರ್ತನೆ, ಬದಲಾವಣೆ ಮಾಡಿಕೊಂಡು ಮುಖ್ಯ ವೇದಿಕೆಗೆ ಬರುವುದು ಅಗತ್ಯ. ಸಂವಿಧಾನದ ಅಡಿ ಕೆಲಸ ಮಾಡಬೇಕಿರುವುದು ಅತ್ಯಂತ ಮಹತ್ವದ್ದು. ಆ ಹಿನ್ನೆಯಲ್ಲಿ ಅವರು ಮುಖ್ಯ ವಾಹಿನಿಗೆ ಬಂದಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಆಪರೇಷನ್ ಮುಕ್ತಾಯಗೊಂಡಿದೆ. ನಕ್ಸಲ್ ಶರಣಾಗತಿ ಸಂಬಂಧ ಕಾರ್ಯ ನಿರ್ವಹಿಸಿರುವ 22 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ; ಚಿಕ್ಕಮಗಳೂರು| ನಕ್ಸಲ್ ನಾಯಕ ಕೋಟೆಹೊಂಡ ರವೀಂದ್ರ ಇಂದು ಮುಖ್ಯವಾಹಿನಿಗೆ


