ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ರಾಜೀನಾಮೆ ನೀಡಿದ್ದ ದೆಹಲಿಯ ಎಂಟು ಶಾಸಕರು ಶನಿವಾರ ಬಿಜೆಪಿ ಸೇರಿದ್ದಾರೆ. ಫೆಬ್ರವರಿ 5 ರಂದು ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದೇ ವೇಳೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಸೇರಿದ್ದು ಆಡಳಿತರೂಢ ಎಎಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. ಎಎಪಿಗೆ ರಾಜೀನಾಮೆ
ತ್ರಿಲೋಕಪುರಿಯ ನಿರ್ಗಮಿತ ಶಾಸಕ ರೋಹಿತ್ ಕುಮಾರ್ ಮೆಹ್ರೌಲಿಯಾ, ಜನಕಪುರಿ ಕ್ಷೇತ್ರವನ್ನು ಪ್ರತಿನಿಧಿಸುವ ರಾಜೇಶ್ ರಿಷಿ, ಕಸ್ತೂರ್ಬಾ ನಗರ ಶಾಸಕ ಮದನ್ ಲಾಲ್, ಮೆಹ್ರೌಲಿ ಶಾಸಕ ನರೇಶ್ ಯಾದವ್, ಬಿಜ್ವಾಸನ್ ಶಾಸಕ ಭೂಪಿಂದರ್ ಸಿಂಗ್ ಜೂನ್, ಪಾಲಂ ಶಾಸಕ ಭಾವನಾ ಗೌರ್, ಆದರ್ಶ ನಗರ ಶಾಸಕ ಪವನ್ ಶರ್ಮಾ ಮತ್ತು ಮದೀಪುರ ಶಾಸಕ ಗಿರೀಶ್ ಸೋನಿ ಶನಿವಾರ ಬಿಜೆಪಿ ಸೇರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಜೆಪಿಯ ದೆಹಲಿ ಮುಖ್ಯಸ್ಥ ವೀರೇಂದ್ರ ಸಚ್ದೇವ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಅವರ ಸಮ್ಮುಖದಲ್ಲಿ ಎಂಟು ಶಾಸಕರು ಬಿಜೆಪಿಗೆ ಸೇರಿದ್ದಾರೆ. ಮೆಹ್ರೌಲಿ ಶಾಸಕ ನರೇಶ್ ಯಾದವ್ ಹೊರತುಪಡಿಸಿ, ರಾಜೀನಾಮೆ ನೀಡಿದ ಯಾವುದೇ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿರಲಿಲ್ಲ. ಎಎಪಿಗೆ ರಾಜೀನಾಮೆ
ಶಾಸಕರು “ಆಪ್ಡಾ [ವಿಪತ್ತು]” ದಿಂದ ತಮ್ಮನ್ನು ಮುಕ್ತಗೊಳಿಸಿಕೊಂಡಿದ್ದರಿಂದ ಇದು ಐತಿಹಾಸಿಕ ದಿನವಾಗಿದೆ. ಚುನಾವಣೆಯ ನಂತರ ದೆಹಲಿಯೂ ಅದರಿಂದ ಮುಕ್ತವಾಗುತ್ತದೆ ಎಂದು ಅವರು ಆಶಿಸಿದ್ದಾರೆ ಎಂದು ಪಾಂಡ ಇದೇ ವೇಳೆ ಹೇಳಿದ್ದಾರೆ.
ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಬರೆದ ರಾಜೀನಾಮೆ ಪತ್ರದಲ್ಲಿ, “ಪಕ್ಷದಲ್ಲಿ ಭ್ರಷ್ಟಾಚಾರ ನುಸುಳಿದೆ” ಎಂದು ಆರೋಪಿಸಿದ್ದಾರೆ. “ದಲಿತ ಮತ್ತು ವಾಲ್ಮೀಕಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಚಳವಳಿಯ ಸಮಯದಲ್ಲಿ ತಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷವು ಈ ಸಮುದಾಯಗಳನ್ನು ಉನ್ನತೀಕರಿಸುವುದಾಗಿ ಭರವಸೆ ನೀಡಿತ್ತು ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಗುತ್ತಿಗೆ ಆಧಾರಿತ ಕಾರ್ಮಿಕರನ್ನು ರದ್ದುಗೊಳಿಸುವುದು ಮತ್ತು ತಾತ್ಕಾಲಿಕ ಕಾರ್ಮಿಕರನ್ನು ಶಾಶ್ವತವಾಗಿ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳನ್ನು ಪರಿಹರಿಸುವಲ್ಲಿ ಪಕ್ಷವೂ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಜನಕಪುರಿ ಕ್ಷೇತ್ರವನ್ನು ಪ್ರತಿನಿಧಿಸುವ ರಾಜೇಶ್ ರಿಷಿ ತಮ್ಮ ರಾಜೀನಾಮೆ ಪತ್ರದಲ್ಲಿ, ಎಎಪಿ ತನ್ನ ಮೂಲ ಮೌಲ್ಯಗಳಿಂದ ದೂರ ಸರಿದಿದೆ ಎಂದು ಹೇಳಿಕೊಂಡಿದ್ದಾರೆ. “ಪಕ್ಷವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಅದು ಸ್ಥಾಪಿಸಲಾದ ಭ್ರಷ್ಟಾಚಾರ-ಮುಕ್ತ ಮತ್ತು ಪಾರದರ್ಶಕ ಸರ್ಕಾರದ ತತ್ವಗಳಿಗೆ ದ್ರೋಹ ಬಗೆದಿದೆ” ಎಂದು ಅವರು ಟೀಕಿಸಿದ್ದಾರೆ.
ಶಾಸಕರಾದ ಲಾಲ್ ಮತ್ತು ಗೌರ್ ತಮ್ಮ ಪತ್ರಗಳಲ್ಲಿ ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಎಲ್ಲಾ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್ಗೆ ಸಲ್ಲಿಸಿದ್ದು, ಅವರು ಸದನದ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
2020 ರಲ್ಲಿ ನಡೆದ ಕಳೆದ ರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ವಿಧಾನಸಭಾ ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿದೆ.
ಇದನ್ನೂಓದಿ: Union Budget 2025 | ರಾಜ್ಯಕ್ಕೆ ಚೊಂಬು ಕೊಡುವ ಅಭಿಯಾನ ಕೇಂದ್ರ ಮುಂದುವರೆಸಿದೆ – ಸಿಎಂ ಅಸಮಾಧಾನ.
Union Budget 2025 | ರಾಜ್ಯಕ್ಕೆ ಚೊಂಬು ಕೊಡುವ ಅಭಿಯಾನ ಕೇಂದ್ರ ಮುಂದುವರೆಸಿದೆ – ಸಿಎಂ ಅಸಮಾಧಾನ


