ಆಕ್ಷೇಪಾರ್ಹ ಹೇಳಿಕೆ ನೀಡಿ ದೇಶದಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವ ಬಲಪಂಥೀಯ ಯೂಟ್ಯೂಬರ್ ಮತ್ತು ಪಾಡ್ಕಾಸ್ಟರ್ ರಣವೀರ್ ಅಲಹಾಬಾದಿಯಾ ಅವರ ಕಾರ್ಯಕ್ರಮಗಳ ಪ್ರಸಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 3) ತೆಗೆದು ಹಾಕಿದೆ.
ಅಲಹಾಬಾದಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾಧ ಸೂರ್ಯ ಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ನೇತೃತ್ವದ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠವು “ಸಭ್ಯತೆ ಮತ್ತು ನೈತಿಕತೆಯೊಂದಿಗೆ, ಎಲ್ಲಾ ವಯೋಮಾನದವರಿಗೂ ಸೂಕ್ತವಾಗುವಂತಹ ವಿಷಯಗಳೊಂದಿಗೆ ‘ದಿ ರಣವೀರ್ ಶೋ’ ಪುನರಾರಂಭಿಸಲು ಅನುಮತಿ ನೀಡಿದೆ.
‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ರಣವೀರ್ ಅಲಹಾಬಾದಿಯಾ ನೀಡಿದ್ದ ಅಶ್ಲೀಲ ಹೇಳಿಕೆಗಳ ವಿರುದ್ಧ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಅಸ್ಸಾಂ ಪೊಲೀಸರು ದಾಖಲಿಸಿದ್ದ ಎಫ್ಐಆರ್ಗಳಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದಾಗ, ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸುಪ್ರೀಂಮ ಕೋರ್ಟ್ ಅಲಾಹಾಬಾದಿಯಾಗೆ ಷರತ್ತು ವಿಧಿಸಿತ್ತು.
ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಅಲಹಾಬಾದಿಯಾಗೆ ಕೋರ್ಟ್ ಷರತ್ತು ವಿಧಿಸಿದೆ. ವಿದೇಶದಲ್ಲಿ ನಡೆಸಲಾದ ಕಾರ್ಯಕ್ರಮವೊಂದರಲ್ಲಿ ಆರೋಪಿಗಳಲ್ಲಿ ಒಬ್ಬರು ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವುದನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಆಕ್ಷೇಪಿಸಿದ್ದಾರೆ. ಅಲಹಾಬಾದಿಯಾ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲು ನಿರಾಕರಿಸಿದ ನ್ಯಾಯಾಲಯ, ಪ್ರಕರಣದ ತನಿಖೆಗೆ ಪ್ರಾರಂಭಗೊಂಡ ನಂತರವೇ ಅನುಮತಿ ನೀಡಬಹುದು ಎಂದಿದೆ.
‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ದಾಖಲಾದ ಪ್ರಕರಣ ಸಂಬಂಧ ಅಲಹಾಬಾದಿಯಾ ವಿರುದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಅವರ ಅಸಭ್ಯ ಹೇಳಿಕೆಗಾಗಿ ಅವರನ್ನು ಖಂಡಿಸಬೇಕು ಎಂದು ಫೆಬ್ರವರಿ 18 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ವಿಚಾರಣೆಯ ಸಮಯದಲ್ಲಿ, ಅಲಹಾಬಾದಿಯಾ ಅವರನ್ನು ಪ್ರತಿನಿಸಿದ್ದ ವಕೀಲ ಡಾ. ಅಭಿನವ್ ಚಂದ್ರಚೂಡ್, ಎಫ್ಐಆರ್ಗಳನ್ನು ಒಟ್ಟುಗೂಡಿಸುವಂತೆ ಮನವಿ ಮಾಡಿದ್ದಾರೆ. ಅಲಹಾಬಾದಿಯಾ ಅವರಿಗೆ ಹಲವಾರು ಜೀವ ಬೆದರಿಕೆಗಳು ಬಂದಿವೆ. ಮೊದಲು ಮಹಾರಾಷ್ಟ್ರ, ನಂತರ ಅಸ್ಸಾಂ ಮತ್ತು ಈಗ ಜೈಪುರದಲ್ಲಿ ಅವರ ವಿರುದ್ಧ ಬಹುಮಾನ ಘೋಷಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಅಪರಾಧವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಳೆಯ ಸೆಕ್ಷನ್ 153-ಎ (ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಬರುತ್ತದೆ ಎಂದಿದ್ದಾರೆ.
ಈ ವೇಳೆ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸೂರ್ಯ ಕಾಂತ್, “ಅಶ್ಲೀಲತೆ ಮತ್ತು ಅಸಭ್ಯತೆಯ ಮಾನದಂಡಗಳೇನು? ಈ ದೇಶದಲ್ಲಿ ಇದು ಅಶ್ಲೀಲತೆಯಲ್ಲದಿದ್ದರೆ ಮತ್ತಿನ್ನೇನು? ನೀವು ಬಳಸುತ್ತಿರುವ ಭಾಷೆಯನ್ನು ನೋಡಿ! ಎಲ್ಲಾ ರೀತಿಯ ಭಾಷೆಗಳನ್ನು ಮಾತನಾಡಲು ನಿಮಗೆ ಪರವಾನಗಿ ಇದೆಯೇ? ಇದು ಖಂಡನೀಯ ನಡವಳಿಕೆ. ಇದು ಕೇವಲ ವ್ಯಕ್ತಿಯ ನೈತಿಕತೆಯ ಪ್ರಶ್ನೆಯಲ್ಲ. ಅವರು ತನ್ನ ಹೆತ್ತವರನ್ನೂ ಅವಮಾನಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಈ ವ್ಯಕ್ತಿಯ ಮನಸ್ಸಿನಲ್ಲಿ ಏನೋ ಕೊಳಕು ಹರಡಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಅಸ್ಸಾಂ ಹಾಗೂ ಒಡಿಶಾ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ವಿವಾದಾತ್ಮಕ ಯುಟ್ಯೂಬ್ ಕಾರ್ಯಕ್ರಮ ‘ಇಂಡಿಯಾ ಗಾಟ್ ಲ್ಯಾಟೆಂಟ್’ ಅಸಭ್ಯ ಹಾಗೂ ವಿಕೃತವಾಗಿದೆ. ಹೀಗಾಗಿ ಕಾರ್ಯಕ್ರಮ ಪ್ರಸಾರಕ್ಕೆ ನೀಡಿರುವ ತಡೆಯನ್ನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್ ಹಿಂಪಡೆಯಬಾರದು. ಕೆಲಕಾಲ ಅವರು ಸುಮ್ಮನಿರಲಿ’ ಎಂದು ಕೋರಿದ್ದಾರೆ.
‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಅಲಹಾಬಾದಿಯಾ ನೀಡಿದ್ದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇವರ ಹೇಳಿಕೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿದ್ದವು.
ಕೇರಳ: ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಟ್ರಾನ್ಸ್ಜೆಂಡರ್ ರಕ್ಷಣಾ ಘಟಕಗಳ ಸ್ಥಾಪನೆಗೆ ಅನುಮತಿ


