Homeಕರ್ನಾಟಕಮಾಜಿ ಸ್ಪೀಕರ್‌ ರಮೇಶ್ ಕುಮಾರ್‌ರವರಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ.. : ಪೂರ್ಣ ಪತ್ರ...

ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌ರವರಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ.. : ಪೂರ್ಣ ಪತ್ರ ಓದಿ

ಉಪಚುನಾವಣೆಗಳನ್ನು ಮೌಲ್ಯಾಧಾರಿತವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.

- Advertisement -
- Advertisement -

ಮಾಜಿ ಸ್ಪೀಕರ್‌ ಕೆ.ಆರ್. ರಮೇಶ್ ಕುಮಾರ್‌ರವರು ಉಪಚುನಾವಣೆಯನ್ನು ಕುರಿತು ಒಂದು ಗಂಭೀರವಾದ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ರವರಿಗೆ ಬರೆದಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ ಓದಿ.

ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಮನವಿ

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದು ಗಮನಾರ್ಹ ವಿಷಯ. ಸಹಜವಾಗಿಯೇ ಉಪಚುನಾವಣೆಗಳು ಸಂವಿಧಾನಾತ್ಮಕವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತವೆ.

ಆದರೆ ಇಂದಿನ ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಸಂವಿಧಾನದ 10ನೇ ಷೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಉಲ್ಲಂಘನೆಯ ಕಾರಣದಿಂದಾಗಿ ಶಾಸನಾತ್ಮಕವಾಗಿ ಶಾಸನ ಸಭೆಯ ಸದಸ್ಯರಾಗಿ ಮುಂದುವರೆಯಲು ಅನರ್ಹಗೊಂಡ ಶಾಸಕ ಸ್ಥಾನಗಳನ್ನು ತುಂಬುವ ಉದ್ದೇಶದಿಂದ ಸಂಭವಿಸಿವೆ. ದೇಶದ ಸರ್ವೋಚ್ಛ ನ್ಯಾಯಾಲಯ ಅನರ್ಹತೆಗೆ ಒಳಪಟ್ಟ ಶಾಸಕರು ಸಲ್ಲಿಸಿದ ಮನವಿಯನ್ನು ಭಾಗಶಃ ಗೌರವಿಸಿದೆ. ಇದರ ಪರಿಣಾಮವಾಗಿ ,ಅನರ್ಹತೆಯನ್ನು ಸ್ಥಿರೀಕರಣಗೊಳಿಸಿ ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶದ ಬಗ್ಗೆ ನಾನು ವ್ಯಾಖ್ಯಾನಿಸುವುದಿಲ್ಲ. ಆದರೆ, 15ನೇ ವಿಧಾನಸಭೆಗೆ ಆಯ್ಕೆಗೊಂಡ ಹಲವು ಶಾಸಕರು ಸಂವಿಧಾನ ವಿರೋಧಿ ಚಟುವಟಿಕೆಗಳ ಕಾರಣದಿಂದ ಅನರ್ಹಗೊಂಡ, ಅಂತಹ ಅನರ್ಹತೆಯಿಂದ ತೆರವುಗೊಂಡ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಪುನಃ ಅವರು ಸ್ಪರ್ಧಿಸಲು ತಾಂತ್ರಿಕವಾಗಿ ಕಾನೂನಿನಲ್ಲಿ ಅವಕಾಶವಿದ್ದರೂ ನೈತಿಕವಾಗಿ ಇದು ಪ್ರಜಾಪ್ರಭುತ್ವಕ್ಕೆ ಆಗುವ ಘೋರ ಅಪಮಾನ. ದೇಶದ ಸರ್ವೋಚ್ಛ ನ್ಯಾಯಾಲಯವು ಬಹುಶಃ ಅತ್ಯಂತ ಗಂಭೀರವಾಗಿ, ಪ್ರೌಢಿಮೆಯಿಂದ ಈ ವಿಷಯವನ್ನು ಇತ್ಯರ್ಥಗೊಳಿಸಲು ಎರಡು ಭಾಗಗಳಾಗಿ ವಿಂಗಡಿಸಿದೆ:

1-ಅಂತಹ ಅನರ್ಹರಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನತೆ ಸೂಕ್ತವಾದ ಪಾಠ ಕಲಿಸಬೇಕೆಂದು, ಅದರ ಮುಖೇನ ನಮ್ಮ ಮತದಾರರು ಅತ್ಯಂತ ಪ್ರಬುದ್ಧರು ಎಂದು ಜಗತ್ತಿಗೆ ತೋರಿಸಬೇಕಿದೆ.

2-ದೇಶದ ಚುಕ್ಕಾಣಿಯನ್ನು ಹಿಡಿದಿರುವ ಮಹಾನುಭಾವರು ಈ ದೇಶದಲ್ಲಿ ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಗಳಿಸಿದ ಪ್ರಜಾಸತ್ತೆಯನ್ನು ಬಲಪಡಿಸಲು, ಸದೃಢಗೊಳಿಸಲು, ಈ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಸಮಗ್ರ ತಿದ್ದುಪಡಿಗೆ ಒಳಪಡಿಸಿ, ನೈಜ ಪ್ರಜಾಪ್ರಭುತ್ವ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮ ಬದ್ಧತೆಯನ್ನು ರುಜುವಾತು ಮಾಡಬೇಕಾಗಿದೆ.

ಇದರ ಜೊತೆಜೊತೆಗೆ ತೀವ್ರಸ್ವರೂಪದ, ಪರಿಣಾಮಕಾರಿಯಾದ, ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಚುನಾವಣೆಯ ಸುಧಾರಣೆಗಳನ್ನೂ ತರಬೇಕಾಗಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು, ಉಪಚುನಾವಣೆಗಳನ್ನು ಮೌಲ್ಯಾಧಾರಿತವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.

ಈ ಉಪಚುನಾವಣೆಗಳಲ್ಲಿ ಗೆಲುವು ಸೋಲುಗಳು, ಹೊಂದಾಣಿಕೆ, ಮರು ಹೊಂದಾಣಿಕೆಗಳು ಮುಖ್ಯವಲ್ಲ. ಪ್ರಜಾಸತ್ತೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನು ನಿರ್ಲಜ್ಜರಾಗಿ ಉಲ್ಲಂಘಿಸಿ ತಮ್ಮ ಸ್ವಾರ್ಥ ರಾಜಕಾರಣವನ್ನೇ ತ್ಯಾಗ ಎಂದು ಜನರಲ್ಲಿ ಭ್ರಮೆ ಹುಟ್ಟಿಸುವ ಅಪಾಯವೂ ನಮ್ಮನ್ನು ಕಾಡುತ್ತಿದೆ. ಜನತಾ ಪ್ರಾತಿನಿಧಿ ಕಾಯ್ದೆ ಅನ್ವಯ ಆಯ್ಕೆಗೊಂಡ ಪ್ರತಿನಿಧಿಗಳು ಜನರ ವಿಶ್ವಾಸವನ್ನೇ ಪಡೆಯದೆ, ಅಭಿಪ್ರಾಯವನ್ನು ಸಂಗ್ರಹಿಸದೆ ಕೆಲವು ಕೋಟಿ ರೂಪಾಯಿಗಳನ್ನು ಮತದಾರರ ಕಲ್ಯಾಣಕ್ಕೆಂದು ತರುವುದಾಗಿ ಘೋಷಿಸಿ, ಇದೊಂದು ತ್ಯಾಗದ ನಿರ್ಧಾರ ನಮಗೆ ಅನಿವಾರ್ಯವಾಯಿತು ಎಂದು ಹೇಳಲು ಹೊರಟಿರುವ ಇವರಿಗೆ, ಜನತೆಯಿಂದ ಸೂಕ್ತ ಉತ್ತರ ದೊರಕಿಸುವ ಪ್ರಯತ್ನ ಮಾಡಬೇಕಾಗಿದೆ.

ಈ ಉಪಚುನಾವಣೆಗಳ ಸೋಲು-ಗೆಲುವು ಯಾವುದೇ ಪಕ್ಷದ್ದಾಗಿರುವುದಿಲ್ಲ ಆದರೆ ಇದು ಪ್ರಜಾಸತ್ತೆಯ ಸೋಲು ಅಥವಾ ಗೆಲುವು ಆಗಿರುತ್ತದೆ. ಒಂದು ವೇಳೆ ಈ ಅನರ್ಹರು ಒಂದು ಕ್ಷೇತ್ರದಲ್ಲಿ ಜಯಗಳಿಸಿದರೂ ಅದು ತೋಳ್ಬಲಕ್ಕೆ, ಹಣದ ಬಲಕ್ಕೆ ಸಲ್ಲುವ ಜಯವೇ ಹೊರತು ಪ್ರಜಾಸತ್ತೆಗೆ ಸಂದ ಜಯವಲ್ಲ.

ಅಂದಿನ ಸಂವಿಧಾನ ಸಭೆಯ ತೀರ್ಪಿನಂತೆ ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ ದೇಶವನ್ನು ಸಮಗ್ರ ಗಣರಾಜ್ಯ ರಾಷ್ಟ್ರವನ್ನಾಗಿ ಮಾರ್ಪಡಿಸಿ ಎಲ್ಲಾ ಜಾತಿ, ಮತ, ಧರ್ಮ, ಕುಲ, ಲಿಂಗಬೇಧವಿಲ್ಲದ, ಸಮಾನತೆಯನ್ನು ಗೌರವಿಸುವ, ಕರಡು ಸಂವಿಧಾನವನ್ನು ರೂಪಿಸುವ ಹೊಣೆಗಾರಿಕೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇನ್ನಿತರ 13 ಜನ ಸದಸ್ಯರಿಗೆ ವಹಿಸಲಾಯಿತು. ಅಂದಿನ ಆ ಕರಡು ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಲಾಯಿತು. ಅಂದಿನ ಸಂವಿಧಾನ ಸಭೆಯಲ್ಲಿ, ಜಗತ್ತಿನ ಎಲ್ಲಾ ದೇಶಗಳ ಸಂವಿಧಾನಗಳ ಆಳ ಅಧ್ಯಯನ ಮಾಡಿದ್ದವರೂ, ಕಾನೂನು ಶಾಸ್ತ್ರದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಪಾಂಡಿತ್ಯವನ್ನು ಗಳಿಸಿದ್ದವರೂ, ಅರ್ಥಶಾಸ್ತ್ರದಲ್ಲೂ ಪರಿಣಿತಿಯನ್ನು ಪಡೆದಿದ್ದವರು, ನೋವು, ನರಳುವಿಕೆ, ಹಸಿವು, ಆಕ್ರಂದನಗಳ ಮಧ್ಯೆಯೇ ಭುಗಿಲೆದ್ದಿದ್ದ ಒಂದು ಜ್ವಾಲಾಮುಖಿ ಡಾ. ಬಿಆರ್ ಅಂಬೇಡ್ಕರ್ ಅವರು.

ಅಂದಿನ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯದ ಪೂರ್ಣ ಒಳನೋಟ ತಮಗಿದ್ದು, ಮನೋಶಾಸ್ತ್ರದಲ್ಲಿಯೂ ಸಹ ಅಪಾರ ಜ್ಞಾನ ಹೊಂದಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರು ತಮಗೆ ವೈಯುಕ್ತಿಕವಾಗಿ ಇಷ್ಟವಿಲ್ಲದಿದ್ದರೂ ದೂರದೃಷ್ಟಿಯಿಂದ ಸಮಗ್ರತೆಯನ್ನು ಎತ್ತಿಹಿಡಿಯುವ ಕಾರಣದಿಂದ, ಚಕ್ರವರ್ತಿಗಳು ಆಳಿದ ಈ ಭೂಮಿಯಲ್ಲಿ ಕತ್ತಿ, ಕಿರೀಟ, ಸಿಂಹಾಸನಗಳ ಬದಲಿಗೆ ಸಾಮಾನ್ಯ ಪ್ರಜೆಯ ಅಭಿಪ್ರಾಯ ಪ್ರಮುಖ ಆಗಬೇಕು ಎಂದು, ವಯಸ್ಕ ಮತದಾನ ಪದ್ಧತಿಗೆ ಒಬ್ಬ ವ್ಯಕ್ತಿಗೆ ಒಂದೇ ಮತ ಎಂಬ ಸಿದ್ಧಾಂತದ ಮೇಲೆ, ತಮಗಿಲ್ಲವಾದ ಸಮಾನತೆ ಮುಂದಿನ ಪೀಳಿಗೆಗಾದರೂ ಲಭ್ಯವಾಗಲಿ ಎಂದು ತನ್ನ ಸಮಿತಿಯೊಳಗಿದ್ದ ಇತರ ಗೌರವಾನ್ವಿತ ಸದಸ್ಯರ ಅಭಿಪ್ರಾಯವನ್ನು ಪಡೆದು ನಮ್ಮ ಇಂದಿನ ಸಂವಿಧಾನಕ್ಕೆ ಅಂತಿಮ ಸ್ವರೂಪವನ್ನು ನೀಡಿದರು.

ಈ ಹಿನ್ನೆಲೆಯಲ್ಲಿ ನಾವು ಇವತ್ತು ಎದುರಿಸುತ್ತಿರುವ ಉಪಚುನಾವಣೆಗಳು, ಸಂವಿಧಾನದ ಪಾವಿತ್ರ್ಯತೆಗೆ ಒದಗಿರುವ ಸವಾಲು. ಆಯ್ಕೆ ಮಾಡಿ ಕಳಿಸಿದ ಮತದಾರನ ಆತ್ಮಸಾಕ್ಷಿಗೆ ಒಂದು ಸವಾಲು. ತೋಳ್ಬಲ, ಹಣದ ಬಲದಿಂದ ಸಂವಿಧಾನವನ್ನೇ ಬುಡಮೇಲು ಮಾಡಬಲ್ಲೆವು ಎಂದು ಕೊಬ್ಬಿದ ಮದಗಜಗಳಿಗೆ ಅಂಕುಶವನ್ನು ಹಾಕಬೇಕಾಗುವ ಸವಾಲು. ಭಾವನಾತ್ಮಕ ವಿಷಯಗಳಿಂದ ಜನಗಳನ್ನು ಕ್ಷಣಮಾತ್ರಕ್ಕೆ ಪ್ರಚೋದಿಸಿ ಜನತೆಯ ಮುಗ್ಧ ಮನಸ್ಸನ್ನು ಮತ್ತೊಂದೆಡೆ ಸೆಳೆದು ವಾಮಮಾರ್ಗದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಲು ಹೊಂಚು ಹಾಕುವ ಅವಕಾಶವಾದಿಗಳಿಗೆ ಇದು ಒಂದು ಸವಾಲು.

ಕಾಂಗ್ರೆಸ್ ಪಕ್ಷದ ವತಿಯಿಂದ, ಈ ಉಪಚುನಾವಣೆಗಳ ವೇದಿಕೆಗಳ ಮೇಲೆ ವೈಯುಕ್ತಿಕ ಆರೋಪಗಳು, ಚಾರಿತ್ರ್ಯವಧೆ ಮಾಡುವ ಚೇಷ್ಟೆಗಳು, ಅಸಂಬದ್ಧ ವಿಚಾರಗಳು, ಜಾತಿ ಮತ್ತು ಹಣದ ಪ್ರಾಬಲ್ಯದ ಲೆಕ್ಕಾಚಾರ ಹೀಗೆ ಇವೆಲ್ಲವನ್ನೂ ಬದಿಗಿಟ್ಟು, ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ವಿನಯ ವಿಧೇಯತೆಯಿಂದ ಜನರಲ್ಲಿಗೆ ಹೋಗಿ ಇದೊಂದು ಮೌಲ್ಯಾಧಾರಿತ ಹೋರಾಟ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ.

ಸಾಮಾನ್ಯ ಜನ ಅಸಹ್ಯಪಡುವ, ಪದೇ ಪದೇ ನೋಡಿ ಬೇಸತ್ತು ಹೋಗಿರುವ ಭ್ರಷ್ಟರನ್ನೇ ಮುಖಂಡರು ಎಂಬ
ಭ್ರಮೆಯಿಂದ ಇವರು ವೇದಿಕೆಗಳ ಮೇಲೆ ವಿಜೃಂಭಿಸಿದರೆ ಬಹುಶಃ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು. ಸಾಮಾನ್ಯ ಜನರ ಮನೋಭಾವ, ಆಶೋತ್ತರಗಳನ್ನು ಗಮನಿಸಿ ಗೌರವಿಸಿದರೆ ಅದು ಸಹಜವಾಗಿಯೇ ಸಂವಿಧಾನಕ್ಕೆ ತೋರುವ ಗೌರವವಾಗುತ್ತದೆ.

ಕಾರಣಾಂತರಗಳಿಂದ ಒಂದು ಸಾಂವೈಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾಗ ಈ ಇಕ್ಕಟ್ಟನ್ನು ನಾನು ಎದುರಿಸಬೇಕಾಯಿತು. ಯಾವುದೇ ರೀತಿಯ ಮತ್ಸರ, ದ್ವೇಷ, ಅಸೂಯೆ, ಪೂರ್ವಗ್ರಹಪೀಡಿತನಾಗದೆ ನಿಷ್ಕಳಂಕ ಮನಸ್ಸಿನಿಂದ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಈ ಘಟನೆಯ ನಂತರ, ಅಂದಿನಿಂದ ಇಂದಿನವರೆವಿಗೂ ಸಾಕಷ್ಟು ಮನೋವ್ಯಾಕುಲತೆಯನ್ನು ಅನುಭವಿಸಿದ್ದೇನೆ.

ಸದುದ್ದೇಶದಿಂದ ನಾನು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಹಾಗೂ ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಒಟ್ಟಾರೆ ಉದ್ದೇಶ ಡಿಸೆಂಬರ್ 5, 2019 ರಂದು ನಡೆಯುವ 15 ಉಪಚುನಾವಣೆಗಳು ಗುಣಾತ್ಮಕವಾಗಿ ಬೇರೆಯ ಸ್ವರೂಪ ಪಡೆಯುವಂತಾಗಲಿ ಹಾಗೂ ಮಾಮೂಲಿ ಚುನಾವಣೆಗಳಂತಾಗದಿರಲಿ ಎಂದು ನನ್ನ ಕಳಕಳಿ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಸಂವಿಧಾನವನ್ನು ಜನರ ಧ್ವನಿಯಾಗಿಸುವ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.

ಇಂತಿ
ಕೆ.ಆರ್ ರಮೇಶ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಮೇಶ್ ಕುಮಾರ್ ಅವರ ಆಶಯ ಸರಿಯಾಗಿದೆ. ಈ ಉಪ ಚುನಾವಣೆಯಲ್ಲಿ, ಪಕ್ಷಾಂತರ ಮಾಡಿದವರೆಲ್ಲರೂ ಸೋಲಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...