ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿದ್ದ ಧರ್ಮಸ್ಥಳದ ಯುವತಿ ಆಕಾಂಕ್ಷಾ ಎಸ್ ನಾಯರ್ ಅನುಮಾನಾಸ್ಪಾದ ಸಾವು ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಪೊಲೀಸರು, ಕೇರಳ ಮೂಲದ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಆರೋಪಿ ಎನ್ನಲಾಗಿರುವ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಅವರನ್ನು ಮೇ 19ರಂದು ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಧರ್ಮಸ್ಥಳ ಗ್ರಾಮದ ಬೋಲಿಯಾರ್ ನಿವಾಸಿ 22 ವರ್ಷದ ಆಕಾಂಕ್ಷಾ ಎಸ್ ನಾಯರ್ ತನ್ನ ಪದವಿ ಪ್ರಮಾಣಪತ್ರ ಪಡೆಯಲು ಮೇ 16ರಂದು ದೆಹಲಿಯಿಂದ ಪಂಜಾಬ್ಗೆ ತೆರಳಿದ್ದರು. ಮೇ 17ರಂದು ಆಕೆ, ಪಂಜಾಬ್ನ ಜಲಂಧರ್ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡದ ನಾಲ್ಕನೇ ಅಂತಸ್ಥಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಆಕಾಂಕ್ಷಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮೇ 19ರಂದು ಮಧ್ಯಾಹ್ನದ ಬಳಿಕ ನಡೆಸಲಾಗಿದೆ. ನಂತರ ಸರ್ಕಾರಿ ಆಸ್ಪತ್ರೆಯು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ.
ಮೇ 20 ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗಿದೆ. ಅಲ್ಲಿಂದ ಬೆಂಗಳೂರಿಗೆ ಮೃತದೇಹ ತರಲು ಆಕಾಂಕ್ಷಾ ಕೆಲಸ ಮಾಡುತ್ತಿದ್ದ ಕಂಪನಿಯು ಉಚಿತ ವಿಮಾನದ ವ್ಯವಸ್ಥೆ ಮಾಡಿದೆ.
ಮೇ 20ರಂದು ರಾತ್ರಿ 8 ಗಂಟೆಗೆ ದೆಹಲಿಯಿಂದ ಹೊರಡುವ ಸ್ಪೈಸ್ ಜೆಟ್ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುತ್ತದೆ. ರಾತ್ರಿ 11 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ.
ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಧರ್ಮಸ್ಥಳದ ಬೋಲಿಯಾರ್ನಲ್ಲಿರುವ ಮನೆಗೆ ಮೃತದೇಹ ಕೊಂಡೊಯ್ದು, ಮೇ 21ರ ಬೆಳಿಗ್ಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
“ನನ್ನ ಮಗಳು ಧೈರ್ಯವಂತೆ, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ”
“ನನ್ನ ಮಗಳು ಧೈರ್ಯವಂತೆ, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ ಎಂದು ಸಾವಿಗೀಡಾದ ಆಕಾಂಕ್ಷಾ ಅವರ ತಾಯಿ ಸುದ್ದಿ ಸಂಸ್ಥೆ ವಾರ್ತಾಭಾರತಿ ಜೊತೆ ಮಾತನಾಡುವಾಗ ಹೇಳಿದ್ದಾರೆ.
ಆಕಾಂಕ್ಷಾಗೆ ವಿವಾಹಿತ ಅಧ್ಯಾಪಕರೊಬ್ಬರ ಜೊತೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ನನಗನಿಸುವಂತೆ ಅಧ್ಯಾಪಕರೇ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ಅವರ ರೂಮ್ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಏನೋ ಅಚಾತುರ್ಯ ನಡೆದಿದೆ. ಹಾಗಾಗಿ ನನ್ನ ಮಗಳು ಈ ರೀತಿ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಯಾವ ಮುಖ ಇಟ್ಟು ಸಾಧನಾ ಸಮಾವೇಶ ನಡೆಸುತ್ತಿದೆ: ರೈತ ಮುಖಂಡ ಚಾಮರಸಮಾಲೀ ಪಾಟೀಲ್ ಪ್ರಶ್ನೆ


