ಗಾಝಾ ಮತ್ತು ಇರಾನ್ ಮೇಲಿನ ಇಸ್ರೇಲ್ ಆಕ್ರಮಣದ ಬಗ್ಗೆ ಭಾರತದ ಮೌನವು “ತನ್ನ ಧ್ವನಿಯ ನಷ್ಟ ಮಾತ್ರವಲ್ಲ, ಮೌಲ್ಯಗಳ ಶರಣಾಗತಿಯೂ ಆಗಿದೆ” ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ.
“ಭಾರತದ ಧ್ವನಿ ಕೇಳಲು ಇನ್ನೂ ತಡವಾಗಿಲ್ಲ” ಎಂಬ ಲೇಖನದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ ಸೋನಿಯಾ ಗಾಂಧಿ, ಮೋದಿ ಸರ್ಕಾರವು ಇಸ್ರೇಲ್ ಜೊತೆಗೆ ಸ್ವತಂತ್ರ ಪ್ಯಾಲೆಸ್ತೀನ್ ಅನ್ನು ಕಲ್ಪಿಸಿಕೊಳ್ಳುವ ಶಾಂತಿಯುತ ದ್ವಿರಾಷ್ಟ್ರ ಪರಿಹಾರದ ಕುರಿತು ಭಾರತದ ದೀರ್ಘಕಾಲೀನ ಬದ್ಧತೆಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕದ ಅಂತ್ಯವಿಲ್ಲದ ಯುದ್ಧಗಳ ವಿರುದ್ಧ ಮಾತನಾಡಿದ ಸೋನಿಯಾ ಗಾಂಧಿ, ಪಶ್ಚಿಮ ಏಷ್ಯಾದಲ್ಲಿ ‘ವಿನಾಶಕಾರಿ ಮಾರ್ಗ’ ಅನುಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಲೇಖನದಲ್ಲಿ ಟೀಕಿಸಿದ್ದಾರೆ.
“ಗಾಝಾದಲ್ಲಿನ ವಿನಾಶದ ಬಗ್ಗೆ ಮತ್ತು ಈಗ ಇರಾನ್ ವಿರುದ್ಧದ ಅಪ್ರಚೋದಿತ ದಾಳಿ ಬಗ್ಗೆ ಹೊಸದಿಲ್ಲಿಯ ಮೌನವು ನಮ್ಮ ನೈತಿಕ ಮತ್ತು ರಾಜತಾಂತ್ರಿಕ ಸಂಪ್ರದಾಯಗಳಿಂದ ಕಳವಳಕಾರಿ ನಿರ್ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಧ್ವನಿಯ ನಷ್ಟ ಮಾತ್ರವಲ್ಲ, ಬದಲಾಗಿ, ಮೌಲ್ಯಗಳ ಶರಣಾಗತಿಯೂ ಹೌದು” ಎಂದು ‘ದಿ ಹಿಂದೂ’ ದಲ್ಲಿನ ತಮ್ಮ ಲೇಖನದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.
“ಇನ್ನೂ ತಡವಾಗಿಲ್ಲ. ಭಾರತವು ಸ್ಪಷ್ಟವಾಗಿ ಮಾತನಾಡಬೇಕು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಪರಸ್ಪಪರ ಮಾತುಕತೆಗೆ ಮರಳಲು ಉತ್ತೇಜಿಸಲು ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು” ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.
ಈ ಮಾನವೀಯ ದುರಂತದ ಸಂದರ್ಭದಲ್ಲಿ, “ನರೇಂದ್ರ ಮೋದಿ ಸರ್ಕಾರವು ಶಾಂತಿಯುತ ದ್ವಿ-ರಾಷ್ಟ್ರ ಪರಿಹಾರದ ಕುರಿತಂತೆ ಭಾರತದ ದೀರ್ಘಕಾಲೀನ ಮತ್ತು ತತ್ವಬದ್ಧ ಬದ್ಧತೆಯನ್ನು ಬಹುತೇಕ ಕೈಬಿಟ್ಟಿದೆ, ದ್ವಿ-ರಾಷ್ಟ್ರ ಪರಿಹಾರವು ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ತೀನ್ ಅನ್ನು ಇಸ್ರೇಲ್ ಜೊತೆ ಪರಸ್ಪರ ಭದ್ರತೆ ಮತ್ತು ಘನತೆಯಿಂದ ಬದುಕುವ ಕಲ್ಪನೆಯನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಜೂನ್ 13, 2025 ರಂದು, ಇಸ್ರೇಲ್ ಇರಾನ್ ಮತ್ತು ಅದರ ಸಾರ್ವಭೌಮತ್ವದ ವಿರುದ್ಧ ತೊಂದರೆ ಕೊಡುವ ಮತ್ತು ಕಾನೂನುಬಾಹಿರ ದಾಳಿಯನ್ನು ಪ್ರಾರಂಭಿಸಿದ ಬಳಿಕ ಏಕಪಕ್ಷೀಯ ಮಿಲಿಟರಿಸಂನ ಅಪಾಯಕಾರಿ ಪರಿಣಾಮಗಳನ್ನು ಜಗತ್ತು ಮತ್ತೊಮ್ಮೆ ಕಂಡಿದೆ ಎಂದು ಸೋನಿಯಾ ಗಾಂಧಿ ಬೊಟ್ಟು ಮಾಡಿದ್ದಾರೆ.
ಇರಾನ್ ನೆಲದಲ್ಲಿ ನಡೆದ ಈ ಬಾಂಬ್ ದಾಳಿಗಳು ಮತ್ತು ಗುರಿಯಿಟ್ಟು ನಡೆದ ಹತ್ಯೆಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಂಡಿಸಿದೆ. ಇದು ಗಂಭೀರ ಪ್ರಾದೇಶಿಕ ಮತ್ತು ಜಾಗತಿಕ ಪರಿಣಾಮಗಳೊಂದಿಗೆ ಅಪಾಯಕಾರಿ ಅಸ್ತಿರತೆಯನ್ನು ಉಂಟು ಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
“ಗಾಝಾದಲ್ಲಿ ಕ್ರೂರ ಆಕ್ರಮಣ ಸೇರಿದಂತೆ ಇಸ್ರೇಲ್ನ ಇತ್ತೀಚಿನ ಹಲವು ಕ್ರಮಗಳಂತೆ, ಈ ಕಾರ್ಯಾಚರಣೆಯನ್ನು ನಾಗರಿಕ ಜೀವನ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ನಡೆಸಲಾಗಿದೆ. ಈ ಕ್ರಮಗಳು ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಮತ್ತಷ್ಟು ಸಂಘರ್ಷದ ಬೀಜಗಳನ್ನು ಬಿತ್ತುತ್ತದೆ” ಎಂದಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಪ್ರಸ್ತುತ ಇಸ್ರೇಲಿ ನಾಯಕತ್ವವು “ಶಾಂತಿಯನ್ನು ದುರ್ಬಲಗೊಳಿಸುವ ಮತ್ತು ಉಗ್ರವಾದವನ್ನು ಪೋಷಿಸುವ ದೀರ್ಘ ಮತ್ತು ದುರದೃಷ್ಟಕರ ದಾಖಲೆಯನ್ನು ಹೊಂದಿದೆ” ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ದಾಖಲೆಯನ್ನು ಗಮನಿಸಿದರೆ, “ನೆತನ್ಯಾಹು ಅವರು ಒಪ್ಪಂದಕ್ಕಿಂತ ಉದ್ವಿಗ್ನತೆಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದಿದ್ದಾರೆ.
ಅಮೆರಿಕ ಅಧ್ಯಕ್ಷರನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, ಜೂನ್ 17 ರಂದು ತನ್ನ ಸ್ವಂತ ಗುಪ್ತಚರ ಮುಖ್ಯಸ್ಥರ ಮೌಲ್ಯಮಾಪನವನ್ನು ತಳ್ಳಿಹಾಕಿ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲು ತುಂಬಾ ಹತ್ತಿರದಲ್ಲಿದೆ ಎಂದು ಟ್ರಂಪ್ ಹೇಳಿರುವುದು ತೀವ್ರ ನಿರಾಶಾದಾಯಕ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
“ಜಗತ್ತು ನಿರೀಕ್ಷಿಸುತ್ತಿರುವುದು ಮತ್ತು ಜಗತ್ತಿಗೆ ಬೇಕಾಗಿರುವುದು ಸತ್ಯಗಳನ್ನು ಆಧರಿಸಿದ ರಾಜತಾಂತ್ರಿಕತೆಯಿಂದ ದೇಶ ನಡೆಸಲ್ಪಡುವ ನಾಯಕತ್ವ ಆಗಿದೆ. ಅಲ್ಲದೆ, ಬಲವಂತ ಅಥವಾ ಸುಳ್ಳುಗಳಿಂದಲ್ಲ ದೇಶ ನಡೆಸುವವರು ಅಲ್ಲ. ಇರಾನ್ ಭಾರತದ ದೀರ್ಘಕಾಲದ ಸ್ನೇಹಿತನಾಗಿದ್ದು, ದೊಡ್ಡ ಮಟ್ಟದ ನಾಗರಿಕ ಸಂಬಂಧಗಳೊಂದಿಗೆ ಅದು ನಮ್ಮೊಂದಿಗೆ ಇದೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
“ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಂದರ್ಭಗಳಲ್ಲಿ ಭಾರತಕ್ಕೆ ದೃಢ ಬೆಂಬಲ ನೀಡಿದ ಇತಿಹಾಸ ಇರಾನ್ಗೆ ಇದೆ. 1994 ರಲ್ಲಿ, ಕಾಶ್ಮೀರ ವಿಷಯದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಭಾರತವನ್ನು ಟೀಕಿಸುವ ನಿರ್ಣಯವನ್ನು ತಡೆಯಲು ಇರಾನ್ ಸಹಾಯ ಮಾಡಿತ್ತು” ಎಂದು ತಿಳಿಸಿದ್ದಾರೆ.
“ವಾಸ್ತವವಾಗಿ, ಇಸ್ಲಾಮಿಕ್ ಗಣರಾಜ್ಯ ಇರಾನ್ ಭಾರತದೊಂದಿಗೆ ಹೆಚ್ಚು ಸಹಕಾರಿಯಾಗಿದೆ. ಅದರ ಪೂರ್ವವರ್ತಿ ಇರಾನ್ ಸಾಮ್ರಾಜ್ಯಶಾಹಿ ರಾಜ್ಯವು 1965 ಮತ್ತು 1971 ರ ಯುದ್ಧಗಳಲ್ಲಿ ಪಾಕಿಸ್ತಾನದ ಕಡೆಗೆ ವಾಲಿತ್ತು” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಸಂಬಂಧಗಳನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, “ಈ ವಿಶಿಷ್ಟ ಸ್ಥಾನವು ನಮ್ಮ ದೇಶಕ್ಕೆ ನೈತಿಕ ಜವಾಬ್ದಾರಿ ಮತ್ತು ರಾಜತಾಂತ್ರಿಕ ಚೌಕಟ್ಟನ್ನು ಒದಗಿಸುತ್ತದೆ. ಇದು ಉದ್ವಿಗ್ನತೆ ಮತ್ತು ಶಾಂತಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.
“ಇದು ಕೇವಲ ಅಮೂರ್ತ ತತ್ವವಲ್ಲ. ಲಕ್ಷಾಂತರ ಭಾರತೀಯ ನಾಗರಿಕರು ಪಶ್ಚಿಮ ಏಷ್ಯಾದಾದ್ಯಂತ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಇದು ಈ ಪ್ರದೇಶದಲ್ಲಿ ಶಾಂತಿಯನ್ನು ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯ ವಿಷಯವನ್ನಾಗಿ ಮಾಡುತ್ತದೆ.”
ಅಂತರ್ಜಾತಿ ಮದುವೆಗೆ ವಿರೋಧ: ತಲೆ ಬೋಳಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು!


