ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಮೊದಲ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ಬುಧವಾರ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಸದಸ್ಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಣಯಗಳನ್ನು ಪ್ರಕಟಿಸಿದರು. ಅವುಗಳು ಹೀಗಿವೆ…
- ಭಾರತೀಯ ಜನಗಣತಿ ಆಯೋಗದಿಂದ ರಾಷ್ಟ್ರೀಯ ಮಟ್ಟದ ಜಾತಿ ಜನಗಣತಿ ನಡೆಯಬೇಕು. ಈ ಜನಗಣತಿಯು ಪ್ರತಿಯೊಬ್ಬ ವ್ಯಕ್ತಿ ಮತ್ತು ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು. ಇದಕ್ಕೆ ತೆಲಂಗಾಣ ಮಾದರಿಯನ್ನು ಅನುಸರಿಸಬೇಕು.
- ಮೀಸಲಾತಿ ಮಿತಿ ಶೇಕಡ 50 ಅನ್ನು ತೆಗೆದು ಹಾಕಬೇಕು. ಈ ಮೂಲಕ ಶಿಕ್ಷಣ, ಸೇವೆ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಒಬಿಸಿಗಳಿಗೆ ಸೂಕ್ತ ಮೀಸಲಾತಿಯನ್ನು ಒದಗಿಸಬೇಕು.
- ಸಂವಿಧಾನದ ವಿಧಿ 15(5) ರ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು.
ಸಮಾಜದ ಅಂಚಿನಲ್ಲಿರುವ ವರ್ಗಗಳ ಸಾಮಾಜಿಕ ನ್ಯಾಯದ ಪರವಾಗಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಪರವಾಗಿ ನಿಂತಿದ್ದಕ್ಕಾಗಿ ‘ನ್ಯಾಯ ಯೋಧ ರಾಹುಲ್ ಗಾಂಧಿ’ ಅವರಿಗೆ ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯು ಸರ್ವಾನುಮತದಿಂದ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಹುಲ್ ಗಾಂಧಿಯವರ ದೃಢ ಸಂಕಲ್ಪವು ಜಾತಿ ಜನಗಣತಿಯ ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಗೆ ಮನುವಾದಿ ಮೋದಿ ಸರ್ಕಾರ ಮಣಿಯುವಂತೆ ಮಾಡಿತು. ಭಾರತದ ಎಲ್ಲಾ ಹಿಂದುಳಿದ ವರ್ಗಗಳ ಪರವಾಗಿ, ಈ ಐತಿಹಾಸಿಕ ಸಾಧನೆಗೆ ರಾಹುಲ್ ಗಾಂಧಿಯವರಿಗೆ ಮಂಡಳಿಯು ಹೃತ್ಪೂರ್ವಕ ಕೃತಜ್ಞತೆ ಮತ್ತು ಗೌರವವನ್ನು ಸಲ್ಲಿಸುತ್ತದೆ ಎಂದು ಹೇಳಿದರು.
ಇದು ಒಂದು ಮೈಲಿಗಲ್ಲು ಆಗಿದ್ದರೂ, ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವಲ್ಲಿ ಇದು ಒಂದು ಸಣ್ಣ ಹೆಜ್ಜೆಯಾಗಿದೆ. ನಮ್ಮ ನ್ಯಾಯಯೋಧ ರಾಹುಲ್ ಗಾಂಧಿಯವರ ಧೈರ್ಯಶಾಲಿ ಮತ್ತು ಅಚಲ ನಾಯಕತ್ವದಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಸಮಾನತೆ ಮತ್ತು ಸಮ ಸಮಾಜಕ್ಕೆ ಕಾರಣವಾಗುವ ಸಾಮಾಜಿಕ ಪರಿವರ್ತನೆಯ ಅಂತಿಮ ಸಾಂವಿಧಾನಿಕ ಉದ್ದೇಶವನ್ನು ಭಾರತವು ಸಾಕಾರಗೊಳಿಸುವ ಮತ್ತು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಶಾಲಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು, ಎಲ್ಲರಿಗೂ ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸಲು ನಾವು ಇಲ್ಲಿ ಸಂಕಲ್ಪ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಲಹಾ ಮಂಡಳಿ ಸಂಚಾಲಕ ಅನಿಲ್ ಜೈ ಹಿಂದ್, ಎಂ. ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಇದ್ದರು.


