ಇಂದಿನಿಂದ (ಜುಲೈ 28, ಸೋಮವಾರ) ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ್’ ಕುರಿತ ಚರ್ಚೆ ಆರಂಭಗೊಳ್ಳಲಿದೆ. ಆಡಳಿತರೂಢ ಎನ್ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಚರ್ಚೆಗೆ ಸರ್ವ ಸನ್ನದ್ದವಾಗಿದೆ.
ಅಪರೇಷನ್ ಸಿಂಧೂರ್ ಕುರಿತು ಚರ್ಚೆ ನಡೆಯುವ ಮೂರು ದಿನಗಳ ಕಾಲ ಲೋಕಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕಾಂಗ್ರೆಸ್ ತನ್ನ ಎಲ್ಲಾ ಸಂಸದರಿಗೆ ಭಾನುವಾರ ವಿಪ್ ಜಾರಿಗೊಳಿಸಿದೆ.
ಜುಲೈ 21ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡಿದೆ. ಆದರೆ, ಇದುವರೆಗೆ ಸರಿಯಾಗಿ ಕಲಾಪಗಳು ನಡೆದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ, ಅಪರೇಷನ್ ಸಿಂಧೂರ್ ಕುರಿತು ಚರ್ಚೆ ನಡೆಸುವಂತೆ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ಇದರಿಂದ ಉಭಯ ಸದನಗಳ ಕಲಾಪಗಳು ಪದೇ ಪದೇ ಮುಂದೂಡಿಕೆಯಾಗಿವೆ.
ಇಂದಿನಿಂದ ಆಪರೇಷನ್ ಸಿಂಧೂರ್ ವಿಷಯದ ಮೂಲಕ ಸರಿಯಾದ ಚರ್ಚೆ ಆರಂಭಗೊಳ್ಳಲಿದೆ. ಆದರೆ, ಬಿಹಾರ ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಸಿದ್ದತೆ ನಡೆಸಿವೆ. ಇದರಿಂದ ಸಂಸತ್ತಿನಲ್ಲಿ ವಾಗ್ಯುದ್ಧ ನಡೆಯುವ ಎಲ್ಲಾ ಸಾಧ್ಯತೆ ಇದೆ.
ಆಡಳಿತ ಪಕ್ಷದ ಅಥವಾ ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚರ್ಚೆ ಆರಂಭಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರತಿಪಕ್ಷದ ಉಪನಾಯಕ ಗೌರವ್ ಗೊಗೋಯ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಸದರೂ ಆಗಿರುವ ಕೆ.ಸಿ ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಸಜ್ಜು ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಸಿಂಧೂರ್ ಕುರಿತು ಮಾತನಾಡಲು ಮೂರು ಗಂಟೆಗಳ ಸಮಯ ನೀಡಲಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಮಾತನಾಡುವ ಸಾಧ್ಯತೆ ಇದೆ.
ಆಡಳಿತ ಕೂಟದಿಂದ ರಾಜನಾಥ್ ಸಿಂಗ್ ಮಾತ್ರವಲ್ಲದೆ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾತನಾಡಲಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ತಮ್ಮ ಸರ್ಕಾರದ ನಿಲುವು ಮತ್ತು ಕೈಗೊಂಡ ಕ್ರಮಗಳನ್ನು ತಿಳಿಸುವ ಸಾಧ್ಯತೆ ಇದೆ.
ಸೋಮವಾರ, ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಸದನ ಮುಂದೂಡಿಕೆಯಾಗುವವರೆಗೆ ಲೋಕಸಭೆಯಲ್ಲಿ ಹಾಜರಿರಬೇಕು ಮತ್ತು ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ನ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ನೀಡಲಾಗಿದೆ. ಮುಖ್ಯ ಸಚೇತಕ ಕೋಡಿಕುನ್ನಿಲ್ ಸುರೇಶ್ ವಿಪ್ ಜಾರಿಗೊಳಿಸಿದ್ದಾರೆ.
ಲೋಕಸಭಾ ಸಚಿವಾಲಯವು ಸೋಮವಾರದ ತನ್ನ ಕಾರ್ಯಸೂಚಿಯಲ್ಲಿ ‘ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ಬಲವಾದ, ಯಶಸ್ವಿ ಮತ್ತು ನಿರ್ಣಾಯಕ ‘ಆಪರೇಷನ್ ಸಿಂಧೂರ್’ ಕುರಿತು ವಿಶೇಷ ಚರ್ಚೆ”ಯನ್ನು ಪಟ್ಟಿ ಮಾಡಿದೆ.
ಶಶಿ ತರೂರ್ ಮಾತಿನತ್ತ ಎಲ್ಲರ ಚಿತ್ತ
ಆಪರೇಷನ್ ಸಿಂಧೂರ್ ಚರ್ಚೆ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಯಾವ ರೀತಿ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ಏಕೆಂದರೆ, ಆಪರೇಷನ್ ಸಿಂಧೂರ್ ಬಳಿಕ ಕೇಂದ್ರ ಸರ್ಕಾರದ ಕ್ರಮಗಳನ್ನು ಕಾಂಗ್ರೆಸ್ ತರೂರ್ ಕೊಂಡಾಡಿದ್ದರು. ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಕಾಂಗ್ರೆಸ್ ಪಕ್ಷದ ನಿಲುವಿಗಿಂತ ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಭಯೋತ್ಪಾದನೆಯ ಕುರಿತು ಭಾರತ ನಿಲುವು ತಿಳಿಸಲು ಕೇಂದ್ರ ಸರ್ಕಾರ ಕಳಿಸಿದ್ದ ನಿಯೋಗವೊಂದರ ನೇತೃತ್ವನ್ನು ತರೂರ್ ವಹಿಸಿದ್ದರು. ನಿಯೋಗಕ್ಕೆ ತರೂರ್ ಹೆಸರನ್ನು ಕಾಂಗ್ರೆಸ್ ಅಧಿಕೃತವಾಗಿ ನೀಡಿರಲಿಲ್ಲ. ಆದರೂ, ತರೂರ್ಗೆ ಸರ್ಕಾರ ಅವಕಾಶ ನೀಡಿತ್ತು. ವಿದೇಶಕ್ಕೆ ಹೋಗಿ ಬಂದ ಬಳಿಕ ತರೂರ್ ಕೇಂದ್ರ ಸರ್ಕಾರದ ಪರ ಮಾತನಾಡುವುದು ಹೆಚ್ಚಾಗಿದೆ. ಇದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಅಪರೇಷನ್ ಸಿಂಧೂರ್ ಕುರಿತ ಚರ್ಚೆಗೆ ಕಾಂಗ್ರೆಸ್ ಪಕ್ಷ ತರೂರ್ ಅವರನ್ನು ಆಯ್ಕೆ ಮಾಡಿದೆಯೇ ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಒಂದು ವೇಳೆ ತರೂರ್ ಮಾತನಾಡಿದರೆ ಯಾರ ಪರ ಮಾತನಾಡಬಹುದು? ಕಾಂಗ್ರೆಸ್ ಸಂಸದರಾಗಿ ತನ್ನ ಪಕ್ಷದ ನಿಲುವನ್ನು ಬೆಂಬಲಿಸಬಹುದಾ? ಇಲ್ಲ ಸರ್ಕಾರದ ಪರ ಬ್ಯಾಟ್ ಬೀಸಬಹುದಾ? ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಸ್ಪೀಕರ್ಗೆ ಕೊಟ್ಟಿರುವ ಪಟ್ಟಿಯಲ್ಲಿ ತರೂರ್ ಹೆಸರನ್ನು ಸೇರಿಸದಿದ್ದರೂ, ಸ್ಪೀಕರ್ ಇಚ್ಛಿಸಿದರೆ ತರೂರ್ ಅವರಿಗೆ ಮಾತನಾಡಲು ಅವಕಾಶ ಕೊಡಬಹುದು. ಅದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದಾಗಿದೆ.
ಇನ್ನು ಸಮಾಜವಾದಿ ಪಕ್ಷಕ್ಕೆ ಮಾತನಾಡಲು 65 ನಿಮಿಷಗಳ ಸಮಯ ನಿಗದಿಪಡಿಸಲಾಗಿದೆ. ಅಖಿಲೇಶ್ ಯಾದವ್ ಮತ್ತು ರಾಜೀವ್ ರೈ ಮಾತನಾಡುವ ಸಾಧ್ಯತೆ ಇದೆ.
ಅನುರಾಗ್ ಠಾಕೂರ್, ಸುಧಾಂಶು ತ್ರಿವೇದಿ ಮತ್ತು ನಿಶಿಕಾಂತ್ ದುಬೆ ಅವರಂತಹ ಸಚಿವರು ಮತ್ತು ನಾಯಕರ ತಂಡದ ಜೊತೆಗೆ, ಆಡಳಿತಾರೂಢ ಎನ್ಡಿಎ ಆಪರೇಷನ್ ಸಿಂಧೂರ್ ನಂತರ ಭಾರತದ ನಿಲುವನ್ನು ತಿಳಿಸಲು 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದ ಏಳು ಬಹು-ಪಕ್ಷ ನಿಯೋಗಗಳಿಂದ ತನ್ನ ಸದಸ್ಯರನ್ನು ಚರ್ಚಾ ಕಣಕ್ಕಿಳಿಸುವ ನಿರೀಕ್ಷೆಯಿದೆ. ಅವರಲ್ಲಿ ಶಿವಸೇನೆಯ ಶ್ರೀಕಾಂತ್ ಶಿಂಧೆ, ಜೆಡಿ (ಯು) ನ ಸಂಜಯ್ ಝಾ ಮತ್ತು ಟಿಡಿಪಿಯ ಹರೀಶ್ ಬಾಲಯೋಗಿ ಮತ್ತು ಇತರರು ಸೇರಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಚರ್ಚೆ ನಡೆಸಬೇಕು ಎಂಬುವುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಪ್ರತಿಯೊಂದು ವಿಷಯವನ್ನು ಸಂಸತ್ತಿನಲ್ಲಿ ಏಕಕಾಲದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ನಿಯಮಗಳಿಗೆ ಅನುಸಾರವಾಗಿ ಎಸ್ಐಆರ್ ಕುರಿತು ಚರ್ಚೆಯ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು 15 ಅಂಶಗಳ ಮಾರ್ಗಸೂಚಿ ರೂಪಿಸಿದ ಸುಪ್ರೀಂ ಕೋರ್ಟ್


