Homeಕರ್ನಾಟಕಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

- Advertisement -
- Advertisement -

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ನೋಂದಣಿ ಏಕೆ ಮಾಡಿಕೊಂಡಿಲ್ಲ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ಇತ್ತೀಚೆಗೆ ಕಾವು ಪಡೆದುಕೊಂಡಿವೆ. ಪರಿಣಾಮ, ಸಾಮಾನ್ಯ ಜನರೂ ಕೂಡ ಆರ್‌ಎಸ್‌ಎಸ್‌ ಭಾರತೀಯ ಕಾನೂನಿನಡಿ ನೋಂದಣಿ ಏಕೆ ಮಾಡಿಕೊಂಡಿಲ್ಲ ಎಂಬ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ.

ಇದರಿಂದ ಆರ್‌ಎಸ್‌ಎಸ್‌ ದೇಶದ ಜನತೆಗೆ ಉತ್ತರ ಕೊಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದಂತಿದೆ. ಏಕೆಂದರೆ, ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್‌ 100ನೇ ವರ್ಷಾಚರಣೆ ಸಂಬಂಧಿತ ಕಾರ್ಯಕ್ರಮದಲ್ಲಿ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರ ಪಿಇಎಸ್‌ ವಿಶ್ವವಿದ್ಯಾಲಯದ ಸಂಭಾಗಣದಲ್ಲಿ ಭಾನುವಾರ (ನ.10) ಆಯೋಜಿಸಿದ್ದ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕಾರ್ಯಕ್ರಮದಲ್ಲಿ ಮೋಹನ್‌ ಭಾಗವತ್ ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಳ್ಳದ್ದನ್ನು ಸಮರ್ಥಿಸಿಕೊಂಡಿದ್ದಾರೆ.

“ನಮ್ಮದು ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ‘ವ್ಯಕ್ತಿಗಳ ಸಂಸ್ಥೆ’. ಆದ್ದರಿಂದ ಭಾರತೀಯ ಕಾನೂನಿನಡಿಯಲ್ಲಿ ನೋಂದಣಿ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

“ಸಂಘ 1925ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಎಂಬುವುದು ನಿಮಗೆ ಗೊತ್ತಾ? ಆಗ ಬ್ರಿಟಿಷ್ ಸರ್ಕಾರದ ವಿರುದ್ದ ಹೋರಾಡುತ್ತಿದ್ದ ನಮ್ಮ ಸರಸಂಘ ಚಾಲಕ (ಕೆ.ಬಿ ಹೆಡ್ಗೇವಾರ್ ) ಅವರು ಬ್ರಿಟಿಷ್ ಸರ್ಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತಾ? ಸ್ವಾತಂತ್ರ್ಯದ ನಂತರ, ಭಾರತೀಯ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಿಲ್ಲ. ನೋಂದಣಿಯಾಗದ ವ್ಯಕ್ತಿಗಳ ಸಮೂಹಕ್ಕೂ (body of individuals) ಕಾನೂನು ಸ್ಥಾನಮಾನ ದೊರೆಯುತ್ತದೆ. ನಾವು ‘ವ್ಯಕ್ತಿಗಳ ಸಮೂಹ’ ಎಂದು ವರ್ಗೀಕೃತರಾಗಿದ್ದೇವೆ. ನಾವು ಗುರುತಿಸಲ್ಪಟ್ಟ ಸಂಸ್ಥೆಯಾಗಿದ್ದೇವೆ” ಎಂದಿದ್ದಾರೆ.

ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಾನಮಾನವನ್ನು ಒತ್ತಿ ಹೇಳಲು ಹಿಂದಿನ ಕಾನೂನು ವಿವಾದವನ್ನು ಉಲ್ಲೇಖಿಸಿದ ಭಾಗವತ್, “ಆದಾಯ ತೆರಿಗೆ ಇಲಾಖೆ ತೆರಿಗೆ ವಿಧಿಸಲು ಪ್ರಯತ್ನಿಸಿದಾಗ ನ್ಯಾಯಾಲಯಗಳು ‘ವ್ಯಕ್ತಿಗಳ ಸಂಸ್ಥೆ’ಯಾಗಿ ಸಂಘದ ಸ್ಥಾನವನ್ನು ಎತ್ತಿಹಿಡಿದು, ಅದರ ಗುರುದಕ್ಷಿಣೆ (ವಿದ್ಯಾರ್ಥಿಯಿಂದ ಶಿಕ್ಷಕರಿಗೆ ಸ್ವಯಂಪ್ರೇರಿತ ಕೊಡುಗೆ) ತೆರಿಗೆಯಿಂದ ವಿನಾಯಿತಿ ಪಡೆದಿದೆ ಎಂದು ತೀರ್ಪು ನೀಡಿತ್ತು” ಎಂದು ಹೇಳಿದ್ದಾರೆ.

ಸರ್ಕಾರವು ಸಂಘವನ್ನು ಗುರುತಿಸಿರುವುದಕ್ಕೆ ಪುರಾವೆಯಾಗಿ ಈ ಹಿಂದೆ ಹಲವು ಬಾರಿ ಸಂಘ ನಿಷೇಧಕ್ಕೊಳಗಾಗಿರುವುದನ್ನು ಭಾಗವತ್ ಪ್ರಸ್ತಾಪಿಸಿದ್ದು, “ನಮ್ಮನ್ನು ಮೂರು ಬಾರಿ ನಿಷೇಧಿಸಲಾಗಿತ್ತು. ಹಾಗಾಗಿ, ನಮ್ಮ ಸಂಘಟನೆಯನ್ನು ಸರ್ಕಾರ ಗುರುತಿಸಿದೆ ಎಂದಾಯಿತಲ್ಲವೇ? ಇಲ್ಲದಿದ್ದರೆ, ಅವರು ಯಾರನ್ನು ನಿಷೇಧಿಸುತ್ತಿದ್ದರು? ಪ್ರತಿ ಬಾರಿಯೂ ನ್ಯಾಯಾಲಯಗಳು ನಿಷೇಧವನ್ನು ವಜಾಗೊಳಿಸಿ ಆರ್‌ಎಸ್‌ಎಸ್ ಅನ್ನು ಕಾನೂನುಬದ್ಧ ಸಂಘಟನೆಯನ್ನಾಗಿ ಮಾಡಿವೆ” ಎಂದಿದ್ದಾರೆ.

ಸಂಘದ ಸಾಂವಿಧಾನಿಕ ನ್ಯಾಯಸಮ್ಮತತೆಯನ್ನು ಸಮರ್ಥಿಸಿದ ಭಾಗವತ್, “ನಾವು ಸಂವಿಧಾನಬಾಹಿರರಲ್ಲ. ನಮ್ಮ ಕಾನೂನು ಸ್ಥಾನಮಾನ ಸಂವಿಧಾನದೊಳಗೆ ಇದೆ. ಆದ್ದರಿಂದ ನಾವು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಅನೇಕ ವಿಷಯಗಳನ್ನು ನೋಂದಾಯಿಸಲಾಗಿಲ್ಲ, ಹಿಂದೂ ಧರ್ಮವನ್ನೂ ಕೂಡ ನೋಂದಾಯಿಸಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

ಭಾಗವತ್ ಅವರು ಆರ್‌ಎಸ್‌ಎಸ್‌ನ ನೋಂದಣಿ, ಭಾರತೀಯ ಸಂವಿಧಾನ ಮತ್ತು ಅದರಡಿಯ ಕಾನೂನುಗಳನ್ನು ಸಂಘ ಅನುಸರಿಸುವ ಬಗೆ, ಭಾರತದ ತ್ರಿವರ್ಣ ಧ್ವಜ ಮತ್ತು ಆರ್‌ಎಸ್‌ಎಸ್‌ನ ಭಗವಾಧ್ವಜ, ಆರ್‌ಎಸ್‌ಎಸ್‌ನ ಹಣದ ಮೂಲ ಇತ್ಯಾದಿಗಳ ಬಗ್ಗೆ ಇಷ್ಟೊಂದು ಬಹಿರಂಗವಾಗಿ ಮಾತನಾಡಿರುವುದು ಇದೇ ಮೊದಲು ಎನ್ನಬಹುದು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕುರಿತು ಕೇಳಿದ ಪ್ರಶ್ನೆಗಳು, ಅದಕ್ಕೆ ವ್ಯಕ್ತವಾದ ಪರ-ವಿರೋಧ ಅಭಿಪ್ರಾಯಗಳು ಭಾಗವತ್ ಹೇಳಿರುವ ವಿಷಯಗಳ ಕುರಿತು ಜನರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಆರ್‌ಎಸ್‌ಎಸ್‌ ಭಾರತದ ಸಂವಿಧಾನದಡಿಯ ಕಾನೂನ ಅನ್ವಯ ನೋಂದಣಿಯಾಗದ ಸಂಘಟನೆ, ಅದು ಇನ್ನೂ ಏಕೆ ನೋಂದಣಿ ಮಾಡಿಕೊಂಡಿಲ್ಲ? ಸಂಘದ ಹಣದ ಮೂಲ ಯಾವುದು? ಇತ್ಯಾದಿ ಪ್ರಶ್ನೆಗಳನ್ನು ಪ್ರಿಯಾಂಕ್ ಖರ್ಗೆ ಸರಣಿಯಾಗಿ ಕೇಳಿದ್ದರು. ಇದು ಜನರಲ್ಲಿ ಚರ್ಚೆ ಹಚ್ಚಿ ಭಾಗವತ್ ಉತ್ತರ ಕೊಡುವಂತೆ ಮಾಡಿದೆ.

ಭಾಗವತ್ ನೀಡಿರುವ ಉತ್ತರಗಳ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಭಾರತದಲ್ಲಿ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಗಳೂ ಹಣಕಾಸು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿರುವಾಗ, ಆರ್‌ಎಸ್‌ಎಸ್‌ಗೆ ಇದೇ ರೀತಿಯ ಜವಾಬ್ದಾರಿ ವ್ಯವಸ್ಥೆಗಳು ಇಲ್ಲದಿರುವುದನ್ನು ಏನು ಸಮರ್ಥಿಸುತ್ತದೆ? ಇದಲ್ಲದೆ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಯಾರು? ಅವರ ಸಂಖ್ಯೆ ಎಷ್ಟು? ಅವರನ್ನು ಹೇಗೆ ಗುರುತಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

“ಆರ್‌ಎಸ್‌ಎಸ್‌ಗೆ ನೀಡಲಾಗುವ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು? ಈ ಕೊಡುಗೆಗಳನ್ನು ಯಾವ ಕಾರ್ಯವಿಧಾನಗಳು ಅಥವಾ ಮಾರ್ಗಗಳ ಮೂಲಕ ಸ್ವೀಕರಿಸಲಾಗುತ್ತದೆ? ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತನ್ನದೇ ಆದ ನೋಂದಾಯಿತ ಗುರುತಿನ ಅಡಿಯಲ್ಲಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಏಕೆ ನೀಡಲಾಗುವುದಿಲ್ಲ?” ಎಂದು ಕೇಳಿದ್ದಾರೆ.

“ನೋಂದಾಯಿತ ಸಂಸ್ಥೆಯಲ್ಲದ ಆರ್‌ಎಸ್‌ಎಸ್ ತನ್ನ ಆರ್ಥಿಕ ಮತ್ತು ಸಾಂಸ್ಥಿಕ ರಚನೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ?”

“ಪೂರ್ಣ ಸಮಯದ ಪ್ರಚಾರಕರಿಗೆ ಯಾರು ಸಹಾಯ ನೀಡುತ್ತಾರೆ ಮತ್ತು ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸುತ್ತಾರೆ? ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಪ್ರಚಾರ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತದೆ? ಸ್ವಯಂಸೇವಕರು ಸ್ಥಳೀಯ ಕಚೇರಿಗಳಿಂದ ಸಮವಸ್ತ್ರ ಅಥವಾ ವಸ್ತುಗಳನ್ನು ಖರೀದಿಸಿದಾಗ, ಈ ಹಣವನ್ನು ಎಲ್ಲಿಗೆ ಲೆಕ್ಕ ಹಾಕಲಾಗುತ್ತದೆ? ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಹಾಕಿದ್ದಾರೆ.

ಈ ಪ್ರಶ್ನೆಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಭೂತ ಸಮಸ್ಯೆಯನ್ನು ಒತ್ತಿಹೇಳುತ್ತವೆ ಎಂದಿರುವ ಪ್ರಿಯಾಂಕ್ ಖರ್ಗೆ, “ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ಉಪಸ್ಥಿತಿ ಮತ್ತು ಪ್ರಭಾವದ ಹೊರತಾಗಿಯೂ ಆರ್‌ಎಸ್‌ಎಸ್ ಏಕೆ ನೋಂದಾಯಿಸದೆ ಉಳಿದಿದೆ?” ಎಂದು ಕೇಳಿದ್ದಾರೆ.

“ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿ 100 ವರ್ಷಗಳು, ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷಗಳು, ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷಗಳು, ರಾಷ್ಟ್ರ-ವಿರೋಧಿಯಾಗಿ 100 ವರ್ಷಗಳು” ಎಂದು ಬರೆದುಕೊಳ್ಳುವ ಮೂಲಕ ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಗೆ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.

“ಭಾರತ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಫೆಬ್ರವರಿ 24, 1948 ರಂದು ಬರೆದ ಪತ್ರ ಇಲ್ಲಿದೆ. ಇದರಲ್ಲಿ ಆರ್‌ಎಸ್‌ಎಸ್ ರಾಷ್ಟ್ರಧ್ವಜವನ್ನು ಹೇಗೆ ಅವಮಾನಿಸಿದೆ ಎಂಬುದನ್ನು ದಾಖಲಿಸಲಾಗಿದೆ. ಇತಿಹಾಸವು ನಮ್ಮ ದೇಶಕ್ಕೆ ಆರ್‌ಎಸ್‌ಎಸ್ ಮಾಡಿದ ನಿರ್ಲಜ್ಜ ದ್ರೋಹದ ನಿದರ್ಶನಗಳಿಂದ ತುಂಬಿದೆ. ಮತ್ತು ಇಡೀ ಬಿಜೆಪಿ ಇಕೋ ಸಿಸ್ಟಂ ಎಷ್ಟೇ ಪ್ರಯತ್ನಿಸಿದರೂ, ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಎಂಬ ಇತಿಹಾಸವನ್ನು ಅಳಿಸಿಹಾಕಲು ಅವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ನಿಜವಾದ ಆರ್‌ಎಸ್‌ಎಸ್ ಚರಿತ್ರೆಯನ್ನು ತಿಳಿದುಕೊಳ್ಳುವ ಸಮಯ ಬಂದಿದೆ” ಎಂದು ಬರೆದುಕೊಂಡು ದಾಖಲೆ ಹಂಚಿಕೊಂಡಿದ್ದಾರೆ.

ಮುಸ್ಲಿಮ್‌-ದಲಿತ ಕ್ರೈಸ್ತರಿಗೆ ಎಸ್‌ಸಿ ಸ್ಥಾನಮಾನ; ಪರಿಶೀಲನಾ ಸಮಿತಿ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...