ನರೇಗಾ ಯೋಜನೆಗೆ ಮರುನಾಮಕರಣದ ಮೂಲಕ ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು . ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನವನ್ನು ಕೊಡುತ್ತಿತ್ತು. ಈಗ ಹೊಸ ಕಾಯ್ದೆ ಜಾರಿಗೆ ತಂದು 60 ಶೇಕಡ ಕೇಂದ್ರ ಮತ್ತು 40 ಶೇಕಡ ರಾಜ್ಯ ಸರ್ಕಾರ ಕೊಡಬೇಕು ಎಂದು ತೀರ್ಮಾನಿಸಿದ್ದಾರೆ. ರಾಜ್ಯಗಳ ಮೇಲೆ ಭಾರೀ ಹೊರೆಯನ್ನೇ ಹೊರೆಸಿದ್ದಾರೆ ಎಂದು ಸಿಎಂ ಹೇಳಿದರು.
ಗ್ರಾಮ ಪಂಚಾಯತ್ನಿಂದ ರಾಜ್ಯ ಮಟ್ಟದವರೆಗೆ ಜನವರಿ 5ರಿಂದ ನಿರಂತರವಾಗಿ ಆಂದೋಲನವನ್ನು ಪ್ರಾರಂಭಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಎಂದರೆ ಕೇವಲ ಪಕ್ಷವಲ್ಲ
ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳವಳಿ ಮತ್ತು ಸಿದ್ಧಾಂತ. ನಾವೆಲ್ಲರೂ ಚಳವಳಿಯಲ್ಲಿದ್ದೇವೆ. ಸಮಾನತೆ, ಸಮಾನ ಅವಕಾಶಗಳನ್ನು ಎಲ್ಲರಿಗೂ ಕೊಡಬೇಕು ಎನ್ನುವ ಸಿದ್ಧಾಂತ ನಮ್ಮದು ಎಂದು ಸಿಎಂ ಹೇಳಿದರು. ಸತ್ಯಾಗ್ರಹ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್. ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಎಂದರು.
ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷದವರು
ಬ್ರಿಟಿಷ್ ಅಧಿಕಾರಿ ಎ. ಒ ಹ್ಯೂಮ್ ಅವರು ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಪ್ರಾರಂಭಿಸಿ 148 ವರ್ಷಗಳಾಗಿವೆ. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾರಂಭವಾದ ಕಾಂಗ್ರೆಸ್ ನಾಗರಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ಆಡಳಿತಕ್ಕಾಗಿ ಒತ್ತಾಯಿಸಿತು. ಮುಂಬೈನಲ್ಲಿ ಮಾಡಲಾ ಅಧಿವೇಶನ ಪ್ರಾರಂಭವಾದ ನಂತರ ನಿಧಾನವಾಗಿ ಬೆಳಕನ್ನು ಕಾಣುವಂತಾಯಿತು. 1915ರಲ್ಲಿ ಮಹಾತ್ಮಾ ಗಾಂಧಿ ಯವರನ್ನು ಗೋಖಲೆಯವರು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಲು ಆಹ್ವಾನಿಸಿದರು. ಡಿಸೆಂಬರ್ 28 ಐತಿಹಾಸಿಕ ದಿನವಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್ಎಸ್ಎಸ್, ಹಿಂದೂ ಮಹಾಸಭಾ, ಬಿಜೆಪಿ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷ ಎಂದು ಸಿಎಂ ಹೇಳಿದರು.
ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ 1915ರಿಂದ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಇಡೀ ದೇಶವನ್ನು ಸುತ್ತಿದ ನಂತರ ಕಾಂಗ್ರೆಸ್ ನೇತೃತ್ವವನ್ನು ಹೊತ್ತುಕೊಂಡರು. ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದಾಗ ಬಿಜೆಪಿ ಪಾಲ್ಗೊಂಡಿರಲಿಲ್ಲ ಎಂದರು.
ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ಬಿಜೆಪಿಯವರು ನಮಗೆ ದೇಶಭಕ್ತಿಯ ಪಾಠವನ್ನು ಹೇಳಿಕೊಡುತ್ತಾರೆ. ಅವರು ದೇಶಭಕ್ತರಂತೂ ಅಲ್ಲ. ದೇಶಭಕ್ತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ಒಬ್ಬ ನಾಯಕರೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಈಗ ಮಹಾತ್ಮಾ ಗಾಂಧಿಯವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಗಾಂಧಿಯನ್ನು ಕೊಂದವನು ನಾಥುರಾಮ್ ಗೋಡ್ಸೆ. ಬಿಜೆಪಿ ಕಚೇರಿಯ ಮೇಲೆ ಇತ್ತೀಚಿನವರೆಗೆ ಭಾರತದ ಧ್ವಜವೂ ಹಾರಾಡುತ್ತಿರಲಿಲ್ಲ. ಇವರಿಗೆ ದೇಶಕ್ಕೆ ಸ್ವಾತಂತ್ರ್ಯ ಬರುವುದೇ ಇಷ್ಟವಿರಲಿಲ್ಲ ಎಂದರು.
ದೇಶ ಮತ್ತು ಸಮಾಜ ಒಡೆಯುದೇ ಬಿಜೆಪಿಯ ಸಾಧನೆ
ಕಾಂಗ್ರೆಸ್ನವರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಆಧುನಿಕ ಭಾರತದ ರೂವಾರಿ ಜವಾಹರ್ಲಾಲ್ ನೆಹರೂ ಅವರು. ಜೈ ಜವಾನ್ ಜೈ ಕಿಸಾನ್ ಘೋಷಣೆ ನೀಡಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ, ಸಾಮಾಜಿಕ ನ್ಯಾಯದ ರೂವಾರಿ ಶ್ರೀಮತಿ ಇಂದಿರಾ ಗಾಂಧಿ, ಗರೀಬಿ ಹಠಾವೋ ಎನ್ನುವುದು ಕೇವಲ ಘೋಷಣೆಯಲ್ಲ. ಅದಕ್ಕೆ ಪೂರಕವಾಗಿ 20 ಅಂಶದ ಕಾರ್ಯಕ್ರಮವನ್ನು ನೀಡಿದರು. ಆಹಾರದಲ್ಲಿ ಸ್ವಾವಲಂಬನೆ ಬರಲು ಇಂದಿರಾ ಗಾಂಧಿ ಹಾಗೂ ಜಗಜೀವನ ರಾಮ್ ಅವರು ಕಾರಣ. 21ನೇ ಶತಮಾನಕ್ಕೆ ಸೂಕ್ತ ಕೊಡುಗೆಗಳನ್ನು ನೀಡಿದ್ದು ರಾಜೀವ್ ಗಾಂಧಿ. ಬಿಜೆಪಿಯ ಸಾಧನೆ ಏನೆಂದರೆ, ದೇಶ ಮತ್ತು ಸಮಾಜ ಒಡೆಯುವ ಕೆಲಸ. ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಮನುವಾದಿಗಳು. ಚಾತುರ್ವರ್ಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದೆ ಬಿಜೆಪಿ. ಸಂವಿಧಾನ ರಚನೆಯಾದ ಮೇಲೆ ಸಮಾನ ಅವಕಾಶಗಳು ದೊರಕುವಂತಾಯಿತು ಎಂದು ಸಿಎಂ ಹೇಳಿದರು.
ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ
ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವ ನಿಂತಿದೆ. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂಬ ತತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆಯಿದೆ. ಅದಕ್ಕಾಗಿಯೇ ನಾವು ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿದರು. ಶಿಕ್ಷಣ, ಉದ್ಯೋಗ ಖಾತರಿ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಯಾರಿಗೂ ಈ ಪ್ರಮಾಣದ ದ್ವೇಷ ಇರಬಾರದು. ಮಹಾತ್ಮಾ ಗಾಂಧಿಯವರನ್ನು ಕೊಂದ ನಂತರವೂ ಇದನ್ನು ಮುಂದುವರೆಸಿದ್ದಾರೆ. ನೆಹರೂ, ಇಂದಿರಾ ಗಾಂಧಿ , ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಕಂಡರೆ ಅವರಿಗೆ ಆಗುವುದೇ ಇಲ್ಲ. ನರೇಗಾ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಕರೆದಿದ್ದು, ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯನ್ನೇ ಮಾಡಿಲ್ಲ. ಇವರು ಹೇಳುವ ರಾಮ ದಶರಥ ಮಗ ರಾಮನಲ್ಲ, ಬಿಜೆಪಿಯ ರಾಮ ಎಂದರು.


