ಮುಸ್ಲಿಮರ ವಿರುದ್ಧ ಪದೇ ಪದೇ ದ್ವೇಷ ಕಾರುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ -ಸಿಪಿಐ (ಎಂ)) ಮತ್ತು ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮುಖಂಡರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ ವರದಿ ಮಾಡಿದೆ.
ವಕೀಲ ನಿಝಾಮ್ ಪಾಷಾ ಅವರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರ ಮುಂದೆ ಈ ಅರ್ಜಿಯನ್ನು ಪ್ರಸ್ತಾಪಿಸಿದ್ದು, ತುರ್ತು ವಿಚಾರಣೆಗೆ ಪಟ್ಟಿಮಾಡುವಂತೆ ಕೋರಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿಯ ದ್ವೇಷ ಭಾಷಣಗಳ ವಿಚಾರದಲ್ಲಿ ನ್ಯಾಯಾಲಯ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ವಕೀಲ ಪಾಷಾ ಅವರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಭಾಷಣಗಳು ಅತ್ಯಂತ ಕಳವಳಕಾರಿಯಾಗಿದ್ದು, ಇತ್ತೀಚೆಗೆ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಮುಖ್ಯಮಂತ್ರಿಯವರು ಒಂದು ನಿರ್ದಿಷ್ಟ ಸಮುದಾಯದವರ ಮೇಲೆ ಗುಂಡು ಹಾರಿಸುತ್ತಿರುವಂತೆ ಚಿತ್ರಿಸಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಲಾಗಿದ್ದರೂ ಸಹ, ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಚುನಾವಣೆಗಳು ಹತ್ತಿರ ಬಂದಾಗ ಸುಪ್ರೀಂ ಕೋರ್ಟ್ನಲ್ಲಿಯೂ ರಾಜಕೀಯ ಹೋರಾಟಗಳು ನಡೆಯುತ್ತವೆ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
“ಚುನಾವಣೆಗಳು ಸಮೀಪಿಸಿದಾಗ, ಆ ಚುನಾವಣೆಯ ಒಂದು ಭಾಗ ಸುಪ್ರೀಂ ಕೋರ್ಟ್ನೊಳಗೆ ನಡೆಯುತ್ತದೆ ಎನ್ನುವುದೇ ದೊಡ್ಡ ಸಮಸ್ಯೆ. ನಾವು ಈ ಬಗ್ಗೆ ಪರಿಶೀಲಿಸಿ, ವಿಚಾರಣೆಗೆ ದಿನಾಂಕವನ್ನು ನೀಡುತ್ತೇವೆ” ಎಂಬುವುದಾಗಿ ಸಿಜೆಐ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಮರಿಗೆ ಗುರಿಯಿಟ್ಟು ಗುಂಡಿಕ್ಕುವಂತೆ ತೋರಿಸುವ ಎಐ ವಿಡಿಯೋವನ್ನು ಇತ್ತೀಚೆಗೆ ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು ಡಿಲಿಟ್ ಮಾಡಿದೆ.
ಸಿಎಂ ಶರ್ಮಾ ವಿರುದ್ಧ ಹನ್ನೆರಡು ನಾಗರಿಕರು ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ಪ್ರತ್ಯೇಕ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ, ಸಿಎಂ ‘ಮಿಯಾ ಮುಸ್ಲಿಂ’, ‘ಫ್ಲಡ್ ಜಿಹಾದ್’ ‘ಲವ್ ಜಿಹಾದ್’ ಮತ್ತು ‘ಫರ್ಟಿಲೈಸರ್ ಜಿಹಾದ್’ ನಂತಹ ಪದಗಳನ್ನು ಬಳಸಿ ಒಂದು ಸಮುದಾಯವನ್ನು ಗುರಿಯಾಗಿಸುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇತ್ತೀಚೆಗೆ, ಜಮಿಯತ್ ಉಲೇಮಾ-ಇ-ಹಿಂದ್ ಕೂಡ ಸಿಎಂ ಶರ್ಮಾ ಅವರ ಭಾಷಣವನ್ನು ಟೀಕಿಸಿ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ವಿಭಜನಕಾರಿ ಹೇಳಿಕೆಗಳನ್ನು ನೀಡದಂತೆ ತಡೆಯಲು ನಿರ್ದೇಶನಗಳನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಅನ್ನು ಕೋರಿತ್ತು.


