Homeಮುಖಪುಟ'ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ' ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

“ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ” ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, “ಲೈಂಗಿಕ ಅಪರಾಧ ಪ್ರಕರಣಗಳ ನ್ಯಾಯದಾನವು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರದೆ, ಅದು ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಕೂಡಿರಬೇಕು” ಎಂದು ಒತ್ತಿಹೇಳಿರುವುದಾಗಿ ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ.

ಹೈಕೋರ್ಟ್‌ನ ನಿಲುವನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಇದು ‘ಅಮಾನವೀಯ ಮತ್ತು ಸಂವೇದನಾ ರಹಿತ’ ತೀರ್ಪು ಎಂದು ಬಣ್ಣಿಸಿದೆ. ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಪ್ರಯತ್ನವೇ ಹೊರತು, ಕೇವಲ ಸಿದ್ಧತೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಫೆಬ್ರವರಿ 10ರಂದು ನೀಡಿದ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪೀಠವು, “ನ್ಯಾಯಾಲಯಗಳು ದೂರುದಾರರ ಅಥವಾ ಸಂತ್ರಸ್ತರ ದುರ್ಬಲತೆ ಮತ್ತು ಸೂಕ್ಷ್ಮತೆಗಳ ಬಗ್ಗೆ ‘ಅಸಡ್ಡೆ’ ತೋರಿದರೆ ಅಥವಾ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ಅಂತಹ ಸಂದರ್ಭಗಳಲ್ಲಿ ‘ಸಂಪೂರ್ಣ ನ್ಯಾಯ’ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.

“ನಮ್ಮ ಕಾನೂನು ಪ್ರಕ್ರಿಯೆಯ ಪಾಲ್ಗೊಳ್ಳುವವರಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯ ನಾಗರಿಕರು ಎದುರಿಸಬೇಕಾದ ಕಾರ್ಯವಿಧಾನಗಳನ್ನು ರೂಪಿಸುವುದರಿಂದ ಹಿಡಿದು, ಯಾವುದೇ ಪ್ರಕರಣದಲ್ಲಿ ನೀಡುವ ಅಂತಿಮ ತೀರ್ಪಿನವರೆಗೆ—ಕರುಣೆ, ಮಾನವೀಯತೆ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು; ಒಂದು ನ್ಯಾಯಸಮ್ಮತ ಮತ್ತು ಪರಿಣಾಮಕಾರಿ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಇವು ಅತ್ಯಗತ್ಯ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದಾಗಿ ವರದಿ ಹೇಳಿದೆ.

ಈ ಪ್ರಕರಣದಲ್ಲಿ ವ್ಯವಸ್ಥಿತ ಸುಧಾರಣೆಯ ಅಗತ್ಯವಿದೆ ಮತ್ತು ನ್ಯಾಯಾಧೀಶರಲ್ಲಿ ಸಂವೇದನಾಶೀಲತೆಯನ್ನು ಬೆಳೆಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

“ನ್ಯಾಯಾಂಗದ ಸದಸ್ಯರ ಧೋರಣೆಯಲ್ಲಿ ಮತ್ತು ಅದರ ಜೊತೆಗಿನ ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಅಂತರ್ಗತ ಸಂವೇದನಾಶೀಲತೆ ಮತ್ತು ವಿವೇಚನೆಯನ್ನು ಬೆಳೆಸಲು ಹಾಗೂ ಪೋಷಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇಬ್ಬರು ಆರೋಪಿಗಳ ವಿರುದ್ಧದ ಸಮನ್ಸ್ ಆದೇಶವನ್ನು ಮಾರ್ಪಡಿಸುವಾಗ ಅಲಹಾಬಾದ್ ಹೈಕೋರ್ಟ್ ಮಾರ್ಚ್ 17, 2025ರಂದು ವಿವಾದಾತ್ಮಕ ಅವಲೋಕನಗಳನ್ನು ಮಾಡಿತ್ತು.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಪವನ್ ಮತ್ತು ಆಕಾಶ್ ಮೊದಲು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದಿದ್ದರು. ನಂತರ, ಅವರಲ್ಲಿ ಒಬ್ಬ ಆಕೆಯ ಪೈಜಾಮದ ದಾರವನ್ನು ಎಳೆದು ಚರಂಡಿಯ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯಲು ಪ್ರಯತ್ನಿಸಿದ್ದ. ನಂತರ ಇಬ್ಬರೂ ಬಾಲಕಿ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದರು. ಈ ವೇಳೆ ದಾರಿ ಹೋಕರು ಅಲ್ಲಿಗೆ ಬಂದಿದ್ದರಿಂದ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು. ಇದರಿಂದ ಬಾಲಕಿಯು ಹೆಚ್ಚಿನ ಅಪಾಯದಿಂದ ಪಾರಾಗಿದ್ದಳು.

ಪೋಕ್ಸೊ ಕಾಯ್ದೆಯಡಿ ಇದನ್ನು ಅತ್ಯಾಚಾರದ ಯತ್ನ ಅಥವಾ ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಯತ್ನ ಎಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯವು, ಪೋಕ್ಸೊ ಕಾಯ್ದೆಯ ಸೆಕ್ಷನ್ 18ರ ಜೊತೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಕ್ರಮ ಜರುಗಿಸಿತ್ತು. ಈ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ದ ಸಮನ್ಸ್ ಆದೇಶವನ್ನು ಹೊರಡಿಸಿತ್ತು.

ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಯತ್ನ ಎನ್ನುವುದು ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅತ್ಯಂತ ಗಂಭೀರವಾದ ಅಪರಾಧವಾಗಿದೆ. ಒಬ್ಬ ವ್ಯಕ್ತಿಯು ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಗಳಿಗೆ (ಯೋನಿ, ಗುದದ್ವಾರ, ಮೂತ್ರನಾಳ ಅಥವಾ ಬಾಯಿ) ತನ್ನ ಶಿಶ್ನವನ್ನು ಯಾವುದೇ ಮಟ್ಟಕ್ಕೆ ನುಗ್ಗಿಸುವುದು ಅಥವಾ ಮಗುವಿನಿಂದ ಹಾಗೆ ಮಾಡಿಸುವುದಾಗಿದೆ.

ಶಿಶ್ನವಲ್ಲದ ಬೇರೆ ಯಾವುದೇ ವಸ್ತು ಅಥವಾ ದೇಹದ ಭಾಗವನ್ನು (ಉದಾಹರಣೆಗೆ ಬೆರಳು) ಮಗುವಿನ ಖಾಸಗಿ ಅಂಗಗಳ ಒಳಗೆ ಸೇರಿಸುವುದು ಸಹ ಈ ಅಪರಾಧದ ವ್ಯಾಪ್ತಿಗೆ ಬರುತ್ತದೆ.

ಮಗುವಿನ ದೇಹದ ಯಾವುದೇ ಭಾಗವನ್ನು ಕುಶಲತೆಯಿಂದ ನುಗ್ಗುವಿಕೆ ಉಂಟಾಗುವಂತೆ ಮಾಡುವುದು. ಮಗುವಿನ ಜನನಾಂಗಗಳಿಗೆ ತನ್ನ ಬಾಯಿಯನ್ನು ಮುಟ್ಟಿಸುವುದು ಅಥವಾ ಮಗುವಿನಿಂದ ಹಾಗೆ ಮಾಡಿಸುವುದು ಕೂಡ ಇದೇ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಅಲಹಾಬಾದ್ ಹೈಕೋರ್ಟ್ ಇಬ್ಬರು ಆರೋಪಿಗಳ ಮೇಲಿನ ಆರೋಪಗಳನ್ನು ಮಾರ್ಪಡಿಸಿ, ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354-B (ಬಟ್ಟೆ ಕಳಚುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲದ ಬಳಕೆ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9/10 (ತೀವ್ರತರದ ಲೈಂಗಿಕ ದೌರ್ಜನ್ಯ) ಎಂಬ ಕಡಿಮೆ ತೀವ್ರತೆಯ ಸೆಕ್ಷನ್‌ಗಳ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು.

ವಿಚಾರಣಾ ನ್ಯಾಯಾಲಯವು ಹೊರಿಸಿದ್ದ ‘ಅತ್ಯಾಚಾರದ ಪ್ರಯತ್ನ’ ಎಂಬ ಗಂಭೀರ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಆರೋಪಿಗಳು ಮಗುವಿನ ಸ್ತನಗಳನ್ನು ಹಿಡಿದಿದ್ದು ಮತ್ತು ಪೈಜಾಮಾದ ಲಾಡಿ ಬಿಚ್ಚಿದ್ದು ಕೇವಲ ‘ಅತ್ಯಾಚಾರದ ಸಿದ್ಧತೆ’, ಅದು ‘ಅತ್ಯಾಚಾರದ ಯತ್ನ’ವಲ್ಲ ಎಂದು ಅಭಿಪ್ರಾಯಪಟ್ಟಿತ್ತು.

“ಆರೋಪಿಗಳಾದ ಪವನ್ ಮತ್ತು ಆಕಾಶ್ ಸಂತ್ರಸ್ತೆಯ ಸ್ತನಗಳನ್ನು ಹಿಡಿದಿದ್ದರು. ಆಕಾಶ್ ಸಂತ್ರಸ್ತೆಯ ಪೈಜಾಮವನ್ನು ಕೆಳಕ್ಕೆ ಎಳೆಯಲು ಯತ್ನಿಸಿದ್ದ. ಅದಕ್ಕಾಗಿ ಅದರ ಲಾಡಿ ಬಿಚ್ಚಿದ್ದ. ಬಾಲಕಿಯನ್ನು ಚರಂಡಿಗೆ ಎಳೆಯಲು ಯತ್ನಿಸಿದ್ದ ಎಂಬ ಆರೋಪಗಳಿವೆ. ಆದರೆ, ಸಾಕ್ಷಿಗಳು (ದಾರಿ ಹೋಕರು) ಮಧ್ಯಪ್ರವೇಶಿಸಿದ ಕಾರಣ ಅವರು ಸಂತ್ರಸ್ತೆಯನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಸಂಗತಿಗಳು ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ತೀರ್ಮಾನಿಸಲು ಸಾಕಾಗುವುದಿಲ್ಲ, ಏಕೆಂದರೆ ಈ ಅಂಶಗಳನ್ನು ಹೊರತುಪಡಿಸಿ ಅತ್ಯಾಚಾರ ಮಾಡುವ ಅವರ ಉದ್ದೇಶವನ್ನು ಸಾಬೀತುಪಡಿಸಲು ಬೇರೆ ಯಾವುದೇ ಕೃತ್ಯಗಳು ಕಂಡುಬಂದಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅಭಿಪ್ರಾಯಪಟ್ಟಿದ್ದರು.

“ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ದೃಢ ಉದ್ದೇಶ ಹೊಂದಿದ್ದರು ಎಂದು ಸೂಚಿಸಲು ಯಾವುದೇ ದಾಖಲೆಗಳು ಲಭ್ಯವಿಲ್ಲ” ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದರು. ಅಷ್ಟೇ ಅಲ್ಲದೆ, “ಆರೋಪಿ ಆಕಾಶ್ ಅಪ್ರಾಪ್ತ ಸಂತ್ರಸ್ತೆಯ ಪೈಜಾಮದ ಲಾಡಿ ಬಿಚ್ಚಿ ಅದನ್ನು ಎಳೆಯಲು ಸಡಿಲಗೊಳಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ದೂರಿನಲ್ಲಾಗಲಿ ಅಥವಾ ಸಾಕ್ಷಿಗಳ ಹೇಳಿಕೆಯಲ್ಲಾಗಲಿ ಯಾವುದೇ ಆರೋಪವಿಲ್ಲ” ಎಂದಿದ್ದರು.

ಹೈಕೋರ್ಟ್‌ನ ಈ ಅವಲೋಕನದ ಕುರಿತು ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಮಾರ್ಚ್ 26, 2025ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

ಫೆಬ್ರವರಿ 10ರಂದು ನೀಡಿರುವ ತನ್ನ ಅಂತಿಮ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲು ನಿರಾಕರಿಸಿದೆ. ದಿ ಹಿಂದೂ ವರದಿಯ ಪ್ರಕಾರ, ನ್ಯಾಯಾಂಗದ ವಿವೇಚನೆಯ ಮೇಲೆ ನಿರ್ಬಂಧ ಹೇರುವ ಬದಲು, ನ್ಯಾಯಾಧೀಶರಲ್ಲಿ ಅಂತರ್ಗತ ಸಂವೇದನಾಶೀಲತೆಯನ್ನು ಬೆಳೆಸುವ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

“ವಿವಿಧ ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಗಳು ಈ ಹಿಂದೆ ನಡೆಸಿರುವ ಇಂತಹ ಪ್ರಯತ್ನಗಳ ಸಮಗ್ರ ತಿಳುವಳಿಕೆ, ಅಂತಹ ಪ್ರಯತ್ನಗಳ ವಾಸ್ತವಿಕ ಫಲಿತಾಂಶಗಳು ಮತ್ತು ಇಂತಹುದೇ ಸೂಕ್ಷ್ಮ ಪ್ರಕರಣಗಳಲ್ಲಿ ಸಂತ್ರಸ್ತರು ಹಾಗೂ ದೂರುದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ವ್ಯಾಪ್ತಿಯನ್ನು ಸರಿಯಾಗಿ ಅರಿತುಕೊಳ್ಳದೆ, ಈ ಹಂತದಲ್ಲಿ ಯಾವುದೇ ಮಾರ್ಗಸೂಚಿಗಳನ್ನು ರೂಪಿಸಲು ನಾವು ಮುಂದಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಅದಕ್ಕೆ ಬದಲಾಗಿ, ಲೈಂಗಿಕ ದೌರ್ಜನ್ಯ ಮತ್ತು ಇತರ ಸೂಕ್ಷ್ಮ ಪ್ರಕರಣಗಳ ಸಂದರ್ಭದಲ್ಲಿ ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಂವೇದನಾಶೀಲತೆ ಹಾಗೂ ಸಹಾನುಭೂತಿಯನ್ನು ಬೆಳೆಸುವ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು’ ತಜ್ಞರ ಸಮಿತಿಯನ್ನು ರಚಿಸುವಂತೆ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (ಎನ್‌ಜೆಎ) ಗೆ ಸುಪ್ರೀಂ ಕೋರ್ಟ್ ವಿನಂತಿಸಿದೆ.

ಅಲ್ಲದೆ, ಲೈಂಗಿಕ ಅಪರಾಧಗಳು ಮತ್ತು ಅದೇ ರೀತಿಯ ಸೂಕ್ಷ್ಮ ಘಟನೆಗಳಲ್ಲಿ ಭಾಗಿಯಾದ ಅಸಹಾಯಕ ಸಂತ್ರಸ್ತರು, ದೂರುದಾರರು ಮತ್ತು ಸಾಕ್ಷಿಗಳ ಪ್ರಕರಣಗಳನ್ನು ನಿರ್ವಹಿಸುವಾಗ, ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯು ಅನುಸರಿಸಬೇಕಾದ ಧೋರಣೆಯ ಕುರಿತಾದ ಕರಡು ಮಾರ್ಗಸೂಚಿಗಳನ್ನು’ ಸಿದ್ಧಪಡಿಸುವಂತೆಯೂ ಸಮಿತಿಗೆ ಸೂಚಿಸಿದೆ.

ಎನ್‌ಜೆ ಸಿದ್ಧಪಡಿಸುವ ವರದಿಯು ದೇಶದ ಭಾಷಾ ವೈವಿಧ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಈ ಕರಡು ಮಾರ್ಗಸೂಚಿಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ಭಾಷೆಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ.

ನಮ್ಮ ನಿರೀಕ್ಷೆಯಂತೆ, ಈ ಮಾರ್ಗಸೂಚಿಗಳು ವಿದೇಶಿ ಭಾಷೆಗಳಿಂದ ಅಥವಾ ವಿದೇಶಿ ನ್ಯಾಯವ್ಯಾಪ್ತಿಗಳಿಂದ ಎರವಲು ಪಡೆದ ಭಾರವಾದ ಮತ್ತು ಸಂಕೀರ್ಣವಾದ ಪದಪ್ರಯೋಗಗಳಿಂದ ಕೂಡಿರಬಾರದು,” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, ಸಮಿತಿಯು ತನ್ನ ವರದಿಯನ್ನು “ಆದ್ಯತೆಯ ಮೇರೆಗೆ ಮೂರು ತಿಂಗಳ ಒಳಗಾಗಿ” ಸಲ್ಲಿಸಬೇಕು ಎಂದು ಸೂಚಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...