ದಾರಿತಪ್ಪಿಸುವ ಆನ್ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಭಯ ಹುಟ್ಟಿಸುವ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು, ಕಪೋಲಕಲ್ಪಿತ ಮತ್ತು ದಾರಿತಪ್ಪಿಸುವ ವಿಷಯಗಳ ಪ್ರಸರಣದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಶ್ರೀನಗರ ಪೊಲೀಸರು ಇಬ್ಬರು ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಚರ್ಚೆಯಲ್ಲಿರುವ ವಿಷಯವು ಮೇಲ್ನೋಟಕ್ಕೆ ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸುಳ್ಳು ನಿರೂಪಣೆಗಳು ಹಾಗೂ ದೃಢೀಕರಿಸದ ಮಾಹಿತಿಯನ್ನು ಹೊಂದಿವೆ. ತಪ್ಪು ಮಾಹಿತಿಯನ್ನು ಹರಡುವ ಇಂತಹ ಉದ್ದೇಶಪೂರ್ವಕ ಪ್ರಯತ್ನಗಳು ಶಾಂತಿ, ಭದ್ರತೆ ಮತ್ತು ಒಟ್ಟಾರೆ ಸ್ಥಿರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
ಯಾವುದೇ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವ ಮೊದಲು ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳ ಮೂಲಕ ಅದನ್ನು ದೃಢೀಕರಿಸಿಕೊಳ್ಳುವಂತೆ ಹಾಗೂ ಕೋಮು ಸೌಹಾರ್ದತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ದೃಢೀಕರಿಸದ ವಿಷಯಗಳನ್ನು ಹರಡುವುದರಿಂದ ದೂರವಿರುವಂತೆ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.
ಪೊಲೀಸರು ನ್ಯಾಷನಲ್ ಕಾನ್ಫರೆನ್ಸ್ ಸಂಸದರ ಭದ್ರತೆಯನ್ನು ಕಡಿತಗೊಳಿಸಿದ್ದು, ಅವರ ಫೇಸ್ಬುಕ್ ಪುಟವನ್ನೂ ನಿರ್ಬಂಧಿಸಿದ್ದಾರೆ. ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಸೈಯದ್ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ತಾವು ನೀಡಿದ ಸಾರ್ವಜನಿಕ ಹೇಳಿಕೆಗಳು ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ತಮ್ಮ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಶ್ರೀನಗರದ ಮಾಜಿ ಮೇಯರ್ ಆರೋಪಿಸಿದ್ದಾರೆ.
ತಮ್ಮ ಮೇಲೆ ಎಫ್ಐಆರ್ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ರೂಹುಲ್ಲಾ ಅವರು,”ಶ್ರೀನಗರದ ಜನರು ತಮ್ಮ ಸಂಸದರನ್ನು ಆರಿಸಿರುವುದು ಕೇವಲ ಸರ್ಕಾರ ಒಪ್ಪುವಂತಹ ಮಾತುಗಳನ್ನು ಆಡಲು ಅಲ್ಲ, ಬದಲಾಗಿ ಸತ್ಯವನ್ನು ಮಾತನಾಡಲು. ಕೇವಲ ಒಂದು ಎಫ್ಐಆರ್ ದಾಖಲಾದ ತಕ್ಷಣ ಜನರು ನಮಗೆ ನೀಡಿದ ಆ ಜವಾಬ್ದಾರಿ ಅಥವಾ ಅಧಿಕಾರ ಕೊನೆಗೊಳ್ಳುವುದಿಲ್ಲ” ಎಂದಿ ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೀಡಾದ ಘಟನೆಯನ್ನು ಖಂಡಿಸಿದ ಪ್ರತಿಭಟನೆಗಳು ನಡೆದ ನಂತರ ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಣಿವೆಯಾದ್ಯಂತ ನಿರ್ಬಂಧಗಳನ್ನು ಹೇರಿದ್ದಾರೆ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 7 ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.


