ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಕಳೆದ ಜನವರಿಯಲ್ಲಿ ಇಬ್ಬರು ಶಾಸಕರನ್ನು ಅಮಾನತುಗೊಳಿಸಲಾಗಿದೆ. ಹಾಗಾಗಿ, ಉಳಿದ 6 ಮಂದಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲು ಶಿಫಾರಸು ಮಾಡುವುದಾಗಿ ಬಿಜೆಡಿ ಮುಖ್ಯ ಸಚೇತಕಿ ಪ್ರಮೀಳಾ ಮಲ್ಲಿಕ್ ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಡಿಯ ಎಂಟು ಮತ್ತು ಕಾಂಗ್ರೆಸ್ನ ಮೂವರು ಸೇರಿದಂತೆ ಹನ್ನೊಂದು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದು ಎರಡೂ ಪಕ್ಷಗಳ ಬೆಂಬಲಿತ ಅಭ್ಯರ್ಥಿ ದತ್ತೇಶ್ವರ ಹೋಟಾ ಅವರ ಸೋಲಿಗೆ ಕಾರಣವಾಯಿತು. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಎನ್ಡಿಎ ಶಾಸಕರು ಮತಗಳು ಮತ್ತು ಈ 11 ಶಾಸಕ ಅಡ್ಡ ಮತಗಳಿಂದ ಗೆದ್ದರು.
ಕಾಂಗ್ರೆಸ್ ಈಗಾಗಲೇ ಮೂವರು ಶಾಸಕರನ್ನು ಅಮಾನತುಗೊಳಿಸಿ ಅವರ ಅನರ್ಹತೆಗೆ ಶಿಫಾರಸು ಮಾಡಿದೆ.
ಮಾರ್ಚ್ 17 ರ ಶೋಕಾಸ್ಗೆ ನೀಡಿದ ಉತ್ತರಗಳನ್ನು ಪರಿಶೀಲಿಸಿದ ನಂತರ ಆರು ಶಾಸಕರನ್ನು ಅಮಾನತುಗೊಳಿಸಲು ಬಿಜೆಡಿ ನಿರ್ಧರಿಸಿದೆ ಎಂದು ಮಲ್ಲಿಕ್ ಹೇಳಿದ್ದಾರೆ.
“ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಶಾಸಕರ ನಡೆ ಪಕ್ಷದ ಸಾಮೂಹಿಕ ನಿರ್ಧಾರಗಳಿಗೆ ಸಂಪೂರ್ಣ ನಿಷ್ಠೆಯನ್ನು ಕಡ್ಡಾಯಗೊಳಿಸುವ ಬಿಜೆಡಿ ಸಂವಿಧಾನದ ಮೂಲ ತತ್ವವನ್ನು ಉಲ್ಲಂಘಿಸುತ್ತದೆ” ಎಂದು ಬಿಜೆಡಿ ಹೇಳಿಕೆ ತಿಳಿಸಿದೆ.
ಶಾಸಕರಾದ ಚಕ್ರಮಣಿ ಕನ್ಹರ್, ನಬಾ ಕಿಶೋರ್ ಮಲ್ಲಿಕ್, ಸೌವಿಕ್ ಬಿಸ್ವಾಲ್, ಸುಬಾಸಿನಿ ಜೆನಾ, ರಮಾಕಾಂತ ಭೋಯ್ ಮತ್ತು ದೇವಿ ರಂಜನ್ ತ್ರಿಪಾಠಿ ಈಗ ಅಮಾನತುಗೊಂಡ ಶಾಸಕರು. ಇನ್ನಿಬ್ಬರು ಶಾಸಕರಾದ ಅರವಿಂದ್ ಮಹಾಪಾತ್ರ ಮತ್ತು ಸನಾತನ ಮಹಾಕುದ್ ಅವರನ್ನು ಜನವರಿಯಲ್ಲಿ ಅಮಾನತುಗೊಳಿಸಲಾಗಿದೆ.
ಶಾಸಕ ಭೋಯ್ ಅಮಾನತು ಕ್ರಮವನ್ನು ಕಾನೂನುಬಾಹಿರ ಎಂದಿದ್ದಾರೆ. “ರಾಜ್ಯಸಭಾ ಚುನಾವಣೆಗೆ ಪಕ್ಷವು ವಿಪ್ ಹೊರಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಆರು ಮಂದಿಯೂ ಈ ಕ್ರಮವನ್ನು ಕಾನೂನುಬಾಹಿರ, ಅನಿಯಂತ್ರಿತ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಕರೆದಿದ್ದಾರೆ. ಶೋಕಾಸ್ ನೀಡಿದ್ದಕ್ಕಾಗಿ ಬಿಜೆಡಿ ಮುಖ್ಯ ಸಚೇತಕ ಮಲ್ಲಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.


