Homeಮುಖಪುಟಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

- Advertisement -
- Advertisement -

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಚುನಾವಣಾ ಆಯೋಗ ಇದನ್ನು ‘ಲಿಪಿಕ ದೋಷ’ (ಬರವಣಿಗೆಯ ದೋಷ/ ಸಿಬ್ಬಂದಿ ದೋಷ/ ತಾಂತ್ರಿಕ ತಪ್ಪು-clerical error)’ ಎಂದು ಹೇಳಿ ಸಮಜಾಯಿಸಿ ನೀಡಿದೆ. ಈ ಸಂಬಂಧ ಒಬ್ಬರು ಸಹಾಯಕ ವಿಭಾಗೀಯ ಅಧಿಕಾರಿಯನ್ನು ಆಯೋಗ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಆದರೂ, ಈ ವಿಚಾರದ ಚರ್ಚೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಮುಂದುವರಿದಿದೆ.

ಈ ನಡುವೆ ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇರಳ ಪೊಲೀಸರು ಸೂಚಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳು ‘ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆ’ಯಾದ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ‘ಬಹಿರಂಗವಾಗಿ ಅವಮಾನಿಸುತ್ತವೆ’ ಎಂದು ಪೊಲೀಸರು ಹೇಳಿದ್ದಾರೆ. ಕುತೂಹಲಕಾರಿಯಾಗಿ ಇವು ‘ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು’ ಹರಡುತ್ತಿವೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ ಬಳಕೆದಾರರಿಗೆ, ಅದನ್ನು ತೆಗೆದು ಹಾಕುವಂತೆ ಕೇರಳ ಪೊಲೀಸರು ಸೂಚಿಸಿರುವುದಾಗಿ ಎಕ್ಸ್‌ ತಿಳಿಸಿದೆ.

“ನಮ್ಮ ಬಳಕೆದಾರರ ಧ್ವನಿಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ, ಯಾವುದೇ ಕಾನೂನು ಜಾರಿ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯಿಂದ ನಿಮ್ಮ ಖಾತೆಯ ಮಾಹಿತಿಯನ್ನು ತೆಗೆದುಹಾಕಲು ನಮಗೆ ವಿನಂತಿ ಬಂದಾಗ, ಆ ಬಗ್ಗೆ ಬಳಕೆದಾರರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ” ಎಂದು ಪತ್ರಕರ್ತ ಪಿಯೂಷ್ ರೈ ಅವರಂತಹ ಬಳಕೆದಾರರಿಗೆ ಎಕ್ಸ್‌ ಸಂಸ್ಥೆಯಿಂದ ಬಂದ ಇಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ್ದಕ್ಕೆ ಎಕ್ಸ್‌ನಿಂದ ಇಮೇಲ್ ಸ್ವೀಕರಿಸಿರುವ ಕಾಂಗ್ರೆಸ್ ನಾಯಕಿ ರುಚಿರಾ ಚತುರ್ವೇದಿ ಅವರು, “ಸಾಮಾಜಿಕ ಮಾಧ್ಯಮಗಳನ್ನು ಸೆನ್ಸಾರ್ ಮಾಡಲು ಈ ರೀತಿಯ ಟೇಕ್‌ಡೌನ್ ನೋಟಿಸ್‌ಗಳು (ತೆಗೆದು ಹಾಕುವಿಕೆ ನೋಟಿಸ್) ನೀಡುವುದು ಈಗ ವಾಡಿಕೆಯ ಅಸ್ತ್ರವಾಗಿಬಿಟ್ಟಿವೆ. ಕೇರಳ ಪೊಲೀಸರ ಪ್ರಕಾರ, ನನ್ನ ಪೋಸ್ಟ್ ಚುನಾವಣಾ ಆಯೋಗವನ್ನು ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಚುನಾವಣಾ ಆಯೋಗದ ಈ ‘ಲಿಪಿಕ ದೋಷ’ (clerical error) ಕುರಿತಾದ ಪೋಸ್ಟ್‌ಗಳು ಕೋಮು ಸೌಹಾರ್ದತೆಗೆ ಹೇಗೆ ಧಕ್ಕೆ ತರುತ್ತವೆ ಎಂಬುದು ಪೊಲೀಸರಿಗೇ ಗೊತ್ತಿರಬೇಕು. ಒಂದು ವೇಳೆ ಚುನಾವಣಾ ಆಯೋಗದೊಂದಿಗೆ ಬಿಜೆಪಿಯ ಹೆಸರನ್ನು ಜೋಡಿಸುವುದರಿಂದಲೇ ಅಶಾಂತಿ ಉಂಟಾಗುತ್ತದೆ ಎಂದು ಅವರು ಭಾವಿಸದ ಹೊರತು, ಈ ಆರೋಪದ ಹಿಂದಿನ ಉದ್ದೇಶ ಅಸ್ಪಷ್ಟವಾಗಿದೆ” ಎಂದಿದ್ದಾರೆ.

ಎಕ್ಸ್ ಸಂಸ್ಥೆಯು ಇನ್ನೂ ಆ ಪೋಸ್ಟ್‌ಗಳನ್ನು ತೆಗೆದುಹಾಕಿಲ್ಲದಿದ್ದರೂ, ಕೇರಳ ಪೊಲೀಸರು ನೀಡಿದ ನೋಟಿಸ್‌ನಲ್ಲಿ ಬಳಸಲಾದ ತೀವ್ರ ಪದಬಳಕೆಯು ಅನೇಕರ ಗಮನ ಸೆಳೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೈಬರ್ ಕಾರ್ಯಾಚರಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿಜೋಯ್ ಎಸ್. ಸಹಿ ಮಾಡಿರುವ ನೋಟಿಸ್ ಅನ್ನು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಭಾರತಿ ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಇಂದು ಬೆಳಗ್ಗೆ ಅವರ ಪ್ರೇಮ ಪತ್ರವನ್ನು (ನೋಟಿಸ್) ನೋಡಿಯೇ ನನ್ನ ಕಣ್ಣು ತೆರೆಯಿತು” ಎಂದು ವ್ಯಂಗ್ಯವಾಡಿದ್ದಾರೆ.

ಪೊಲೀಸ್ ನೋಟಿಸ್ ಅನ್ನು ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 79(3)(b) ಮತ್ತು ಐಟಿ ನಿಯಮಗಳು, 2021 ರ ಸೆಕ್ಷನ್ 3(1)(d) ಅಡಿಯಲ್ಲಿ ನೀಡಲಾಗಿದೆ. ಮೊದಲನೆಯ ನಿಯಮದ ಪ್ರಕಾರ, ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ ನಂತರವೂ ‘ಎಕ್ಸ್‌ನಂತಹ ಮಧ್ಯವರ್ತಿ ಸಂಸ್ಥೆಗಳು ಆ ವಿಷಯವನ್ನು ತೆಗೆದುಹಾಕಲು ವಿಫಲವಾದರೆ, ಅವುಗಳಿಗೆ ಇರುವ ಕಾನೂನು ರಕ್ಷಣೆ ರದ್ದಾಗುತ್ತದೆ. ಎರಡನೆಯ ನಿಯಮದಂತೆ, ನ್ಯಾಯಾಲಯದ ಆದೇಶ ಅಥವಾ ಅಧಿಕೃತ ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ 36 ಗಂಟೆಗಳ ಒಳಗೆ ಅಂತಹ ವಿಷಯಗಳನ್ನು ತೆಗೆದುಹಾಕುವುದು ಕಡ್ಡಾಯವಾಗಿದೆ.

ಎಕ್ಸ್‌ ಜಾಲತಾಣದ 10 ಪೋಸ್ಟ್‌ಗಳನ್ನು ಉಲ್ಲೇಖಿಸಿರುವ ಕೇರಳ ಪೊಲೀಸರು, “ಈ ಎಕ್ಸ್‌ ಪೋಸ್ಟ್ ಭಾರತೀಯ ಚುನಾವಣಾ ಆಯೋಗವನ್ನು ಬಹಿರಂಗವಾಗಿ ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ. ಈ ಪೋಸ್ಟ್ ಕೇವಲ ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆಗೆ ಮಾಡಿದ ನೇರ ಅವಮಾನ ಮಾತ್ರವಲ್ಲದೆ, ಸಮಾಜದಲ್ಲಿ ಒಡಕು ಮತ್ತು ಹಗೆತನವನ್ನು ಪ್ರಚೋದಿಸುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ” ಎಂದು ಹೇಳಿರುವುದಾಗಿ thewire.in ಉಲ್ಲೇಖಿಸಿದೆ.

ಕೇರಳದ ಮುಖ್ಯ ಚುನಾವಣಾಧಿಕಾರಿಯೇ (ಸಿಇಒ) ಇದು ‘ಲಿಪಿಕ ದೋಷ’ (clerical error) ಎಂದು ಈಗಾಗಲೇ ಒಪ್ಪಿಕೊಂಡಿರುವಾಗ, ಈ ಕ್ರಮವನ್ನು ಏಕೆ ಕೈಗೊಳ್ಳಲಾಗುತ್ತಿದೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಪತ್ರದ ನಿರಂತರ ಹಂಚಿಕೆಯು ಭಾರತೀಯ ಚುನಾವಣಾ ಆಯೋಗದ (ಇಸಿಐ) ಸಮಗ್ರತೆಯನ್ನು ಕುಗ್ಗಿಸುತ್ತದೆ ಎಂದು ಕೇರಳ ಪೊಲೀಸರು ಹೇಳಿದ್ದಾರಂತೆ.

“ಇದಲ್ಲದೆ, ಸಿಬ್ಬಂದಿಯ ತಪ್ಪಿನಿಂದಾಗಿ ರಾಜಕೀಯ ಪಕ್ಷವೊಂದರ ಲಾಂಛನವನ್ನು ಅಚಾತುರ್ಯದಿಂದ ಒಳಗೊಂಡಿದ್ದ, ಈಗಾಗಲೇ ತಿದ್ದುಪಡಿ ಮಾಡಲಾದ 2019ರ ಹಳೆಯ ದಾಖಲೆಯನ್ನು ಹೊಂದಿರುವ ಎಲ್ಲಾ ಡಿಜಿಟಲ್ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವ ತುರ್ತು ಅಗತ್ಯವಿದೆ. ಹಿಂಪಡೆಯಲಾದ ಈ ವಿಷಯದ ನಿರಂತರ ಪ್ರಸರಣವನ್ನು ಸುಳ್ಳು ಆರೋಪಗಳನ್ನು ಹರಡಲು ಬಳಸಲಾಗುತ್ತಿದೆ, ಆ ಮೂಲಕ ಚುನಾವಣಾ ಆಯೋಗದ ಸಮಗ್ರತೆ ಮತ್ತು ಪಾರದರ್ಶಕತೆಗೆ ಧಕ್ಕೆ ತರಲಾಗುತ್ತಿದೆ. ಇಂತಹ ತಪ್ಪು ಮಾಹಿತಿ ನೀಡುವಿಕೆಯು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಏಕೆಂದರೆ ಇದು ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ವಿಭಜನೆ ಮತ್ತು ಹಗೆತನವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಾಜ್ಯಾದ್ಯಂತ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚುನಾವಣಾ ಪ್ರಕ್ರಿಯೆಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಮತ್ತು ಕೋಮು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ಈ ದೋಷಪೂರಿತ ದಾಖಲೆಯ ವಿತರಣೆಯನ್ನು ನಿಲ್ಲಿಸಲು ಮತ್ತು ಅದನ್ನು ತಮ್ಮ ದಾಖಲೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಕ್ಷಣವೇ ತೆಗೆದುಹಾಕಲು ಇದರ ಮೂಲಕ ಸೂಚಿಸಲಾಗಿದೆ” ಎಂದು ಪೊಲೀಸರು ನೀಡಿದ ನೋಟಿಸ್‌ನಲ್ಲಿ ಹೇಳಿದ್ದಾರೆ ಎಂದು thewire.in ತಿಳಿಸಿದೆ.

ಕೇರಳದ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರೋಧ ಪಕ್ಷವಾದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಇದನ್ನು ಮುನ್ನಡೆಸುತ್ತಿದೆ. ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ರಾಜ್ಯ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾರತೀಯ ಚುನಾವಣಾ ಆಯೋಗದ (ಇಸಿಐ) ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.

ಚುನಾವಣೆ ಸಮೀಪಿಸುತ್ತಿರುವ ಕೇರಳದಲ್ಲಿ ಎಡರಂಗದ ವಿರುದ್ಧ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಈ ಪೊಲೀಸ್ ನೋಟಿಸ್ ‘ಬಿಜೆಪಿ-ಎಲ್‌ಡಿಎಫ್ ಒಳಸಂಚಿ’ಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.

“ಬೆಳಿಗ್ಗೆ ಒಂದು ವಿಚಾರವನ್ನು ‘ಸಿಬ್ಬಂದಿ ತಪ್ಪು’ ಎಂದು ಕರೆದು, ಸಂಜೆಯ ವೇಳೆಗೆ ಅದರ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಸೆನ್ಸಾರ್ (ನಿರ್ಬಂಧ) ಮಾಡಲು ಮುಂದಾಗಲು ಸಾಧ್ಯವಿಲ್ಲ. ಇದು ಹಾನಿಯನ್ನು ನಿಯಂತ್ರಿಸುವ ಪ್ರಯತ್ನವಲ್ಲ, ಬದಲಿಗೆ ಹಾನಿ ಸಂಭವಿಸಿದೆ ಎಂಬುದನ್ನು ದೃಢಪಡಿಸುವ ಕ್ರಮ” ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಬರೆದುಕೊಂಡಿದ್ದಾರೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...