ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ.
ಚುನಾವಣಾ ಪ್ರಚಾರದ ಭಾಗವಾಗಿ ಗೋಪಾಲಕೃಷ್ಣನ್ ಕ್ಷೇತ್ರದಲ್ಲಿ ಬೃಹತ್ ಹೋರ್ಡಿಂಗ್ಸ್ ಹಾಕಿಸಿದ್ದು, ಅದರಲ್ಲಿ 1977ರಿಂದ ಇಲ್ಲಿಯವರೆ ಕ್ಷೇತ್ರದ ಶಾಸಕರಾದವರ ಹೆಸರನ್ನು ಹಾಕಲಾಗಿದೆ. “ನೀವು ಗಮನಿಸಿಲ್ವಾ..? 50 ವರ್ಷಗಳ ನಿರ್ಲಕ್ಷ್ಯ, ಇದು ಬದಲಾಗಬೇಕು. ಬದಲಾವಣೆಗಾಗಿ ಬಿ. ಗೋಪಾಲಕೃಷ್ಣನ್ ಅವರನ್ನು ಬೆಂಬಲಿಸಿ” ಎಂದು ಬರೆಯಲಾಗಿದೆ.
ಈ ಹೋರ್ಡಿಂಗ್ಸ್ ಮೂಲಕ ಗೋಪಾಲಕೃಷ್ಣನ್ ಅವರು, ಇದುವರೆಗೆ ಕ್ಷೇತ್ರದಲ್ಲಿ ಬರೀ ಮುಸ್ಲಿಮರೇ ಶಾಸಕರಾಗಿದ್ದಾರೆ. ಈ ಬಾರಿ ಹಿಂದೂವನ್ನು ಶಾಸಕನನ್ನಾಗಿ ಮಾಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಮುಸ್ಲಿಮರು ಶಾಸಕರಾಗಿರುವುದೇ ದೊಡ್ಡ ತಪ್ಪು ಅಥವಾ ಅಪಾಯ ಎಂಬಂತೆ ಬಿಂಬಿಸಿದ್ದಾರೆ.
ಹೋರ್ಡಿಂಗ್ಸ್ನಲ್ಲಿ ಯಾವುದೇ ಧರ್ಮವನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೂ, ಬರೀ ಮುಸ್ಲಿಂ ಶಾಸಕರ ಹೆಸರುಗಳೇ ಇರುವುದರಿಂದ ಅದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ. ಕೋಮು ಆಧಾರದ ಮೇಲೆ ಜನರನ್ನು ವಿಭಜಿಸಿ ಮತ ಪಡೆಯಲು ಗೋಪಾಲಕೃಷ್ಣನ್ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.
ಈ ಹಿಂದಿನ ಗೋಪಾಲಕೃಷ್ಣನ್ ಅವರ ಹೇಳಿಕೆಗಳು ಇಸ್ಲಾಮೋಫೋಬಿಕ್ ಆಗಿದ್ದರಿಂದ, ಈಗ ಅವರು ಹಾಕಿರುವ ಹೋರ್ಡಿಂಗ್ಸ್ ಕೂಡ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಹಿಂದೆ, ಗೋಪಾಲಕೃಷ್ಣನ್ ಅವರು, ಗುರುವಾಯೂರು ಕಳೆದ 50 ವರ್ಷಗಳಲ್ಲಿ ಹಿಂದೂ ಶಾಸಕರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದ್ದರು. ಗುರುವಾಯೂರಿನಂತಹ ರಾಷ್ಟ್ರೀಯ ಯಾತ್ರಾ ಕೇಂದ್ರವನ್ನು ಹಿಂದೂ ಶಾಸಕರು ಏಕೆ ಪ್ರತಿನಿಧಿಸಿಲ್ಲ ಎಂದು ಅವರು ಪ್ರಶ್ನಿಸಿದ್ದರು. ಎಲ್ಡಿಎಫ್ ಮತ್ತು ಯುಡಿಎಫ್ ಹಿಂದೂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಆರೋಪಿಸಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ಗೋಪಾಲಕೃಷ್ಣನ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆಯೋಗ ದೂರನ್ನು ಗುರುವಾಯೂರು ದೇವಸ್ಥಾನ ಠಾಣೆ ಪೊಲೀಸರಿಗೆ ವರ್ಗಾಯಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಪೊಲೀಸರು ಗೋಪಾಲಕೃಷ್ಣನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 192 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು) ಮತ್ತು 1951ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸೆಕ್ಷನ್ ಧರ್ಮದ ಆಧಾರದಲ್ಲಿ ದ್ವೇಷವನ್ನು ಹರಡುವುದಕ್ಕೆ ಸಂಬಂಧಿಸಿದೆ.
ಪ್ರಕರಣ ದಾಖಲಾಗಿದ್ದರೂ, ಗೋಪಾಲಕೃಷ್ಣನ್ ತಮ್ಮ ಕೋಮುವಾದಿ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಗುರುವಾಯೂರು ದೇವಸ್ಥಾನವನ್ನು ಉಲ್ಲೇಖಿಸಿ ಕೋಮು ಧ್ರುವೀಕರಣದ ಹೇಳಿಕೆ ನೀಡುತ್ತಲೇ ಇದ್ದಾರೆ.
ಧಾರ್ಮಿಕ ನೆಲೆಯಲ್ಲಿ ಪ್ರಚಾರ ಮಾಡುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಅವರು ತಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದೇನೆ ಎಂದಿದ್ದು, ಅವುಗಳನ್ನು ಪುನರಾವರ್ತಿಸುವುದಾಗಿಯೂ ತಿಳಿಸಿದ್ದಾರೆ.
ಗೋಪಾಲಕೃಷ್ಣನ್ ವಿರುದ್ಧ ಸಲ್ಲಿಸಲಾದ ದೂರನ್ನು ಪರಿಗಣಿಸುವಂತೆ ಮಾ.27ರಂದು ಕೇರಳ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಕೇರಳ ವಿದ್ಯಾರ್ಥಿ ಒಕ್ಕೂಟದ (ಕೆಎಸ್ಯು) ನಾಯಕ ಗೋಕುಲ್ ಗುರುವಾಯೂರು ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಗೋಪಾಲಕೃಷ್ಣನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಲ್ಡಿಎಫ್ ಅಭ್ಯರ್ಥಿ ಎನ್.ಕೆ. ಅಕ್ಬರ್, ದೇಶದಲ್ಲಿ ಎಲ್ಪಿಜಿ ಕೊರತೆಯಂತಹ ವಿಷಯಗಳ ಕುರಿತು ಟೀಕೆಗಳನ್ನು ಎದುರಿಸುತ್ತಿರುವ ಬಿಜೆಪಿ ಇಂತಹ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದಿದ್ದಾರೆ. ಯುಡಿಎಫ್ ಅಭ್ಯರ್ಥಿ ಪಿ.ಎಂ. ಸಾದಿಕಲಿ ಕೂಡ ಗೋಪಾಲಕೃಷ್ಣನ್ ಹೇಳಿಕೆಯನ್ನು ಟೀಕಿಸಿದ್ದು, ಚುನಾವಣೆಗೆ ಮುನ್ನ ಬಿಜೆಪಿ ಕೋಮು ವಿಭಜನೆಗೆ ಪ್ರಯತ್ನಿಸುತ್ತಿದೆ. ಆದರೆ, ಅದು ಕೇರಳದಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹೇಳಿದ್ದಾರೆ.


