ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ ‘ಇಲ್ಲಿಂದ ತೊಲಗಿ’ (get lost) ಎಂಬುವುದಾಗಿ ಹೇಳಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಗಂಭೀರ ಆರೋಪ ಮಾಡಿದ್ದಾರೆ.
ಸಭೆ ಮುಗಿದ ಕೆಲವೇ ನಿಮಿಷಗಳಲ್ಲಿ, ಚುನಾವಣಾ ಆಯೋಗವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತೀಕ್ಷ್ಣವಾದ ಪೋಸ್ಟ್ ಒಂದನ್ನು ಹಾಕಿದೆ. ಅದರಲ್ಲಿ, “ತೃಣಮೂಲ ಕಾಂಗ್ರೆಸ್ಗೆ ಚುನಾವಣಾ ಆಯೋಗದ ನೇರ ಮಾತು. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಗಳು ಖಂಡಿತವಾಗಿಯೂ ಭಯಮುಕ್ತ, ಹಿಂಸಾಚಾರಮುಕ್ತ, ಬೆದರಿಕೆ ರಹಿತ ಮತ್ತು ಆಮಿಷ ರಹಿತವಾಗಿ ನಡೆಯಲಿವೆ. ಅಷ್ಟೇ ಅಲ್ಲದೆ ಯಾವುದೇ ದಾಳಿಗಳು, ಬೂತ್ ಜಾಮಿಂಗ್ ಮತ್ತು ಸೋರ್ಸ್ ಜಾಮಿಂಗ್ ಇಲ್ಲದೆ ಚುನಾವಣೆ ನಡೆಯಲಿದೆ” ಎಂದು ಆಯೋಗ ಹೇಳಿದೆ.
ನಾಲ್ವರು ಸದಸ್ಯರ ಟಿಎಂಸಿ ನಿಯೋಗದಲ್ಲಿ ಒ’ಬ್ರಿಯಾನ್ ಅವರ ಸಾಗರಿಕಾ ಘೋಷ್, ಸಾಕೇತ್ ಗೋಖಲೆ ಮತ್ತು ಮೇನಕಾ ಗುರುಸ್ವಾಮಿ ಇದ್ದರು. ಮತದಾರರ ಪಟ್ಟಿಯಿಂದ ಸುಮಾರು 27 ಲಕ್ಷ ‘ನ್ಯಾಯಾಂಗ ಪರಿಶೀಲನೆಯಲ್ಲಿರುವ’ (under adjudication) ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಲು ಈ ನಿಯೋಗವು ಆಯೋಗವನ್ನು ಭೇಟಿ ಮಾಡಿತ್ತು.
“ಸಭೆ ಆರಂಭವಾದ ಕೇವಲ ಏಳು ನಿಮಿಷಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ನಮಗೆ ಏನು ಹೇಳಿದರು ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಅವರು ‘ಇಲ್ಲಿಂದ ತೊಲಗಿ’ (Get lost) ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ನಿಯೋಗಕ್ಕೆ ಮುಖ್ಯ ಚುನಾವಣಾ ಆಯುಕ್ತರು ನೀಡಿದ ಪ್ರತಿಕ್ರಿಯೆ ಇದು. ನಾವು ಸಂಸತ್ತಿನಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದ್ದೇವೆ” ಎಂದು ಡೆರೆಕ್ ಒ’ಬ್ರಿಯಾನ್ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಬೆಳಿಗ್ಗೆ ಸುಮಾರು 10:02ಕ್ಕೆ ಸಭೆ ಪ್ರಾರಂಭವಾಯಿತು, ಏಳೆಂಟು ನಿಮಿಷಗಳಲ್ಲಿ ಕೊನೆಗೊಂಡಿತು ಎಂದು ಒ’ಬ್ರಿಯಾನ್ ದೂರಿದ್ದಾರೆ.
ಈ ಮಧ್ಯೆ, ಟಿಎಂಸಿ ನಿಯೋಗದ ಸದಸ್ಯರು ಮುಖ್ಯ ಚುನಾವಣಾ ಆಯುಕ್ತರ ಮುಂದೆ ಧ್ವನಿ ಏರಿಸಿದ್ದರು, ಅವರಿಗೆ ಸಭೆಯ ಮರ್ಯಾದೆಯನ್ನು ಕಾಪಾಡಿಕೊಳ್ಳುವಂತೆ ವಿನಂತಿಸಲಾಯಿತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಮಮತಾ ಬ್ಯಾನರ್ಜಿಯವರು ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಒಂಬತ್ತು ಪತ್ರಗಳ ಬಗ್ಗೆ ನಿಯೋಗವು ಸಭೆಯಲ್ಲಿ ಪ್ರಸ್ತಾಪಿಸಿತು, ಆದರೆ ಆ ಪತ್ರಗಳಿಗೆ ‘ಯಾವುದೇ ಸ್ವೀಕೃತಿ ಅಥವಾ ಉತ್ತರ ಬಂದಿಲ್ಲ’ ಎಂದು ಒ’ಬ್ರಿಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾವು ಅವರಿಗೆ (ಜ್ಞಾನೇಶ್ ಕುಮಾರ್) ನೀವು ಈ ಒಂಬತ್ತೂ ಪತ್ರಗಳನ್ನು ನಿರ್ಲಕ್ಷಿಸಿದ್ದೀರಿ ಎಂದು ಹೇಳಿದೆವು. ಚುನಾವಣಾ ಪ್ರಕ್ರಿಯೆಯ ಭಾಗವಾಗಿರುವ ಮತ್ತು ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳ ಬಗ್ಗೆ ನಾವು ಆರು ಉದಾಹರಣೆಗಳನ್ನು ನೀಡಿದ್ದೇವೆ. ನಂದಿಗ್ರಾಮದಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಮುಖ್ಯ ಚುನಾವಣಾ ಅಧಿಕಾರಿಯ ಉದಾಹರಣೆ ಸೇರಿದಂತೆ ಒಟ್ಟು ಆರು ನಿದರ್ಶನಗಳನ್ನು ನಾವು ಅವರ ಮುಂದಿಟ್ಟಿದ್ದೇವೆ” ಎಂದು ಒ’ಬ್ರಿಯಾನ್ ಹೇಳಿದ್ದಾರೆ.
“ನಾವು ಅವರಿಗೆ (ಜ್ಞಾನೇಶ್ ಕುಮಾರ್) ಹೇಳಿದೆವು, ನೀವು ಈ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದೀರಿ, ಹೀಗಿರುವಾಗ ನೀವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಹೇಗೆ ನಡೆಸಲು ಬಯಸುತ್ತೀರಿ? ಆಗ ಅವರು ‘ನಿಕಲ್ ಜಾವೋ ಯಹಾ ಸೆ’ (ಇಲ್ಲಿಂದ ಹೊರಟುಹೋಗಿ) ಎಂದು ಹೇಳಿದರು” ಎಂದು ಒ’ಬ್ರಿಯಾನ್ ವಿವರಿಸಿದ್ದಾರೆ.
ಚುನಾವಣಾ ಆಯೋಗದ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸಾಕೇತ್ ಗೋಖಲೆ, ಇದೊಂದು ಸುಳ್ಳು ಎಂದು ಆರೋಪಿಸಿದ್ದಾರೆ. “ಇದು ಸುಳ್ಳು. ಸಭೆಯಲ್ಲಿ ನಾನು ವೈಯಕ್ತಿಕವಾಗಿ ಹಾಜರಿದ್ದೆ. ಇಂತಹ ಯಾವುದೇ ಮಾತು ಅಲ್ಲಿ ನಡೆದಿಲ್ಲ. ಸಿಇಸಿ ಜ್ಞಾನೇಶ್ ಕುಮಾರ್ ನಮಗೆ ಹೇಳಿದ್ದು ಕೇವಲ ‘ಗೆಟ್ ಲಾಸ್ಟ್’ (ಇಲ್ಲಿಂದ ತೊಲಗಿ) ಎಂದು ಮಾತ್ರ. ಸಭೆಯ ಸಂಭಾಷಣೆಯ ಪ್ರತಿಲಿಪಿಯನ್ನು ಬಿಡುಗಡೆ ಮಾಡಲು ನಾವು ಇಸಿಐಗೆ ಸವಾಲು ಹಾಕುತ್ತೇವೆ. ಇಲ್ಲದಿದ್ದರೆ ನಾವೇ ಅದನ್ನು ಮಾಡುತ್ತೇವೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಟಿಎಂಸಿ ಅಧಿಕೃತ ಸಾಮಾಜಿಕ ಮಾಧ್ಯಮಗ ಖಾತೆಗಳು ಕೂಡ ಚುನಾವಣಾ ಆಯೋಗದ ಆರೋಪಕ್ಕೆ ತಿರುಗೇಟು ನೀಡಿದ್ದು, “ಚುನಾವಣಾ ಆಯೋಗಕ್ಕೆ ನಮ್ಮ ನೇರ ಮಾತು. ಈ ಬಾರಿ ಚುನಾವಣೆಗಳು ಹೀಗಿರಬೇಕು: ದೆಹಲಿಯ ನಿಯಂತ್ರಣದಿಂದ ಮುಕ್ತವಾಗಿರಬೇಕು, ರಾಜಕೀಯ ಪಕ್ಷಪಾತದಿಂದ ಮುಕ್ತವಾಗಿರಬೇಕು, ಆಯ್ದ ವ್ಯಕ್ತಿಗಳನ್ನು ಗುರಿಯಾಗಿಸುವುದರಿಂದ ಮುಕ್ತವಾಗಿರಬೇಕು ಮತ್ತು ದ್ವಂದ್ವ ನೀತಿಯಿಂದ ಮುಕ್ತವಾಗಿರಬೇಕು” ಎಂದು ಬರೆದುಕೊಂಡಿದೆ.
ನ್ಯಾಯಾಂಗ ಅಧಿಕಾರಿಗಳ ಪರಿಶೀಲನೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರಿಂದ, ಈ 27 ಲಕ್ಷ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
“ನ್ಯಾಯಾಂಗ ಅಧಿಕಾರಿಗಳಿಂದ ಹೆಸರು ಅಳಿಸಲ್ಪಟ್ಟ ಮತದಾರರು ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಬಹುದು. ನ್ಯಾಯಮಂಡಳಿ ಆದೇಶ ನೀಡಿದರೆ ಅವರ ಹೆಸರುಗಳು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸಲಾಗುತ್ತದೆ. ನಂತರ ಅವರು ಮತ ಚಲಾಯಿಸಬಹುದು, ಆದರೆ ಈ ಚುನಾವಣೆಯಲ್ಲಿ ಅಲ್ಲ” ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಅಗರ್ವಾಲ್ ಸೋಮವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ನಂತರ ಫೆಬ್ರವರಿ 28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಒಟ್ಟು ಮತದಾರರ ಸಂಖ್ಯೆ 7.04 ಕೋಟಿಯಾಗಿದೆ. ಈ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗುವ ಮೊದಲು ರಾಜ್ಯದಲ್ಲಿ 7.66 ಕೋಟಿ ಮತದಾರರಿದ್ದರು. ಅಂದರೆ, ಈ ಪ್ರಕ್ರಿಯೆಯ ನಂತರ ಮತದಾರರ ಸಂಖ್ಯೆಯಲ್ಲಿ ಶೇಕಡ 8.09 ರಷ್ಟು ಇಳಿಕೆಯಾಗಿದೆ.


