ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಬುಧವಾರ ನಡೆದ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ 11,000 ಲೀಟರ್ ಹಾಲು ನರ್ಮದಾ ನದಿಗೆ ಸುರಿಯಲಾಗಿದ್ದು, ಇದು ನಂಬಿಕೆ ಮತ್ತು ಪರಿಸರ ಹಾನಿಯ ಕುರಿತು ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಅಂತಹ ಆಚರಣೆಯ ಅಗತ್ಯವನ್ನು ಪ್ರಶ್ನಿಸಿದ್ದಾರೆ.
ಶ್ರೀ ದಾದಾಜಿ ದರ್ಬಾರ್ ಪಾತಾಳೇಶ್ವರ ಮಹಾದೇವ ದೇವಸ್ಥಾನವು ಚೈತ್ರ ನವರಾತ್ರಿಯ ಭಾಗವಾಗಿ ದೊಡ್ಡ ಪ್ರಮಾಣದ ಅಭಿಷೇಕ ಆಚರಣೆಯನ್ನು ನಡೆಸಿತು. ಈ ಕಾರ್ಯಕ್ರಮವು ಮಾರ್ಚ್ 18 ರಿಂದ ಏಪ್ರಿಲ್ 7 ರವರೆಗೆ ನಡೆಯಿತು, ಇದರಲ್ಲಿ 41 ಟನ್ ತುಪ್ಪವನ್ನು ಬಳಸಿದ ಬೃಹತ್ ಮಹಾಯಜ್ಞ ನಡೆಸಲಾಗಿದೆ. ಪ್ರತಿನಿತ್ಯ ನೂರಾರು ಲೀಟರ್ ಹಾಲು ಬಳಸಲಾಗಿದೆ ಎಂದು ಭಕ್ರೊಬ್ಬರು ತಿಳಿಸಿದ್ದಾರೆ.
“ಈ ಕಾರ್ಯಕ್ರಮಕ್ಕಾಗಿ ಸುಮಾರು 5 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಅನ್ನು ಸಿದ್ಧಪಡಿಸಲಾಗಿತ್ತು. ಪ್ರತಿದಿನ ಸಾವಿರಾರು ಭಕ್ತರು ಕುಳಿತು ಈ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮಹಾಯಜ್ಞದಲ್ಲಿ, ಚಿನ್ನ, ಬೆಳ್ಳಿ ಮತ್ತು ಔಷಧೀಯ ಗಿಡಮೂಲಿಕೆಗಳು ಸೇರಿದಂತೆ ಒಟ್ಟು 41 ಟನ್ ವಸ್ತುಗಳನ್ನು ಬಳಸಲಾಗುತ್ತಿತ್ತು” ಎಂದು ಸಂಘಟಕರು ಹೇಳಿದರು.
“ಪ್ರತಿದಿನ, 151 ಲೀಟರ್ ಹಾಲನ್ನು ನೈವೇದ್ಯವಾಗಿ ಬಳಸಲಾಗುತ್ತಿತ್ತು. ಒಂದು ನಿರ್ದಿಷ್ಟ ದಿನದಂದು, 1,100 ಲೀಟರ್ ಬಳಸಲಾಗುತ್ತಿತ್ತು. ಬುಧವಾರ, 11,000 ಲೀಟರ್ ಹಾಲನ್ನು ಬಳಸಲಾಗುತ್ತಿತ್ತು. ಬಾಬಾ ವರಿಗೆ ನರ್ಮದಾಜಿ ತಾಯಿಯಂತೆ” ಎಂದು ಭಕ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ, ಧಾರ್ಮಿಕ ಆಚರಣೆ ಹೆಸರಿನಲ್ಲಿ ನದಿಗೆ ಹಾಲು ಸುರಿದು ಮಲಿನ ಮಾಡಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ನದಿಗೆ ಟ್ಯಾಂಕರ್ನಿಂದ ಹಾಲು ಹರಿಸುತ್ತಿರುವ ವೀಡಿಯೊ ಆನ್ಲೈನ್ನಲ್ಲಿ ಭಾರಿ ವೈರಲ್ ಆಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆಹಾರ ನೀಡಲು ಇಷ್ಟು ದೊಡ್ಡ ಪ್ರಮಾಣದ ಹಾಲನ್ನು ಬಳಸಬಹುದಿತ್ತು ಎಂದು ಹಲವಾರು ಬಳಕೆದಾರರು ಗಮನಸೆಳೆದರು. ಇನ್ನು ಕೆಲವರು ಕಳವಳ ವ್ಯಕ್ತಪಡಿಸಿ, ನದಿಗೆ ಹಾಲನ್ನು ಸುರಿಯುವುದರಿಂದ ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ) ಹೆಚ್ಚಾಗುತ್ತದೆ, ಜಲಚರಗಳಿಗೆ ಅಪಾಯವಾಗುತ್ತದೆ. ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದರು.


