ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ಕೌನ್ಸಿಲರ್ ಫೌಜಿಯಾ ಶೇಖ್ ಅಲೀಮ್ ಅವರು, ವಂದೇ ಮಾತರಂ ಹಾಡುವುದಕ್ಕೆ ಕಾನೂನು ಕಡ್ಡಾಯಗೊಳಿಸುತ್ತದೆಯೇ ಎಂದು ಪ್ರಶ್ನಿಸಿ ಹೊರನಡೆದಾಗ ಘರ್ಷಣೆ ಭುಗಿಲೆದ್ದಿದೆ. ಅವರ ಸಹ ಕೌನ್ಸಿಲರ್ ರುಬಿನಾ ಇಕ್ಬಾಲ್ ಖಾನ್ ಅವರ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಬಿಜೆಪಿ ಸದಸ್ಯರಿಂದ ಪ್ರತಿಭಟನೆಗೆ ಕಾರಣವಾಯಿತು.
ಪೊಲೀಸರು ಎರಡು ದಿನಗಳ ಕಾಲ ಇಬ್ಬರನ್ನೂ ವಿಚಾರಣೆಗೆ ಕರೆಸಿದರು. ಬಿಜೆಪಿ ಕೌನ್ಸಿಲರ್ಗಳ ದೂರುಗಳನ್ನು ಪರಿಶೀಲಿಸಿದ ನಂತರ, ಧಾರ್ಮಿಕ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಬಿಎನ್ಎಸ್ ಸೆಕ್ಷನ್ 196(1) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.
ನಾಲ್ಕು ಗಂಟೆಗಳ ವಿಚಾರಣೆಯ ಸಮಯದಲ್ಲಿ, ಕೌನ್ಸಿಲರ್ಗಳು ಧಾರ್ಮಿಕ ಪರಿಗಣನೆಗಳು, ಧಾರ್ಮಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿದರು. ಖಾನ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು. ಆದರೆ, ಅಲೀಮ್ ಅವರು ಜನ ಪ್ರತಿನಿಧಿಗಳು ವಂದೇಮಾತರಂ ಹಾಡುವುದನ್ನು ಗೌರವಿಸುವುದಾಗಿ ಹೇಳಿದರು. ಆದರೆ, ತಾನು ತಡವಾಗಿ ಬಂದ ನಂತರ ಗೀತೆಯನ್ನು ಮತ್ತೆ ಹಾಡಲು ಒತ್ತಡ ಹೇರಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ, ಮಾಜಿ ಶಾಸಕ ಆಕಾಶ್ ವಿಜಯವರ್ಗಿಯಾ ಅವರು ಕೌನ್ಸಿಲರ್ಗಳನ್ನು “ಭಯೋತ್ಪಾದಕರಿಗಿಂತ ಕಡಿಮೆಯಿಲ್ಲ, ದೇಶದ್ರೋಹಿಗಳು, ಇದು ಹಿಂದೂ ಬಹುಸಂಖ್ಯಾತ ದೇಶ” ಎಂದು ಹೇಳಿದರು.


