ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ (ಏ.16) ನಿರಾಕರಿಸಿದೆ. ಆದರೆ, ಈ ಕುರಿತು ಸಂಬಂಧಪಟ್ಟವರಿಗೆ ಸಮಗ್ರವಾದ ಮನವಿ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠವು ವಿಷಯವನ್ನು ಆಲಿಸಿ, ವಿಶೇಷ ಸಂದರ್ಭಗಳಲ್ಲಿ ಮಧ್ಯಪ್ರವೇಶ ಅಗತ್ಯವಿದ್ದಾಗ ಹೊರತುಪಡಿಸಿ, ನ್ಯಾಯಾಂಗದ ಕಡೆಯಿಂದ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರವಾಗಿ ವಕೀಲ ವಿಷ್ಣುಶಂಕರ್ ಜೈನ್ ವಾದ ಮಂಡಿಸಿದ್ದಾರೆ.
ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸಿ ನೇಮಕಾತಿಗಳನ್ನು ಮಾಡುವಂತೆ ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು. ಈ ನೇಮಕಾತಿಗಾಗಿ ರಾಷ್ಟ್ರಪತಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು.
ಜಿಲ್ಲಾ ನ್ಯಾಯಾಲಯಗಳು, ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಕರಣಗಳನ್ನು ನಡೆಸಲು ನೇಮಕಗೊಳ್ಳುತ್ತಿರುವ ಕಾನೂನು ಅಧಿಕಾರಿಗಳು/ಸ್ಥಾಯಿ ವಕೀಲರು/ಪ್ಯಾನಲ್ ಕೌನ್ಸೆಲ್/ರಾಜ್ಯ ವಕೀಲರ ಹುದ್ದೆಗಳನ್ನು ಭರ್ತಿ ಮಾಡಲು ಇದೇ ರೀತಿಯ ನಿರ್ದೇಶನಗಳನ್ನು ಕೋರಲಾಗಿತ್ತು.
ಉನ್ನತ ನ್ಯಾಯಾಂಗ ಸೇವೆಗಳು ಮತ್ತು ಪ್ರಾಂತೀಯ ನ್ಯಾಯಾಂಗ ಸೇವೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಹುದ್ದೆಗಳನ್ನು ಮೀಸಲಿಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು. ಪ್ರಾಂತೀಯ ನ್ಯಾಯಾಂಗ ಸೇವೆಗಳಿಂದ ಉನ್ನತ ನ್ಯಾಯಾಂಗ ಸೇವೆಗಳಿಗೆ ಬಡ್ತಿಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.50ರಷ್ಟು ಕೋಟಾವನ್ನು ನಿಗದಿಪಡಿಸುವಂತೆಯೂ ಮನವಿ ಮಾಡಿದ್ದರು.
ವಿಚಾರಣೆಯ ಸಮಯದಲ್ಲಿ, ಸಿಜೆಐ ಕಾಂತ್ ಅವರು ವಕೀಲ ಜೈನ್ ಅವರಿಗೆ ಅಂತಹ ರಿಟ್ ಅರ್ಜಿಗಳನ್ನು ಸಲ್ಲಿಸಬೇಡಿ ಎಂದು ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. “ನಮ್ಮನ್ನು ಮುಜುಗರಕ್ಕೀಡು ಮಾಡಬೇಡಿ ಮತ್ತು ನಿಮಗಾಗಿ ತೊಡಕುಗಳನ್ನು ಸೃಷ್ಟಿಸಬೇಡಿ” ಎಂಬುವುದಾಗಿ ಹೇಳಿದ್ದಾರೆ ಎಂದಿದೆ. ಕಾನೂನು ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಆದರೆ ಬದಲಾವಣೆಯು ಒಂದು ದಿನದೊಳಗೆ ಬರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.


