Homeಮುಖಪುಟದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

- Advertisement -
- Advertisement -

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ ಪಕ್ಷಗಳು ತಳೆದ ನಿಲುವುವನ್ನು ‘ಹೆಣ್ಣು ಭ್ರೂಣ ಹತ್ಯೆ’ಗೆ ಹೋಲಿಸುವ ಮೂಲಕ ಅಸಾಧಾರಣ ರೀತಿಯಲ್ಲಿ ಟೀಕಿಸಿದ್ದಾರೆ.

ಶುಕ್ರವಾರದ ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಸರ್ಕಾರದ ಮೂರು ಮಸೂದೆಗಳು ಲೋಕಸಭಾ ಸಂಸದರಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಮೋದಿ ತಮ್ಮ 29 ನಿಮಿಷಗಳ ಭಾಷಣದ ಆರಂಭದಲ್ಲಿ ಭಾರತದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಂದ ಕ್ಷಮೆ ಯಾಚಿಸಿದ್ದಾರೆ.

“ಮಹಿಳೆಯು ಎಲ್ಲವನ್ನೂ ಮರೆಯಬಹುದು, ಆದರೆ ತಮಗೆ ಉಂಟಾದ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ ಎಂದಿರುವ ಪ್ರಧಾನಿಯವರು, ಮಸೂದೆಗಳ ವಿರುದ್ಧ ಮತ ಚಲಾಯಿಸುವ ವಿರೋಧ ಪಕ್ಷಗಳ ನಿರ್ಧಾರವು ಕೇವಲ ಮಹಿಳೆಯರಿಗೆ ಮಾಡಿದ ಅವಮಾನವಷ್ಟೇ ಅಲ್ಲ, ಅದು ‘ಹೆಣ್ಣು ಭ್ರೂಣ ಹತ್ಯೆ’ಗೆ ಸಮಾನವಾದುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಎಲ್ಲರ ಸಮ್ಮುಖದಲ್ಲೇ ಸಂಸತ್ತಿನಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿವೆ ಎಂದು ಮೋದಿ ಹೇಳಿದ್ದಾರೆ. “ಅವರು ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾರೆ, ಕಾಂಗ್ರೆಸ್, ಟಿಎಂಸಿ, ಎಸ್‌ಪಿ ಮತ್ತು ಡಿಎಂಕೆಯಂತಹ ಪಕ್ಷಗಳೇ ಈ ಹೆಣ್ಣು ಭ್ರೂಣ ಹತ್ಯೆಯ ಅಪರಾಧಿಗಳು. ಇವರು ದೇಶದ ಸಂವಿಧಾನದ ಅಪರಾಧಿಗಳು. ಇವರು ದೇಶದ ನಾರಿ ಶಕ್ತಿಯ ವಿರುದ್ಧದ ಅಪರಾಧಿಗಳು” ಎಂದು ಪ್ರಧಾನಿ ಗುಡುಗಿದ್ದಾರೆ.

ಈ ಪಕ್ಷಗಳು ‘ಪರಿವಾರವಾದ’ (ಕುಟುಂಬ ರಾಜಕಾರಣ)ಕ್ಕೆ ಧಕ್ಕೆಯಾಗಬಹುದು ಎಂಬ ಭಯದಿಂದ ಮೂರು ಮಸೂದೆಗಳ ವಿರುದ್ಧ ಮತ ಚಲಾಯಿಸಿವೆ ಎಂದು ಮೋದಿ ಆರೋಪಿಸಿದ್ದಾರೆ. ಅಲ್ಲದೆ, ದೇಶ ಇಂದು ಎದುರಿಸುತ್ತಿರುವ ಎಲ್ಲಾ ಪ್ರಮುಖ ಸವಾಲುಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ದೂಷಿಸಿದ ಅವರು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಜೊತೆಗೆ ಡಿಎಂಕೆ ಮತ್ತು ಟಿಎಂಸಿ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಷ್ಟ್ರೀಯ ಪ್ರೈಮ್‌ಟೈಮ್ ಭಾಷಣವನ್ನು ಬಳಸಿಕೊಂಡು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಪಕ್ಷಗಳ ಭದ್ರಕೋಟೆಗಳಾದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ‘ರಾಜಕೀಯ ಸುದ್ದಿಗಳ ಪಕ್ಷಪಾತದ ಪ್ರಸಾರ’ಕ್ಕಾಗಿ ಅಧಿಕೃತ ಸಮೂಹ ಮಾಧ್ಯಮಗಳನ್ನು ಬಳಸಬಾರದು’ ಎಂಬ ಚುನಾವಣೆಯ ಮಾದರಿ ನೀತಿ ಸಂಹಿತೆಯ (ಎಂಸಿಸಿ) ಉಲ್ಲಂಘನೆಯಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಚುನಾವಣೆಯ ಮಾದರಿ ನೀತಿ ಸಂಹಿತೆ ಪಟ್ಟಿಯಲ್ಲಿ ಅಧಿಕಾರದಲ್ಲಿರುವ ಪಕ್ಷಗಳಿಗೆ ಎಂಬ ವಿಭಾಗದಡಿ..”ಕೇಂದ್ರದಲ್ಲಿ ಅಥವಾ ಸಂಬಂಧಪಟ್ಟ ರಾಜ್ಯ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷವು, ತನ್ನ ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ತನ್ನ ಅಧಿಕೃತ ಸ್ಥಾನಮಾನವನ್ನು ಬಳಸಿಕೊಂಡಿದೆ ಎಂಬ ಯಾವುದೇ ದೂರಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಮತ್ತು ವಿಶೇಷವಾಗಿ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು” ಎಂದಿದೆ.

ಈ ಕೆಳಗಿನ ಅಂಶಗಳು ಎಂಬುವುದರಲ್ಲಿ ನಾಲ್ಕನೇ ಅಂಶ ಹೀಗಿದೆ..” ಸಾರ್ವಜನಿಕ ಹಣದ ವೆಚ್ಚದಲ್ಲಿ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವುದು ಹಾಗೂ ಚುನಾವಣಾ ಅವಧಿಯಲ್ಲಿ ರಾಜಕೀಯ ಸುದ್ದಿಗಳ ಪಕ್ಷಪಾತದ ಪ್ರಸಾರಕ್ಕಾಗಿ ಮತ್ತು ಆಡಳಿತ ಪಕ್ಷದ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಾಧನೆಗಳ ಪ್ರಚಾರಕ್ಕಾಗಿ ಅಧಿಕೃತ ಸಮೂಹ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು

ಪ್ರಧಾನಿ ಮೋದಿಯವರ ಭಾಷಣ ಸಾರ್ವಜನಿಕ (ಸರ್ಕಾರಿ) ಮಾಧ್ಯಮಗಳಾದ ಡಿಡಿ ನ್ಯೂಸ್‌ ಸೇರಿದಂತೆ ಹಲವೆಡೆ ನೇರ ಪ್ರಸಾರಗೊಂಡಿದೆ. ಪ್ರಧಾನಿ ಚುನಾವಣೆ ನಡೆಯುತ್ತಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ರಾಜ್ಯಗಳ ಪ್ರಮುಖ ಪಕ್ಷಗಳ ವಿರುದ್ದ ಮಾಡಿರುವ ಆರೋಪಗಳು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಹಾಗಾಗಿ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎನ್ನಬಹುದು.

ವಿರೋಧ ಪಕ್ಷದವರು ಮೋದಿಯವರ ಭಾಷಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ಇದನ್ನು ‘ರಾಷ್ಟ್ರದ ಹಿತಾಸಕ್ತಿಯ ಭಾಷಣಕ್ಕಿಂತ ಹೆಚ್ಚಾಗಿ ಹತಾಶೆಯ ಭಾಷಣ’ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮತ್ತೊಂದು ಸಾರ್ವಜನಿಕ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿಯವರು ವಿರೋಧ ಪಕ್ಷಗಳನ್ನು ಟೀಕಿಸಲು ರಾಷ್ಟ್ರೀಯ ಉದ್ದೇಶಿತ ಭಾಷಣವನ್ನು ಬಳಸಿಕೊಂಡ ಅಂಶವನ್ನು ಹಲವಾರು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮತ್ತು ವಕ್ತಾರೆ ಸಾಗರಿಕಾ ಘೋಷ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಮೋದಿ ಅವರು ತೆರಿಗೆದಾರರ ಹಣದಿಂದ ನಡೆಯುವ ಭಾರತದ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾದ ದೂರದರ್ಶನವನ್ನು ಬಳಸಿಕೊಂಡಿದ್ದಾರೆ. ಅವರು ಇದನ್ನು ಎಲ್‌ಪಿಜಿ ಬೆಲೆ ಏರಿಕೆ, ಇಂಧನ ಅಥವಾ ಉದ್ಯೋಗಗಳಂತಹ ನಾಗರಿಕರ ಕಳಕಳಿಯ ವಿಷಯಗಳ ಬಗ್ಗೆ ಮಾತನಾಡಲು ಬಳಸುವ ಬದಲು, ಸಂಪೂರ್ಣವಾಗಿ ವಿರೋಧ ಪಕ್ಷಗಳನ್ನು ಗುರಿಯಾಗಿಸುವ ರಾಜಕೀಯ ಭಾಷಣ ಮಾಡಲು ಬಳಸಿಕೊಂಡಿದ್ದಾರೆ” ಎಂದು ದೂರಿದ್ದಾರೆ.

“ಮೋದಿಯವರು ಪ್ರತಿಯೊಂದು ಸಂಸ್ಥೆಯನ್ನು ಅತ್ಯಂತ ಹೀನಾಯವಾದ, ಅಲ್ಪದೃಷ್ಟಿಯ ಮತ್ತು ಕೆಳಮಟ್ಟದ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಸಾರ್ವಜನಿಕ ವೇದಿಕೆಯನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಅವಮಾನಕರ ಮತ್ತು ಹತಾಶೆಯ ನಡೆ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ, “ಪದವಿಯಲ್ಲಿರುವ ಪ್ರಧಾನ ಮಂತ್ರಿಯೊಬ್ಬರು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣವು ರಾಷ್ಟ್ರೀಯ ಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದ ನಿಷ್ಪಕ್ಷಪಾತದ ಭಾಷಣವಾಗಿರಬೇಕು. ಆದರೆ, ಶನಿವಾರದ ಮೋದಿಯವರ ಭಾಷಣವು ಅತ್ಯಂತ ಹೀನಾಯವಾದ ಪಕ್ಷಪಾತದಿಂದ ಕೂಡಿದ ಮತ್ತು ವಿವಾದಾತ್ಮಕ ವಾಗ್ದಾಳಿಯಾಗಿದೆ” ಎಂದು ಹೇಳಿದ್ದಾರೆ.

“ಇಂತಹ ‘ರಾಷ್ಟ್ರೀಯ ಭಾಷಣಕ್ಕಿಂತ ಹೆಚ್ಚಾಗಿ ಹತಾಶೆಯ ಭಾಷಣ’ವು ಪತ್ರಿಕಾಗೋಷ್ಠಿಯಲ್ಲಿ ನಡೆದಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು” ಎಂದು ಅವರು (ಜೈರಾಮ್ ರಮೇಶ್) ಹೇಳಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೋದಿ ಅವರು ಮಾಡಿದ ಭಾಷಣವು “ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನಕ್ಕೆ ಎಸಗಿದ ಅವಮಾನ” ಎಂದಿದ್ದಾರೆ.

ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಸಂಸದ ಮನೋಜ್ ಕುಮಾರ್ ಝಾ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ “ಮೋದಿಯವರ ರಾಷ್ಟ್ರವನ್ನುದ್ದೇಶಿಸಿದ ಭಾಷಣವು ನಿಜಕ್ಕೂ ಒಂದು ಚುನಾವಣಾ ಭಾಷಣದಂತೆ ಕಂಡುಬಂದಿದೆ” ಎಂದು ಹೇಳಿದ್ದಾರೆ. ಅಲ್ಲದೆ, ಈ ಭಾಷಣದ ವೆಚ್ಚವನ್ನು ಅವರ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಒತ್ತಾಯಿಸಿದ್ದಾರೆ.

ಮೋದಿಯವರು ತಮ್ಮ ಭಾಷಣದಲ್ಲಿ ತಮ್ಮ ಸರ್ಕಾರದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಮಸೂದೆಯು ಇತರ ವಿಷಯಗಳ ಜೊತೆಗೆ 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಶೀಘ್ರವಾಗಿ ಜಾರಿಗೆ ತರಲು ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಹೊಂದಿತ್ತು. ಇದರೊಂದಿಗೆ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಸಹ ಅವರು ಬೆಂಬಲಿಸಿ ಮಾತನಾಡಿದ್ದಾರೆ.

ಈ ಪ್ರಸ್ತಾವಿತ ಶಾಸನಗಳು “ಭಾರತದ 21ನೇ ಶತಮಾನದ ಮಹಿಳೆಯರ ಹಾದಿಯಲ್ಲಿರುವ ಅಡೆತಡೆಗಳನ್ನು ತೆಗೆದುಹಾಕುವ ಮಹಾಯಜ್ಞ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಅಲ್ಲದೆ, ಇವು ಭಾರತದ ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಯಾವುದೇ ಭಾಗದಲ್ಲಿದ್ದರೂ ಮತ್ತು ಅವುಗಳ ಜನಸಂಖ್ಯೆ ಎಷ್ಟೇ ಇರಲಿ, “ಎಲ್ಲಾ ರಾಜ್ಯಗಳ ಸಮಾನ ಅಭಿವೃದ್ಧಿ”ಗಾಗಿ ಇರುವ ಸಾಧನಗಳು ಎಂದು ಅವರು ಹೇಳಿದ್ದಾರೆ.

“ಯಾವುದೇ ರಾಜ್ಯದ ಲೋಕಸಭಾ ಪ್ರಾತಿನಿಧ್ಯದ ಅನುಪಾತ ಬದಲಾಗುವುದಿಲ್ಲ ಅಥವಾ ಯಾರ ಪ್ರಾತಿನಿಧ್ಯವೂ ಕಡಿಮೆಯಾಗುವುದಿಲ್ಲ ಎಂದು ಸರ್ಕಾರ ಮೊದಲ ದಿನವೇ ಸ್ಪಷ್ಟಪಡಿಸಿದೆ” ಎಂದು ಮೋದಿ ಹೇಳಿದ್ದಾರೆ. “ಪ್ರತಿಯೊಂದು ರಾಜ್ಯದ ಸೀಟುಗಳ ಸಂಖ್ಯೆಯು ಸಮಾನ ಅನುಪಾತದಲ್ಲಿ ಹೆಚ್ಚಾಗುತ್ತದೆ” ಎಂದಿದ್ದಾರೆ. ವಿರೋಧ ಪಕ್ಷಗಳು “ಕ್ಷೇತ್ರ ಮರುವಿಂಗಡಣೆಯ ಬಗ್ಗೆ ಸತತವಾಗಿ ಸುಳ್ಳು ಹೇಳುತ್ತಿವೆ” ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯು ಶೇಕಡಾ 50 ರಷ್ಟು ಹೆಚ್ಚಾಗಲಿದೆ ಎಂದು ಸರ್ಕಾರವು ಮೌಖಿಕವಾಗಿ ಪ್ರತಿಪಾದಿಸಿದೆ. ಆದರೆ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಾಗಲಿ ಅಥವಾ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯಲ್ಲಾಗಲಿ ಅಂತಹ ಯಾವುದೇ ವ್ಯವಸ್ಥೆಯ ಬಗ್ಗೆ ಉಲ್ಲೇಖವಿರಲಿಲ್ಲ.

ಮಹಿಳಾ ಮೀಸಲಾತಿಯನ್ನು ‘ಕಾರ್ಯರೂಪಕ್ಕೆ ತರಲು’ ಎಂಬ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆಯ ಮೇಲಿನ 50 ವರ್ಷಗಳ ತಡೆಯನ್ನು ತೆಗೆದುಹಾಕುವ ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಯತ್ನ ಮತ್ತು ಲೋಕಸಭೆಯ ವಿಸ್ತರಣೆಗಾಗಿ 2011ರ ಜನಗಣತಿಯನ್ನು ಬಳಸಿಕೊಳ್ಳುವ ಮುನ್ಸೂಚನೆಯನ್ನು ಒಟ್ಟಾಗಿ ಗಮನಿಸಿದರೆ, ಇದು ದಕ್ಷಿಣದ ರಾಜ್ಯಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ದಶಕಗಳಿಂದ ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣ ಮತ್ತು ಇತರ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿ, ಜನಸಂಖ್ಯೆ ನಿಯಂತ್ರಿಸದ ಹಿಂದಿ ಭಾಷಿಕ ರಾಜ್ಯಗಳು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಲಾಭ ಪಡೆಯಲಿವೆ ಎಂಬ ಆತಂಕ ಮೂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ ಪತ್ತೆ; 10 ಜನರ ಬಂಧನ, 23.6 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೃಹತ್ ಮಾದಕ ವಸ್ತು ಜಾಲ ಪತ್ತೆಯಾಗಿದ್ದು, ಬೆಂಗಳೂರು ನಗರ ಪೊಲೀಸರು 10 ಜನ ಶಂಕಿತರನ್ನು ಬಂಧಿಸಿದ್ದಾರೆ ಮತ್ತು ಅಂದಾಜು 23.63 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು...