ಸಂಸತ್ತು ಅಂಗೀಕರಿಸಿದ ದಿನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದಿದೆ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರೋಹಿಂಗ್ಯಾ ನಿರಾಶ್ರಿತರನ್ನು ಗಡೀಪಾರು ಮಾಡುವ ಬಗ್ಗೆ ಸರ್ಕಾರದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೇ ಬಂಗಾಳದಿಂದ ಹಲವಾರು ರಾಜ್ಯಗಳನ್ನು ಹಾದುಕೊಂಡು ರೋಹಿಂಗ್ಯಾಗಳು ಜಮ್ಮುವಿನ ಉತ್ತರದ ಪ್ರದೇಶಗಳಿಗೆ ಹೇಗೆ ತಲುಪಿದರು ಮತ್ತು ನೆಲೆಸಿದರು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ದಿನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅದು ಜಾರಿಗೆ ಬಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಇಲ್ಲಿ ಯಾವುದೇ ಅಡೆತಡೆ ಇಲ್ಲ. ನಮ್ಮ ಮುಂದಿನ ಕ್ರಮವು ರೋಹಿಂಗ್ಯಾಗಳನ್ನು ಗಡೀಪಾರು ಮಾಡುವುದಾಗಿರುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಸಾಮಾನ್ಯ ನಿಧಿ ನಿಯಮಗಳ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಜಮ್ಮುವಿನಲ್ಲಿ ರೋಹಿಂಗ್ಯಾಗಳ ಗಣನೀಯ ಜನಸಂಖ್ಯೆ ನೆಲಸಿದ್ದಾರೆ ಎಂದಿದ್ದಾರೆ. ಅವರನ್ನು ಗಡೀಪಾರು ಮಾಡುವ ಯೋಜನೆಯ ಬಗ್ಗೆ ಕೇಂದ್ರವು ಕೆಲಸ ಮಾಡಲಿದೆ. ಅವರ ಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಬಯೋಮೆಟ್ರಿಕ್ ಗುರುತಿನ ಚೀಟಿಗಳನ್ನು ನೀಡಲಾಗುವುದು, ಏಕೆಂದರೆ ಪೌರತ್ವ ತಿದ್ದುಪಡಿ ಕಾಯ್ದೆಯು ರೋಹಿಂಗ್ಯಾಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
“ಹಿಂದೂ, ಬೌದ್ಧ, ಜೈನ, ಸಿಖ್, ಕ್ರೈಸ್ತ, ಪಾರ್ಸಿ ಈ ಧರ್ಮದವರಿಗೆ ಮಾತ್ರ ಅವಕಾಶವಿದ್ದು, ಅವರಿಗೆ ಹೊಸ ಕಾನೂನಿನಡಿಯಲ್ಲಿ ಪೌರತ್ವ ನೀಡಲಾಗುವುದು. ರೋಹಿಂಗ್ಯಾಗಳು ಆರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಲ್ಲ. ರೋಹಿಂಗ್ಯಾಗಳು ಮ್ಯಾನ್ಮಾರ್ನಿಂದ ದೇಶದಿಂದ ಬಂದಿದ್ದು ಅಲ್ಲಿಗೆ ಅವರು ಹಿಂತಿರುಗಬೇಕಾಗುತ್ತದೆ ಎಂದಿದ್ದಾರೆ.
ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ 13,700 ಕ್ಕೂ ಹೆಚ್ಚು ವಿದೇಶಿಯರು ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ, ಅಲ್ಲಿ 2008 ಮತ್ತು 2016 ರ ನಡುವೆ ಅವರ ಜನಸಂಖ್ಯೆಯು 6,000 ಕ್ಕಿಂತ ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.