ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ, ‘SIR’ ವಿರೋಧಿ ಜನಜಾಗೃತಿ ಜಾಥಾವನ್ನು ಸ್ವಾಗತಿಸಿ ಅವರು ಮಾತನಾಡಿದರು.
ಮತದಾರರ ಜಾಗೃತಿ ಅಗತ್ಯ: ಶ್ರೀಪಾಲ್
“ಪ್ರಸ್ತುತ ಚುನಾವಣಾ ಆಯೋಗದ ಕೆಲವು ನಿರ್ಧಾರಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುವ ಆತಂಕ ಮೂಡಿಸುತ್ತಿವೆ. ದೇಶದ ಬಹುಸಂಖ್ಯಾತ ಜನಸಾಮಾನ್ಯರನ್ನು ಮುಖ್ಯವಾಹಿನಿಯಿಂದ ದೂರವಿಡುವಂತಹ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ವ್ಯವಸ್ಥೆಯ ಸಾಧಕ-ಬಾಧಕಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ,” ಎಂದು ವಕೀಲ ಶ್ರೀಪಾಲ್ ಅಭಿಪ್ರಾಯಪಟ್ಟರು.
ವಾರ್ಡ್ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಲಹೆ
ಮುಖಂಡರಾದ ಕೆ. ರಾಘವೇಂದ್ರ ಮಾತನಾಡಿ, “ಆರಂಭದಲ್ಲಿ ನಮಗೆ ಈ ವಿಷಯದ ತೀವ್ರತೆಯ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಆದರೆ ಈ ಜಾಗೃತಿ ಜಾಥಾ ಆರಂಭವಾದ ಬಳಿಕ ವಿಷಯದ ಗಂಭೀರತೆ ಅರ್ಥವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಇದರ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ್ದಾಗಿದೆ,” ಎಂದರು.
ಮತ್ತೊಬ್ಬ ವಕೀಲರಾದ ಷಹರಾಜ್ ಮುಜಾಹಿದ್ ಸಿದ್ದಿಕಿ ಮಾತನಾಡಿ, “ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದವರ ಹೆಸರುಗಳಲ್ಲಿ ತಾಂತ್ರಿಕವಾಗಿ ಹಲವು ವ್ಯತ್ಯಾಸಗಳಿರುತ್ತವೆ. ಇದರಿಂದಾಗಿ ಅವರ ಮತದಾನದ ಹಕ್ಕು ಕೈತಪ್ಪುವ ಆತಂಕವಿದೆ. ಈ ಗೊಂದಲಗಳನ್ನು ನಿವಾರಿಸಲು ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕಿದೆ,” ಎಂದು ಸಲಹೆ ನೀಡಿದರು.
ಮುಖಂಡರಾದ ಅಫ್ತಬ್ ಫರ್ವೇಜ್ ಮಾತನಾಡಿ, ರಾಜಕೀಯ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳು ಮತ್ತು ನಾಗರಿಕ ಸಮಾಜವೇ ಮುಂಚೂಣಿಗೆ ಬಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಹೊರಬೇಕಾಗಿದೆ ಎಂದು ತಿಳಿಸಿದರು.

ಈ ಜನಜಾಗೃತಿ ಜಾಥಾವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ತರೀಕೆರೆ ಹಾಗೂ ಭದ್ರಾವತಿಯಲ್ಲಿ ಸಭೆಗಳನ್ನು ಯಶಸ್ವಿಯಾಗಿ ಮುಗಿಸಿ ಶಿವಮೊಗ್ಗ ನಗರಕ್ಕೆ ಆಗಮಿಸಿತು. ತದನಂತರ ನಗರದ ಪತ್ರಿಕಾ ಭವನದಲ್ಲಿ ದುಂಡುಮೇಜಿನ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಪ್ರಮುಖ ಮುಖಂಡರಾದ ಕೆ. ರಂಗನಾಥ್, ಯೂತ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. ಜಾಥಾದ ನೇತೃತ್ವವನ್ನು ಸುರೇಶ್ ನಾಯ್ಕ್, ಮುನ್ನ ಕಡೂರು ಹಾಗೂ ಸುಮಂತ್ ರಾಜೀತ್ ವಹಿಸಿದ್ದರು.


