2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು.
ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್ ವಿರೋಧಿ ಜಾಗೃತ ಜಾಥಾದ ಭಾಗವಾಗಿ ಮಾರ್ಗ 5ರ ತಂಡದಿಂದ ಹುಣುಸೂರು ತಾಲ್ಲೂಕಿನ “ಕೊಟ್ಟಿಗೆ ಕಾವಲು” ಹಾಡಿಯಲ್ಲಿ ಎಸ್ಐಆರ್ ಕುರಿತು ಮಾಹಿತಿ ನೀಡಲಾಯಿತು.
ಈ ವೇಳೆ ಡೀಡ್ ಸಂಸ್ಥೆಯ ಶ್ರೀಕಾಂತ್, ಜಿವಿಕೆ ಉಮೇಶ್, ಶಿವಕುಮಾರ್, ಜನಶಕ್ತಿಯ ಹೇಮಂತ್ ಕುಮಾರ್, ಕೆವಿಎಸ್ ನ ಯಮನೂರಪ್ಪ, ಆದಿವಾಸಿ ಹೋರಾಟಗಾರ್ತಿ ಸವಿತಾ ಪಿ.ಬಿ. ಇತರರು ಭಾಗಿಯಾಗಿದ್ದರು.

ಬೆಳಗ್ಗೆ 10:30ರ ಸುಮಾರಿಗೆ ಹುಣುಸೂರಿನ ‘ಸಂವಿಧಾನ ಸರ್ಕಲ್ ತಲುಪಿದ ಜಾಥಾ’ಗೆ ದಲಿತ ಸಂಘಟನೆಗಳ ಮುಖಂಡರು, ರೈತ ಸಂಘಟನೆಯ ಮುಖ್ಯತ್ಥರು, ಅಲ್ಪಸಂಖ್ಯಾತ ಸಮುದಾಯದ ನಾಯಕರು ಸೇರಿದಂತೆ ಹಲವು ಹೋರಾಟಗಾರರು ಹೂ ನೀಡುವ ಮೂಲಕ ಜಾಥಾ ತಂಡವನ್ನು ಸ್ವಾಗತಿಸಿದರು.
ಈ ವೇಳೆ ಕೇಂದ್ರದ ಕುತಂತ್ರವಾದ ಎಸ್ಐಆರ್ ಕುರಿತು ಮಾತನಾಡಿದ ದಸಂಸ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ ಅವರು “ಸ್ವಾತಂತ್ರ್ಯ ನಂತರದ ಭಾರತ ಸಂವಿಧಾನದ ಕಾರಣಕ್ಕೆ ಜಗತ್ತಿನಲ್ಲಿ ಒಂದು ಮುಂದುವರೆಯುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಶಿಕ್ಷಣ, ಸಾಮಾಜಿಕ ನೀತಿಗಳಿಂದ ಇತರೆ ದೇಶಗಳಿಗಿಂತ ಮುಂದುವರೆಯುತ್ತಿದೆ. ಆದರೆ ಇಲ್ಲಿ ಶತ-ಶತಮಾನಗಳಿಂದ ಜಾತಿ ವ್ಯವಸ್ಥೆಯಿಂದ ಎಲ್ಲಾ ಜನರನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿದ್ದ ಮನುವಾದಿಗಳಿಗೆ ಭಾರತ ಮುಂದುವರೆಯುತ್ತಿರುವುದು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಶಿಕ್ಷಣ ಕಲಿತು ಸ್ವಾಭಿಮಾನದಿಂದ ಬದುಕುತ್ತಿರುವುದು ಸಹಿಸಲು ಆಗುತ್ತಿಲ್ಲಾ. ಅವರನ್ನು ಮತ್ತೆ ತಮ್ಮ ಅಡಿಯಲ್ಲಿ ಸಿಲುಕಿಸಲು ಎಸ್ಐಆರ್ ಅನ್ನು ಜಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡರು, ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಯಾವುದೇ ಕಾರಣಕ್ಕು ಕರ್ನಾಟಕದಲ್ಲಿ ಒಬ್ಬರ ಮತವನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಆನಂತರ ಸಂವಿಧಾನ ಸರ್ಕಲ್ ನಿಂದ ಕಲ್ಪತರು ಸರ್ಕಲ್ ವರೆಗೆ ಜಾಥಾದ ಮೆರವಣಿಗೆ ಮೂಲಕ ಎಸ್ಐಆರ್ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಲ್ಪತರು ಸರ್ಕಲ್ ನಲ್ಲಿ ಮಾನವ ಸರಪಳಿ ಮೂಲಕ ಎಸ್ಐಆರ್ ಅನ್ನೋ ವಿರೋಧಿಸುವ ಘೋಷಣೆಗಳು ಮೊಳಗಿದವು.
ಅಲ್ಲಿಂದ ಹೆಚ್.ಡಿ.ಕೋಟೆ ತಲುಪಿದ ಜಾಥಾ ತಂಡದೊಂಡಿಗೆ ಅಲ್ಲಿನ ಹೋರಾಟಗಾರರು, ಜನಸಾಮಾನ್ಯರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ವಿರೋಧಿ ಎಸ್ಐಆರ್ ಧಿಕ್ಕರಿಸುವುದಾಗಿ ಘೋಷಣೆ ಕೂಗಿದರು.

11:30ರ ಸಮಯಕ್ಕೆ ಹೆಚ್.ಡಿ. ಕೋಟೆಯ ಅಂಬೇಡ್ಕರ್ ಭವನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಂಕೇತಿಕವಾಗಿ ಎಲ್ಲಾ ದಲಿತ ಸಮುದಾಯ, ಅಲ್ಪಸಂಖ್ಯಾತ ಸಮುದಾಯದ ಮುಖಂಡರುಗಳಾದ ಪ್ರಗತಿಪರ ಮುಖಂಡರಾದ ಅಕ್ಬರ್ ಪಾಷ, ಸರ್ವಧರ್ಮ ಸಮಾಜ ವೇದಿಕೆ ಅಧ್ಯಕ್ಷ ಇಬ್ರಾಹಿಂ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜು, ರೈತ ಸಂಘದ ಜಿಲ್ಲಾಧ್ಯಕ್ಷರಾದ ಪಳನಿಸ್ವಾಮಿ, ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷೆ ಮಲ್ಲಿಗಮ್ಮ ಸೇರಿದಂತೆ ಹಲವು ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಐಆರ್ ಮಾಡುತ್ತಿರುವ ಅನಾಹುತಗಳ ಕುರಿತ ಪಿಪಿಟಿ ಪ್ರಸಂಟೇಷನ್ ತೋರಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘದ ರಫೀಕುಲ್ಲಾ ಅವರು, “ಎಸ್ಐಆರ್ ನಿಂದಾಗಿ ತೊಂದರೆಗೆ ಒಳಗಾಗುತ್ತಿರುವವರು ನಮ್ಮ ತಳಸಮುದಾಯಗಳು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರೇ ಆಗಿದ್ದಾರೆ. ಹಾಗಾಗಿ ನಾವು ನಮ್ಮ ರೈತ ಸಂಘಟನೆಗಳ ಮೂಲಕ ಯುವ ತಂಡವನ್ನು ಕಟ್ಟಬೇಕು, ಹನ್ನೊಂದು-ಹನ್ನೆರಡು ಯುವಕರ ತಂಡ ಹಳ್ಳಿ ಹಳ್ಳಿಗೆ ಹೋಗಿ ಕೂಲಿ ಕಾರ್ಮಿಕರಿಗೆ, ತಳಸಮುದಾಯಗಳಿಗೆ, ಮತ್ತು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಜನರಿಗೆ ಆ ಪ್ರಕ್ರಿಯೆಯನ್ನ ಮಾಡಿಕೊಡಬೇಕು, ಸಹಾಯ ಮಾಡಬೇಕು” ಎಂದು ಹೇಳಿದರು.

ಆನಂತರ ಮೈಸೂರಿನ ಟೌನ್ ಹಾಲ್ ಬಳಿ ಎಸ್ಐಆರ್ ವಿರೋಧಿಸಿ ಮೈಸೂರಿನ ಪ್ರಜ್ಞಾವಂತರು, ಹೋರಾಟಗಾರರು ಜನಸಾಮಾನ್ಯರು ಹೋರಾಟ ನಡೆಸಿದರು. ಈ ಹೋರಾಟದಲ್ಲಿ ನಾಡಿನ ಖ್ಯಾತ ಜನಪದ ಕಲಾವಿದ, ಹೋರಾಟಗಾರ ಜನಾರ್ಧನ ಜೆನ್ನಿ ಅವರು ಹೋರಾಟದ ಹಾಡುಗಳ ಮೂಲಕ ಜನಜಾಗೃತಿ ಮೂಡಿಸಿದರು. ಈ ವೇಳೆ ಎಸ್ಐಆರ್ ಮೂಲಕ ಮನುವಾದವನ್ನು ಜಾರಿಗೆ ತರಲು ಹೊಂಚುಹಾಕುತ್ತಿರುವ ಬಿಜೆಪಿಗೆ ಯಾವುದೇ ಕಾರಣಕ್ಕೆ ಅದು ಗೆಲುವು ಸಾಧಿಸಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.
ಆನಂತರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜಾಥಾದ ಮೂಲಕ ಎಸ್ಐಆರ್ ಕುರಿತು ಜಾಗೃತಿ ಮೂಡಿಸಲಾಯಿತು.
ಸಂಜೆ 6-30ರ ಸುಮಾರಿಗೆ ಮೈಸೂರಿನ ಮಿಲಾದ್ ಬಾಗ್ ಉದ್ಯಾನವನದ ಬಳಿ ಎಸ್ಐಆರ್ ವಿರೋಧಿ ಜಾಥಾದ ಭಾಗವಾಗಿ ಹೋರಾಟ ಮಾಡಲಾಯಿತು.
ಎಸ್ಐಆರ್ ಮೂಲಕ ದೇಶದ ಜನತೆಗೆ ದ್ರೋಹ ಬಗೆಯುತ್ತಿರುವ ಚುನಾವಣಾ ಆಯೋಗಕ್ಕೆ ಧಿಕ್ಕಾರ ಕೂಗುವ ಮೂಲಕ ಎಸ್ಐಆರ್ ಅನ್ನು ವಿರೋಧಿಸಿದರು.
ನಾವು ಇಲ್ಲೇ ಹುಟ್ಟಿ ಇಲ್ಲೇ ಸಾಯುವವರು ನಮ್ಮ ಮತವನ್ನು ಕದಿಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೋರಾಟಗಾರರು ಹೇಳಿದರು.
ಬಿಜೆಪಿ, ಚುನಾವಣಾ ಆಯೋಗ ಸೇರಿ ಈ ದೇಶದ ಪ್ರಜೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದರೆ ನಾವು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಜೆ 7ಗಂಟೆ ಸುಮಾರಿಗೆ ಮೈಸೂರಿನ ‘ಬುದ್ಧ ವಿಹಾರ’ ಮುಂಭಾಗದಲ್ಲಿ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾದ ಭಾಗವಾಗಿ ಸಂವಾದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ಅವರು ನೂರಕ್ಕೆ ತೊಂಬತ್ತೆಂಟು ಭಾಗದಷ್ಟು ಜನರಿಗೆ ಎಸ್ಐಆರ್ ಬಗ್ಗೆ ತಿಳಿದಿಲ್ಲ.
ನಮ್ಮ ಜನರು ಜೀವನೋಪಾಯಕ್ಕೆ ಪರದಾಡುತ್ತಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಾವು ನೀಡುತ್ತಿರುವ ಈ ಜಾಗೃತಿ ನೀಡೋಕೆ ದೊಡ್ಡ ತಂಡ ಬೇಕು.
ನನ್ನಂಥವರಿಗೆ ಸಹ ಈ ವಿಚಾರದ ಬಗ್ಗೆ ಈವರೆಗೆ ತಿಳಿದಿರುವುದು ಕೇವಲ 8% ಮಾತ್ರ. ನನ್ನ ತಲೆಗೆ ಹೋಗದಿರುವುದು, ನನಗೆ ಅರ್ಥವಾಗದಿರುವುದು ವಿಚಾರವೇ ಹೆಚ್ಚಿದೆ. ಇನ್ನೂ ಸಾಮಾನ್ಯ ಜನರಿಗೆ ಇದು ಅರ್ಥವಾಗುವುದು ಸುಲಭವಲ್ಲ.
ಇವತ್ತಿನ ಅಧಿಕಾರಿ ವರ್ಗ, ಯಾರ ಮಾತನ್ನು ಯಾರು ಕೇಳುತ್ತಿಲ್ಲ, ಈಗ ವಾಸ ಧೃಡೀಕರಣ ಪತ್ರ ಕೊಡಿ ಅಂದರೆ ಅವರು ಕೊಡುವುದಿಲ್ಲ, ಅವರು ಯಾರು ಇರಬೇಕು ಯಾರು ಇರಬಾರದು ಅಂತಾ ನಿರ್ಧರಿಸ್ತಾರೆ.
ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದೆ ಆದರೆ ಈ ಎಸ್ಐಆರ್ ಬಗ್ಗೆ ಯಾರಿಗು ಅಷ್ಟು ಮಾಹಿತಿ ಇಲ್ಲಾ, ಒಂದು ಐದು ಕಮ್ಯುಮಿಟಿಗಳಿಗೆ, ಕೆಲವು ಅಲ್ಪಸಂಖ್ಯಾತ ಧರ್ಮಗಳಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ. ಅದರಲ್ಲಿ ನಮಗೂ ಸಮಸ್ಯೆ ಆಗುತ್ತಿದೆ.
ಇವತ್ತು ಜಾಗೃತಿ ಮಾಡುತ್ತಿರುವ ಎಸ್ಐಆರ್ ವಿರುದ್ಧ ಹೋರಾಟ ಮಾಡುತ್ತೇವೆ ಅಂತ ಹೇಳುತ್ತಿರುವ ಹಲವು ಹೋರಾಟಗಾರರ ಹೆಸರೇ ಹೊಸ ಪಟ್ಟಿಯಲ್ಲಿ ಇಲ್ಲ ಎಂಬ ಮಾಹಿತಿ ಸಿಕ್ಕಿದೆ.
ನನಗೆ ಈ ಬಗ್ಗೆ ಇಷ್ಟು ಮಾಹಿತಿ ಮೊದಲೇ ಸಿಕ್ಕಿದ್ದರೆ. ಈ ಹೋರಾಟಕ್ಕಾಗಿ ಇಂದು ನೂರಾರು ಜನರನ್ನ ಸೇರಿಸುತ್ತಿದ್ದೆ, ಅಶೋಕ ಸರ್ಕಲ್ಲಿನಲ್ಲೆ ಮೈಕ್ ಕಟ್ಟಿಸಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಸುತ್ತಿದ್ದೆ ಎಂದು ಹೇಳಿದರು.
ಅಲ್ಲದೆ ಬಹುಜನರ ಅಸ್ಥಿತ್ವ ಉಳಿಸೋಕೆ ನಾವು ಇದ್ದೀವಿ. ಈ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾದ ಜೊತೆಗೂ ನಾವು ನಿಲ್ಲುತ್ತೇವೆ. ನಮ್ಮ ಶಕ್ತಿ ಮೀರಿ ಈ ಹೋರಾಟದ ಗೆಲುವಿಗಾಗಿ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಜಾಥಾ ತಂಡಕ್ಕೆ ಭರವಸೆ ನೀಡಿದರು.
ಸಂವಾದದಲ್ಲಿ ನೂರ್ ಖಾನ್, ಪ್ರೊ.ಕಾಳಚೆನ್ನೇಗೌಡ, ಹಿರಿಯ ಪತ್ರಕರ್ತರಾದ ಜಿ.ಬಿ. ಬಸವರಾಜು, ಪಿಯುಸಿಎಲ್ ಅಧ್ಯಕ್ಷರಾದ ಕಮಲ್ ಗೋಪಿನಾಥ್, ಜನಾರ್ಧನ ಜೆನ್ನಿ, ಅಪ್ಪಗೆರೆ ತಿಮ್ಮರಾಜು, ಡಾ. ಪೂರ್ಣಾನಂದ, ದೇವಾನಂದ ವರಪ್ರಸಾದ್, ವಿಎಸ್ ಶ್ರೀಧರ್, ಸೇರಿದಂತೆ ಹಲವು ಹಿರಿಯ ಹೋರಾಟಗಾರರು, ಪ್ರಜ್ಞಾವಂತರು ಭಾಗಿಯಾಗಿದ್ದರು.


