ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ ‘ಎಸ್ಐಆರ್ (SIR) ವಿರೋಧಿ ಕರ್ನಾಟಕ’ ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಎಸ್ಐಆರ್ ಕುರಿತು ಮಾತನಾಡಿದ ಪ್ರೊ. ಎಂ.ವಿ. ಕೃಷ್ಣ ಅವರು, “ನಮ್ಮ ಮುಂದೆ ಬಹುದೊಡ್ಡ ಸವಾಲಿದೆ. ತುಂಬಾ ಜನರಿಗೆ ಎಸ್ಐಆರ್ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ, ಇದರಿಂದ ಲಕ್ಷಾಂತರ ಜನ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಅನ್ಯಾಯವನ್ನು ನಾವು ಖಂಡಿಸಲೇಬೇಕು ಹಾಗೂ ಜನಸಾಮಾನ್ಯರ ಬದುಕಿನ ಹಕ್ಕಿನ ಮೇಲೆ ದಾಳಿ ಮಾಡುವ ಈ ಹುನ್ನಾರವನ್ನು ಒಗ್ಗಟ್ಟಿನಿಂದ ತಡೆಯಬೇಕು,” ಎಂದು ಎಸ್ಐಆರ್ನಿಂದ ಆಗುತ್ತಿರುವ ಅನ್ಯಾಯಗಳನ್ನು ವಿವರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ನಂದಕುಮಾರ್ ಕುಂಬ್ರಿಉಬ್ಬು ಮಾತನಾಡಿ, “ಎಸ್ಐಆರ್ ಎನ್ನುವುದು ಕೇವಲ ‘ಮತದಾರರ ತೀವ್ರ ಪರಿಷ್ಕರಣೆ’ ಅಲ್ಲ, ಅದು ನೇರವಾದ ‘ಮತದಾನದ ನಿರಾಕರಣೆ’. ಇದರ ಮೂಲಕ ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡೇ ಜನರನ್ನು ವಂಚಿಸುತ್ತಿದೆ,” ಎಂದು ಗಂಭೀರವಾಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರಾದ ಪೂರ್ಣಚಂದ್ರ, ಸಾಮಾಜಿಕ ಹೋರಾಟಗಾರ್ತಿ ಕಿರಣ ಪಿ.ಆರ್., ಶಿವಕುಮಾರ್, ಪ್ರೊ. ಎಂ.ವಿ. ಕೃಷ್ಣ, ಲಿಂಗರಾಜು, ನಸ್ರೀನ್ ಮಿಠಾಯಿ, ಮಹಿಳಾ ಮುನ್ನಡೆಯ ಶಿಲ್ಪಾ, ಕರ್ನಾಟಕ ಜನಶಕ್ತಿ ಸಂಘಟನೆಯ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿದ್ಧರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮದ್ದೂರಿನಲ್ಲಿ ಜಾಗೃತಿ ಸಂವಾದ:
ತದನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮದ್ದೂರಿನ ಅಂಬೇಡ್ಕರ್ ಭವನದಲ್ಲಿ ಎಸ್ಐಆರ್ ಅನಾಹುತಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕರೊಡನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂವಾದದಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದೆ ಹಾಗೂ ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್ ಅವರು, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಮತ್ತು ಪ್ರಸ್ತುತ ಎಸ್ಐಆರ್ನಿಂದ ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಎಳೆಎಳೆಯಾಗಿ ವಿವರಿಸುವ ಮೂಲಕ ಅರಿವು ಮೂಡಿಸಿದರು.
ಹಾಗೆಯೇ, ಮಂಡ್ಯದ ಕರ್ನಾಟಕ ಜನಶಕ್ತಿ ಕಚೇರಿಯಲ್ಲೂ ‘ಎಸ್ಐಆರ್ ವಿರೋಧಿ ಕರ್ನಾಟಕ’ ಜಾಥಾದ ಭಾಗವಾಗಿ ಮಹತ್ವದ ಸಭೆ ನಡೆಯಿತು.



