ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಒದಗಿಸುವ ಜವಾಬ್ದಾರಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ಗೆ ವಹಿಸಲಾಗಿದ್ದು, ಇದರ ಮೊದಲ ಪ್ರಮುಖ ಬದಲಾವಣೆಯಾಗಿ ಮೆನುವಿನಿಂದ ಮಾಂಸಾಹಾರಿ/ಮೊಟ್ಟೆ ಪದಾರ್ಥಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಇಸ್ಕಾನ್ ಸಂಸ್ಥೆಯು ತನ್ನ ಆವರಣದಲ್ಲಿ ನೀಡುವ ಶುದ್ಧ ಸಸ್ಯಾಹಾರಿ ಊಟವು ಜನಪ್ರಿಯವಾಗಿದ್ದರೂ, ಈಗ ಸರ್ಕಾರದ ಹೊಸ ನಿರ್ಧಾರದಿಂದಾಗಿ ಶಾಲಾ ಮಕ್ಕಳಿಗೆ ತಮಗೆ ಇಷ್ಟಬಂದದ್ದನ್ನು ತಿನ್ನುವ ಆಯ್ಕೆ ಇಲ್ಲದಂತಾಗಿದೆ.
ಸೋಮವಾರ ಬಜೆಟ್ ಭಾಷಣದಲ್ಲಿ ಈ ಕುರಿತು ಪ್ರಕಟಿಸಿರುವ ಬಂಗಾಳದ ಹಣಕಾಸು ಸಚಿವ ಸ್ವಪನ್ ದಾಸ್ಗುಪ್ತಾ, “ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟದ ಸಾಮಗ್ರಿ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ₹6.78 ರಿಂದ ₹10 ಕ್ಕೆ ಹೆಚ್ಚಿಸಲಾಗುವುದು. ಕೋಲ್ಕತ್ತಾ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಪೌಷ್ಟಿಕಾಂಶಯುಕ್ತ ಬೇಯಿಸಿದ ಬಿಸಿಯೂಟವನ್ನು ಒದಗಿಸಲು ಇಸ್ಕಾನ್ ಸಂಸ್ಥೆಯನ್ನು ತೊಡಗಿಸಿಕೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.
1995 ರ ಆಗಸ್ಟ್ 15 ರಂದು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಆರಂಭವಾದ ಈ ಯೋಜನೆಗೆ ನಂತರದ ವರ್ಷಗಳಲ್ಲಿ ಅನ್ನ, ಬೇಳೆ ಸಾರು ನೀಡುವ ವ್ಯವಸ್ಥೆ ತರಲಾಯಿತು. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಉಳಿದ ಐದು ದಿನಗಳಲ್ಲಿ ಅನ್ನ, ದಾಲ್ ಮತ್ತು ಆಲೂಗಡ್ಡೆ ಪಲ್ಯವನ್ನು ನೀಡಲಾಗುತ್ತಿತ್ತು. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮೊಟ್ಟೆಯನ್ನು ಪ್ರೋಟೀನ್ನ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ.
ಹಲವು ಶಾಲೆಗಳಲ್ಲಿ ಶಿಕ್ಷಕರೇ ಸ್ವತಃ ಹಣವನ್ನು ಸಂಗ್ರಹಿಸಿ ಮಕ್ಕಳಿಗೆ ಅಪರೂಪಕ್ಕೆ ಚಿಕನ್ ಅಥವಾ ಮೀನಿನ ಊಟವನ್ನು ಸಹ ಕೊಡಿಸುತ್ತಿದ್ದರು. ಮೊಟ್ಟೆ ಇಷ್ಟಪಡದ ಅಥವಾ ಸಸ್ಯಾಹಾರಿಗಳಾಗಿದ್ದ ವಿದ್ಯಾರ್ಥಿಗಳು ಅದನ್ನು ಬಿಟ್ಟು ಇತರ ಪದಾರ್ಥಗಳನ್ನು ಆಯ್ದುಕೊಳ್ಳುತ್ತಿದ್ದರು. ಆದರೆ ಈಗ ಇಡೀ ಮೆನುವನ್ನೇ ಬದಲಾಯಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರವು ಸಸ್ಯಾಹಾರವನ್ನು ಬಲವಂತವಾಗಿ ಹೇರುತ್ತಿದೆ ಎಂದು ಆರೋಪಿಸಿವೆ.
ಕೋಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮಣ್ ದಾಸ್ ಮಾತನಾಡಿ, “ನಮ್ಮ ಬಿಸಿಯೂಟದಲ್ಲಿ ಮೊಟ್ಟೆ ಇರದಿದ್ದರೂ ಪೌಷ್ಟಿಕಾಂಶದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ನಾವು ಕಿಚಡಿಯೊಂದಿಗೆ ಪನೀರ್, ರಾಜ್ಮಾ ಮತ್ತು ಸೋಯಾಬೀನ್ಗಳಂತಹ ಪೌಷ್ಟಿಕಯುಕ್ತ ಪದಾರ್ಥಗಳನ್ನು ನೀಡುವ ಮೂಲಕ ಅದನ್ನು ಸರಿದೂಗಿಸುತ್ತೇವೆ. ಪ್ರಾಯೋಗಿಕ ಯೋಜನೆಯಾಗಿ ನಮ್ಮ ‘ಅನ್ನಮಿತ್ರ ಫೌಂಡೇಶನ್’ ಮೂಲಕ ಇದನ್ನು ಜಾರಿಗೊಳಿಸುತ್ತಿದ್ದೇವೆ. ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ದೇಶದ ಎಂಟು ರಾಜ್ಯಗಳ 12 ಲಕ್ಷ ವಿದ್ಯಾರ್ಥಿಗಳಿಗೆ ನಾವು ಈಗಾಗಲೇ ಇದೇ ರೀತಿ ಶುದ್ಧ ಸಸ್ಯಾಹಾರಿ ಬಿಸಿಯೂಟ ನೀಡುತ್ತಿದ್ದೇವೆ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಸಿಯೂಟದ ವೆಚ್ಚ ಹೆಚ್ಚಿಸಿರುವುದನ್ನು ಶಿಕ್ಷಕರು ಸ್ವಾಗತಿಸಿದ್ದಾರಾದರೂ, ಮಕ್ಕಳು ಸಂಪೂರ್ಣ ಸಸ್ಯಾಹಾರಿ ಮೆನುವಿಗೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬ ಗೊಂದಲದಲ್ಲಿದ್ದಾರೆ ಅಲ್ಲದೆ ಅವರ ಆಯ್ಕೆಗೆ ಅವಕಾಶವಿಲ್ಲ ಎಂದಿದ್ದಾರೆ ಎಂದು ‘ಟೆಲಿಗ್ರಾಫ್ ಇಂಡಿಯಾ’ ವರದಿ ಮಾಡಿದೆ.
“ಶಾಲೆಗಳಲ್ಲಿ ಮೊಟ್ಟೆ ನೀಡುವ ದಿನದಂದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಾರೆ. ಇಸ್ಕಾನ್ ಸ್ವಚ್ಛವಾದ ಆಹಾರ ನೀಡುತ್ತದೆ ಎಂಬ ಭರವಸೆ ನಮಗಿದೆ, ಆದರೆ ಮಕ್ಕಳು ಸಂಪೂರ್ಣ ಸಸ್ಯಾಹಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು. ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿದರೆ ಒಳ್ಳೆಯದು.” ಎಂದು ರಾಜಾ ಡೇ (ಮುಖ್ಯೋಪಾಧ್ಯಾಯರು, ಮಿತ್ರ ಇನ್ಸ್ಟಿಟ್ಯೂಷನ್) ಟಿಲಿಗ್ರಾಫ್ ಇಂಡಿಯಾ ವರದಿ ಮಾಡಿದೆ.
“ನಮ್ಮ ಶಾಲೆಯ ಅನೇಕ ಬಡ ಮಕ್ಕಳಿಗೆ ಪನೀರ್ ಅಥವಾ ರಾಜ್ಮಾ ಎಂದರೆ ಏನೆಂದೇ ಗೊತ್ತಿಲ್ಲ. ಹೀಗಿದ್ದಾಗ ಇದು ಮಕ್ಕಳ ಮೇಲೆ ನಿರ್ದಿಷ್ಟ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರಿದಂತಾಗುತ್ತದೆ.” ಎಂದು ಸರ್ಕಾರಿ ಶಾಲಾ ಶಿಕ್ಷಕರಾದ ಸೌಗತ ಬಸು ತಿಳಿಸಿದ್ದಾರೆ.
ಬಿಜೆಪಿಯ ಶಿಕ್ಷಕರ ಸಂಘದ ಸಹ-ಸಂಚಾಲಕರಾದ ಪಿಂಟು ಪಾರುಯಿ ಮಾತನಾಡಿ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಲೇ, “ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳ ಇಷ್ಟ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಸಿದ್ಧಪಡಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.


