ಜನವರಿ 10-11 ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ ಹೆಗಡೆಯವರನ್ನು ಬದಲಾಯಿಸಲಾಬಾರದು ಎಂದು ಒತ್ತಾಯಿಸಿ ಇಂದು ಶೃಂಗೇರಿಯಲ್ಲಿ ಸಮ್ಮೇಳನ ಸಲಹಾ ಸಮಿತಿಯಿಂದ ಪ್ರೀತಿಯಿಂದ ಸಮ್ಮೇಳನಕ್ಕೆ ಬನ್ನಿ ಎಂಬ ಶಾಂತಿಯುತ ಮೌನ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತವು ಸಮ್ಮೇಳನಕ್ಕೆ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಬೇಕು ಎಂಬ ಹಕ್ಕೊತ್ತಾಯ ಪತ್ರವನ್ನು ಶೃಂಗೇರಿಯ ತಹಶೀಲ್ದಾರ್ರವರಿಗೆ ಇಂದು ನೀಡಲಾಯಿತು.
ನಮ್ಮದು ಪ್ರತಿಭಟನೆಯಲ್ಲ, ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ನಮ್ಮದು ಶಾಂತಿಯುತ ಮೌನ ಒತ್ತಾಯವಾಗಿದೆ ಎಂದು ಹಿಂದಿನ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶೃಂಗೇರಿಯ ಪ್ರೊ.ಕೆ ಪುಟ್ಟಯ್ಯ ತಿಳಿಸಿದರು.
ಈ ಬಾರಿಯ ಸಮ್ಮೇಳನದ ಸಲಹಾ ಸಮಿತಿಯ ಸದಸ್ಯರಾದ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಜಿಲ್ಲಾಧ್ಯಕ್ಷರಾದ ಮತ್ತು ವಕೀಲರಾದ ವಿ.ಆರ್ ನಟಶೇಖರ್, ಪೂರ್ಣಿಮ ಸಿದ್ದಪ್ಪ, ಎಚ್.ಎ ಶ್ರೀನಿವಾಸ್, ಬೇಗಾನೆ ಕಾಡಪ್ಪ, ಪ್ರಗತಪರ ಕೃಷಿಕರಾದ ಮಲ್ಲಪ್ಪ ಹೆಗಡೆ, ಬಿ.ವಿ ಶಂಕರಪ್ಪ ಗೌಡ ಚಂದ್ರಶೇಖರ್ ಹೆಗ್ಗಡೆ ಮುಂತಾದವರು ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಬಾರಿಯ ಸಮ್ಮೇಳನದ ಸಲಹಾ ಸಮಿತಿಯು ಮೆರವಣಿಗೆಯ ನೇತೃತ್ವ ವಹಿಸಿದ್ದು ’ಪ್ರೀತಿಯಿಂದ ಸಮ್ಮೇಳನಕ್ಕೆ ಬನ್ನಿ’, ಸಲಹಾ ಸಮಿತಿ ಎಂಬ ಬ್ಯಾನರ್ನಡಿಯಲ್ಲಿ ಹಕ್ಕೊತ್ತಾಯ ಸಲ್ಲಿಸಲಾಗಿದೆ.
Kannadada duradrusta!