ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ ಉದಯವಾಗಿದೆ, ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಿದೆ” ಎಂದು ಭಾಷಣ ಬಿಗಿಯಲಾಗಿತ್ತು. ಆದರೆ, ಇಷ್ಟೆಲ್ಲಾ ದೊಡ್ಡ ಆರ್ಥಿಕ ಹಗರಣ ಮತ್ತು ಟ್ರಸ್ಟಿಗಳ ರಾಜೀನಾಮೆ ಪರ್ವ ನಡೆಯುತ್ತಿದ್ದರೂ ಪ್ರಧಾನಿಯವರು ಸೌಜನ್ಯಕ್ಕೂ ಈ ಬಗ್ಗೆ ತುಟಿಬಿಚ್ಚದೆ ನಿಗೂಢ ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ ಉದಯವಾಗಿದೆ, ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಿದೆ” ಎಂದು ಕೆಂಪುಕೋಟೆಯಿಂದ ಹಿಡಿದು ಅಯೋಧ್ಯೆಯವರೆಗೆ ಗಂಟಲು ಹರಿಯುವಂತೆ ಭಾಷಣ ಬಿಗಿಯಲಾಗಿತ್ತು
ಜನವರಿ 2024 ರಲ್ಲಿ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾದ ಕೇವಲ ಎರಡೂವರೆ ವರ್ಷಗಳಲ್ಲೇ ಅಯೋಧ್ಯೆಯ ರಾಮಮಂದಿರವು ಆರ್ಥಿಕ ಹಗರಣದ ಚಕ್ರವ್ಯೂಹದಲ್ಲಿ ಸಿಲುಕಿದೆ. ಮಂದಿರಕ್ಕೆ ಬಂದ ದೇಣಿಗೆ ಹಣದಲ್ಲಿ ಭಾರಿ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕಳೆದ ಜೂನ್ 2026 ರಲ್ಲಿ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಇಬ್ಬರು ಸಂಸ್ಥಾಪಕ ಟ್ರಸ್ಟಿಗಳು ರಾಜೀನಾಮೆ ನೀಡಿದ್ದು, ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ದಳವನ್ನು (SIT) ರಚಿಸಿದೆ ಮತ್ತು ಎಂಟು ಮಂದಿ ನೌಕರರನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲದೆ, ಮಂದಿರದ ದೈನಂದಿನ ಆಡಳಿತವನ್ನು ನೋಡಿಕೊಳ್ಳಲು ಒಬ್ಬ ‘ಪ್ರೊಫೆಷನಲ್’ ಸಿಇಒ ಹುದ್ದೆಗೆ ಹುಡುಕಾಟವೂ ಆರಂಭವಾಗಿದೆ.
ಪ್ರಸ್ತುತ ಹೊರಬಿದ್ದಿರುವ ಎಸ್ಐಆರ್ನ ಮಧ್ಯಂತರ ವರದಿಯು ಮಂದಿರದ ಒಳಗಿನ ಆಡಳಿತ ವೈಫಲ್ಯವನ್ನು ಬಯಲು ಮಾಡಿದೆ. ದೇಣಿಗೆ ನಿರ್ವಹಣೆಯಲ್ಲಿ ದುರ್ಬಲ ಉಸ್ತುವಾರಿ, ಭದ್ರತಾ ವೈಫಲ್ಯ, ಜೇಬುಗಳಿಲ್ಲದ ಸಮವಸ್ತ್ರ ನಿಯಮದ (Pocketless Uniforms) ಉಲ್ಲಂಘನೆ, ಹಣ ಎಣಿಕೆಯಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಸಿಸಿಟಿವಿ ಕಣ್ಗಾವಲಿನ ಲೋಪಗಳನ್ನು ವರದಿ ಎತ್ತಿ ತೋರಿಸಿದೆ. ರಾಜ್ಯ ಸರ್ಕಾರವು ಜುಲೈ 15 ರಂದು ಅಂತಿಮ ವರದಿ ಸಲ್ಲಿಸಲು ಗಡುವು ವಿಧಿಸಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಈ ನಾಟಕದ ನಡುವೆ, ಕೆಲವು ಮೂಲಭೂತ ಪ್ರಶ್ನೆಗಳನ್ನು ಇನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಾರ್ವಜನಿಕ ಪರಿಶೀಲನೆಯಿಂದ ಹೊರಗಿದೆಯೇ?:
2019 ರ ತನ್ನ ವಿವಾದಾತ್ಮಕ ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಮಂದಿರದ ನಿರ್ಮಾಣ ಮತ್ತು ನಿರ್ವಹಣೆಗೆ ಒಂದು ಟ್ರಸ್ಟ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಕೋರ್ಟ್ ಎಲ್ಲೂ ಅದನ್ನು ‘ಖಾಸಗಿ ಟ್ರಸ್ಟ್’ ಮಾಡಬೇಕೆಂದು ಹೇಳಿರಲಿಲ್ಲ. ಆದರೂ, ಕೇಂದ್ರ ಗೃಹ ಸಚಿವಾಲಯವು (MHA) 2020 ರಲ್ಲಿ ನಿಯಮಾವಳಿ ರೂಪಿಸುವಾಗ ಇದನ್ನು ಒಂದು ‘ಖಾಸಗಿ ಟ್ರಸ್ಟ್’ ಆಗಿ ಪರಿವರ್ತಿಸಿ, ಅದಕ್ಕೆ ವಿಎಚ್ಪಿ ಮತ್ತು ಆರ್ಎಸ್ಎಸ್ನ ಆಪ್ತರನ್ನು ಟ್ರಸ್ಟಿಗಳನ್ನಾಗಿ ನೇಮಿಸಿತು.
ಗೃಹ ಸಚಿವಾಲಯ ಹಾಗೂ ಕೇಂದ್ರ ಮಾಹಿತಿ ಆಯೋಗದ (CIC) ತೀರ್ಪುಗಳ ಪ್ರಕಾರ, ಈ ಟ್ರಸ್ಟ್ ಸ್ವಾಯತ್ತ ಸಂಸ್ಥೆಯಾಗಿದ್ದು, ಇದಕ್ಕೆ ಸರ್ಕಾರದಿಂದ ಯಾವುದೇ ಹಣಕಾಸು ನೆರವು ಸಿಗುತ್ತಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಂಡು ದೆಹಲಿ ಹೈಕೋರ್ಟ್ ಮತ್ತು ಸಿಐಸಿ, ಈ ಟ್ರಸ್ಟ್ ‘ಮಾಹಿತಿ ಹಕ್ಕು ಕಾಯ್ದೆ’ (RTI) ಅಡಿಗೆ ಬರುವುದಿಲ್ಲ ಎಂದು ಹೇಳಿವೆ.
ಈಗ ಹಗರಣದ ತನಿಖೆಗೆ “ಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಮೇಲ್ನೋಟಕ್ಕೆ ಹೇಳುತ್ತಿರುವ ಟ್ರಸ್ಟ್ ಅಧಿಕಾರಿಗಳು, ಒಳಗಡೆ ಮಾತ್ರ ತಮಗೆ ಆರ್ಟಿಐ ಅನ್ವಯಿಸುವುದಿಲ್ಲ ಎಂಬ ಕಾನೂನು ಕವಚವನ್ನು ಬಳಸಿಕೊಂಡು ಮಾಹಿತಿಗಳನ್ನು ಮುಚ್ಚಿಡುತ್ತಿದ್ದಾರೆ. ತನಿಖೆ ಮತ್ತು ಪತ್ರಕರ್ತರ ಪ್ರಶ್ನೆಗಳಿಂದ ನುಣುಚಿಕೊಳ್ಳಲು ಈ ‘ಸ್ವಾಯತ್ತ’ ಹಣೆಪಟ್ಟಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ರಾಜೀನಾಮೆ ನೀಡಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಈ ಕಳ್ಳತನಕ್ಕೂ ಟ್ರಸ್ಟ್ಗೂ ಸಂಬಂಧವಿಲ್ಲ, ಹಣ ಎಣಿಕೆ ಕಾರ್ಯವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಖಾಸಗಿ ಏಜೆನ್ಸಿಗಳು ನೋಡಿಕೊಳ್ಳುತ್ತಿದ್ದವು ಎಂದು ಹೇಳುವ ಮೂಲಕ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ಆದರೆ, ಸಾರ್ವಜನಿಕ ಧಾರ್ಮಿಕ ಸಂಸ್ಥೆಯೊಂದು ಖಾಸಗಿ ಟ್ರಸ್ಟ್ ಮಾದರಿಯಲ್ಲಿ ಕೆಲಸ ಮಾಡುವಾಗ ಅದರ ಆಡಿಟಿಂಗ್ ಪಾರದರ್ಶಕವಾಗಿರಬೇಕು ಎಂದು ಕಾನೂನು ತಜ್ಞರು ವಾದಿಸುತ್ತಾರೆ. ಏಕೆಂದರೆ ಶ್ರದ್ಧೆ ಖಾಸಗಿಯಾಗಿರಬಹುದು, ಆದರೆ ಧರ್ಮದ ಹೆಸರಿನಲ್ಲಿ ಸಂಗ್ರಹವಾದ ಕೋಟ್ಯಂತರ ಹಣ ಸಾರ್ವಜನಿಕರದ್ದಾಗಿದೆ.
ನ್ಯಾಯಾಲಯಗಳ ಹಳೆಯ ತೀರ್ಪುಗಳು ಏನು ಹೇಳುತ್ತವೆ?:
ಈ ಹಿಂದೆ ಸ್ವಾಯತ್ತ ಅಥವಾ ವಂಶಪಾರಂಪರ್ಯ ಟ್ರಸ್ಟಿಗಳು ಸಾರ್ವಜನಿಕ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡಾಗ ಭಾರತದ ನ್ಯಾಯಾಲಯಗಳು ನೇರವಾಗಿ ಮಧ್ಯಪ್ರವೇಶಿಸಿ ಕಠಿಣ ನಿರ್ಧಾರ ತಳೆದಿದ್ದವು:
ಚಿದಂಬರಂ ನಟರಾಜ ಮಂದಿರ ಪ್ರಕರಣ (2014): ತಮಿಳುನಾಡಿನ ಈ ಪ್ರಸಿದ್ಧ ಮಂದಿರದ ದೀಕ್ಷಿತರು ತಮಗೆ ಸಂಪೂರ್ಣ ಸ್ವಾಯತ್ತ ಅಧಿಕಾರವಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂ ಕೋರ್ಟ್, ಸರ್ಕಾರವು ಮಂದಿರವನ್ನು ಕಾಯಂ ಆಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ಸಾರ್ವಜನಿಕ ನಿಧಿಯ ದುರುಪಯೋಗ ಅಥವಾ ಆರ್ಥಿಕ ಅಕ್ರಮ ನಡೆದಾಗ ಖಾತೆಗಳನ್ನು ಆಡಿಟ್ ಮಾಡಲು ಮತ್ತು ಟ್ರಸ್ಟಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂದು ತೀರ್ಪು ನೀಡಿತ್ತು.
ಶ್ರೀ ಪದ್ಮನಾಭಸ್ವಾಮಿ ಮಂದಿರ ಪ್ರಕರಣ (2020): ತಿರುವಾನ್ಕೂರ್ ರಾಜಕುಟುಂಬವು ಮಂದಿರದ ಮೇಲಿನ ಖಾಸಗಿ ಹಕ್ಕನ್ನು ಪ್ರತಿಪಾದಿಸಿತ್ತು. ಸುಪ್ರೀಂ ಕೋರ್ಟ್ ಅವರ ಸಾಂಪ್ರದಾಯಿಕ ಹಕ್ಕುಗಳನ್ನು ಎತ್ತಿಹಿಡಿದರೂ, ಸಾರ್ವಜನಿಕ ಧಾರ್ಮಿಕ ಸಂಸ್ಥೆಯನ್ನು ಯಾರದೋ ‘ಖಾಸಗಿ ಜಾಗೀರು’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಮಂದಿರದ ಆಸ್ತಿ ಮತ್ತು ನಿಧಿಯ ಉಸ್ತುವಾರಿಗೆ ಸ್ವತಂತ್ರ ಆಡಳಿತ ಸಮಿತಿಯನ್ನು ರಚಿಸಿ, ಕಠಿಣ ಆಡಿಟಿಂಗ್ ನಿಯಮಗಳನ್ನು ಜಾರಿಗೆ ತಂದಿತು.
ಭಾರತೀಯ ತೆರಿಗೆ ಮತ್ತು ಆಸ್ತಿ ಕಾಯ್ದೆಯ ಪ್ರಕಾರ, ಯಾವುದೇ ಆಸ್ತಿಯನ್ನು ಸಾರ್ವಜನಿಕ ಭಕ್ತರ ಸಮೂಹಕ್ಕೆ ಸಮರ್ಪಿಸಿದಾಗ ಅದು ಸ್ವಯಂಚಾಲಿತವಾಗಿ ‘ಸಾರ್ವಜನಿಕ ಧಾರ್ಮಿಕ ಟ್ರಸ್ಟ್’ ಎಂಬ ಕಾನೂನು ವ್ಯಾಖ್ಯಾನಕ್ಕೆ ಒಳಪಡುತ್ತದೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಇಬ್ಬರು ಟ್ರಸ್ಟಿಗಳು; ತಜ್ಞರ ವಿಶ್ಲೇಷಣೆ:
ಟ್ರಸ್ಟ್ನ ಇಬ್ಬರು ಪ್ರಮುಖರಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ‘ನೈತಿಕ ಹೊಣೆಗಾರಿಕೆ’ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ ಖಜಾಂಚಿ (Treasurer) ಗೋವಿಂದ್ ದೇವ್ ಗಿರಿ ಅವರು ತಾವು ಪುಣೆಯಲ್ಲಿದ್ದುಕೊಂಡು ಕೇವಲ ತಿಂಗಳ ಕೊನೆಯಲ್ಲಿ ಆಡಿಟ್ ವರದಿ ನೋಡುವುದಾಗಿ ಹೇಳಿ ತಮ್ಮದೇನೂ ತಪ್ಪಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಭಾರತೀಯ ಟ್ರಸ್ಟ್ ಕಾಯ್ದೆ 1882 ರ ಪ್ರಕಾರ, ಖಜಾಂಚಿಗೆ ಟ್ರಸ್ಟ್ನ ಆಸ್ತಿಯನ್ನು ರಕ್ಷಿಸುವ ಕಾನೂನುಬದ್ಧ ಸಾಂವಿಧಾನಿಕ ಜವಾಬ್ದಾರಿಯಿರುತ್ತದೆ. ಭೌಗೋಳಿಕ ದೂರದ ನೆಪ ಒಡ್ಡಿ ಅವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹಣ ಎಣಿಕೆ ಸಿಬ್ಬಂದಿ ತಮ್ಮ ಶೂ ಮತ್ತು ಜೇಬುಗಳಲ್ಲಿ ಹಣ ತುಂಬಿಕೊಂಡು ಹೋಗುತ್ತಿದ್ದರೂ ವ್ಯವಸ್ಥೆಯನ್ನು ಸರಿಪಡಿಸದ ಖಜಾಂಚಿಯ ನಿರ್ಲಕ್ಷ್ಯವೂ ಇಲ್ಲಿ ಅಪರಾಧವೇ ಆಗಿದೆ.
ಇನ್ನು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಕಾನೂನು ತಜ್ಞರು ಒಂದು ರಾಜಕೀಯ ಮತ್ತು ಕಾನೂನಾತ್ಮಕ ತಂತ್ರ ಎಂದು ವಿಶ್ಲೇಷಿಸಿದ್ದಾರೆ. ತಾವಾಗಿಯೇ ರಾಜೀನಾಮೆ ನೀಡುವುದರಿಂದ ಅವರು ಕಾನೂನುಬದ್ಧವಾಗಿ ಕಡ್ಡಾಯ ವಜಾದಿಂದ (Forced Termination) ಪಾರಾಗಬಹುದು ಮತ್ತು ಟ್ರಸ್ಟ್ ಅಧಿಕೃತವಾಗಿ ಅವರನ್ನು ‘ಅಪರಾಧಿ’ ಎಂದು ಘೋಷಿಸದಂತೆ ತಡೆಯಬಹುದು. ಈಗಾಗಲೇ ಟ್ರಸ್ಟ್ನ ಕೆಲವು ಸದಸ್ಯರು ಇವರಿಬ್ಬರನ್ನು ‘ಪ್ರಾಮಾಣಿಕರು’ ಎಂದು ಕರೆದು, ಕೇವಲ ‘ನಿರ್ಲಕ್ಷ್ಯದ ತಪ್ಪು’ ನಡೆದಿದೆ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಈ ತಂತ್ರಕ್ಕೆ ಪುಷ್ಟಿ ನೀಡುತ್ತದೆ.
ಪ್ರಧಾನಿ ಮೋದಿಯವರ ನಿಗೂಢ ಮೌನದ ಹಿಂದಿನ ರಹಸ್ಯವೇನು?:
ರಾಮಮಂದಿರದ ಪ್ರತಿಯೊಂದು ಯಶಸ್ಸಿನ ಕ್ರೆಡಿಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಿಡಿದು ಜನೆವರಿ 2024 ರ ಮಂದಿರದ ಉದ್ಘಾಟನೆಯಲ್ಲಿ ‘ಯಜಮಾನ’ನಾಗಿ (ಮುಖ್ಯ ಆತಿಥೇಯ) ಭಾಗವಹಿಸುವವರೆಗೆ ಪ್ರಧಾನಿಯೇ ಮುಂಚೂಣಿಯಲ್ಲಿದ್ದರು. ಟ್ರಸ್ಟ್ನ ದೈನಂದಿನ ಕೆಲಸಗಳಲ್ಲಿ ಪ್ರಧಾನಿ ಕಾರ್ಯಾಲಯ (PMO) ನೇರವಾಗಿ ಭಾಗಿಯಾಗದಿದ್ದರೂ, ಅದರ ಸಂಪೂರ್ಣ ನಿಯಂತ್ರಣ ಪಿಎಂಒ ಕೈಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮೋದಿಯವರ ನಿಕಟವರ್ತಿ ಹಾಗೂ ಅವರ ಮೊದಲ ಅವಧಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರೇ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರ್ಭಗುಡಿಯೊಳಗೆ ಪ್ರತಿಮೆ ಹಿಡಿದು ನಡೆಯುವಾಗ, ಕಣ್ಣೀರು ಸುರಿಸುವಾಗ, ದೀರ್ಘದಂಡ ನಮಸ್ಕಾರ ಹಾಕುವಾಗ ಇಂಚಿಂಚೂ ಕ್ಯಾಮೆರಾ ಆ್ಯಂಗಲ್ ಮಿಸ್ ಆಗದಂತೆ ‘ಲೈವ್ ಟೆಲಿಕಾಸ್ಟ್’ ಇರುತ್ತಿತ್ತು. ಸುಪ್ರೀಂ ಕೋರ್ಟ್ನ ತೀರ್ಪಿನಿಂದ ಹಿಡಿದು ಮಂದಿರದ ಮೊದಲ ಇಟ್ಟಿಗೆಯವರೆಗೆ ಎಲ್ಲವೂ ‘ಮೋದಿ ಗ್ಯಾರಂಟಿ’ ಮತ್ತು ಅವರ ಛಾತಿಗೆ ಸಂದ ಜಯ ಎಂದೇ ಬಿಂಬಿಸಲಾಗಿತ್ತು. ಸಂಸತ್ತಿನಲ್ಲಿ ನಿಂತು ಟ್ರಸ್ಟ್ ರಚನೆ ಘೋಷಿಸಿದ್ದೂ ಅವರೇ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಅವರಿಗೆ ಈ ಮಂದಿರದ ರಾಜಕೀಯ ಮೌಲ್ಯ ಏನೆಂಬುದು ಚೆನ್ನಾಗಿ ಗೊತ್ತು.

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ ಉದಯವಾಗಿದೆ, ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಿದೆ” ಎಂದು ಕೆಂಪುಕೋಟೆಯಿಂದ ಹಿಡಿದು ಅಯೋಧ್ಯೆಯವರೆಗೆ ಗಂಟಲು ಹರಿಯುವಂತೆ ಭಾಷಣ ಬಿಗಿಯಲಾಗಿತ್ತು.
ಆದರೆ, ಇಷ್ಟೆಲ್ಲಾ ದೊಡ್ಡ ಆರ್ಥಿಕ ಹಗರಣ ಮತ್ತು ಟ್ರಸ್ಟಿಗಳ ರಾಜೀನಾಮೆ ಪರ್ವ ನಡೆಯುತ್ತಿದ್ದರೂ ಪ್ರಧಾನಿಯವರು ಸೌಜನ್ಯಕ್ಕೂ ಈ ಬಗ್ಗೆ ತುಟಿಬಿಚ್ಚದೆ ನಿಗೂಢ ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಂದಿರ ನಿರ್ಮಾಣದ ಕ್ರೆಡಿಟ್ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕೆ ಮೌನ ವ್ರತ ಯಜಮಾನ್ರೆ? ಎಂದು ಕೇಳುವಂತಾಗಿದೆ. ಇದಕ್ಕಾದರೂ ಉತ್ತರಿಸುವರೇ ಪ್ರಧಾನಿಗಳು?
Inputs: NH


