ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ (ಜು.10) ಪಕ್ಷದ ಇತರ 12 ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಿದ್ದಾರೆ ಎಂದು ವರದಿಯಾಗಿದೆ.
Indianexpress.com ವರದಿಯ ಪ್ರಕಾರ, ಹೊಸದಾಗಿ ಫ್ರೀಝ್ ಮಾಡಲಾದ 12 ಖಾತೆಗಳು ದೇಶದ ಪ್ರಮುಖ ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಹರಡಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಟಿಎಂಸಿ ಪಕ್ಷಕ್ಕೆ ಸೇರಿದ ಒಟ್ಟು 15 ಬ್ಯಾಂಕ್ ಖಾತೆಗಳನ್ನು ಇದುವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಇವುಗಳಲ್ಲಿ ಸುಮಾರು 1,000 ಕೋಟಿ ರೂಪಾಯಿಗಳಷ್ಟು ಠೇವಣಿ ಇರುವುದು ಪತ್ತೆಯಾಗಿದೆ. ಪೊಲೀಸರು ಈ ಖಾತೆಗಳ ಮಾಲೀಕರ ವಿವರಗಳನ್ನು ಹಾಗೂ ಇವುಗಳಲ್ಲಿ ನಡೆದಿರುವ ಆರ್ಥಿಕ ವಹಿವಾಟುಗಳ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಟಿಎಂಸಿ ಪಕ್ಷಕ್ಕೆ ತನ್ನ ಮೂರು ಎಚ್ಡಿಎಫ್ಸಿ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಭಾಗಶಃ ಬಳಸಲು ಅನುಮತಿ ನೀಡಿದ ಮತ್ತು ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಸುಬ್ರತಾ ತಾಲೂಕ್ದಾರ್ ಅವರನ್ನು ಸೆಪ್ಟೆಂಬರ್ 30 ರವರೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಪೊಲೀಸರು ತಮ್ಮ ಪಕ್ಷದ ಮೂರು ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಿದ ನಂತರ, ಮಮತಾ ಬ್ಯಾನರ್ಜಿ ನೇತೃತ್ವದ ಬಣವು ತಕ್ಷಣದ ಮಧ್ಯಪ್ರವೇಶವನ್ನು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ, ಟಿಎಂಸಿ ಪಕ್ಷದ ಬಂಡಾಯ ಶಾಸಕರು ಮತ್ತು ನಾಯಕರ ಗುಂಪು ಪಕ್ಷದೊಳಗೆ “ಗಂಭೀರ ವಿವಾದ” ಇರುವುದನ್ನು ಉಲ್ಲೇಖಿಸಿ, ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡುವಂತೆ ಬ್ಯಾಂಕ್ಗಳಿಗೆ ಕೇಳಿಕೊಂಡಿದ್ದರು.
ಬಂಡಾಯಗಾರರು ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಧಾನಗರ ಪೊಲೀಸರ ಸೈಬರ್ ಕ್ರೈಂ ವಿಭಾಗಕ್ಕೂ ದೂರು ನೀಡಿದ್ದರು. ಇದಾಗಿ ಒಂದು ದಿನದ ನಂತರ, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಜಾರಿ ನಿರ್ದೇಶನಾಲಯವು (ಇಡಿ) ಸಹ ಪಕ್ಷದ ಮೂರು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ, ಹೈಕೋರ್ಟ್ ಅನುಮತಿ ನೀಡಿದರೂ ಟಿಎಂಸಿ ಪಕ್ಷಕ್ಕೆ 440 ಕೋಟಿ ರೂಪಾಯಿ ಹಣವನ್ನು ಇದುವರೆಗೆ ಬಳಸಲು ಸಾಧ್ಯವಾಗಿಲ್ಲ.
ಈ ಸಂಬಂಧ ಹಿರಿಯ ನ್ಯಾಯವಾದಿ ಕಿಶೋರ್ ದತ್ತಾ ಅವರು ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠದ ಮುಂದೆ ತುರ್ತು ವಿಚಾರಣೆಗೆ ಕೋರಿದ್ದು, ಹೈಕೋರ್ಟ್ನ ಇನ್ನೊಬ್ಬರು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು ಈಗಾಲೇ ನೀಡಿರುವ ಆದೇಶವು ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ್ದಾಗಿದ್ದರೆ, ಈ ಹೊಸ ಅರ್ಜಿಯು ಪಿಎಂಎಲ್ಎ ಅಡಿಯಲ್ಲಿ ಇಡಿ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸುತ್ತದೆ ಎಂದು ತಿಳಿಸಿದ್ದಾರೆ. ಈ ಅರ್ಜಿಯ ಮುಂದಿನ ವಿಚಾರಣೆಯು ಸೋಮವಾರ ನಡೆಯಲಿದೆ.
ಖಾಸಗಿ ವಿಮಾನಯಾನ ಸಂಸ್ಥೆಯೊಂದರ ಒಳಗೊಳ್ಳುವಿಕೆ ಹಾಗೂ ಎಂಬ್ರೇಯರ್ ಬಿಸಿನೆಸ್ ಜೆಟ್ ಮತ್ತು ಅಗಸ್ಟಾ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದ ಸುಮಾರು 160 ಕೋಟಿ ರೂಪಾಯಿಗಳ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಟಿಎಂಸಿ ಮೂರು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ.


