ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ಮಾಡಿದೆ.
ಇರಾನಿನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕ ಇರಾನ್ನ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಾದ ನಂತರ ಶಾಹಿದ್ ಬಘೈ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಆಸ್ಪತ್ರೆಯು ಕ್ಯಾನ್ಸರ್ ಮತ್ತು ರಕ್ತ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ವಿಶೇಷವಾಗಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿತ್ತು.
“ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಅಮೆರಿಕ ನಡೆಸಿದ ಆಕ್ರಮಣಕಾರಿ ದಾಳಿಯ ನಂತರ, ನಾವು ಆಸ್ಪತ್ರೆಗೆ ದಾಖಲಾದ 211 ರೋಗಿಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ” ಎಂದು ಆಸ್ಪತ್ರೆಯ ನಿರ್ದೇಶಕ ಮಜೀದ್ ಬೌಧರ್ ಹೇಳಿದರು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕುಟುಂಬದ ಇತರೆ ಸದಸ್ಯರನ್ನೂ ಸ್ಥಳಾಂತರಿಸಲಾಗಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು ಎಂದರು.
ಇದಕ್ಕೂ ಮೊದಲು, ಇರಾನ್ ಸೇನೆಯು ಬಹ್ರೇನ್ನಲ್ಲಿರುವ ಶೇಖ್ ಇಸಾ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಈ ಜಾಗವು ಯುಎಸ್ ಸೇನಾ ಪಡೆಗಳು ಬಳಸುವ ಪೇಟ್ರಿಯಾಟ್ ನೆಲೆಯಾಗಿದ್ದು, ಸೂಪರ್ ಹಾಕ್ ರಾಡಾರ್ಗಳಂತಹ ಸಂವಹನ ಮತ್ತು ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಮತ್ತೊಂದು ಹೇಳಿಕೆಯಲ್ಲಿ, ಅದೇ ನೆಲೆಯ ಮೇಲೆ “ವಿನಾಶಕಾರಿ ದಾಳಿ”ಯನ್ನು ಘೋಷಿಸಿತು. “ವಾಯು ವಿಚಕ್ಷಣ ಮತ್ತು ನಿಯಂತ್ರಣ ರಾಡಾರ್ಗಳ ಜೊತೆಗೆ ಆಕ್ರಮಣಕಾರಿ ಶತ್ರುಗಳ ಫೈಟರ್ ಜೆಟ್ಗಳ ಇಂಧನ ಟ್ಯಾಂಕ್ ಪಂಪಿಂಗ್ ಸ್ಟೇಷನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದೆ” ಎಂದು ಹೇಳಿಕೊಂಡಿತು.
ಅಹ್ವಾಜ್ ನಗರದ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಳಾಂತರಿಸುವ ಜೊತೆಗೆ ಇಲಾಮ್ ಪ್ರಾಂತ್ಯದ ಗಡಿಯ ಬಳಿ ಕರ್ಬಲಾ ಯಾತ್ರಿಕರಿಗೆ ನೀರು ಉತ್ಪಾದನಾ ಘಟಕದ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಅದು ಹೇಳಿದ್ದು, “ಯುದ್ಧ ಇನ್ನೂ ಮುಂದುವರೆದಿದೆ” ಎಂದು ಹೇಳಿಕೊಂಡಿದೆ. ಐಆರ್ಜಿಸಿಯು ಕುವೈತ್ ಮತ್ತು ಜೋರ್ಡಾನ್ ಮೇಲಿನ ದಾಳಿಗಳ ಹೊಣೆಯನ್ನೂ ಹೊತ್ತುಕೊಂಡಿದೆ.
ಕುವೈತ್ನಲ್ಲಿ, ತನ್ನ ಪಡೆಗಳು ಅಲಿ ಅಲ್ ಸೇಲಂನಲ್ಲಿರುವ ಯುಎಸ್ ವಾಯುನೆಲೆಯ ಉಪಗ್ರಹ ಸಂವಹನ ಕೇಂದ್ರ ಮತ್ತು ಮುನ್ನೆಚ್ಚರಿಕಾ ರಾಡಾರ್ ಮತ್ತು ಆಶ್-ಶು’ಐಬಾದಲ್ಲಿನ ಯುಎಸ್ ಮಿಲಿಟರಿ ಪಿಯರ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ಕಾರ್ಯಾಚರಣೆಯೊಂದಿಗೆ ಗುರಿಯಾಗಿಸಿಕೊಂಡು ನಾಶಪಡಿಸಿದವು ಎಂದು ಸೇನೆ ಹೇಳಿದೆ.
“ಶತ್ರುಗಳು ಪ್ಯಾಲೆಸ್ತೀನ್, ಲೆಬನಾನ್, ಇರಾನ್ ಮತ್ತು ಯೆಮೆನ್ ಜನರ ವಿರುದ್ಧ ಆಕ್ರಮಣ ಮಾಡಲು ನಿಮ್ಮ ಭೂಮಿಯನ್ನು ಬಳಸಲು ಬಿಡಬೇಡಿ” ಎಂದು ಕುವೈತ್ ಜನರಲ್ಲಿ ಇರಾನ್ ಮನವಿ ಮಾಡಿದೆ.
“ಅಮೆರಿಕದ ದುಷ್ಟತನಗಳ ಅಂತ್ಯದ ಆಧಾರದ ಮೇಲೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಕ್ಕೆ ಷರತ್ತುಬದ್ಧವಾಗಿದೆ” ಎಂದು ಇರಾನ್ ಕರೆ ನೀಡಿದ್ದು, ಈ ಪ್ರದೇಶಗಳಿಂದ ಅಮೆರಿಕವನ್ನು ಹಿಂದೆ ಸರಿಯುವಂತೆ ಮಾಡಬೇಕು ಎಂದು ನೆರೆ ರಾಷ್ಟ್ರಗಳನ್ನು ಒತ್ತಾಯಿಸಿತು.
ಅಮೆರಿಕದ ದಾಳಿಗಳು ಮುಂದುವರಿದರೆ ಅವರ ಎಲ್ಲಾ ನೆಲೆಗಳನ್ನು ‘ಪುಡಿಮಾಡುವುದಾಗಿ’ ಇರಾನಿನ ಮಿಲಿಟರಿ ವಕ್ತಾರ ಬೆದರಿಕೆ ಹಾಕಿದ್ದಾರೆ.
ಇರಾನ್ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಬ್ರಿಗೇಡಿಯರ್ ಜನರಲ್ ಇಬ್ರಾಹಿಂ ಝೋಲ್ಫಾಘರಿ, ಇರಾನ್ ಯುದ್ಧನೆಲೆಗಳ ಮೇಲೆ ಯುಎಸ್ ನಡೆಯುಸವ ಯಾವದೇ ದಾಳಿಗಳು ಈ ಪ್ರದೇಶದಲ್ಲಿ ದೊಡ್ಡ ವಿನಾಶಕ್ಕೆ ಕಾರಣವಾಗುತ್ತವೆ ಎಂದು ಬೆದರಿಕೆ ಹಾಕಿದ್ದಾರೆ.
“ಪಶ್ಚಿಮ ಏಷಿಯಾ ಪ್ರದೇಶದಲ್ಲಿರುವ ಅಮೆರಿಕದ ಎಲ್ಲ ನೆಲೆಗಳು ಇಸ್ಲಾಮಿಕ್ ಗಣರಾಜ್ಯ ಇರಾನ್ನ ಪ್ರಬಲ ಸಶಸ್ತ್ರ ಪಡೆಗಳ ಉಕ್ಕಿನ ಹೊಡೆತಗಳಿಂದ ಪುಡಿಪುಡಿಯಾಗುತ್ತವೆ. ಅದರ ಯಾವುದೇ ಕುರುಹು ಉಳಿಯುವುದಿಲ್ಲ, ಅವು ಮೊದಲಿನಿಂದಲೂ ಅಸ್ತಿತ್ವದಲ್ಲಿಲ್ಲ ಎಂಬಂತೆ ಮಾಡುತ್ತೇವೆ” ಎಂದು ಹೇಳಿದರು.
“ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಇರಾನ್ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದರು. “ಯಾವುದೇ ಸಂದರ್ಭಗಳಲ್ಲಿ ಮತ್ತು ಯಾವುದೇ ರೀತಿಯಲ್ಲಿ ವಿದೇಶಿ, ಪ್ರಾದೇಶಿಕೇತರ ದೇಶವಾಗಿ ಅಮೆರಿಕವು ಹೊರ್ಮುಜ್ ಜಲಸಂಧಿಯಲ್ಲಿ ಹಸ್ತಕ್ಷೇಪ ಮಾಡಲು ನಾವು ಅನುಮತಿಸುವುದಿಲ್ಲ. ಇದು ಇರಾನ್ನ ಅಜೇಯ ಕೆಂಪು ರೇಖೆ” ಎಂದು ಅವರು ಹೇಳಿಕೊಂಡಿದ್ದಾರೆ.
ಹಡಗುಗಳಿಗೆ ನಾವಿಕರನ್ನು ನಿಯೋಜಿಸದಂತೆ ಹಡಗು ಮಾಲೀಕರಿಗೆ ಕೇಂದ್ರ ಸರ್ಕಾರದ ಮನವಿ
ಯುಎಸ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಹಾರ್ಮುಜ್ ಜಲಸಂಧಿಯ ಮೂಲಕ ಹೋಗುವ ಹಡಗುಗಳಲ್ಲಿ ತನ್ನ ನಾವಿಕರನ್ನು ನಿಯೋಜಿಸದಂತೆ ಭಾರತ ಬುಧವಾರ ಹಡಗು ವ್ಯವಸ್ಥಾಪಕರು, ನೇಮಕಾತಿ ಕಂಪನಿಗಳು ಮತ್ತು ಹಡಗು ಮಾಲೀಕರಿಗೆ ಸರ್ಕಾರದ ಆದೇಶಿಸಿದೆ.
“ಮುಂದಿನ ಆದೇಶದವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸಲಾಗುವುದಿಲ್ಲ” ಎಂದು ಶಿಪ್ಪಿಂಗ್ ನಿರ್ದೇಶನಾಲಯವು ಆದೇಶದಲ್ಲಿ ತಿಳಿಸಿದೆ.
ಹಾರ್ಮುಜ್ನಲ್ಲಿ ಉದ್ವಿಗ್ನತೆ ಹೆಚ್ಚಿದ ಬಳಿಕ ಕಳೆದ ಮೂರು ದಿನಗಳಲ್ಲೇ ಈ ಪ್ರದೇಶದಲ್ಲಿ ಇಬ್ಬರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. “ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ … ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ನಾವಿಕರ ಹಿತಾಸಕ್ತಿಗಳನ್ನು ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ನಿರ್ದೇಶನಾಲಯ ಪರಿಗಣಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.


