ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು ನಡೆಸುತ್ತಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ವಕೀಲರಾದ ಸುಭಾಷ್ ಚಂದ್ರನ್ ಕೆ ಆರ್ ಮತ್ತು ಅನಿರುದ್ಧ್ ಕೆ ಪಿ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಐಷೆ ಘೋಷ್, ಕಣ್ಗಾವಲು ಪ್ರತಿಭಟನಾಕಾರರ ಮೂಲಭೂತ ಹಕ್ಕುಗಳ ಮೇಲೆ ಅಸಂವಿಧಾನಿಕ ಹಸ್ತಕ್ಷೇಪವಾಗಿದೆ ಎಂದು ವಾದಿಸಿದರು. ಸಿಜೆಪಿ ಆರಂಭದಿಂದಲೂ ದೇಶದಾದ್ಯಂತ ಆಯೋಜಿಸುತ್ತಿರುವ ಪ್ರತಿಭಟನೆಯಲ್ಲಿ ಘೋಷ್ ಸಕ್ರಿಯರಾಗಿ ಭಾಗವಾಹಿಸುತ್ತಿದ್ದಾರೆ.
ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ವಕೀಲರು ಮತ್ತು ನಿವೃತ್ತ ನ್ಯಾಯಾಧೀಶರ ಗುಂಪು ಪ್ರತಿಭಟನಾಕಾರರ ಪೊಲೀಸ್ ಕಣ್ಗಾವಲಿನ ಜೊತೆಗೆ ವೀಡಿಯೊಗ್ರಫಿಯನ್ನು ನಿಲ್ಲಿಸಲು ನಿರ್ದೇಶನಗಳನ್ನು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಸೂಚಿಸಿದೆ.
ನೀಟ್ ಪರೀಕ್ಷಾ ಅಕ್ರಮಗಳ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಒತ್ತಾಯಿಸಿ ಸತತ 19 ನೇ ದಿನವೂ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಈ ಅರ್ಜಿ ಸಲ್ಲಿಸಲಾಗಿದೆ.
ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಕೀಲರು ಮತ್ತು ನಿವೃತ್ತ ನ್ಯಾಯಾಧೀಶರ ನಿಯೋಗವು, 25-30 ಪೊಲೀಸ್ ಛಾಯಾಗ್ರಾಹಕರು ಹಾಜರಿದ್ದು, ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರು ನಿದ್ರಿಸುತ್ತಿರುವಾಗಲೂ ಅವರ ಫೋಟೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಿದರು.
“ವಿದ್ಯಾರ್ಥಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂದು ನೋಡಲು ನಾವು ಇಲ್ಲಿಗೆ ಬಂದಿದ್ದೇವೆ. ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಭೇಟಿ ಮಾಡಲು ಬಂದ ಎಲ್ಲರ ಛಾಯಾಚಿತ್ರಗಳನ್ನು ಪೊಲೀಸರು ತೆಗೆದುಕೊಳ್ಳುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ” ಎಂದು ವಕೀಲ ಸುಭಾಷ್ ಚಂದ್ರನ್ ವರದಿಗಾರರಿಗೆ ತಿಳಿಸಿದರು.
ನೀಟ್-ಯುಜಿ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿದ 13 ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಿ ಜೂನ್ 20 ರಂದು ಸಿಜೆಪಿ ಧರಣಿ ಆರಂಭವಾಯಿತು. ವಾಂಗ್ಚುಕ್ ಜೂನ್ 28 ರಂದು ಸೇರಿಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಗುರುವಾರದ ವೇಳೆಗೆ, ಪ್ರತಿಭಟನೆ 27 ನೇ ದಿನಕ್ಕೆ ತಲುಪಿತ್ತು. ಸಂಘಟಕರು ಉಲ್ಲೇಖಿಸಿದ ವೈದ್ಯಕೀಯ ವರದಿಗಳು ವಾಂಗ್ಚುಕ್ 9 ಕೆಜಿ ತೂಕ ಕಡಿಮೆಯಾಗಿದ್ದು, ರಕ್ತದಲ್ಲಿನ ಗ್ಲೂಕೋಸ್ 67 mg/dL ಮತ್ತು ಬಿಪಿ 107/70 ಕ್ಕೆ ಇಳಿದಿದೆ ಎಂದು ತಿಳಿಸಿವೆ.
ವಾಂಗ್ಚುಕ್ ಅವರ ವೈದ್ಯಕೀಯ ಸ್ಥಿತಿಯನ್ನು ಪ್ರತಿದಿನವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ, ಅವರ ಕ್ಷೀಣಿಸುತ್ತಿರುವ ಆರೋಗ್ಯವನ್ನು ಸುಧಾರಿಸಲು ಅಗತ್ಯವಿರುವ ಯಾವುದೇ ವೈದ್ಯಕೀಯ ಸೌಲಭ್ಯವನ್ನು ತಕ್ಷಣವೇ ಒದಗಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಬೇಕು ಎಂದು ದೆಹಲಿ ನ್ಯಾಯಾಲಯ ಬುಧವಾರ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ.
ವಾಂಗ್ಚುಕ್ ಅವರ ಆರೋಗ್ಯದ ಮೇಲೆ ಕಾಳಜಿ ವಹಿಸುವಂತೆ ಕೋರಿ ತುರ್ತು ಹಸ್ತಕ್ಷೇಪಕ್ಕಾಗಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ನಡೆಸುವಾಗ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಈ ನಿರ್ದೇಶನವನ್ನು ನೀಡಿತು.
ಸೋನಮ್ ಅವರ ಹದಗೆಡುತ್ತಿರುವ ಆರೋಗ್ಯದ ಕುರಿತು ಸೋಮವಾರ ಅರುಂಧತಿ ರಾಯ್, ನಸೀರುದ್ದೀನ್ ಶಾ, ರತ್ನ ಪಾಠಕ್ ಶಾ ಮತ್ತು ಜಯತಿ ಘೋಷ್ ಸೇರಿದಂತೆ ಗಣ್ಯ ನಾಗರಿಕರಿಂದ ಜಂಟಿ ಮನವಿಯನ್ನು ಸಲ್ಲಿಸಿದರು. “ಮುಂದಿನ ದೀರ್ಘ ಮತ್ತು ಹೆಚ್ಚು ಕಷ್ಟಕರವಾದ ಹೋರಾಟದ ಹಿತದೃಷ್ಟಿಯಿಂದ” ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಬೇಕು ಎಂದು ಅವರು ಪ್ರತಿಭಟನಾಕಾರರನ್ನು ಒತ್ತಾಯಿಸಿದರು. ಆದರೆ ಪ್ರಧಾನ್ ಅವರ ರಾಜೀನಾಮೆಗೆ ಕೊಡುವವರೆಗೂ ಉಪವಾಸ ನಿಲ್ಲಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ವಾಂಗ್ಚುಕ್ ಅವರನ್ನು “ರಾಷ್ಟ್ರೀಯ ಸಂಪತ್ತು” ಎಂದು ಕರೆದು ಉಪವಾಸ ಕೈಬಿಡುವಂತೆ ಮನವಿ ಮಾಡಿದರು.
ಸಿಜೆಪಿ ಪ್ರತಿಭಟನೆಗೆ ಹೆಚ್ಚುತ್ತಿರುವ ರಾಜಕೀಯ ಬೆಂಬಲ
ವಾರಾಂತ್ಯದಲ್ಲಿ ಎಸ್ಪಿ ಸಂಸದ ಪುಷ್ಪೇಂದ್ರ ಸರೋಜ್, ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ, ಎಎಪಿ ನಾಯಕರಾದ ಅತಿಶಿ ಮತ್ತು ಸಂಜಯ್ ಸಿಂಗ್ ಅವರು ಭೇಟಿ ನೀಡು ಆಂದೋಲನಕ್ಕೆ ಬೆಂಬಲ ಸೂಚಿಸಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆಂಬಲ ಕೋರಿ ಸಿಜೆಪಿ ಪತ್ರ ಬರೆದಿದೆ.


