ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ.
ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತ ಕುಮಾರಿ (44) ಅವರು ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಬಿಎಲ್ಒ (BLO – ಬೂತ್ ಮಟ್ಟದ ಅಧಿಕಾರಿ) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಮಂತ ಕುಮಾರಿ ಅವರ ಮೇಲೆ, ಎಸ್ಐಆರ್ ಪ್ರಕ್ರಿಯೆಯನ್ನು ತುರ್ತಾಗಿ ಮುಗಿಸುವಂತೆ ಮೇಲಾಧಿಕಾರಿಗಳು ನಿರಂತರವಾಗಿ ತೀವ್ರ ಒತ್ತಡ ಹೇರುತ್ತಿದ್ದರು. ಈ ಅಮಾನವೀಯ ಕಿರುಕುಳ ಹಾಗೂ ಕಾರ್ಯಭಾರದಿಂದಾಗಿ ಶಿಕ್ಷಕಿಗೆ ರಕ್ತದೊತ್ತಡ (BP) ಮತ್ತು ಸಕ್ಕರೆ ಕಾಯಿಲೆ (Sugar) ಏಕಾಏಕಿ ಹೆಚ್ಚಾಗಿ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
“SIR ಕೆಲಸವನ್ನು ಬೇಗ ಬೇಗ ಮುಗಿಸಬೇಕು ಎಂದು ಅಧಿಕಾರಿಗಳು ನಿರಂತರವಾಗಿ ಟಾರ್ಗೆಟ್ ನೀಡಿ ಕಿರುಕುಳ ನೀಡುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸದಿಂದ ಬಿಡುಗಡೆ ಮಾಡಲು ಒಪ್ಪಲಿಲ್ಲ. ಈ ಕೆಲಸದಿಂದ ತಮ್ಮನ್ನು ಮುಕ್ತಿಗೊಳಿಸುವಂತೆ ಅವರು ಅಧಿಕಾರಿಗಳಲ್ಲಿ ಅಂಗಲಾಚಿದ್ದರು. ಮೇಲಾಧಿಕಾರಿಗಳು ನೀಡಿದ ಈ ಮಾನಸಿಕ ಕಿರುಕುಳ ಮತ್ತು ತೀವ್ರ ಒತ್ತಡವೇ ಅವರ ಹೃದಯಾಘಾತಕ್ಕೆ ನೇರ ಕಾರಣ” ಎಂದು ಮೃತ ಶಿಕ್ಷಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.


