ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಕುರಿತು ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಲು ಪ್ರತಿಪಕ್ಷಗಳು ನಿರಂತರವಾಗಿ ಪ್ರಯತ್ನಿಸಿದ್ದರಿಂದ ಮಂಗಳವಾರ ಬೆಳಗ್ಗೆ ಸದನವನ್ನು ಮುಂದೂಡಬೇಕಾಯಿತು. ನಂತರ ಮಧ್ಯಾಹ್ನ 2 ಗಂಟೆಗೆ ಲೋಕಸಭೆಯಲ್ಲಿ ಕಲಾಪವನ್ನು ಪುನರಾರಂಭಿಸಿತು.
2024 ರ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) (ತಿದ್ದುಪಡಿ) ಮಸೂದೆ, 2026 ರ ಕುರಿತು ಲೋಕಸಭೆಯಲ್ಲಿ ಚರ್ಚೆ ಪ್ರಾರಂಭವಾಗಿದೆ. ಇದು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024 ಅನ್ನು ತಿದ್ದುಪಡಿಗೆ ಪ್ರಯತ್ನಿಸುತ್ತದೆ.
ಲೋಕಸಭೆ ಕಾರ್ಯವಿಧಾನಗಳು ಪ್ರಾರಂಭವಾಗುತ್ತಿದ್ದಂತೆ, ಪ್ರಮುಖವಾದ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಇಲ್ಲದಿರುವುದನ್ನು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಆಕ್ಷೇಪಿಸಿದರು.
ಸದನದಲ್ಲಿ ಮಾತನಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, “ಈ ಪೀಳಿಗೆಯ ಯುವಕರು ಸ್ಪರ್ಧೆಗೆ ಹೆದರುವುದಿಲ್ಲ, ಭ್ರಷ್ಟಾಚಾರಕ್ಕೆ ಹೆದರುತ್ತಾರೆ. ಯುವಜನರು ವ್ಯವಸ್ಥೆಯನ್ನು ನಂಬುವುದನ್ನು ನಿಲ್ಲಿಸಿದಾಗ, ಪ್ರಜಾಪ್ರಭುತ್ವವು ದುರ್ಬಲಗೊಳ್ಳುತ್ತದೆ. ಈ ಮಸೂದೆಯು 12 ವರ್ಷಗಳ ಕೇಂದ್ರ ಸರ್ಕಾರದ ಅಸಮರ್ಥತೆಯನ್ನು ತೊಳೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಮಸೂದೆಯಲ್ಲಿನ ಲೋಪದೋಷಗಳ ಕುರಿತು ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ದೇಶದ ವಿದ್ಯಾರ್ಥಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗಿ ಏಕೆ ಪರಿಗಣಿಸಲಾಗುತ್ತಿದೆ? ಯುವಜನರ ವಿರುದ್ಧ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
“ಪ್ರತಿ ಪೀಳಿಗೆಯೂ ತನ್ನದೇ ಆದ ರಿಪೋರ್ಟ್ ಕಾರ್ಡ್ ಬರೆಯುತ್ತದೆ. ಪ್ರಸ್ತುತ ಪೀಳಿಗೆ ಬರೆಯುತ್ತಿರುವ ರಿಪೋರ್ಟ್ ಕಾರ್ಡ್ನಲ್ಲಿ ಕೇವಲ ಒಂದು ಪದ ಬರೆಯಲಾಗುತ್ತದೆ” ಎಂದು ಬ್ಯಾನರ್ಜಿ ಹೇಳಿದರು.
ಬಿಜೆಪಿ ಮೇಲೆ ಎಸ್ಪಿ ಪ್ರತಿದಾಳಿ
ವಿದ್ಯಾರ್ಥಿಗಳ ಮೇಲಿನ ದಾಳಿ ಕುರಿತು ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಹೇಳಿಕೆಗಳನ್ನು ಮುಗಿಸುವ ಮೊದಲು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸುವ ಮೂಲಕ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಕಾನೂನನ್ನು ಪರಿಚಯಿಸುವುದು ಅಥವಾ ತುರ್ತು ಪರಿಸ್ಥಿತಿ ಹೇರುವುದು ಉತ್ತಮವೇ ಎಂದು ರಿಜಿಜು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಖಿಲೇಶ್, “ವಿದ್ಯಾರ್ಥಿಗಳ ಮೇಲೆ ಬಳಸಲಾದ ಬಲವು ತುರ್ತು ಪರಿಸ್ಥಿತಿಯಲ್ಲಿ ನಡೆದದ್ದಕ್ಕಿಂತ ಕಡಿಮೆಯಿಲ್ಲ” ಎಂದು ಹೇಳಿದರು.
“ದಲಿತರು ಮತ್ತು ಬಡ ವಿದ್ಯಾರ್ಥಿಗಳು ಮುಂದುವರಿಯುವುದನ್ನು ಬಯಸದ ಕಾರಣ ಸರ್ಕಾರವು ಪ್ರಾಥಮಿಕ ಶಾಲೆಗಳನ್ನು ನಿರಂತರವಾಗಿ ಮುಚ್ಚುತ್ತಿದೆ” ಎಂದು ಅಖಿಲೇಶ್ ಯಾದವ್ ಆರೋಪಿಸಿದರು.
ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಗೌರವ್ ಗೊಗೊಯ್
ಪೇಪರ್ ಸೋರಿಕೆ ವಿರೋಧಿ ಮಸೂದೆಯ ಬಗ್ಗೆ ಅಸ್ಸಾಂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಿಜವಾದ ಸಮಸ್ಯೆಯನ್ನು ಒಪ್ಪಿಕೊಳ್ಳದ ಬಿಜೆಪಿಯದ್ದು ಕಣ್ಣೊರೆಸುವ ತಂತ್ರ ಎಂದು ಕರೆದರು.
“ಕೇಂದ್ರದ ಪೇಪರ್ ಸೋರಿಕೆ ವಿರೋಧಿ ಕಾನೂನು ಪರೀಕ್ಷಾ ಅಕ್ರಮಗಳನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ” ಎಂದು ಗೊಗೊಯ್ ಹೇಳಿಕೊಂಡರು.
“ವಿದ್ಯಾರ್ಥಿಗಳನ್ನು ಬೀದಿಗಿಳಿಯುವಂತೆ ಒತ್ತಾಯಿಸಲಾಗುತ್ತಿದೆ, ಅವರ ನೋವನ್ನು ಅರ್ಥಮಾಡಿಕೊಳ್ಳಬೇಕು” ಎಂದು ಗೊಗೊಯ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
“ಶಿಕ್ಷಣ ಸುಧಾರಣೆಗಳ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿಲ್ಲ, ಮೋದಿ ತನ್ನ ಸಂಪುಟದ ಮಂತ್ರಿಗಳಿಗೆ ಇನ್ಸ್ಟಾಗ್ರಾಮ್ ಕಡೆಗೆ ಗಮನಹರಿಸುವಂತೆ ಕೇಳುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
ಬಳಿಕ, ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯ ಮೇಲಿನ ಚರ್ಚೆಯನ್ನು ಲೋಕಸಭೆಯಲ್ಲಿ ಆರಂಭಿಸಲಾಯಿತು. ವಿದ್ಯಾರ್ಥಿಗಳು ಮತ್ತು ಯುವಕರ ಕಲ್ಯಾಣವನ್ನು ಕಾಪಾಡುವ ಸರ್ಕಾರದ ಬದ್ಧತೆಯ ಪುನರ್ ದೃಢೀಕರಣ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಮರ್ಥಿಸಿಕೊಂಡರು.
ಭಾರತದ ಇತಿಹಾಸದಲ್ಲಿ ಇದು ಮೊದಲನೆಯದು ಎಂದು ಸಂಸತ್ತನ್ನುದ್ದೇಶಿಸಿ ಮಾತನಾಡಿದ ಸಿಂಗ್, “ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಇದು ಒಂದು ಮೈಲಿಗಲ್ಲು ಶಾಸನ” ಎಂದು ಹೇಳಿದರು.
“ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ವ್ಯತ್ಯಾಸಗಳಿಂದಾಗಿ ಕಾಲಾನಂತರದಲ್ಲಿ ರಾಷ್ಟ್ರೀಯ ಗಮನಕ್ಕೆ ಬಂದ ಹಲವಾರು ಪರೀಕ್ಷೆಗಳನ್ನು ಜಿತೇಂದ್ರ ಸಿಂಗ್ ಪಟ್ಟಿ ಮಾಡಿದರು. 2026 ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಇದೇ ಮೊದಲಲ್ಲ” ಎಂದು ಹೇಳಿದರು.
“ಬೇರೆಬೇರೆ ಪಕ್ಷಗಳು ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಗಳು ನಡೆದಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯು ವಿದ್ಯಾರ್ಥಿಗಳು ಮತ್ತು ಯುವಜನರ ಕಲ್ಯಾಣ ಕಾಪಾಡುವ ಸರ್ಕಾರದ ಬದ್ಧತೆಯ ಪುನರ್ ದೃಢೀಕರಣವಾಗಿದೆ. ಕಾನೂನನ್ನು ಹೆಚ್ಚು ಕಠಿಣಗೊಳಿಸಲು ತಿದ್ದುಪಡಿಯನ್ನು ತರಲಾಗುತ್ತಿದೆ” ಎಂದು ಸಿಂಗ್ ಹೇಳಿದರು.


