ಹೈದರಾಬಾದ್ನ ಪ್ರತಿಷ್ಠಿತ NALSAR ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ತಾವು ಈ ಆಹ್ವಾನವನ್ನು ಸ್ವೀಕರಿಸಿಲ್ಲ, ಹೀಗಾಗಿ ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಸ್ಪಷ್ಟಪಡಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ನಲ್ಲಿ ನಡೆಯಬೇಕಿದ್ದ ಈ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅವರನ್ನು ಆಹ್ವಾನಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಆದರೆ, NALSARನ 2026ರ ಬ್ಯಾಚ್ನ ವಿದ್ಯಾರ್ಥಿಗಳು ಈ ಆಹ್ವಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕುಲಪತಿ ಹಾಗೂ ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದರು.
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವೇನು?
ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಿರುದ್ಯೋಗಿ ಯುವಕರು ಹಾಗೂ ವೃತ್ತಿಪರ ಸ್ಥಾನಮಾನವಿಲ್ಲದ ವ್ಯಕ್ತಿಗಳನ್ನು ‘ಜಿರಳೆಗಳು’ ಮತ್ತು ವ್ಯವಸ್ಥೆಯ ಮೇಲಿನ ‘ಪರಾವಲಂಬಿಗಳು’ ಎಂದು ಸಿಜೆಐ ಹೋಲಿಸಿದ್ದರು ಎನ್ನಲಾದ ಹೇಳಿಕೆಯನ್ನು ವಿದ್ಯಾರ್ಥಿಗಳು ಖಂಡಿಸಿದ್ದರು.
ಅಲ್ಲದೆ, ಜುಲೈ 20ರಂದು ಪೊಲೀಸ್ ಕ್ರಮಗಳ ಕುರಿತು ವಿದ್ಯಾರ್ಥಿಗಳು ನಡೆಸಿದ ಮೆರವಣಿಗೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸಿಜೆಐ ನೀಡಿದ್ದ ಅಸಂವೇದನಾಶೀಲ ಹೇಳಿಕೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. “ವಿದ್ಯಾರ್ಥಿಗಳ ಬಗ್ಗೆ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಯುವಕರ ಬಗ್ಗೆ ನಿರಾಸಕ್ತಿ ತಳೆದಿರುವ ವ್ಯಕ್ತಿಯಿಂದ ಶೈಕ್ಷಣಿಕ ಪದವಿ ಸ್ವೀಕರಿಸಲು ನಮಗೆ ಮನಸ್ಸಿಲ್ಲ” ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು.
ಬಾರ್ ಕೌನ್ಸಿಲ್ ಎಚ್ಚರಿಕೆ ಮತ್ತು ಯು-ಟರ್ನ್!
ವಿದ್ಯಾರ್ಥಿಗಳ ಈ ವಿರೋಧದ ನಡುವೆಯೇ ಎಂಟ್ರಿ ಕೊಟ್ಟಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಸಿಜೆಐ ಆಹ್ವಾನವನ್ನು ವಿರೋಧಿಸಿದ ವಿದ್ಯಾರ್ಥಿಗಳ ವಿರುದ್ಧ ತನಿಖೆ ನಡೆಸಬೇಕು ಹಾಗೂ ಅವರನ್ನು ವಕೀಲರಾಗಿ ನೋಂದಾಯಿಸಿಕೊಳ್ಳುವುದರಿಂದ ಅನರ್ಹಗೊಳಿಸಬೇಕು ಎಂದು NALSAR ಕುಲಪತಿಗೆ ಪತ್ರ ಬರೆದಿದ್ದರು.
ಆದರೆ, BCIಯ ಈ ಬೆದರಿಕೆ ಪತ್ರಕ್ಕೆ ದೇಶಾದ್ಯಂತ ಕಾನೂನು ಕ್ಷೇತ್ರದಲ್ಲಿ ವ್ಯಾಪಕ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಿಸಿಐ ತಕ್ಷಣವೇ ತನ್ನ ಸುತ್ತೋಲೆಯನ್ನು ಹಿಂಪಡೆದುಕೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ತಾವು ಆಹ್ವಾನವನ್ನೇ ಸ್ವೀಕರಿಸಿಲ್ಲವೆಂದು ಸಿಜೆಐ ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.


