AAP ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಅವರ ಮನೆಯಿಂದ ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ. ಹಿರಿಯ ವಕೀಲ ಶಾದಾನ್ ಫರಾಸತ್ ಅವರು ಮುಖ್ಯನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠದ ಎದುರು ಈ ವಿಷಯವನ್ನು ಪ್ರಸ್ತಾಪಿಸಿ, ಅರ್ಜಿಯ ತಕ್ಷಣದ ವಿಚಾರಣೆಗೆ ಮನವಿ ಮಾಡಿದರು.
ಸ್ವಚ್ಛತಾ ಕಾರ್ಮಿಕನೊಬ್ಬನ ಸಾವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕೊಂಡ್ಲಿ ಕ್ಷೇತ್ರದ ಎಎಪಿ ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಬೆಳಗಿನ ಜಾವ 4:30ರ ಸುಮಾರಿಗೆ ಯಾವುದೇ ಸಮವಸ್ತ್ರ ಧರಿಸದ ಸುಮಾರು 20 ರಹಸ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಅವರ ಸುಳಿವು ಸಿಗುತ್ತಿಲ್ಲ ಎಂದು ಫರಾಸತ್ ಕೋರ್ಟ್ಗೆ ತಿಳಿಸಿದರು. ದೆಹಲಿ ಪೊಲೀಸರು ಶಾಸಕರ ಮನೆಗೆ ನುಗ್ಗಿ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಡಿವಿಆರ್ (DVR) ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಪ್ರಧಾನಿ ಮೋದಿ ಅವರೇ, ನಮ್ಮ ಶಾಸಕ ಕುಲ್ದೀಪ್ ಕುಮಾರ್ ಎಲ್ಲಿದ್ದಾರೆ? ಬೆಳಗಿನ ಜಾವ 4 ಗಂಟೆಗೆ ನಿಮ್ಮ ದೆಹಲಿ ಪೊಲೀಸರು ಅವರನ್ನು ಮನೆಯಿಂದ ಕರೆದೊಯ್ದಿದ್ದಾರೆ, ಸಿಸಿಟಿವಿಗಳನ್ನು ಒಡೆದು ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಯೊಬ್ಬರನ್ನೇ ಈ ರೀತಿ ಯಾವುದೇ ಕಾರಣವಿಲ್ಲದೆ ಕರೆದೊಯ್ದರೆ ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿದೆ? ಇಂತಹ ಗೂಂಡಾಗಿರಿಯನ್ನು ದೇಶ ಸಹಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದ ಮಾಜಿ ಮುಖ್ಯಮಂತ್ರಿ ಅತಿಶಿ ಹಾಗೂ ದೆಹಲಿ ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್, ಪೊಲೀಸರು ಕಮಿಷನರ್ ಮಟ್ಟದ ಅಧಿಕಾರಿಗಳ ಫೋನ್ ಕ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಲ್ಯಾಣಪುರಿಯಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅನಿಲ್ ಎಂಬ ಸ್ವಚ್ಛತಾ ಕಾರ್ಮಿಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಸರ್ಕಾರಿ ಕೆಲಸಕ್ಕೆ ಆಗ್ರಹಿಸಿ ಶಾಸಕ ಕುಲ್ದೀಪ್ ಕುಮಾರ್ ಪ್ರತಿಭಟನೆ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಎಪಿ ನಾಯಕರು ದೂರಿದ್ದಾರೆ.


