2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ (Corruption Rate Card) ಜಾಹೀರಾತಿನಿಂದಾಗಿ ತಾನು 40 ಕ್ಷೇತ್ರಗಳಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗುರುವಾರ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರತಿಪಾದಿಸಿದೆ. ಬಿಜೆಪಿಯನ್ನು ಪ್ರತಿನಿಧಿಸಿದ ವಕೀಲ ವಿನೋದ್ ಕುಮಾರ್ ಎಂ ಅವರು, ಚುನಾವಣೆಗೆ ಐದು ದಿನಗಳ ಮೊದಲು ಕಾಂಗ್ರೆಸ್ ನಿರಂತರವಾಗಿ ಈ ಪತ್ರಿಕಾ ಜಾಹೀರಾತುಗಳನ್ನು ಪ್ರಕಟಿಸಿತು, ಈ ಜಾಹೀರಾತಿನ ದುಷ್ಪರಿಣಾಮದಿಂದಾಗಿಯೇ ನಾವು 40 ಕ್ಷೇತ್ರಗಳನ್ನು ಕಳೆದುಕೊಂಡೆವು” ಎಂದು ನ್ಯಾಯಪೀಠದ ಗಮನಕ್ಕೆ ತಂದರು.
2023ರಲ್ಲಿ ಬಿಜೆಪಿ ನೀಡಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಬಿಜೆಪಿ ಈ ವಾದವನ್ನು ಮಂಡಿಸಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅಂದರೆ ಈ ಜಾಹೀರಾತು ಇಲ್ಲದಿದ್ದರೆ ನೀವು ಆ 40 ಕ್ಷೇತ್ರಗಳನ್ನು ಗೆಲ್ಲುತ್ತಿದ್ದಿರಾ? ಎಂದು ಪ್ರಶ್ನಿಸಿದಾಗ, ವಕೀಲರು ಹೌದು, ನಾವು ಗೆಲ್ಲುತ್ತಿದ್ದೆವು. ಕನಿಷ್ಠ ಶೇ.1 ರಷ್ಟೂ ಸತ್ಯವಿಲ್ಲದ ಈ ಮಾನನಷ್ಟ ಲೇಖನಗಳು ಚುನಾವಣೆಗೆ ಕೇವಲ ಮೂರು ದಿನಗಳ ಮೊದಲು ಪ್ರಕಟವಾದ ಕಾರಣ, ಇವು ಸುಳ್ಳು ಆರೋಪಗಳೆಂದು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಲು ನಮಗೆ ಸಮಯವೇ ಸಿಗಲಿಲ್ಲ. ಈ ಲೇಖನದ ಪ್ರಭಾವದಿಂದಾಗಿಯೇ ರಾಜ್ಯದಲ್ಲಿ ಸರ್ಕಾರವೇ ಬದಲಾಯಿತು” ಎಂದು ವಾದಿಸಿದರು.
ಇನ್ನೊಂದೆಡೆ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶಶಿ ಕಿರಣ್ ಶೆಟ್ಟಿ ಅವರು, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ದೂರನ್ನು ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ಈಗಾಗಲೇ ರದ್ದುಗೊಳಿಸಿದೆ. ಹೀಗಾಗಿ ಅದೇ ರೀತಿಯ ಪರಿಹಾರವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ವಿಸ್ತರಿಸಬೇಕು ಎಂದು ಕೋರಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ವಕೀಲರು, ಇದು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿರುವ ಪ್ರಕರಣವಾದ್ದರಿಂದ ವಿಚಾರಣೆಯ ಮೂಲಕವೇ ಸತ್ಯಾಸತ್ಯತೆ ನಿರ್ಧಾರವಾಗಬೇಕು ಎಂದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದೆಲ್ಲವೂ ಕೇವಲ ಪರಸ್ಪರ ಕೆಸರೆರಚಾಟವಷ್ಟೇ, ನೀವೆಲ್ಲರೂ ರಾಜಕೀಯ ಬದಿಗಿಟ್ಟು ಜನರ ಕಲ್ಯಾಣ ಹಾಗೂ ನೀತಿಗಳ ಮೇಲೆ ಕೆಲಸ ಮಾಡಿದರೆ ಇಂತಹ ಪ್ರಕರಣಗಳು ಎದುರಾಗುವುದಿಲ್ಲ ಎಂದು ಖಾರವಾಗಿ ಮಾರ್ಮಿಕವಾಗಿ ನುಡಿದು, ತೀರ್ಪನ್ನು ಕಾಯ್ದಿರಿಸಿದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ವರ್ಗಾವಣೆಗೆ ನಿರ್ದಿಷ್ಟ ದರ ಹಾಗೂ ಕಮಿಷನ್ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪತ್ರಿಕೆಗಳಲ್ಲಿ ‘ಪೇಸಿಎಂ’ ಹಾಗೂ ‘ರೇಟ್ ಕಾರ್ಡ್’ ಜಾಹೀರಾತುಗಳನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಆದರೆ, ಕಳೆದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ವಿರುದ್ಧದ ದೂರನ್ನು ವಜಾಗೊಳಿಸಿದ್ದ ಹೈಕೋರ್ಟ್, ರಾಹುಲ್ ಗಾಂಧಿ ಅವರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ಹೇಳಿ ಆ ಪ್ರಕರಣವನ್ನು ರದ್ದುಗೊಳಿಸಿತ್ತು.


