ಜುಲೈ 20ರ ಸಂಸತ್ ಚಲೋ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಅಗಸ್ಟ್ 20) ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ, ದೆಹಲಿ ಪೊಲೀಸರು FIR ದಾಖಲಿಸಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ರಾಹುಲ್ ಗಾಂಧಿ, ನವದೆಹಲಿಯ ಡಿಸಿಪಿ (DCP) ಕಚೇರಿಯ ಹೊರಗೆ ಧರಣಿ ಕುಳಿತರು.
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪೆಲೆಟ್ ಗನ್ ದಾಳಿಗೊಳಗಾಗಿ ಗಾಯಗೊಂಡ ಸಾಹಿಲ್ ಲೋಚಾವ್ ಎಂಬ ವಿದ್ಯಾರ್ಥಿಯೊಂದಿಗೆ ರಾಹುಲ್ ಗಾಂಧಿ ಆಗಮಿಸಿದ್ದರು. ಅವರು ಮೊದಲು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ತೆರಳಿ, ನಂತರ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿರುವ ಸೆಂಟ್ರಲ್ ದೆಹಲಿ ಉಪ ಪೊಲೀಸ್ ಕಮಿಷನರ್ (DCP) ಕಚೇರಿಗೆ ತೆರಳಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ರಾಹುಲ್ ಗಾಂಧಿ ಅವರು ಮೊದಲು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲಿ ಪ್ರಕರಣ ದಾಖಲಾಗದ ಕಾರಣ ಅವರು ಡಿಸಿಪಿ (ಸೆಂಟ್ರಲ್) ಭೇಟಿಯಾಗಲು ತೆರಳಿದರು. ಪ್ರಕರಣ ದಾಖಲಾಗುವವರೆಗೆ ಅವರು ಹಿಂತಿರುಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ನಜಾಫ್ಗಢದ 19 ವರ್ಷದ ನಿವಾಸಿ ಸಾಹಿಲ್ ಲೋಚಾವ್ ಜುಲೈ 20ರ ಮೆರವಣಿಗೆಯ ವೇಳೆ ಬಲಗಣ್ಣಿಗೆ ಪೆಲೆಟ್ ಗನ್ನಿಂದ ಗಂಭೀರ ಗಾಯಗೊಂಡಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದ್ದರೂ ಕಣ್ಣಿನೊಳಗೆ ಚೂರುಗಳು (shrapnel) ಇನ್ನು ಹಾಗೆಯೇ ಉಳಿದುಕೊಂಡಿವೆ. ಸಾಹಿಲ್ ಆಗಸ್ಟ್ 14 ರಂದು ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರೂ, ತನಿಖಾಧಿಕಾರಿಯ (Investigating Officer) ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದರು. ನಂತರ ಆಗಸ್ಟ್ 17 ರಂದು ಇಮೇಲ್ ಮತ್ತು ಫೋನ್ ಮೂಲಕ ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಇದು ಜ್ಞಾನಾರ್ಹ ಅಪರಾಧ (Cognisable offence) ಆಗಿರುವುದರಿಂದ ಎಫ್ಐಆರ್ ದಾಖಲಿಸುವುದು ಕಡ್ಡಾಯ, ಆದರೆ ದೆಹಲಿ ಪೊಲೀಸರು ಅದನ್ನು ಮಾಡುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಸಂತ್ರಸ್ತ ವಿದ್ಯಾರ್ಥಿಯ ನೆರವಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಜುಲೈ 20ರ ಸಂಸತ್ ಚಲೋ ವೇಳೆ ಪೆಲೆಟ್ ಗನ್ ಬಳಸಿರುವುದು ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ರಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯೊಬ್ಬರು ಪೆಲೆಟ್ ಗನ್ನಿಂದ 7 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ 5 ಗುಂಡುಗಳು ಪ್ರತಿಭಟನಾಕಾರರಿಗೆ ತಗಲಿವೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಕಂಡುಕೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷಗಳು ಕೇಂದ್ರ ಸರ್ಕಾರವನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡಿವೆ. ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಉಸ್ತುವಾರಿ ವಹಿಸಿರುವ ಅಮಿತ್ ಶಾ ಅವರ ರಾಜೀನಾಮೆಗೆ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದು, ಈ ವಿಷಯವು ಸಂಸತ್ತಿನ ಮುಂಗಾರು ಅಧಿವೇಶನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿತ್ತು.


