ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ ಬೆನ್ನಲ್ಲೇ, ಸಂಜಯ್ ಆಝಾದ್ ಅವರ ಕುಟುಂಬಕ್ಕೆ ಗೂಂಡಾಗಳು ಬೆದರಿಕೆ ಹಾಕಲು ಮುಂದಾಗಿದ್ದಾರೆ. ಶನಿವಾರ ರಾತ್ರಿ ಗೂಂಡಾಗಳ ಗುಂಪೊಂದು ತಮ್ಮ ಮನೆಯನ್ನು ಸುತ್ತುವರಿದು ಕಲ್ಲು ಮತ್ತು ಇಟ್ಟಿಗೆ ತೂರಾಟ ನಡೆಸಿದೆ ಎಂದು ಸಂಜಯ್ ಅವರ ಅಪ್ರಾಪ್ತ ಪುತ್ರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘X’ನಲ್ಲಿ ಸರಣಿ ವಿಡಿಯೊಗಳನ್ನು ಹಂಚಿಕೊಂಡಿರುವ ಆಕೆ, ಗೂಂಡಾಗಳು ನಮ್ಮ ಮನೆಯನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ. ದೆಹಲಿ ಹಾಗೂ ಘಾಝಿಯಾಬಾದ್ ಪೊಲೀಸರು ತಕ್ಷಣವೇ ನಮಗೆ ಭದ್ರತೆ ಮತ್ತು ರಕ್ಷಣೆ ನೀಡಬೇಕು ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ನಮ್ಮ ಪೋಷಕರಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ? ಅವರ ಜೀವಕ್ಕೆ ಕಂಟಕ ಬಂದರೆ ಏನು ಮಾಡುವುದು? ಎಂದು ಆಕೆ ದೆಹಲಿ ಆಡಳಿತ ಹಾಗೂ ಪೊಲೀಸರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಸಂತ್ರಸ್ತ ಕುಟುಂಬದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, NSUI ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಖರ್ ಅವರು ಶನಿವಾರ ಸಂಜಯ್ ಆಝಾದ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಪೊಲೀಸರ ವಿಳಂಬ ಧೋರಣೆ ಹಾಗೂ ಸಂಘಪರಿವಾರದ ಗೂಂಡಾವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಸಂಜಯ್ ಅವರ ಮೇಲೆ ತಾನೇ ಹಲ್ಲೆ ನಡೆಸಿದ್ದಾಗಿ ಸ್ವತಂತ್ರ ಭಾರದ್ವಾಜ್ ಸ್ವತಃ ಒಪ್ಪಿಕೊಂಡಿದ್ದಾನೆ. ಆದರೂ ಪೊಲೀಸರು ಆತನ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿದಿದ್ದರು. ಬಿಜೆಪಿ ಸರ್ಕಾರ ಇಂತಹ ಗೂಂಡಾಗಳನ್ನು ಸತತವಾಗಿ ರಕ್ಷಿಸುತ್ತಿದೆ ಎಂಬ ಅನುಮಾನ ಇದರಿಂದ ಸ್ಪಷ್ಟವಾಗುತ್ತದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ ಬಳಿಕವಷ್ಟೇ ದೆಹಲಿ ಪೊಲೀಸರು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ” ಎಂದು ಜಾಖರ್ ಆರೋಪಿಸಿದರು.
ಪ್ರತಿಭಟನಾಕಾರರು ಮತ್ತು ಸಂತ್ರಸ್ತರ ಮೇಲೆಯೇ ದಾಳಿ ನಡೆಸುವ ಇಂತಹ ಹಿಂಸಾತ್ಮಕ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ ಪೂರ್ಣ ಪ್ರಮಾಣದ ಪೊಲೀಸ್ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರಗೊಂಡಿದೆ.


