ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ನಾಳೆಗೆ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನಗಳ ಪೂರೈಸುವ ಸಂಭ್ರಮಾಚರಣೆಯ ಸಿದ್ಧತೆಯಲ್ಲಿರುವ ಬೆನ್ನಲ್ಲೇ ಈ ಬೃಹತ್ ತನಿಖಾ ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸಕ್ಕೆ 2 ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಪರಿಶೀಲನೆ ಆರಂಭಿಸಿದೆ. ಇದರ ಜೊತೆಗೆ ಬೆಳಗಾವಿ, ಗೋಕಾಕ್ನಲ್ಲಿರುವ ಅವರ ಹಿಲ್ ಗಾರ್ಡನ್ ನಿವಾಸ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಮನೆ ಹಾಗೂ ರಾಜ್ಯ ಮತ್ತು ಗೋವಾ ಮೂಲದ ಇಡಿ ತಂಡಗಳು ಬೆಂಗಳೂರು, ಬೆಳಗಾವಿ ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸುತ್ತಿವೆ. ಸಚಿವರ ಆಪ್ತರಾದ ಡಾ. ಗಿರೀಶ್ ಸೋನ್ವಾಲಕರ್, ರಾಜು ಧರಗಶೆಟ್ಟಿ ಹಾಗೂ ವಿಠ್ಠಲ ಪರಸನ್ನವರ ನಿವಾಸಗಳ ಮೇಲೆಯೂ ದಾಳಿಯಾಗಿದೆ.

ಫೆಮಾ (FEMA) ಉಲ್ಲಂಘನೆ ಮತ್ತು ಅಬಕಾರಿ ಇಲಾಖೆ ಲಿಂಕ್
ಇಡಿ ಮೂಲಗಳ ಪ್ರಕಾರ, ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸ್ವತಂತ್ರವಾಗಿ ಹೊಸ ಪ್ರಕರಣ (ECIR) ದಾಖಲಿಸಿಕೊಂಡು ಈ ತನಿಖೆ ಕೈಗೊಳ್ಳಲಾಗಿದೆ. ಈ ಹಿಂದೆ ಅಬಕಾರಿ ಇಲಾಖೆಯಲ್ಲಿದ್ದಾಗ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ಮುಂದುವರಿಸಿದೆ. ಇನ್ನು ಸಚಿವರ ಭಾವಮೈದ, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ವೈ. ಮಂಜುನಾಥ್ ನಿವಾಸದ ಮೇಲೆಯೂ ಇಡಿ ಮತ್ತೆ ದಾಳಿ ನಡೆಸಿದೆ.
ಕಳೆದ ಜೂನ್ 24 ರಂದು ಮಂಜುನಾಥ್ ಅವರಿಗೆ ಸಂಬಂಧಿಸಿದ 14 ಸ್ಥಳಗಳ ಮೇಲೆ ದಾಳಿ ಮಾಡಿದ್ದಾಗ ₹13 ಕೋಟಿಗೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಪ್ರಮುಖ ಮಾಹಿತಿಗಳಿದ್ದ ಡೈರಿಯನ್ನು ವಶಪಡಿಸಿಕೊಳ್ಳಲಾಗಿತ್ತು. ತನಿಖೆಯ ವೇಳೆ ಮಂಜುನಾಥ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ಆಫ್ರಿಕಾದಲ್ಲಿ ಮೈನಿಂಗ್ ವಲಯದಲ್ಲಿ ಬೃಹತ್ ಹೂಡಿಕೆ ಮಾಡಿರುವುದು ಕಂಡುಬಂದಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯ ಶಂಕೆ ವ್ಯಕ್ತವಾಗಿದೆ. ಈ ಉದ್ಯಮದಲ್ಲಿ ಮಂಜುನಾಥ್ ಅವರ ಪತ್ನಿ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಪಾಲುದಾರರಾಗಿದ್ದಾರೆ ಎನ್ನಲಾಗಿದ್ದು, ಈ ಉದ್ಯಮಿಕ ಜಾಲದ ಜಾಡು ಹಿಡಿದು ಪ್ರಸ್ತುತ ದಾಳಿ ನಡೆಸಲಾಗಿದೆ.
ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪದ ಆರೋಪ
ಈ ಹಿಂದೆ ನಾಗೇಂದ್ರ ಅವರ ಪ್ರಕರಣದಲ್ಲೂ ಇದೇ ರೀತಿ ಇಡಿ ಪ್ರವೇಶಿಸಿ ಬಂಧನ ನಡೆದಿತ್ತು. ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರನ್ನೇ ಗುರಿಯಾಗಿಸಿ ನಡೆಸಿರುವ ದಾಳಿಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸರ್ಕಾರಕ್ಕೆ 100 ದಿನ ತುಂಬುವ ಹೊತ್ತಿನಲ್ಲೇ ನಡೆದಿರುವ ಈ ಕಾರ್ಯಾಚರಣೆಯು ವಿಪಕ್ಷ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ರಾಜಕೀಯ ನಡೆ ಎಂಬ ಮಾತುಗಳು ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದ್ದು, ಮುಂದಿನ ಹಂತದಲ್ಲಿ ತನಿಖೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


