Homeಮುಖಪುಟರಾಜ್ಯ ಬಜೆಟ್‌: ಯಡಿಯೂರಪ್ಪ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನಗೊಳಿಸುವರೆ?

ರಾಜ್ಯ ಬಜೆಟ್‌: ಯಡಿಯೂರಪ್ಪ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನಗೊಳಿಸುವರೆ?

ಎಲ್ಲಿಯವರೆಗೆ ರಾಜ್ಯದಲ್ಲಿ ಇರುವ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ಸಮಾನ ಅಭಿವೃದ್ದಿಯ ಕಡೆಗೆ ಹೋಗುವದಿಲ್ಲವೋ ಅಲ್ಲಿಯವರೆಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡಲೇಬೇಕಿದೆ.

- Advertisement -
- Advertisement -

ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಮಂಡಿಸುತ್ತದ್ದಾರೆ. ಕಳೆದ ಒಂದೂವರೆ ದಶಕದಿಂದ ಪ್ರತೀ ಬಜೆಟ್‌ನಲ್ಲೂ ಡಿ.ಎಂ.ನಂಜುಂಡಪ್ಪ ವರದಿಯ ಅನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನದ ಪ್ರಸ್ತಾಪ ಇರುತ್ತಿತ್ತು.‌ ಈ ಮಧ್ಯೆ ಹೈದ್ರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ 371 ಜೆ ಸಹಾ ಜಾರಿಗೆ ಬಂದಿದೆ.

ಆದರೆ ಡಿ.ಎಂ.ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾದ ಅವಧಿ ಇದೇ ಮಾರ್ಚ್ 31ಕ್ಕೆ ಕೊನೆಯಾಗುತ್ತಿದೆ.

ಹೆಸರು ಮಾತ್ರ ಬದಲಿಸಿದ ಯಡಿಯೂರಪ್ಪನವರು ಅನುದಾನ ಎಷ್ಟು ನೀಡಲಿದ್ದಾರೆ ಎಂಬುದು ಬಹುಮುಖ್ಯ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಈ ಸಮಸ್ಯೆಯ ಇತಿಹಾಸದ ಬಗ್ಗೆ ಒಂದಷ್ಟು ತಿಳುವಳಿಕೆ ಅಗತ್ಯ.

ಇದರ ಕುರಿತು ಹೈದರಾಬಾದ್ ಕರ್ನಾಟಕದ ಹೋರಾಟಗಾರ, ಚಿಂತಕ ರಜಾಕ್ ಉಸ್ತಾದ್ ವಿಶೇಷ ಲೇಖನ ಬರೆದಿದ್ದಾರೆ. ಮುಂದೆ ಓದಿ…

ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನ

ಅಭಿವೃದ್ಧಿ ಪ್ರಕ್ರಿಯೆ ಎಂಬುದು ಉತ್ತಮ ಬದುಕಿಗೆ ಹಾಗೂ ಜನರ ಕಾರ್ಯನಿರ್ವಹಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು, ಹೊಸ ಕೌಶಲ್ಯಗಳನ್ನು ಪಡೆಯುವುದು ಹಾಗೂ ವರಮಾನದ ಹೆಚ್ಚಳವನ್ನು ಒಳಗೊಳ್ಳುತ್ತದೆ. ಒಂದು ರಾಜ್ಯದ ಅಥವಾ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಧ್ಯೇಯವೇ ಒಟ್ಟು ವರಮಾನವನ್ನು ಇನ್ನಷ್ಟು ಹೆಚ್ಚಿಸುವುದು, ಸಮಾಜದ ಎಲ್ಲ ಸ್ತರದವರು ಹಾಗೂ ಅವರು ವಾಸಿಸುವ ವಿಭಿನ್ನ ಪ್ರದೇಶಗಳು ವರಮಾನದ ಹೆಚ್ಚಳದ ಲಾಭ ಪಡೆಯುವಂತೆ ನೋಡಿಕೊಳ್ಳಲು ಸಮಾನ ಹಂಚಿಕೆಯ ಕಾರ್ಯನೀತಿಗಳ ಮಧ್ಯಸ್ತಿಕೆ ಬೇಕಾಗುತ್ತದೆ; ಹೀಗಾಗಬೇಕಾದರೆ ಸಾಮಾಜಿಕ ನ್ಯಾಯಸಹಿತವಾದ ಅಭಿವೃದ್ಧಿ ಅಗತ್ಯ.

ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಕಂಡುಬಂದ ವಾಸ್ತವ ಅಭಿವೃದ್ಧಿ ಏನೇ ಇದ್ದರೂ 1999-2000ದ ವೇಳೆಗೆ ರಾಜ್ಯದ ತಲಾವಾರು ಆದಾಯ 16,654 ರೂಗಳಾಯಿತು. ಆದರೆ, ಜಿಲ್ಲೆಗಳ ವರಮಾನಗಳಲ್ಲಿರುವ ವ್ಯತ್ಯಾಸ ಎಂದರೆ ಬೀದರನಲ್ಲಿ 9902 ರೂ. ಗಳಿದ್ದರೆ, ಬೆಂಗಳೂರು ನಗರದ ಜಿಲ್ಲೆಯಲ್ಲಿ 27,984 ರೂಗಳಿರುವ ಅಂಶ ಚಿಂತೆಯನ್ನುಂಟು ಮಾಡಿತ್ತು. ಉತ್ತರ ಹಾಗೂ ದಕ್ಷಿಣ ಕರ್ನಾಟಕಗಳ ನಡುವಣ ಸಮತೋಲನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಕಂಡುಬಂದ ಅಸಮಾಧಾನಕ್ಕೆ ಪ್ರತಿಯಾಗಿ ಸರಕಾರವು 1956 ರಿಂದ ಬೇರೆ ಬೇರೆ ವಿಧಗಳಲ್ಲಿ ಪ್ರತಿಕ್ರಿಯಿಸುತ್ತಲೇ ಬಂದಿದೆ. ಆದರೂ 2000 ದವರೆಗೂ ಪ್ರಾದೇಶಿಕ ಅಸಮತೋಲನದ ಬಗ್ಗೆ ಯಾವುದೇ ಸಮಗ್ರ ನಿಲುವು ಕಂಡುಬಂದಿರಲಿಲ್ಲ. ಅಂದಿನ ಮುಖ್ಯಮಂತ್ರಿಯಾದ ಶ್ರೀ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಪ್ರಾದೇಶಿಕ ಅಸಮತೋಲನೆಗಳ ಪರಿಹಾರಕ್ಕಾಗಿ ಒಂದು ಉನ್ನತಾಧಿಕಾರ ಸಮಿತಿಯನ್ನು ಆರ್ಥಿಕ ತಜ್ಞರಾದ ಡಾ.ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಡಾ.ಡಿ.ಎಂ.ನಂಜುಂಡಪ್ಪ

ಅಭಿವೃದ್ಧಿಯ ಮಟ್ಟದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ, ತಾಲ್ಲೂಕು ತಾಲ್ಲೂಕುಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ, ಉತ್ತರ ದಕ್ಷಿಣ ಕರ್ನಾಟಕಗಳ ನಡುವಣ ಅಸಮಾನತೆಯನ್ನು ತಗ್ಗಿಸಲು ಸೂಕ್ತ ಅಭಿವೃದ್ಧಿ ವಿಧಾನವನ್ನು ಶಿಫಾರಸ್ಸು ಮಾಡುವುದು ಹಾಗೂ ಸಂತುಲಿತ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಕಾರ್ಯವಿಧಾನದ ಅನುಷ್ಠಾನಕ್ಕಾಗಿ ಸಾಂಸ್ಥಿಕ ಕಾರ್ಯತಂತ್ರವನ್ನು ರಚಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಅಸಮತೋಲನಗಳನ್ನು ಗುರುತಿಸಲು ಸಮಿತಿಯು ಒಂದು ವೈಜ್ಞಾನಿಕ ಹಾಗೂ ಸಮಗ್ರ ವಿಧಾನವನ್ನು ಅನುಸರಿಸಿದೆ ಎಂದು ಹೇಳಬಹುದು. ಸಮಿತಿಯು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿಗಳೊಡನೆ ಹಾಗೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಕಾಳಜಿ ಇರುವ ವ್ಯಕ್ತಿ, ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಿದೆ. ಈ ಸಮಿತಿಯು ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಿಲ್ಲೆ ಅಥವಾ ಒಂದು ಪ್ರದೇಶವನ್ನು ಮೂಲಭೂತ ಘಟಕವೆಂದು ಪರಿಗಣಿಸಲಿಲ್ಲ. ಅವರೇ ಹೇಳಿರುವಂತೆ ಯಾವುದೇ ಒಂದು ಪ್ರದೇಶದ ಎಲ್ಲ ಜಿಲ್ಲೆಗಳು ಅಥವಾ ತಾಲ್ಲೂಕು ಏಕರೂಪವಾಗಿ ಅಭಿವೃದ್ದಿ ಹೊಂದಿವೆಯೆಂದಾಗಲಿ ಅಥವಾ ಏಕರೂಪವಾಗಿ ಹಿಂದುಳಿದಿವೆ ಎಂದು ಹೇಳುವದಾಗಲಿ ಸಾದ್ಯವಿಲ್ಲವೆಂದು ಭಾವಿಸಿದೆ. ಆದ್ದರಿಂದ ತಾಲ್ಲೂಕನ್ನು ಮೂಲಭೂತ ಘಟಕವೆಂದು ಪರಿಗಣಿಸಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಯಾವ ಮಟ್ಟದಲ್ಲಿ ಇದೆಯೆಂದು ಸೂಕ್ತ ವಿವರಣೆಯೊಂದಿಗೆ ಸರಕಾರದ ಗಮನ ಸೆಳೆದ ವರದಿಯೆಂದೇ ಪ್ರಚಲಿತವಾದ ವರದಿ ಎಂದರೆ ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ 2002 ರಲ್ಲಿ ನೀಡಿದ ವರದಿ. ಆ ವರದಿಯಂತೆ ಅಭಿವೃದ್ಧಿಯ ಅಸಮಾನತೆ ಎನ್ನುವದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದ್ರಾಬಾದ್‌ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ ಎಂದು ತಿಳಿಸಿದೆ. ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ ಎಂದು Comprehensive Composite Development Index(CCDI) ಹಾಗೂ Cumulative Deprivation Index(CDI) ಆಧಾರದಲ್ಲಿ ನಿರ್ಧರಿಸಿದೆ. ಈ 114 ತಾಲ್ಲೂಕುಗಳನ್ನು CCDI ಅಂಶಗಳ ಅನುಸಾರ ಮೂರು ಭಾಗಗಳಾಗಿ ವರ್ಗೀಕರಿಸಿ, 39 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ ತಾಲ್ಲೂಕುಗಳೆಂದು (CCDI) ಅಂಶ 0.53 ದಿಂದ 0.79 ಕಡಿಮೆ ಇರುವ), 40 ತಾಲ್ಲೂಕುಗಳನ್ನು ಅತೀ ಹಿಂದುಳಿದ ತಾಲ್ಲೂಕುಗಳೆಂದು (CCDI) ಅಂಶ 0.80 ದಿಂದ 0.88 ಗಿಂತ ಕಡಿಮೆ ಇರುವ) ಹಾಗೂ 35 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು (CCDI) ಅಂಶ 0.89 ದಿಂದ 0.99 ಗಿಂತ ಕಡಿಮೆ ಇರುವ) ವರ್ಗೀಕರಿಸಿದೆ. ಉಳಿದ 61 ತಾಲ್ಲೂಕುಗಳನ್ನು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳೆಂದು ಅವುಗಳ (CCDI) ಅಂಶ 1.0 ದಿಂದ 1.96 ವರೆಗೆ ಇದೆ.

ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಂತೆ ರಾಜ್ಯ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ 21 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ (ಕಲ್ಯಾಣ ಕರ್ನಾಟಕದ ಒಟ್ಟು ತಾಲ್ಲೂಕುಗಳು 31), ಬೆಂಗಳೂರು ವಿಭಾಗದಲ್ಲಿ 11 ಅತ್ಯಂತ ಹಿಂದುಳಿದ ತಾಲ್ಲೂಕುಗಳು, ಬೆಳಗಾವಿ ವಿಭಾಗದಲ್ಲಿ 05 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಹಾಗೂ ಮೈಸೂರು ವಿಭಾಗದಲ್ಲಿ 02 ಅತ್ಯಂತ ಹಿಂದುಳಿದ ತಾಲ್ಲೂಕುಗಳು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ 31 ತಾಲ್ಲೂಕುಗಳ ಪೈಕಿ 28 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿವೆ (05 ಅತೀ ಹಿಂದುಳಿದ ತಾಲ್ಲೂಕುಗಳು ಹಾಗೂ 02 ಹಿಂದುಳಿದ ತಾಲ್ಲೂಕುಗಳು). ರಾಜ್ಯದಲ್ಲಿ ಒಟ್ಟು 61 ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳಿದ್ದು, ಅವುಗಳಲ್ಲಿ ಕೇವಲ 03 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ಈ 03  ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳಲ್ಲಿ ಒಂದು ಬೀದರ ಜಿಲ್ಲೆಯ ಬೀದರ ತಾಲ್ಲೂಕು ಹಾಗೂ ಎರಡು ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕುಗಳಾಗಿವೆ. ಕಲ್ಯಾಣ ಕರ್ನಾಟಕದ ಗುಲಬರ್ಗಾ, ಯಾದಗೀರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಂದೇ ಒಂದು ತಾಲ್ಲೂಕುಗಳು ಅಭಿವೃದ್ದಿ ಹೊಂದಿದ ತಾಲ್ಲೂಕುಗಳ ಪಟ್ಟಿಯಲ್ಲಿಲ್ಲ. ಅಂದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಒಂದೇ ಒಂದು ತಾಲ್ಲೂಕು ಅಭಿವೃದ್ದಿ ಹೊಂದಿದ ತಾಲ್ಲೂಕುಗಳ ಪಟ್ಟಿಯಲ್ಲಿಲ್ಲದೇ ಇರುವದು ಅತ್ಯಂತ ಸೋಜಿಗದ ಸಂಗತಿ. ಮೈಸೂರು ವಿಭಾಗದಲ್ಲಿ ಇರುವ ಮೂರು ಜಿಲ್ಲೆಗಳಲ್ಲಿ (ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು) ಒಂದೇ ಒಂದು ತಾಲ್ಲೂಕು ಹಿಂದುಳಿದ ಪಟ್ಟಿಯಲ್ಲಿಲ್ಲ. ಈ ಮಟ್ಟದಲ್ಲಿ ಪ್ರಾದೇಶಿಕ ಅಸಮಾನತೆ ಕರ್ನಾಟಕ ರಾಜ್ಯದಲ್ಲಿ ಇರುವದು ಅತ್ಯಂತ ಸಂಪದ್ಭರಿತ ನಾಡೆಂದು ಕಡೆಯಲ್ಪಡುವ ಕರ್ನಾಟಕ ರಾಜ್ಯದ ಪರಸ್ಥಿತಿ ಇಷ್ಟೊಂದು ಕ್ಲಿಷ್ಟಕರವಾಗಿರುವುದು ಅಂದಿನ ಸರಕಾರಕ್ಕೆ ಮತ್ತು ಸದನದಲ್ಲಿದ್ದ ಎಲ್ಲ ಜನಪ್ರತಿನಿಧಿಗಳಿಗೆ ಈ ವರದಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಮತ್ತು ಬದ್ದತೆಯಿತ್ತು.

ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಲ್ಲಿರುವ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಒಟ್ಟು ಎಂಟು ವರ್ಷಗಳ ಕಾಲಾವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ದಿಯ ಕ್ರಿಯಾ ಯೋಜನೆ ಮತ್ತು ರಾಜ್ಯದಲ್ಲಿ ಅಸಮಾನತೆಯನ್ನು ಹೊಗಲಾಡಿಸುವ ನೀಲಿ ನಕ್ಷೆಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು. ಸದರಿ ನೀಲಿ ನಕ್ಷೆಯಂತೆ 2003 ರಿಂದ 2011ರ ವರೆಗೆ ಎಂಟು ವರ್ಷಗಳ ಕಾಲ ಸರಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ 16000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಮತ್ತು ಸಾಮಾನ್ಯ ಬಜೆಟ್ ಮೂಲಕ 15000 ಕೋಟಿ ರೂಪಾಯಿ ಅನುದಾನ ಬರುತ್ತದೆ. ಇದನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸಬಹುದೆಂದು ತಿಳಿಸಲಾಗಿತ್ತು.

ಈ ಎಂಟು ವರ್ಷಗಳ ವಿಶೇಷ ಅಬಿವೃದ್ದಿ ಯೋಜನೆಯ ಅನುದಾನವನ್ನು  ಡಾ.ಡಿ.ಎಂ.ನಂಜುಂಡಪ್ಪನವರ ವರದಿಯು ನಿರ್ದಿಷ್ಟವಾಗಿ ಇಂತಿಂತಹ ವಲಯಗಳಿಗೆ ಮತ್ತು ಯೋಜನೆಗಳಿಗೆ ವಿಶೇಷ ಅಭಿವೃದ್ದಿ ಯೋಜನೆಯಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿತ್ತು. ವರದಿ ಗುರುತಿಸಿರುವ ವಲಯಗಳಲ್ಲಿ ಕೃಷಿ (ಎ.ಪಿ.ಎಂ.ಸಿ., ತೋಟಗಾರಿಕೆ, ಮೀನುಗಾರಿ, ರೇಷ್ಮೇ, ಹೈನುಗಾರಿಕೆ), ಗ್ರಾಮೀಣಾಭಿವೃದ್ದಿ (ಗ್ರಾಮೀಣ ರಸ್ತೆ, ಜಿ.ಪಂ.ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ದಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಯೋಜನೆ ರೂಪಿಸಿದ್ದರು.

2002 ರಲ್ಲಿ ರಾಜ್ಯ ಸರಕಾರದ ಬಜೆಟ್ ಗಾತ್ರ ಸುಮಾರು 17,328.00 ಕೋಟಿ ರೂ. ಮಾತ್ರ, ಅದರಂತೆ ಒಟ್ಟು 16,000 ಕೋಟಿ ರೂ. (ಬಜೆಟ್ ಗಾತ್ರಕ್ಕೆ ಶೇ 92.33 ರಷ್ಟು) ವಿಶೇಷ ಅನುದಾನ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಆದರೆ, ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅಂದಿನ ಸರಕಾರ ತಕ್ಷಣದಲ್ಲಿ ಜಾರಿಗೊಳಿಸಲು ಮನಸ್ಸು ಮಾಡಲಿಲ್ಲ. ಮುಂದೆ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದ ಸರಕಾರ 2007-08 ನೇ ಆರ್ಥಿಕ ವರ್ಷದಲ್ಲಿ ಸುಮಾರು 1571.50 ಕೋ.ರೂ. ಅನುದಾನದೊಂದಿಗೆ ಅನುಷ್ಠಾನ ಮಾಡಲು ನಿರ್ಧರಿಸಿದಾಗ ರಾಜ್ಯದ ಬಜೆಟ್ ಗಾತ್ರ 40,762.00 ಕೋಟಿ ರೂ. ಆಗಿತ್ತು, ಅಂದರೆ, ವರದಿ ನೀಡಿದಾದ ಇದ್ದಂತಹ ಬಜೆಟ್ ಗಾತ್ರ, ವರದಿ ಅನುಷ್ಠಾನ ಮಾಡಲು ಪ್ರಾರಂಭವಾದಾಗ ಎರಡು ಪಟ್ಟು ಹೆಚ್ಚಾಯಿತು. ಅದರಂತೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಕ್ರಿಯಾ ಯೋಜನೆಯ ಅನುದಾನ ಸಹ ಎರಡು ಪಟ್ಟು ಹೆಚ್ಚಾಗಬೇಕಿತ್ತು. ಅಂದರೆ ವರ್ಷಕ್ಕೆ 2000 ಕೋಟಿರೂ. ವಿಶೇಷ ಅನುದಾನದ ಬದಲಾಗಿ 4000 ಕೋಟಿ ರೂ. ಗೆ ಹೆಚ್ಚಿಸಬೇಕಾಗಿತ್ತು. ಆದರೆ ದುರಾದೃಷ್ಟವಷಾತ್ ಅದಾಗಲಿಲ್ಲ. ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಾಗುತ್ತ ಹೋಯಿತು. ಇದರಿಂದ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು ಹೆಚ್ಚು ಅಭಿವೃದ್ದಿ ಹೊಂದುತ್ತ ಹೋಗಿ ಹಿಂದುಳಿದ ತಾಲ್ಲೂಕುಗಳು ಹಿಂದುಳಿಯುವ ಸಂಪ್ರದಾಯ ಮುಂದುವರೆಯುತ್ತ ಬಂತು.

2019-20ನೇ ಸಾಲಿನ ಬಜೆಟ್‌ ಗಾತ್ರ 2,32,000 ಕೋ.ರೂ ವರೆಗೂ ಬಂತು, ಅಂದರೆ 2002-03ರ ಬಜೆಟ್ ಗಾತ್ರಕ್ಕಿಂತ ಸುಮಾರು 12 ಪಟ್ಟು ಹೆಚ್ಚಾಗಿದ್ದರೂ ಅದೇ 2000-3000 ಕೋಟಿ ರೂ. ಮಿತಿಯೊಳಗೆ ವಿಶೇಷ ಅನುದಾನ ನೀಡಿ ಕೈತೊಳೆದುಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲು ಸಾದ್ಯವಿರುವ ಅವಕಾಶವನ್ನು ಸರಕಾರವೇ ಹಾಳು ಮಾಡಿಕೊಂಡಂತಾಗಿದೆ ಎಂದು ಹೇಳಬಹುದು. ಆದರೆ, ರಾಜ್ಯದ ಜನರ ನಿರೀಕ್ಷೆಯಂತೆ ಇಂದಲ್ಲ ನಾಳೆ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲೇಬೇಕು.

ಹಿಂದಿನ ಬಿಜೆಪಿ ಸರಕಾರವಿದ್ದಾಗ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿದ್ದ ನೀರಾವರಿ ಕ್ಷೇತ್ರ ಅಭಿವೃದ್ದಿಗೆ ಮೀಸಲಿಟ್ಟ ಅನುದಾನವನ್ನು ಕೆಬಿಜೆಎನ್‍ಎಲ್/ಕೆಎನ್‍ಎನ್‍ಎಲ್ ಕ್ಯಾಪಿಟೆಲ್ ಹಣ ಹೊಂದಿಸಲು, ನಬಾರ್ಡ್‌ ಯೋಜನೆಗೆ ಬಳಸಲಾಗಿದೆ. ಶಿಕ್ಷಣ ಇಲಾಖೆಗೆ ಮೀಸಲಾದ ಅನುದಾನವನ್ನು ನಬಾರ್ಡ್‌, ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ್, ವಿದ್ಯಾರ್ಥಿಗಳಿಗೆ ಧನ ಸಹಾಯ ಮತ್ತು ಶುಲ್ಕ ಮರುಪಾವತಿ ಮತ್ತು ವಿದ್ಯಾ ವಿಕಾಸ ಯೋಜನೆಗೆ ಹಾಗೂ ಹಿಂದುಳಿದ ತಾಲ್ಲೂಕುಗಳಲ್ಲಿ 8ನೇ ತರಗತಿಯ ಶಾಲಾ ಮಕ್ಕಳ ಸೈಕಲ್ ಖರೀದಿಸಲು ಬಳಸಲಾಗಿದೆ. ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ದಿಗೆ ಬಳಸಬೇಕಾದ ಅನುದಾನವನ್ನು ಹಿಂದುಳಿದ ತಾಲ್ಲೂಕುಗಳಲ್ಲಿ ಮಾತ್ರ ಹಾಲಿನ ಪ್ರೋತ್ಸಾಹ ಧನ ನೀಡಲು ಬಳಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ ಮೀಸಲಾದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ರಾಷ್ಟ್ರೀಯ ಕೃಷಿ ಯೋಜನೆಗಳ ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ಮೀಸಲಾದ ಅನುದಾನವನ್ನು ಗೃಹ ಇಲಾಖೆಗೆ ಬಳಸಲಾಗಿದೆ ಮತ್ತು ಡಾ.ಡಿ.ಎಂ.ನಂಜುಂಡಪ್ಪನವರು ಸೂಚಿಸಿದಂತೆ ಶೇ 40 ರಷ್ಟು ಅನುದಾನವನ್ನು ಗುಲ್ಬರ್ಗಾ ವಿಭಾಗಕ್ಕೆ ಬಳಸಬೇಕೆಂದಿದ್ದರೂ ಸಾರಿಗೆ ಇಲಾಖೆಯ ಎಲ್ಲ ನಿಗಮಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ಅನ್ಯಾಯ ಮಾಡಲಾಗಿದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಹಿಸಿರಬಹುದು. ಇದೇ ರೀತಿ ವಸತಿ ಯೋಜನೆಗೆ ನಿಗದಿಗೊಳಿಸಲಾದ ಅನುದಾನವನ್ನು ರಾಷ್ಟ್ರೀಯ ವಸತಿ ಯೋಜನೆಗಳ(ಇಂದಿರಾ ಅವಾಸ್, ಆಶ್ರಯ, ಗ್ರಾಮೀಣ ವಸತಿ) ಮತ್ತು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಆಶ್ರಯ ಯೋಜನೆಗಾಗಿ 2010-11ನೇ ಸಾಲಿನಲ್ಲಿ 40 ಕೋ.ರೂ ಸಾಲ ನೀಡಲಾಗಿದೆ. ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸಲು ಇದ್ದಂತ ಏಕೈಕ ಅವಕಾಶವನ್ನು ಸರಕಾರ ಈ ರೀತಿ ಹಾಳುಮಾಡಿಕೊಂಡಿದೆ.

ಅಂದರೆ, ಕಳೆದ 13 ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿರುವ ಡಾ.ಡಿ.ಎಂ. ನಂಜುಂಡಪ್ಪನವರ ವರದಿಯನ್ನು ಎಲ್ಲ ಸರಕಾರಗಳು ಬದ್ಧತೆ ಇಲ್ಲದೇ ಅನುಷ್ಠಾನ ಮಾಡಿರುವುದರಿಂದ ರಾಜ್ಯದಲ್ಲಿ ಇರುವ ತಾಲ್ಲೂಕು ತಾಲ್ಲೂಕುಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಅಭಿವೃದ್ದಿಯ ಅಸಮಾನತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೇ ಹೇಳಬಹುದಾಗಿದೆ.

ಕೋಷ್ಟಕ: ಡಾ.ಡಿ.ಎಂ.ನಂಜುಂಡಪ್ಪನವರ ಅವರದಿಯ ವಿಶೇಷ ಅಭಿವೃದ್ದಿ ಯೋಜನೆಯ ಅನುದಾನ ಬಳಕೆ


2014ರಲ್ಲಿ ಧಾರವಾಡದCentre for Multi Disciplinary Development Research (CMDR) ಸಂಸ್ಥೆಯು ಡಾ.ಡಿ.ಎಂ.ನಂಜುಂಡಪನವರ ವರದಿಯ ಅನುಷ್ಠಾನದಿಂದಾದ ಬದಲಾವಣೆಯ ಬಗ್ಗೆ ಸಂಶೋಧನೆ ಮಾಡಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಅಂಶಗಳನ್ನು ನೋಡಿದಲ್ಲಿ ಅಭಿವೃದ್ಧಿ ಯಾವ ದಿಕ್ಕಿನ ಕಡೆಗೆ ಹೋಗುತ್ತಿದೆ ಎಂದು ಚರ್ಚಿಸುವ ಅಗತ್ಯವಿದೆ. CMDR ಸಂಸ್ಥೆಯು ವರದಿಯಂತೆ ರಾಜ್ಯದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ಸೂಚಿಸಿದಂತೆ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಈಗ 40 ಆಗಿವೆ, ಅವುಗಳಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಇದ್ದ 21 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಈಗ 24 ತಾಲ್ಲೂಕುಗಳು ಆಗಿವೆ.

ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದಲ್ಲಿ ಇದ್ದ 114 ಹಿಂದುಳಿದ ತಾಲ್ಲೂಕುಗಳಲ್ಲಿ ಸಿ.ಎಂ.ಡಿ.ಆರ್. ಸಂಸ್ಥೆಯ ವರದಿಯಂತೆ ಉಳಿದಿರುವದು 109 ಹಿಂದುಳಿದ ತಾಲ್ಲೂಕುಗಳು. ಅವುಗಳಲ್ಲಿ 40 ತಾಲ್ಲೂಕುಗಳು ಅತ್ಯಂತ ಹಿಂದುಳಿದ ತಾಲ್ಲೂಕುಗಳು (ಅಂದು 39 ತಾಲ್ಲೂಕುಗಳು), 34 ತಾಲ್ಲೂಕುಗಳು ಅತೀ ಹಿಂದುಳಿದ ತಾಲ್ಲೂಕುಗಳು (ಡಾ.ಡಿ.ಎಂ. ನಂಜುಂಡಪ್ಪನವರ ವರದಿಯಂತೆ 40 ತಾಲ್ಲೂಕುಗಳು) ಮತ್ತು 36 ತಾಲ್ಲೂಕುಗಳು (ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಂತೆ 35 ತಾಲ್ಲೂಕುಗಳು) ಹಿಂದುಳಿದ ತಾಲ್ಲೂಕು ಗಳಾಗಿವೆ.  ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದ 175 ತಾಲ್ಲೂಕುಗಳಲ್ಲಿ 61 ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಎಂದು ಗುರುತಿಸಲಾಗಿದೆ. 5 ವರ್ಷಗಳ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನದ ನಂತರ ಈ ಸಂಖ್ಯೆ 66 ತಾಲ್ಲೂಕುಗಳಾಗಿವೆ. ಅಂದರೆ ಇದೇ ವೇಗದಲ್ಲಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿ ಮಾಡಿದಲ್ಲಿ ಒಂದು ಶತಮಾನದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸರಪಡಿಸಲು ಸಾದ್ಯವಾಗಬಹುದೇನೋ ಕಾದು ನೋಡಬೇಕಾಗಿದೆ. ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸುವ ಬದ್ದತೆ ಇಲ್ಲದ ರಾಜಕಾರಣ ಜನರನ್ನು ಇನ್ನೂ ಎಷ್ಟು ತಾಳ್ಮೆ ಪರೀಕ್ಷೆ ಮಾಡಿಸಲು ಹೊರಟಿದ್ದಾರೋ ಗೊತ್ತಿಲ್ಲ.

ಕಾರಣ, ಕರ್ನಾಟಕ ರಾಜ್ಯದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಂತೆ ಲಭ್ಯವಿರುವ 114 ತಾಲ್ಲೂಕುಗಳ ಅಭಿವೃದ್ದಿ ಅಸಮಾನತೆಯನ್ನು ಸಮರ್ಪಕವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳಾಗಿ ಪರವರ್ತನೆಯಾಗುವಂತೆ ಸದರಿ ವರದಿಯನ್ನು ಅನುಷ್ಠಾನ ಮಾಡಬೇಕಿದೆ. ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು 2007-08ನೇ ಸಾಲಿನಿಂದ ಜಾರಿಗೊಳಿಸಲು ಪ್ರಾರಂಭಿಸಿ 2014-15ನೇ ಸಾಲಿನವರೆಗೆ ಅನುಷ್ಠಾನ ಮಾಡಿದೆ. ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಸರಕಾರ 2015-16ನೇ ಸಾಲಿನಿಂದ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಇನ್ನೂ 5 ವರ್ಷಗಳ ಅವಧಿಗೆ ಮುಂದುವರೆಸಲು ನಿರ್ಧರಿಸಿ ಸುಮಾರು ಪ್ರತಿ ವರ್ಷ 3000 ಕೋಟಿರೂ. ಅನುದಾನ ನಿಗದಿಗೊಳಿಸುತ್ತ ಬಂದಿದೆ. ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರ ನಿರ್ಧಾರದಂತೆ 2015-16ನೇ ಸಾಲಿನಿಂದ 2019-20 ರವರೆಗೆ 5 ವರ್ಷ ಪೂರ್ಣಗೊಳ್ಳುತ್ತಿದೆ ಅಂದರೆ ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದಲ್ಲಿ ವಿಶೇಷ ಅಭಿವೃದ್ದಿ ಯೋಜನೆ ಅನುಷ್ಠಾನ ನಿಂತು ಹೋಗುತ್ತದೆ.

ಈಗ ಸರಕಾರ ಸದರಿ ವರದಿಯಂತೆ ಹಿಂದುಳಿದ ತಾಲ್ಲೂಕುಗಳ ಅಸಮಾನತೆಯನ್ನು ಸರಿಮಾಡುವ ಬದ್ದತೆ ತೋರಿಸಲು ಮುಂದಾಗಬೇಕಿದೆ. ಎಲ್ಲಿಯವರೆಗೆ ರಾಜ್ಯದಲ್ಲಿ ಇರುವ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ಸಮಾನ ಅಭಿವೃದ್ದಿಯ ಕಡೆಗೆ ಹೋಗುವದಿಲ್ಲವೋ ಅಲ್ಲಿಯವರೆಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡಲೇಬೇಕಿದೆ. 2007-08 ರಿಂದ 2018-19 ರ ವರೆಗೆ ಈ 12 ವರ್ಷಗಳಲ್ಲಿ (2019-20ನೇ ಸಾಲಿನ ಅನುದಾನ ಹಂಚಿಕೆ ಮತ್ತು ಖರ್ಚು ಕುರಿತು ಮಾಹಿತಿ ಲಬ್ಯವಿಲ್ಲದೇ ಇರುವದರಿಂದ ಅದನ್ನು ಹೊರತುಪಡಿಸಿ) ಸರಕಾರ 31227.80 ಕೋಟಿರೂ ಗಿಂತ ಹೆಚ್ಚು ಅನುದಾನ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನಕ್ಕಾಗಿ ಅನುದಾನ ಹಂಚಿಕೆ ಮಾಡಿ ಇಲ್ಲಿಯವರೆಗೆ ಸುಮಾರು 23238.55 ಕೋ.ರೂ. ಬಿಡುಗಡೆಗೊಳಿಸಿದೆ. ಆದರೆ ಇಲ್ಲಿಯವರೆಗೆ ಒಟ್ಟು 20880.58 ಕೋಟಿರೂ. ಮಾತ್ರ ಅನುದಾನ ಖರ್ಚು ಮಾಡಲಾಗಿದೆ.

ಕೃಷಿ ಇಲಾಖೆಗೆ ಸುಮಾರು 2057.43 ಕೋ.ರೂ ಅನುದಾನ ನಿಗದಿಗೊಳಿಸಿದ್ದರೂ ಕೇವಲ 1203.34 ಕೋಟಿರೂ ಮಾತ್ರ ಖರ್ಚು ಮಾಡಲಾಗಿದೆ, ಅದರಂತೆ ಗ್ರಾಮೀಣಾಭಿವೃದ್ದಿಗೆ 5294.26 ಕೋಟಿರೂ. ನಿಗದಿಗೊಳಿಸಿ ಕೇವಲ 3787.00 ಕೋಟಿರೂ. ಖರ್ಚು ಮಾಡಲಾಗಿದೆ, ನೀರಾವರಿಗೆ ವರದಿಯಲ್ಲಿ 8000 ಕೋ.ರೂ ಖರ್ಚು ಮಾಡಲು ಸೂಚಿಸಿದ್ದರೂ ಇಲ್ಲಿಯವರೆಗೆ ಕೇವಲ 6178.01 ಕೋಟಿರೂ ಅನುದಾನ ನಿಗದಿಗೊಳಿಸಿ ಅದರಲ್ಲಿ 4143.65 ಕೋಟಿರೂ ಮಾತ್ರ ಖರ್ಚು ಮಾಡಲಾಗಿದೆ. ಗೃಹ ಇಲಾಖೆಗೆ ವರದಿಯಲ್ಲಿ ನಮೂದಿಲ್ಲದಿದ್ದರೂ ಸುಮಾರು 172.34 ಕೋಟಿರೂ. ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ಖರ್ಚು ಮಾಡಲಾಗಿದೆ.  ಈ ರೀತಿ ಸರಕಾರಗಳು ವರದಿಯಲ್ಲಿರುವ ಅಂಶಕ್ಕೂ ಅನುಷ್ಠಾನಕ್ಕೂ ಅಜಗಜಾಂತರ ವ್ಯತ್ಯಾಸ ಬರುವ ಹಾಗೆ ಅನುಷ್ಠಾನ ಮಾಡಿರುವದರಿಂದ ಇಂದಿಗೂ ಈ ಅಭಿವೃದ್ದಿಯ ಅಸಮಾನತೆ ಹೋಗಲಾಡಿಸಲು ಸಾದ್ಯವಾಗಿಲ್ಲ.

ಕಾರಣ, ಈ ಮೂಲಕ ಸರಕಾರಕ್ಕೆ ಆಗ್ರಹಿಸುವುದೆನೆಂದರೆ, ಆದಷ್ಟು ಶೀಘ್ರದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ಅಧ್ಯಯನ ಮಾಡಲು ಮತ್ತೊಂದು ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಬೇಕು ಮತ್ತು ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಮಿತಿ ಅಸಮಾನತೆಯ ಅಧ್ಯಯನ ಮಾಡಿ ವರದಿ ಸಲ್ಲಿಸುವಂತಾಗಬೇಕು. ಅಲ್ಲಿಯವರೆಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನಗೊಳಿಸಲು ಈಗಿನ ಬಜೆಟ್ ಗಾತ್ರದಂತೆ ಪ್ರತಿವರ್ಷ ಕನಿಷ್ಠ 20,000 ಕೋಟಿರೂ. ಅನುದಾನವನ್ನು ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ನಿಗದಿಗೊಳಿಸಿ ಮುಂದುವರೆಸಬೇಕೆಂದು ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಜನರ ಪರವಾಗಿ ಆಗ್ರಹಿಸಬೇಕಿದೆ. ಯಾಕೆಂದರೆ, ರಾಜ್ಯದ ಪ್ರತಿಯೊಂದು ತಾಲ್ಲೂಕುಗಳ ಜನತೆ ಸಮಾನ ಅಭಿವೃದ್ದಿ ಹೊಂದುವ ಎಲ್ಲ ರೀತಿಯ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...