Homeಅಂಕಣಗಳುಅಂದು ನಾದಿರ್ ಶಾ ಇಂದು ಅಮಿತ್ ಶಾ

ಅಂದು ನಾದಿರ್ ಶಾ ಇಂದು ಅಮಿತ್ ಶಾ

- Advertisement -
- Advertisement -

ಕಳೆದ ಮಾರ್ಚ್ ಎಂಟಕ್ಕೆ ಲಂಕೇಶರ ಹುಟ್ಟುಹಬ್ಬ ಸಂಭವಿಸಿತು. ಆ ಕುರಿತು ಧ್ಯಾನಿಸಿದಾಗ, ಅವರು ಕಳೆದ ಇಪ್ಪತ್ತೈದು ವರ್ಷದ ಹಿಂದೆ ಬರೆದ ಗುಣಮುಖ ನಾಟಕದ ದೃಶ್ಯ ಮುತ್ತಿಕೊಂಡು ಕಾಡಿಸಿತಲ್ಲಾ. ಪರ್ಶಿಯಾದಿಂದ ದಂಡೆತ್ತಿ ಬಂದ ನಾದಿರ್ ಶಾ ಭಾರತದ ಜಾತೀಯತೆ, ಅಸ್ಪೃಶ್ಯತೆ, ಆತ್ಮವಂಚನೆ ಮತ್ತು ಸುಳ್ಳುಗಳಿಂದ ರೋಸಿ ಹೋಗಿದ್ದಲ್ಲದೆ, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸ್ಥಳೀಯ ಮುಸ್ಲಿಂ ದೊರೆ, ಹುಡುಗಿಯರೊಂದಿಗೆ ಶಾಯಿರಿ ಬರೆದು ಹೇಳುತ್ತ, ಮದ್ಯ ಮಾಂಸದಲ್ಲಿ ಮುಳುಗಿದ್ದಾನೆ. ನಾದಿರ್ ಶಾಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಮಾನಸಿಕ ರೋಗಿಯಾದ ನಾದಿರ್ ಶಾನ ಸೈನ್ಯ ದೆಹಲಿಯನ್ನು ತೆರೆದಿಡುತ್ತದೆ. ಕಡೆಗೆ ಬಂದ ವೈದ್ಯ ಹಕೀಮ ನಾದಿರ್‍ಶಾನ ಹಿಂಸೆಯ ವ್ಯಸನವನ್ನು ತಹಬಂದಿಗೆ ತಂದು ಗುಣಮುಖನನ್ನಾಗಿಸಿ ಭಾರತ ಬಿಟ್ಟು ಹೋಗುವಂತೆ ಮಾಡುತ್ತಾನೆ. ಇದು ಇತಿಹಾಸ. ಇಂತಹ ರಕ್ತಸಿಕ್ತ ಇತಿಹಾಸ ಮರುಕಳಿಸಿದೆ. ನಾದಿರ್ ಶಾನ ಜಾಗದಲ್ಲಿ ಅಮಿತ್ ಶಾ ಇದ್ದಾನೆ. ಅವನ ಪಡೆ ದೆಹಲಿಯಲ್ಲಿ ಪಿಸ್ತೂಲು ಹಿಡಿದು ಜನರನ್ನ ಕೊಲ್ಲುತ್ತಿದೆ. ಹಕೀಮನ ಜಾಗದಲ್ಲಿ ಕೇಜ್ರಿವಾಲನಿದ್ದಾನೆ. ಕೇಜ್ರಿವಾಲನ ಕೆಲಸಗಳು ಅಮಿತ್ ಶಾನ ಕಣ್ಣು ತೆರೆಸಿದರೆ ದೆಹಲಿ ಏಳಿಗೆಯಾಗಬಲ್ಲದು ಇಲ್ಲವಾದರೆ, ಸರ್ವನಾಶ. ಆ ಮುಖಾಂತರ ಭಾರತವೂ ನಾಶದ ಅಂಚಿಗೆ ಬಂದು ನಿಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲವಂತಲ್ಲ ಥೂತ್ತೇರಿ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರನ್ನು ನೋಡಿ ಬೊಗಳಿದ ಯತ್ನಾಳ್ ಎಂಬ ಯಬಡನನ್ನು ಕುರಿತು ಬಿಜೆಪಿಯ ಯಾರೂ ಗದರಲಿಲ್ಲವಂತಲ್ಲಾ. ಇದಲ್ಲದೆ, ಪರವಾಗಿಲ್ಲ ಅವನ ಜೊತೆ ಮಾತಾಡಬಹುದು ಎಂಬಂತಿದ್ದ ಸುರೇಶ್ ಕುಮಾರ್ ಎಂಬ ಸಧಾರಿತ ಚೆಡ್ಡಿಯ ಬಗ್ಗೆ ಶಾನೆ ಬೇಜಾರು ಮಾಡಿಕೊಂಡಿರುವ ದೊರೆಸ್ವಾಮಿ ಸಂಬಂಧಿಯಾದ ದೇವನೂರು ಮಹಾದೇವ ಕೊಳೆತ ಹಣ್ಣಿನ ಜೊತೆಯಿರುವ ಒಳ್ಳೆ ಹಣ್ಣು ಎಂದು ಭಾವಿಸಿ ಮೋಸ ಹೋಗಿದ್ದಾರಲ್ಲಾ. ಯಾರು ಸ್ವಾಮಿ ಇದು ಶ್ರೇಷ್ಠ ಹಣ್ಣು ಎಂದು ತಮಗೆ ಹೇಳಿದ್ದು. ಸಿ.ಟಿ.ರವಿ, ರೇಣುಕಾಚಾರಿ ಯತ್ನಾಳ್ ಹೇಳುವ ಮಾತನ್ನೇ ಶಿಷ್ಟಭಾಷೆಯಲ್ಲಿ ಹೇಳುವ ಸುರೇಶ್‍ಕುಮಾರ್ ಯಡ್ಡಿ ಕಾಲದಲ್ಲಿ ಬೆಂಗಳೂರಲ್ಲಿ ಮಾಡಿಕೊಂಡ ಸೈಟಿನ ಬಗ್ಗೆ ತಲೆದೂಗುವ ಭಾಷೆಯಲ್ಲಿ ಸಮರ್ಥಿಸಿಕೊಂಡಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ ದನಿ ಇಡೀ ಬಿಜೆಪಿಗಳ ದನಿ. ಅದಕ್ಕೆ ಆತನ ಪರ ನಿಂತರು. ಅದಾಳು ಬಿದ್ದೋಗಲಿ ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ತಲೆ ಕೆಡಿಸಿಕೊಂಡಿರುವ ವಿಶ್ವನಾಥ್ ಎಂಬ ಕಾಂಗ್ರೆಸ್ ಪ್ರವಾದಿ ಬಾಯಿಗೆ ಅದಾವ ಗೂಟ ಬಡಿದುಕೊಂಡಿದ್ದರೆಂದು ಹಾಲಿ ಕಾಂಗ್ರೆಸ್‍ಗಳು ಗುಸುಗುಟ್ಟುತ್ತಿವೆಯಂತಲ್ಲಾ ಥೂತ್ತೇರಿ.

ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ಮೂಗು ತೂರಿಸಿ ಕುಮಾರಣ್ಣನಿಂದಲೇ ಸರಿಯಾಗಿ ಇಕ್ಕಿಸಿಕೊಂಡಿದ್ದಾರಲ್ಲಾ ಈ ವಿಶ್ವನಾಥ. ನನ್ನ ಮಗನ ಖರ್ಚಿನ ವಿಷಯದಲ್ಲಿ ಮಾತನಾಡುವ ಈ ವಿಶ್ವನಾಥ ಇದ್ದಕ್ಕಿದ್ದಂತೆ ರಾಜಿನಾಮೆ ನೀಡಿ ಹತ್ತಾರು ಕೋಟಿ ಖರ್ಚಿನಿಂದ ಮತ್ತೆ ಚುನಾವಣೆ ಎದುರಿಸಿದರಲ್ಲಾ ಅದು ಯಾರ ದುಡ್ಡು ಎಂದಿದ್ದಾರಲ್ಲಾ. ಇಬ್ಬರ ಅಭಿಪ್ರಾಯಗಳು ಅರ್ಥವತ್ತಾಗಿವೆ. ಹೇಗೆಂದರೆ, ಚುನಾವಣೆಗೆ ನಿಂತು ಖರ್ಚು ಮಾಡಿಕೊಂಡು ಸಾಲ ಮಾಡಿದ್ದ ವಿಶ್ವನಾಥ್ ಅದನ್ನ ತೀರಿಸಲು ಬಿಜೆಪಿ ಸೇರಿ ಚುನಾವಣೆಗೆ ಹಣ ಖರ್ಚು ಮಾಡಿದರು. ಇತ್ತ ಕುಮಾರಣ್ಣ ಮಂಡ್ಯ ಲೋಕಸಭಾ ಚುನಾವಣೆಗೆ ಮಗನನ್ನು ನಿಲ್ಲಿಸಿ ನೂರು ಕೋಟಿ ಸುರಿದರು. ಈಗ ಅಷ್ಟೇ ದುಡ್ಡಿನಿಂದ ಮಗನ ಮದುವೆ ಮಾಡುತ್ತಿದ್ದಾರೆ. ಇವರಿಬ್ಬರೂ ಖರ್ಚು ಮಾಡಿದ ಹಣ ಸ್ವಂತ ದುಡಿಮೆಯಿಂದ ಸಂಗ್ರಹಿಸಿದ್ದಲ್ಲ. ಅಷ್ಟಕ್ಕೂ ಸಾರ್ವಜನಿಕ ಹಣ ಇಟ್ಟುಕೊಂಡು ಏನು ಮಾಡುವುದು. ಅವರಿಗೇ ಖರ್ಚು ಮಾಡಬೇಕು. ಅದಕ್ಕಾಗಿ ಕುಮಾರಣ್ಣ ಮಗನ ಮದುವೆ ನೆಪದಲ್ಲಿ ಕಾರ್ಯಕರ್ತರಿಗೆ ಊಟ ಉಡುಗೊರೆ ಕೊಟ್ಟು ಪಾರ್ಟಿ ಬಲಪಸುತ್ತಿದ್ದಾರಂತೆ. ಇದನ್ನ ನೋಡಿದ ಜೆಡಿಎಸ್ ವಕ್ತಾರ ರಮೇಶ್ ಬಾಬು, ಜೆಡಿಎಸ್ ಜನಸಮೂಹ ಪ್ರತಿನಿಧಿಸುವ ಪಾರ್ಟಿ ಅಲ್ಲ ಎಂದು ಕಾಲ್ಕೀಳುತ್ತಿದ್ದಾರೆ. ಎಷ್ಟು ತಡವಾಗಿ ಜ್ಞಾನೋದಯವಾಯಿತ್ತಲ್ಲ ಥೂತ್ತೇರಿ.

ಮುಖ್ಯಮಂತ್ರಿಯಾಗಿದ್ದಾಗ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಿದ್ದ ಸಿದ್ದರಾಮಯ್ಯ ಅದ್ದೂರಿ ಮದುವೆ ಹುಡುಕಿಕೊಂಡು ತಿರುಗುತ್ತಿದ್ದಾರಲ್ಲಾ. ರಾಮುಲು ಮಗಳ ಮದುವೆಗೆ ಹೋಗಿ ಮುಖತೋರಿದ ಸಿದ್ದುವನ್ನ ಎದುರುಗೊಂಡ ಜನಾರ್ಧನರೆಡ್ಡಿ ಎಂಬ ಗಣಿಕಳ್ಳ ಮದುವೆ ಉಸ್ತುವಾರಿ ಹೊತ್ತವನಂತೆ ಓಡಿಬಂದು ಕೈಕುಲುಕಿ, ಹಲ್ಲು ಬಿಟ್ಟಿದ್ದನ್ನು ಹಾದರಕ್ಕೆ ಹುಟ್ಟಿದಂತಿರುವ ಕೆಲವು ಟಿವಿಯ ತಿರುಬೋಕಿಗಳು ಇಡೀ ದಿನ ತೋರಿ ಅದರಲ್ಲೇ ಉಂಡುತಿಂದು ತೇಗಿದವಂತಲ್ಲಾ. ಇದೇ ಜನ ಸಿದ್ದು ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಾಗ ವಿರೋಧವಾಗಿ ಮಾತನಾಡುವವರನ್ನ ತಂದು ಕೂರಿಸಿಕೊಂಡು ಸರಳ ಮದುವೆ ಸಾಧ್ಯವೇಯಿಲ್ಲ ನಾವು ಹೊಡೆದು ಮಡಗಿರುವ ಕಳ್ಳಧನವನ್ನ ಖರ್ಚು ಮಾಡುವುದೇಗೆ ಎಂಬಂತೆ ಊಳಿಡಲು ಅವಕಾಶಮಡಿಕೊಟ್ಟಿದ್ದರು. ಸದ್ಯದ ಆತಂಕ ಯಾವುದೆಂದರೆ, ಕೋಟ್ಯಾನುಕೋಟಿ ಖರ್ಚು ಮಾಡಿ ಮಾಡುವ ಮದುವೆಗಳು ಮುಂದೆ ಮುರಿದುಬಿದ್ದರೆ ಕತೆಯೇನು ಎಂಬುದು ಅದ್ದೂರಿ ಮದುವೆ ಕಂಡರಾಗದವರ ವ್ಯಾಖ್ಯಾನವಾಗಿದೆಯಂತಲ್ಲಾ ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...