Homeಮುಖಪುಟಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ದಿವಾಳಿ ಅಂಚಿನಲ್ಲಿರುವ ಮೂವರು ಮಿಲಿಯಾಧಿಪತಿಗಳ ಜೊತೆ ವ್ಯವಹರಿಸುತ್ತಿದ್ದ ಯೆಸ್ ಬ್ಯಾಂಕ್ ಲೆಕ್ಕಪತ್ರಗಳ ಸೂಕ್ಷ್ಮ ಅಪರಾಧಿಕ ಪರಿಶೀಲನೆ ನಡೆಸಿದಲ್ಲಿ ಇನ್ನಷ್ಟು ಅಸ್ತಿಪಂಜರಗಳು ಹೊರಬರಲಿವೆ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಮುಂಬಯಿಯ ಗಜಿಬಿಜಿಯ ಲೋವರ್ ಪರೇಲ್‌ನಲ್ಲಿರುವ ಯಾವುದೇ ದೇಖಾದೇಕಿ ಇಲ್ಲದ ಮೂರು ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಇಂಡಿಯಾ ಬುಲ್ಸ್ ಫೈನಾನ್ಸ್ ಸೆಂಟರ್ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಯೆಸ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಈಗ ಭಯಹುಟ್ಟಿಸುವ ಮೌನವಿದೆ. ಕೆಟ್ಟ ಸಾಲಗಳು ಮತ್ತು ಅಭದ್ರ ಆಸ್ತಿಗಳ ಕಾರಣದಿಂದ ಕಳೆದ ವಾರ ಪ್ರಪಾತದ ಅಂಚಿನಲ್ಲಿದ್ದ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕಿನಲ್ಲೀಗ ಬದುಕಬಹುದೋ ಏನೋ ಎಂಬ ಆಶಾವಾದ ಮೂಡಿದೆ.

ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿ ಹಣ ಹಿಂತೆಗೆತಕ್ಕೆ ಮಿತಿಯನ್ನು ವಿಧಿಸಿದಾಗ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾದ ಸಾವಿರಾರು ಜನರು ಈ ಬ್ಯಾಂಕಿನ ವಿಶಾಲವಾದ ಲಾಬಿಯಲ್ಲಿ ಜಮಾಯಿಸಿದ್ದರು. ಈ ಕಟ್ಟಡಗಳಲ್ಲಿರುವ ಹಲವಾರು ಮಧ್ಯಮ ಪ್ರಮಾಣದ ಕಂಪನಿಗಳು ಈ ಬ್ಯಾಂಕಿನ ಕಾರ್ಪೊರೇಟ್ ಗ್ರಾಹಕರಾಗಿದ್ದು, ತಮ್ಮ ನೌಕರರ ಸಂಬಳದ ಖಾತೆಗಳನ್ನು ಇಲ್ಲಿಯೇ ಹೊಂದಿರುವುದು ಬಹುದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.

ಇದೀಗ ನಿಮ್ಮ ಹಣ ಸುರಕ್ಷಿತ ಎಂದು ಸರಕಾರ ಭರವಸೆ ನೀಡಿರುವುದರಿಂದ ಗ್ರಾಹಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ. 16 ವರ್ಷಗಳ ಹಿಂದೆ ಈ ಬ್ಯಾಂಕನ್ನು ಸ್ಥಾಪಿಸಿದ್ದ ರಾಣಾ ಕಪೂರ್ ಇದೀಗ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಹೊಸ ಖಳನಾಯಕ ಎನಿಸಿದ್ದಾರೆ. ಅವರೀಗ ಮುಂಬಯಿಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಇದೇ ಕಪೂರ್ ಈಗ ಬ್ಯಾಂಕಿನ ಪತನಕ್ಕಾಗಿ ಆರ್ಥಿಕ ಹಿಂಜರಿತ ಮತ್ತು ನೋಟು ಅಮಾನ್ಯೀಕರಣವನ್ನು ದೂರಬಹುದು. ಆದರೆ, ಇವರೇ ಅದನ್ನು ಸರಕಾರದ ಮಾಸ್ಟರ್ ಸ್ಟ್ರೋಕ್ ಎಂದು ಕೊಂಡಾಡಿದ್ದರು. ಬ್ಯಾಂಕಿನ ರಕ್ತಸಿಕ್ತ ಲೆಕ್ಕಪತ್ರದ ವಿವರಗಳು ಏನನ್ನು ತೋರಿಸುತ್ತವೆ ಎಂದರೆ ಹಿಂದೆ ಬಿಲಿಯಾಧಿಪತಿಗಳಾಗಿದ್ದು ನಂತರ ಆಸ್ತಿಪಾಸ್ತಿಗಳ ವಿನಾಶಕರಾಗಿ ಪರಿಣಮಿಸಿದ ಮೂವರು ಮಹಾನುಭಾವರು ಈ ಬ್ಯಾಂಕಿನ ಪತನಕ್ಕೆ ಮುನ್ನುಡಿ ಬರೆದಿದ್ದಾರೆ.

ಅವರೇ ಅನಿಲ್ ಅಂಬಾನಿ (ರಿಲಯನ್ಸ್ ಗ್ರೂಪ್), ಕಪಿಲ್ ವಾಧ್ವಾನ್ (ಡಿಎಚ್‌ಎಫ್‌ಎಲ್) ಮತ್ತು ಸುಭಾಷ್ ಚಂದ್ರ (ಎಸ್ಸೆಲ್ ಗ್ರೂಪ್). ಇವರು ಅಪಾಯದೊಂದಿಗೆ ಆಟವಾಡುವ ಚಾಳಿಯ ಶೋಕಿಲಾಲ ಕಪೂರ್ ಜೊತೆ ನಡೆಸಿದ ಗುಪ್ತ ವ್ಯವಹಾರಗಳ ಈಗ ತನಿಖಾ ಸಂಸ್ಥೆಗಳ ಭೂತಕನ್ನಡಿಯ ಅಡಿಯಲ್ಲಿವೆ. ಇವರು ಬ್ಯಾಂಕಿನ ಒಟ್ಟು 50,000 ಕೋಟಿ ರೂ.ಗಳ ಒತ್ತಡದ ಆಸ್ತಿಯಲ್ಲಿ 20,000 ಕೋಟಿ ರೂ.ಗಳ ಆಸ್ತಿಯನ್ನು ಪಡೆಯಲು ಈ ಮೂವರು ಕಪೂರ್‌ಗೆ ನೆರವಾದರು ಎಂದು ಬ್ಯಾಂಕಿನ ಕಾರ್ಪೊರೇಟ್ ಸಾಲಗಳ ಲೆಕ್ಕಪುಸ್ತಕವು ತೋರಿಸುತ್ತದೆ. ಇದಕ್ಕಾಗಿ ಕಪೂರ್ ವಂಚನೆಯ ಪ್ರತಿಯೊಂದು ಕೊಳಕು ತಂತ್ರಗಳನ್ನು ಬಳಸಿದ್ದಾರೆ- ರೌಂಡ್ ಟ್ರಿಪ್ಪಿಂಗ್ ಅಂದರೆ ಮಾಲಕರೇ ಅಥವಾ ಸಹವರ್ತಿಗಳು ಹೊಂದಿರುವ ಶೆಲ್ ಕಂಪನಿಗಳಿಗೆ ಅಂದರೆ ನಕಲಿ ಕಂಪನಿಗಳಿಗೆ ಸಾಲ ನೀಡುವುದು, ಕಪ್ಪು ಹಣ ಬಿಳಿ ಮಾಡುವುದು, ಒಳಗಿನ ಗುಟ್ಟು ಬೇರೆಯವರಿಗೆ ನೀಡಿ ಲಾಭ ಮಾಡುವುದು (ಇನ್‌ಸೈಡರ್ ಟ್ರೇಡಿಂಗ್), ಭ್ರಷ್ಟಾಚಾರ, ಸಾಂಸ್ಥಿಕ ದುರಾಡಳಿತ ಇತ್ಯಾದಿ.

ಈ ಬೇಜವಾಬ್ದಾರಿ ಬ್ಯಾಂಕ್ ಮಾಲಕ ಅಪಾಯಕಾರಿ ಅಟಗಳನ್ನು ವಿಸ್ತರಿಸಿ, ತಾನೊಬ್ಬ ಬಹುದೊಡ್ಡ ಸಾಲ ನೀಡಿಕೆದಾರ ಎಂದು ಎಂದು ಸಾಬೀತುಪಡಿಸುತ್ತಿರುವಾಗ ತಾನೊಂದು ಚತುರ ನಿಯಂತ್ರಕ ಸಂಸ್ಥೆ ಎಂಬ ರಿಸರ್ವ್ ಬ್ಯಾಂಕಿನ ಪ್ರತಿಷ್ಟೆ ನಡುಗಲು ಆ‌ರಂಭಿಸಿತು.

ಪ್ರಸ್ತುತ ನಡೆಯುತ್ತಿರುವ ತನಿಖೆಯು ಬ್ಯಾಂಕಿನ ಬಾಕಿ ಸಾಲಗಳು 2013-14ರಲ್ಲಿ 55,000 ಕೋಟಿ ರೂ.ಗಳಿದ್ದದ್ದು, 2018-19ರಲ್ಲಿ ಬಹುಪಟ್ಟು ಹೆಚ್ಚಳವಾಗಿ 2.4 ಕೋಟಿ ರೂ.ಗಳಿಗೆ ತಲಪಿದವು ಎಂಬುದನ್ನು ತೋರಿಸುತ್ತದೆ. ಇದು ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ನಡೆದಿದೆ. ಬ್ಯಾಂಕಿನ ಬಾಕಿ ಸಾಲವು 2016-17ರಲ್ಲಿದ್ದ 1.3 ಲಕ್ಷ ಕೋಟಿಯಿಂದ ಎರಡೇ ವರ್ಷಗಳಲ್ಲಿ  80 ಶೇಕಡಾ ರಹಿತ ಕ್ಷೇತ್ರಗಳು ಎಂದರೆ, ಖಾಸಗಿ ನಿರ್ಮಾಣಗಾರರಿಗೆ, ಪ್ರವಾಸೋದ್ಯಮ, ಸೇವೆಗಳು, ವೈಯಕ್ತಿಕ ಸಾಲ ಇತ್ಯಾದಿಗಳಿಗೆ ನೀಡಿದ ಸಾಲ ಅಸಹಜವಾದ ಏರಿಕೆ ಕಂಡಿತು- ಅದೂ ಎಲ್ಲಾ ಭಾರತೀಯ ಕಂಪನಿಗಳು ನಿರಾಶರಾಗಿ 2018-19ರ ವಿಸ್ತರಣಾ ಯೋಜನೆಗ ಕಸದ ಬುಟ್ಟಿಗೆ ಎಸೆದಿರುವ ಸಂದರ್ಭದಲ್ಲಿ! ಇದೇ ಸಂದರ್ಭದಲ್ಲಿ ದುಡಿಯದ ಬಂಡವಾಳವೂ ಅಸಹಜವಾಗಿ ಏರಿಕೆ ಕಂಡಿದೆ. ತುರ್ತು ನಿಧಿಯು 2017-18ರಲ್ಲಿ 1,553.8 ಕೋಟಿ ರೂ. ಇದ್ದದ್ದು, 2018-19ರಲ್ಲಿ ಒಮ್ಮೆಲೇ 272 ಶೇಕಡಾ ಏರಿ 5,777.56 ಕೋಟಿಗೆ ತಲಪಿತು. ಅದೇ ಹೊತ್ತಿಗೆ ಲಾಭವು 2018-19ರ ವಾರ್ಷಿಕ ವರದಿಯಂತೆ 59 ಶೇಕಡಾ ಇಳಿದು 1,720.28 ಕೋಟಿ ರೂ.ಗಳಿಗೆ ತಲಪಿತು.

ಬ್ಯಾಂಕಿನ ಅಂದಾಜು ಅಪಾಯಕಾರಿ ಸಾಲವು 46,000 ಕೋಟಿ ರೂ.ಗಳಷ್ಟಿದೆ ಎಂದು ಜೆಪಿ ಮೋರ್ಗನ್ ಹೇಳಿದ್ದರೆ, ಕೆಲವು ಆರ್ಥಿಕ ತಜ್ಞರು 55,000 ಕೋಟಿ ರೂ. ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಕಳೆದ ನಾಲ್ಕೈದು ವರ್ಷಗಳಲ್ಲಿ ಉಂಟಾದವುಗಳು. ಅತ್ಯಂತ ಹೆಚ್ಚು ಸಾಲ ಪಡೆದ 20 ಖಾತೆಗಳ ಸಾಲವು ಒಂದು ವರ್ಷ ಹಿಂದೆ 48,435.4 ಕೋಟಿ ರೂ. ಇದ್ದದ್ದು ಮಾರ್ಚ್ 31, 2019ರಲ್ಲಿ 61,799.3 ಕೋಟಿ ರೂ.ಗಳಿಗೆ ಏರಿರುವುದು ಸಾಲ ನೀಡಿಕೆಯು ಕೆಲವೇ ಆಪ್ತರಿಗೆ ಸೀಮಿತಗೊಳ್ಳುತ್ತಿತ್ತು ಎಂಬುದನ್ನು ಸೂಚಿಸುತ್ತದೆ.

ಕಳೆದ 2-3 ವರ್ಷಗಳಿಂದ ಬಿಲಿಯಾಧಿಪತಿಗಳ ಏಣಿಯಿಂದ ಉರುಳುತ್ತಲೇ ಬಂದಿರುವ ಅನಿಲ್ ಅಂಬಾನಿ ಮತ್ತು ಈ ಬ್ಯಾಂಕಿನ ಜೊತೆ ಸಂಬಂಧ ಹೊಂದಿರುವ ಬಹುತೇಕ ಎಲ್ಲಾ ಉದ್ಯಮ ಸಂಸ್ಥೆಗಳು ಉರುಳುತ್ತಲೇ ಇರುವುದು ಬ್ಯಾಂಕಿನ ದುರ್ಗತಿಗೆ ಕಾರಣ. ಡಿಸೆಂಬರ್ 31, 2019ರ ಲೆಕ್ಕಾಚಾರದಂತೆ ಅನಿಲ್ ಅಂಬಾನಿಯ ಟೆಲಿಕಾಂ, ಮೂಲಸೌಕರ್ಯ, ನೌಕಾ ಮತ್ತು ವಿದ್ಯುತ್ ಕ್ಷೇತ್ರದ ಕಂಪನಿಗಳು ಯೆಸ್ ಬ್ಯಾಂಕಿಗೆ 43,800 ರೂ. ಮುಳುಗಿಸಿವೆ. ಇದರಲ್ಲಿ ಕಾಲು ಭಾಗ ಯೆಸ್ ಬ್ಯಾಂಕಿನಿಂದ ಪಡೆದುದಾಗಿದೆ. ಈ ಎಲ್ಲಾ ಕಂಪನಿಗಳು ಇಸ್ಪೀಟ್ ಎಲೆಗಳಂತೆ ಉರುಳಿದವು. ಹಣಕಾಸು ಒದಗಿಸುವವರು ಭಾರೀ ತಳಮಳಕ್ಕೆ ಒಳಗಾದರು.

ಯೆಸ್ ಬ್ಯಾಂಕ್ ಭಾರಿ ಪ್ರಮಾಣದಲ್ಲಿ ಶೇರುಗಳ ಅಡಮಾನಿನ ಆಧಾರದಲ್ಲಿ ಸಾಲಗಳನ್ನು ನೀಡಲು ಆರಂಭಿಸಿತು. ಇದು ಕಡಲ ತಡಿಯಲ್ಲಿ ನೆಟ್ಟಗೆ ನಿಂತಂತೆ. ಕಾಲಡಿಯ ಉಸುಕು ಅಥವಾ ಹೊಯ್ಗೆ ಕೊಚ್ಚಿಹೋಗಿ ಯಾವಾಗ ಉರುಳುವಿರೋ ಗೊತ್ತಾಗದು. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ 685 ಕೋಟಿ ಕೋಟಿ ರೂ.ಗಳ ಸಾಲ ಬಾಕಿ ಇರಿಸಿ ಇದೇ ಅಡವು ಸಾಲದ ಮೇಲೆ ತನ್ನದೇ ಸಬ್ಸಿಡರಿ ಕಂಪನಿಯಾದ ರೋಸಾ ಪಲರ್ ಸಪ್ಲೈ ಕಂಪನಿಯಿಂದ 30 ಶೇಕಡಾ ಪಾಲುದಾರಿಕೆ ಖರೀದಿಸಿತು.

ಸುಬಾಷ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ಅದೇ ರೀತಿಯಲ್ಲಿ 3,330 ಕೋಟಿ ರೂ.ಗಳ ಧೋಕಾ ಮಾಡಿತು. ಈ ರೀತಿಯಲ್ಲಿ 20 ದೊಡ್ಡ ಸಾಲಗಾರ ಕುಳಗಳು ಬ್ಯಾಂಕಿನ ಮಾಲಕರ ಸಹಕಾರದ ಮೂಲಕವೇ ಸಾವಿರಾರು ಕೋಟಿ ಸಾಲ ಮಾಡಿ ಮುಳುಗಿಸಿದ್ದಾರೆ. ಠೇವಣಿದಾರರ ಹಣ ಮತ್ತು ನಂಬಿಕೆ ಮುಳುಗಿಸಿದ್ದಾರೆ. ಇದು ಸರಕಾರ ಜನರಿಗೆ ಒದಗಿಸುತ್ತಿರುವ ಆರ್ಥಿಕ ಭದ್ರತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...