Homeಮುಖಪುಟ"ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಭವಿಷ್ಯದಲ್ಲಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತವೆ"

“ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಭವಿಷ್ಯದಲ್ಲಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತವೆ”

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಹೆಚ್ಚು ಹರಿದಾಡಿದ ಜೋಕು “ಲಾಭ ಖಾಸಗೀಕರಣಗೊಂಡಿದೆ ಮತ್ತು ನಷ್ಟ ರಾಷ್ಟ್ರೀಕರಣಗೊಂಡಿದೆ” ಎಂದು. ಭಾರತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಂಡು, ಆರ್.ಬಿ.ಐ ತೆಗೆದುಕೊಂದಿರುವ ಕ್ರಮಗಳ ಹಿನ್ನೆಲೆಯಲ್ಲಿ ಮತ್ತು ಈಗ ಗ್ರಾಹಕರ ಹಿತದೃಷ್ಟಿಯಿಂದ, ಈ ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ರಾಷ್ಟ್ರೀಕೃತ ಬ್ಯಾಂಕ್ ಎಸ್ ಬಿ ಐಗೆ ಆರ್.ಬಿ.ಐ/ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯೆಸ್ ಬ್ಯಾಂಕಿನ 49% ಶೇರುಗಳನ್ನು ಖರೀದಿಸಿ, ಅಲ್ಲಿನ ಗ್ರಾಹಕರ ಆತ್ಮವಿಶ್ವಾಸವನ್ನು ಮರುಕಳಿಸಲು ಎಸ್.ಬಿ.ಐ ಮುಂದಾಗಿದೆ. ಇಂತಹ ಪರಿಸ್ಥಿತಿಗೆ ಬಂದದ್ದು ಹೇಗೆ? ಇಂತಹ ಪರಿಹಾರಗಳು ಶಾಶ್ವತವೇ? ಈ ಬಿಕ್ಕಟ್ಟಿನ ಮತ್ತು ಮುಂದೆ ಸೃಷ್ಟಿಯಾಗಬಹುದಾದ ಬಿಕ್ಕಟ್ಟುಗಳಿಂದ ದೇಶದ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳು ಎಂತಹುವು ಎಂಬುದರ ಬಗ್ಗೆ ಅಜೀಮ್ ಪ್ರೇಮ್‍ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮಿತ್ ಬಾಸೊಲೆ ನ್ಯಾಯಪಥದೊಂದಿಗೆ ಚರ್ಚಿಸಿದ್ದಾರೆ.

ಪ್ರ: ಕಳೆದ ಐದಾರು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟುಗಳು ಸಾರ್ವಜನಿಕವಾಗಿ ಬಹಿರಂಗವಾಗುತ್ತಿವೆ. ಈಗ ಯೆಸ್ ಬ್ಯಾಂಕ್ ಬಿಕ್ಕಟ್ಟು ಬೃಹತ್ತಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದರ ಹಿನ್ನೆಲೆ ಮತ್ತು ಸ್ವರೂಪ ಏನು?

ನವ ಉದಾರೀಕರಣ ನೀತಿಗಳು ಭಾರತಕ್ಕೆ ಕಾಲಿಡುವ ಮುಂಚೆ ಭಾರತದಲ್ಲಿ ಬ್ಯಾಂಕುಗಳು ಹಲವು ನಿಯಂತ್ರಣಗಳಿಗೆ ಒಳಪಟ್ಟಿದ್ದವು. ನಂತರ ನಮ್ಮಲ್ಲಾಗಲೀ ಮತ್ತು ಅತಿ ದೊಡ್ಡ ಮಟ್ಟದಲ್ಲಿ ಅಮೆರಿಕಾದಲ್ಲಾಗಲೀ, ಬ್ಯಾಂಕುಗಳ ಮೇಲಿನ ನಿಯಂತ್ರಣವನ್ನು ಭಾರಿಯಾಗಿ ಸಡಿಲಿಸಲಾಯಿತು. ಖಾಸಗಿ ಬ್ಯಾಂಕುಗಳಿಗೆ ಅವಕಾಶ ಕೊಟ್ಟ ಮೇಲೆ ಅವರು ಲಾಭ, ಸಣ್ಣ ಅವಧಿಯ ಗಳಿಕೆ ಬಿಟ್ಟರೆ ದೂರದೃಷ್ಟಿಯ ಚಿಂತನೆ ಅಥವಾ ಜನಕಲ್ಯಾಣ ಯೋಜನೆಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ಆದುದರಿಂದಲೇ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರತ್ಯೇಕವಾಗಿ ಇಟ್ಟಿದ್ದು. ಈ ಕ್ಷೇತ್ರದಲ್ಲಿ ಸಮಸ್ಯೆಯಾದರೆ ಸಮಾಜದ ಉಳಿದ ಎಲ್ಲಾ ವಲಯಗಳ ಮೇಲೆ ಅದು ಪರಿಣಾಮ ಬೀರುತ್ತೆ.

ಮೊದಲ ದಶಕದಲ್ಲಿ ಭಾರತದಲ್ಲಿ ಅಭಿವೃದ್ಧಿ ಮುಂಚೂಣಿಯಲ್ಲಿತ್ತು. ಎನ್‍ಡಿಎ-1 ಆಳ್ವಿಕೆಯ ಕೊನೆಯ ಭಾಗ, ಯುಪಿಎ-1 ಮತ್ತು ಯುಪಿಎ-2ರ ಸಮಯದಲ್ಲಿ ವೇಗವಾದ ಆರ್ಥಿಕ ಬೆಳವಣಿಗೆ ಕಂಡೆವು. ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ವಲಯಕ್ಕೆ ಸಾಕಷ್ಟು ಹಣ ಹರಿದುಬಂತು. ಈ ವಲಯಗಳು ಆರ್ಥಿಕತೆಗೆ ಸಾಕಷ್ಟು ಇಂಬು ಕೊಡುತ್ತಾ ಬಂದವು. ಇದೇ ಸಮಯದಲ್ಲಿ ಇದರ ಭಾಗವಾಗಿ ಹೊಸ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಹಲವು ಸಾಲಗಳನ್ನು ಬ್ಯಾಂಕುಗಳಿಂದ ತೆಗೆದುಕೊಳ್ಳಲಾಯಿತು. ಈ ಸಾಲ ತೆಗೆದುಕೊಳ್ಳುತ್ತಿರುವವರ ವಿಶ್ವಾಸಾರ್ಹತೆಯ ಬಗ್ಗೆ ಹೆಚ್ಚು ಯೋಚಿಸದೆ, ಇಂತಹ ರಿಸ್ಕ್ ತೆಗೆದುಕೊಳ್ಲುವುದು ಸೂಕ್ತವೇ ಪತ್ತೆ ಹಚ್ಚದೆ, ಲಾಭದ ಮೇಲಷ್ಟೇ ಕಣ್ಣಿಟ್ಟು ಬ್ಯಾಂಕುಗಳು ಯಥೇಚ್ಛವಾಗಿ ಸಾಲ ಕೊಡುತ್ತಾ ಬಂದರು. ಇಂತಹುದಕ್ಕೆ ಒಳ್ಳೆಯ ಉದಾಹರಣೆ ಯೆಸ್ ಬ್ಯಾಂಕ್. ಅವರು ಬಂದಿದ್ದು ಸುಮಾರು 2000ನೇ ಇಸವಿಯಲ್ಲಿ ಮತ್ತು ಇಂತಹ ಹಲವು ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ಸಂಸ್ಥೆಗಳಿಗೆ ಸಾಲ ಕೊಡುತ್ತಾ ಹೋದರು. ಈ ಬ್ಯಾಂಕಿನ ಸಾಲದ ಪಟ್ಟಿ ಸಿಕ್ಕಾಪಟ್ಟೆ ಹೆಚ್ಚಾಯಿತು. ಸಾಮಾನ್ಯವಾಗಿ ಅಪಾಯಕಾರಿ ಸಾಲ ಎಂದು ಪರಿಗಣಿಸುವುದನ್ನು ಇಂತಹ ಬ್ಯಾಂಕುಗಳು ಯಾವುದೇ ಮುಂದಾಲೋಚನೆ ಇಲ್ಲದೆ ಕೊಡುತ್ತಾ ಬಂದವು. ಆರ್ಥಿಕತೆ ಬೆಳೀತಾ ಇದೆ ಎಂಬ ಒಂದೇ ನೋಟದಿಂದ, ಮುಂದೆ ಬರಬಹುದಾದ ಸಂಕಷ್ಟಗಳನ್ನು ಊಹಿಸದೆ ಇದ್ದುದು ಇದಕ್ಕೆ ದೊಡ್ಡ ಕಾರಣ. ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿಯೂ ಹಲವು ಮಾರಕ ಹಿತಾಸಕ್ತಿಯುಳ್ಳ ಜನ ಕೆಲಸ ಮಾಡಿದ್ದನ್ನು ನಾವು ನೋಡಿದ್ದೇವೆ. ದೊಡ್ಡ ಸಾಲಗಾರರು ಇದ್ದರು. ಆ ಸಾಲಗಾರರು ಮರುಪಾವತಿಗೆ ಅರ್ಹರಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರಿಗೆ ಸಾಲಗಳನ್ನು ಕೊಡುತ್ತಾ ಬಂದರು. ಇದರ ಪರಿಣಾಮ ಆವರು ಎದುರಿಸಬೇಕಿಲ್ಲ ಎಂದು ಅವರಿಗೆ ತಿಳಿದಿತ್ತು. ಅನಿಯಂತ್ರಿಯ ಬ್ಯಾಂಕಿಂಗ್ ಅಂದರೆ ಇದೇ.

ಪ್ರ: ಈಗ ಯೆಸ್ ಬ್ಯಾಂಕ್ ರಕ್ಷಣೆಗಾಗಿ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ದೇಶದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಪರಿಪಕ್ವವಾದವೇ?

ಈಗ ಸದ್ಯಕ್ಕೆ ಇವು ಸಹಾಯ ಮಾಡುವಂತಹುವೇ. ಆದರೆ ದೂರದೃಷ್ಟಿಯಲ್ಲಿ ಇದು ಒಳ್ಳೆಯದಲ್ಲ. ಇದು ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಡಿಮಾನೆಟೈಸೇಶನ್ ಸಮಯದಲ್ಲಿ ಆದದ್ದೇ ಇದು. ಇಂತಹ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ಇರುವ ನಂಬಿಕೆಗೆ ಬೆದರಿಕೆ ಒಡ್ಡುತ್ತವೆ. ನನ್ನ ದುಡ್ಡು ನಾನು ಹಿಂಪಡೆಯಲು ಇಷ್ಟು ಕಷ್ಟ ಪಡಬೇಕೆಂದರೆ ಮುಂದಿನ ಕತೆ ಏನು, ಮುಂದೆ ಯಾವ ಬ್ಯಾಂಕು ವಿಫಲ ಆಗಬಹುದು ಎಂತಹ ಸಂಗತಿಗಳು ಜನರನ್ನು ಆತಂಕಕ್ಕೀಡುಮಾಡುತ್ತವೆ. ಇದರ ಪರಿಣಾಮಗಳು ದೂರದ ಆರ್ಥಿಕ ವ್ಯವಸ್ಥೆಗೆ ಋಣಾತ್ಮಕವಾದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಕಿತ್ತೇನೋ. ಆದರೆ ಇಷ್ಟು ದಿನಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಏಕಾಏಕಿ ಇಂತಹ ಕ್ರಮಗಳಿಗೆ ಮುಂದಾಗಿರುವುದು ಆಶ್ಚರ್ಯ ತರಿಸಿದೆ.

ಪ್ರ: ಪ್ರಸಕ್ತ ಕೇಂದ್ರ ಸರ್ಕಾರದ ನೀತಿಗಳು ಇಂತಹ ಬಿಕ್ಕಟ್ಟುಗಳಿಗೆ ಇನ್ನಷ್ಟು ಅವಕಾಶ ನೀಡುತ್ತಿವೆಯೇ?

ಈ ಸಮಸ್ಯೆಗಳಿಗೆ ಹೆಚ್ಚು ಕಾರಣ ಅಭಿವೃದ್ಧಿ ವೇಗವಾಗಿದ್ದ 2014ರಕ್ಕಿಂತ ಹಿಂದಿನ ವರ್ಷಗಳೇ. 2014ರ ನಂತರ ಆರ್ಥಿಕತೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಬ್ಯಾಂಕಿಂಗ್ ದೃಷ್ಟಿಯಿಂದ ಈ ಸರ್ಕಾರ ಬಿಕ್ಕಟ್ಟಿನ ಸಮಯದಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತಿದೆ (ಆರ್‍ಬಿಐ ಬ್ಯಾಂಕುಗಳಿಗೆ ತನ್ನ ಆಸ್ತಿಯನ್ನು ಘೋಷಿಸುವಂತೆ ಮಾಡಿದ್ದು ಆಗಲಿ, ಇಂತಹ ಕ್ರಮಗಳು). ಆದರೆ ಈ ಸರ್ಕಾರದ ಇತರ ಆರ್ಥಿಕ ನೀತಿಗಳು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಸಾಮಾನ್ಯವಾಗಿ ಇಂತಹ ಬಿಕ್ಕಟ್ಟುಗಳು ಯಾರ ಸರ್ಕಾರದ ಸಮಯದಲ್ಲಿ ಬಹಿರಂಗವಾಗುತ್ತದೋ ಅಂತಹ ಸರ್ಕಾರಗಳು ಕೆಂಗಣ್ಣಿಗೆ ಗುರಿಯಾಗುತ್ತವೆ. ಈ ನಿಟ್ಟಿನಲ್ಲಿ ಈ ನಿರ್ದಿಷ್ಟ ಬಿಕ್ಕಟ್ಟಿಗೆ ಈ ಸರ್ಕಾರ ಹೊಣೆಯಲ್ಲದೆ ಹೋದರೂ, ಉಳಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಈ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಡಿಮಾನೆಟೈಸೇಶನ್ ಅತಿ ಕೆಟ್ಟ ನಿರ್ಧಾರ ಆಗಿತ್ತು. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟುಮಾಡಿದ್ದಲ್ಲದೆ, ಆಗಲೇ ಹೇಳಿದಂತೆ ಜನರ ನಂಬಿಕೆಯ ದೃಷ್ಟಿಯಿಂದ ಕೂಡ ವಿಫಲ ನಡೆ. ಆಮೇಲೆ ಜಿಎಸ್‍ಟಿಯನ್ನು ಅವರು ಕಾರ್ಯರೂಪಗೊಳಿಸಿದ ರೀತಿ ಕೂಡ ದೊಡ್ಡ ಹೊಡೆತ ಕೊಟ್ಟಿತು. ಮಾಹಿತಿ, ಅಂಕಿ-ಅಂಶ, ಪಾರದರ್ಶಕತೆ ನಿಟ್ಟಿನಲ್ಲೂ ಅವರು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿಲ್ಲ. ಇವೆಲ್ಲಾ ಅಪನಂಬಿಕೆಯ ವಾತಾವರಣಕ್ಕೆ ಕೊಡುಗೆ ನೀಡಿವೆ. ಆಮೇಲೆ ಕೋಮು ಉದ್ವಿಗ್ನತೆಯ ಸಂಗತಿಗಳು ಕೂಡ ಇದಕ್ಕೆ ಸಂಬಂಧಿಸಿರುವುದೇ. ಇದೆಲ್ಲಾ ಸಾಮಾಜಿಕ ನಂಬಿಕೆಗೆ ಧಕ್ಕೆ ತರುತ್ತವೆ. ಸಂಸ್ಥೆಗಳ ಮೇಲೆ ಹಲವು ಸ್ತರದ ನಂಬಿಕೆಗಳಿಗೆ ಸವಾಲು ಒಡ್ಡುವುದರಲ್ಲಿ ಈ ಸರ್ಕಾರದ ಪಾತ್ರ ದೊಡ್ಡದಿದೆ. ಪ್ರಸಕ್ತ ಸರ್ಕಾರದ ಅಡಿ ಆರ್‍ಬಿಐ ತನ್ನ ಸ್ವಾಯತ್ತತೆಯಲ್ಲಿ ರಾಜಿ ಮಾಡಿಕೊಂಡಿರುವುದು ಮತ್ತೊಂದು ಕಾರಣ. ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್, ಉಪ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದು, ಸರ್ಕಾರ ಆರ್‍ಬಿಐನ ಮೀಸಲು ನಿಧಿಯ ವರ್ಗಾವಣೆಗೆ ಪಟ್ಟು ಹಿಡಿದಿದ್ದು ಇತ್ಯಾದಿ. ಇವೆಲ್ಲಾ ಘಟಿಸುವುದಿಲ್ಲ ಎಂದಲ್ಲ, ಆದರೆ ಆರ್‍ಬಿಐ ಮೇಲೆ ಒತ್ತಡ ತರುವುದು ಸರಿ ಅಲ್ಲ.

ಪ್ರ: ಈಗ ಒಂದು ರಾಷ್ಟ್ರೀಕೃತ ಬ್ಯಾಂಕು ಖಾಸಗಿ ಬ್ಯಾಂಕಿನ ರಕ್ಷಣೆಗೆ ನಿಂತಿರುವ ಸಮಯದಲ್ಲಿ, ಸಾಮಾನ್ಯ ವ್ಯಕ್ತಿಗೆ ಇದು ಹೇಗೆ ಪರಿಣಾಮ ಬೀರುತ್ತದೆ?

ಮೊದಲಿಗೆ ಎನ್‍ಪಿಎಗಳ ಸಮಸ್ಯೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಹ ಇದೆ. ಇಂತಹ ಸಮಯದಲ್ಲಿ ಖಾಸಗಿ ಬ್ಯಾಂಕುಗಳ ಎನ್‍ಪಿಎ ಸಮಸ್ಯೆಯನ್ನು ಸರಿಪಡಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋದರೆ ಹೆಚ್ಚಿನ ಉಪಯೋಗವನ್ನು ನಿರೀಕ್ಷಿಸಲು ಸಾಧ್ಯ ಇಲ್ಲ. ಈಗ ಯಾರೋ ಖಾಸಗಿ ಸಂಸ್ಥೆ ಹಿಂದಿರುಗಸದೆ ಇದ್ದ ಸಾಲದ ಪರಿಣಾಮವಾಗಿ ತಲೆದೋರುವ ಬಿಕ್ಕಟ್ಟನ್ನು ಸರಿಪಡಿಸಲು ಎಸ್‍ಬಿಐ ಬ್ಯಾಂಕ್ ಮುಂದೆ ಬಂದಾಗ, ಆ ಕೊರತೆ ಹಣವನ್ನು ಸರಿದೂಗಿಸಲು ಸಂಪನ್ಮೂಲಗಳನ್ನು ಎಸ್‍ಬಿಐ ಯಾವುದೋ ಒಂದು ಮೂಲದಿಂದ ಕ್ರೋಢೀಕರಿಸಬೇಕು. ಅದು ಎಸ್‍ಬಿಐನಲ್ಲಿರುವ ಠೇವಣಿ ಆಗಿರಬಹುದು. ಅಥವಾ ಆರ್‍ಬಿಐ ಹೊಂದಿರುವ ಮೀಸಲು ಹಣ ಆಗಿರಬಹುದು. ದೇಶದ ಹಣಕಾಸು ಸರಬರಾಜಿನ ಮೇಲೆ ಆರ್‍ಬಿಐ ನಿಯಂತ್ರಣ ಇದ್ದೇ ಇದೆ. ಆದರೆ ಇದರ ಪರಿಣಾಮ ಏನೆಂದರೆ, ಆರ್ಥಿಕವ್ಯವಸ್ಥೆಯಲ್ಲಿ ನಿಜವಾದ ಅಭಿವೃದ್ಧಿ ಇಲ್ಲದೆ ಹೋದಾಗ, ಅಂತಹ ಹೂಡಿಕೆಗಳನ್ನು ತರುವುದು ಕಷ್ಟ ಮತ್ತು ಅಪಾಯಕಾರಿ.

ಇದು ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಏನೆಂದರೆ, ಕ್ರೆಡಿಟ್ ಪ್ರೀಜಿಂಗ್ ಅಥವಾ ಬ್ಯಾಂಕುಗಳಿಂದ ನೈಜ್ಯ ವ್ಯವಹಾರಗಳಿಗೆ ಸಾಲ ಹುಟ್ಟದೆ ಇರುವುದು. ಕೆಟ್ಟ ಸಾಲಗಾರರ ಹೊಣೆ ಒಳ್ಳೆ ಇತಿಹಾಸ ಇರುವವರು ಹೊರುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಸಾಲಗಳು ಸಿಗುವುದು ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೆಲೆ ಭಾರಿ ಹೊಡೆತ ಬೀಳುತ್ತದೆ. ಅವರಿಗೆ ಬೇರೆ ವಲಯಗಳಿಂದ ಹೂಡಿಕೆಗಳು ಇರುವುದಿಲ್ಲ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಲವು ಉದ್ಯೋಗಗಳನ್ನು ಸೃಷ್ಟಿಸಿವೆ. ಇವುಗಳಿಗೆ ಬ್ಯಾಂಕ್ ಹಣ ಕೊಡುವುದನ್ನು ನಿಲ್ಲಿಸಿದರೆ, ಅವರ ವಿಸ್ತರಣೆ, ಉತ್ಪಾದನೆ ಎಲ್ಲವೂ ಕಡಿಮೆಯಾಗುತ್ತದೆ.

ಇನ್ನು ಅಸಂಘಟಿತ ಆರ್ಥಿಕ ವಲಯಕ್ಕೆ ಬಂದರೆ ಇದು ಟ್ರಿಕಲ್ ಡೌನ್ (ಮೇಲಿಂದ ಎಲ್ಲರಿಗೂ ಬೀರುವ) ಪರಿಣಾಮ. ಅವರು ಬ್ಯಾಂಕಿಂಗ್‍ಗೆ ಕ್ಷೇತ್ರದ ಜೊತೆಗೆ ಸಂಬಂಧ ಇಟ್ಟುಕೊಳ್ಳದೆ ಇದ್ದರೂ, ಅವರ ವ್ಯವಹಾರಗಳು ಉಳಿದ ಆರ್ಥಿಕತೆ ಜೊತೆಗೆ ಬೆಸೆದುಕೊಂಡಿದೆ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆಗಲಿ, ಜನರ ಕೊಳ್ಳುವ ಶಕ್ತಿ ಆಗಲೀ, ಇವುಗಳ ಮೇಲೆ ಅವಲಂಬಿತವಾಗಿದೆ. ಜನ ಖರ್ಚು ಮಾಡುವುದನ್ನ ನಿಲ್ಲಿಸಿದರೆ, ಇದರ ಭಾರ ಈ ಅಸಂಘಟಿತ ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುತ್ತದೆ. ಗ್ರಾಹಕ ಬೇಡಿಕೆ ಕಡಿಮೆಯಾದಾಗ ಇಂತಹ ವಲಯದ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತದೆ.

ಪ್ರ: ಅಭಿವೃದ್ಧಿ ಎಂಬ ಸಂಗತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು. ಸರ್ಕಾರಗಳು ಜನರ ಮುಂದೆ ಇಡುವ ಅಭಿವುದ್ಧಿ ಅಂಕಿ-ಅಂಶಗಳು ಎಷ್ಟು ನಂಬಲರ್ಹ?

ಸರ್ಕಾರಗಳು ಹೇಳುತ್ತಿದ್ದ ಅಭಿವೃದ್ಧಿ ಎಲ್ಲಾ ವಲಯಗಳಿಂದ ಸಾಧ್ಯವಾದದ್ದಲ್ಲ. ಇದು ಹೆಚ್ಚು ದಾಖಲಾಗುತ್ತಿದ್ದುದು ವಿತ್ತೀಯ, ವಿಮೆ, ಐ ಟಿ ಸೇವೆಗಳು ಮತ್ತು ಮೂಲಸೌಕರ್ಯದ ವಲಯಗಳಿಂದ. ಆದರೆ ಅತಿ ಹೆಚ್ಚು ಜನಕ್ಕೆ ಉದ್ಯೋಗ ನೀಡುವ ಕೃಷಿ ಮತ್ತು ಕೆಳಸ್ತರದ ಸೇವೆಗಳ ವಲಯ ಹಾಗೂ ಅಸಂಘಟಿತ ವಲಯಗಳಲ್ಲಿ ಅಭಿವೃದ್ಧಿ ಇತ್ತೇ ಎಂದರೆ ಇಲ್ಲ. ಆದುದರಿಂದ ಸರ್ಕಾರಗಳು ತೋರಿಸುತ್ತಿದ್ದ ಅಭಿವೃದ್ಧಿಯಿಂದ ಬಂದ ಲಾಭ ಕೇವಲ ಮೇಲಿನ 15% ಕಾಪೆರ್Çರೆಟ್ ವಲಯದ ಜನಕ್ಕೆ ಮಾತ್ರ ಸೀಮಿತವಾಗಿತ್ತು. ಈ ಶತಮಾನದ ಮೊದಲ 20 ವರ್ಷಗಳ ಅಭಿವೃದ್ಧಿ ಸಮಾಜದ ಎಲ್ಲಾ ವಲಯಕ್ಕೂ ಹರಡಲಿಲ್ಲ. ಇದರ ಮೇಲೆ ಡಿಮಾನೆಟೈಸೇಶನ್ ನಂತಹ ಕೆಟ್ಟ ನಡೆಗಳು ಹೆಚ್ಚು ಅಪಾಯವನ್ನು ತಂದು ಒಡ್ಡಿದವು.

ಇಂತಹ ಸಮಯದಲ್ಲಿ ಸರ್ಕಾರ ಏನು ಮಾಡಬೇಕು ಎಂಬ ಪ್ರಶ್ನೆ ತಲೆದೋರುತ್ತದೆ. ಏಕೆಂದರೆ ಖಾಸಗಿ ವಲಯ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಏನೂ ಮಾಡುತ್ತಿಲ್ಲ. ಅಭಿವೃದ್ಧಿ ಎಲ್ಲಾ ವಲಯಗಳಿಗೂ ಹಬ್ಬುವಂತೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಇಂತಹ ಸಮಯದಲ್ಲಿ ಸರ್ಕಾರ ನರೇಗಾದಂತಹ ಯೋಜನೆಯಲ್ಲಿ ಹೆಚ್ಚು ಹೂಡಿಗೆ ಮಾಡಬೇಕು. ಇದನ್ನು ಹಳ್ಳಿಗಳ ಜೊತೆಗೆ, ಸಣ್ಣ ಪಟ್ಟಣಗಳಿಗೂ ವಿಸ್ತರಿಸಬೇಕು. ಸಣ್ಣ ಪಟ್ಟಣಗಳಲ್ಲಿ ಕೆಲವು ವ್ಯಾವಹಾರಿಕ ವರ್ಗಗಳನ್ನು ಬಿಟ್ಟರೆ ಉಳಿದ ಜನರ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಆದುದರಿಂದ ಇಂತಹ ಪಟ್ಟಣಗಳಲ್ಲಿ ಅಸಂಘಟಿತ ವಲಯಗಳಿಗೆ ಹೂಡಿಕೆ ಬರುವಂತೆ ನೋಡಿಕೊಂಡರೆ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸುವ ಸೂಚನೆ ಇದೆ. ಇದಕ್ಕೆ 2-3 ಲಕ್ಷ ಕೋಟಿ ಹೆಚ್ಚಿನ ಹೂಡಿಕೆ ಬೇಕಾಗಬಹುದು. ಇದು ಸುಮಾರು ನಮ್ಮ ಜಿಡಿಪಿಯ 1%. ಆದುದರಿಂದ ವಿತ್ತೀಯ ಕೊರತೆ ಗುರಿಯಲ್ಲಿ 1% ಬದಲಾವಣೆ ಆಗಬಹುದು. ಅದು ಅಂತಹ ಹೊರೆಯಾಗುವುದಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿಯಾದರೆ ಹೆಚ್ಚಿನ ಆಸ್ತಿ ಸೃಷ್ಟಿಗೆ ಇಂಬು ನೀಡುತ್ತದೆ. ಇಂತಹ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರ ಯೋಚಿಸಬೇಕು.

ಬೇಡಿಕೆ ವೃದ್ಧಿಯಾದರೆ ಬ್ಯಾಂಕಿಂಗ್ ಬಿಕ್ಕಟ್ಟು ಬಗೆಹರಿಯುತ್ತದೆ ಎಂದಲ್ಲ. ಅದಕ್ಕೆ ಪ್ರತ್ಯೇಕವಾದ ನಿಯಂತ್ರಣಗಳ ಅಗತ್ಯ ಇದೆ. ಆದರೆ ಒಟ್ಟಾರೆಯಾಗಿ ಆರ್ಥಿಕತೆಯ ವೃದ್ಧಿ ಬ್ಯಾಂಕಿಂಗ್ ವಲಯಕ್ಕೆ ಸ್ವಲ್ಪ ಪುಷ್ಟಿ ನೀಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...