ನಾಳೆಯಿಂದ ಕರ್ನಾಟಕದಲ್ಲಿ ಒಂದು ವಾರಗಳ ಕಾಲ ಎಲ್ಲಾ ಕಾರ್ಯಕ್ರಮವನ್ನು ನಿಷೇಧಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯದ ಎಲ್ಲಾ ಥಿಯೇಟರ್, ಮಾಲ್, ಬಾರ್, ಪಬ್ ಬಂದ್ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಆದರೆ SSLC ಮತ್ತು PUC ಪರೀಕ್ಷೆಗಳು ಈ ಹಿಂದೆ ನಿಗದಿಯಾದಂತೆ ನಡೆಯಲಿದೆ ಎಂದರು.
ಬೆಂಗಳೂರಿನಲ್ಲಿ ನಾಳೆಯಿಂದಲೇ ಚಿತ್ರಮಂದಿರ, ಮಾಲ್, ಬಾರ್, ಪಬ್ ಒಂದು ವಾರಗಳ ಮಟ್ಟಿಗೆ ಮುಚ್ಚಲು ಆದೇಶಿಸಲಾಗಿದೆ. ರಾಜ್ಯದ ವಿವಿಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದ್ದು ಎಲ್ಲಾ ಮಾದರಿಯ ಕ್ರೀಡೆಗಳನ್ನೂ ನಿಷೇಧ ಮಾಡಲಾಗಿದೆ. ರಾಜ್ಯಾದ್ಯಂತ ಮದುವೆ ಕಾರ್ಯಕ್ರಮ ಬಂದ್ ಮಾಡಲಾಗಿದ್ದು, ವಿದೇಶ ಪ್ರವಾಸಕ್ಕೆ ತೆರಳದಂತೆ ಸಾರ್ವಜನಿಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಶಾಲೆ, ಕಾಲೇಜು ಸೇರಿ ಯಾವುದೇ ಕಚೇರಿ ಕೆಲಸಗಳು ಕೂಡ ಇರದು. ಮದುವೆ ಮತ್ತು ಇತರೆ ಸಮಾರಂಭಗಳನ್ನೂ ಮುಂದೂಡಬೇಕು. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣವಾಗಿ ಬಂದ್ ಆಚರಿಸಲಾಗುತ್ತದೆ. ಎಸಿ ಕಚೇರಿಯಲ್ಲಿ ಕೆಲಸ ಮಾಡುವವರಿಗೂ ತೊಂದರೆಯಿರುವ ಕಾರಣ ಅವರೂ ಕೂಡ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತಿಳಿಸಿದರು.
ಈಜು ಕೊಳಗಳನ್ನು ಮುಚ್ಚಿಸಲು ನಿರ್ಧರಿಸಲಾಗಿದ್ದು, ಐಟಿ-ಬಿಟಿ ಕಂಪನಿಗಳ ಉದ್ಯೋಗಸ್ಥರಿಗೆ ಮನೆಯಲ್ಲಿ ಇದ್ದೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕ್ಯಾಂಪಸ್ ಸೆಲಕ್ಷನ್, ಕ್ಯಾಂಪಸ್ ಸಂದರ್ಶನಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ. ಸಾವಿರಾರು ಸಂಖ್ಯೆಯ ಭಕ್ತರು ಸೇರುವ ಜಾತ್ರೆಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ 24 ಮಂದಿಯನ್ನು ತಪಾಸಣೆ ಮಾಡಲಾಗಿದೆ. ರಾಜ್ಯದಲ್ಲಿ ಮತ್ತಷ್ಟು ಕೊರೊನಾ ವೈರಸ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು.


