ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ ಅನಾನಾಸು ತಿಂದು ಸಾವಿಗೀಡಾದ ನಂತರ ಇದರ ಬಗ್ಗೆ ನಡೆಸಲಾಗುತ್ತಿರುವ ದ್ವೇಷ ಅಭಿಯಾನದ ವಿರುದ್ದವಾಗಿ ಕೇರಳ ವಿಭಿನ್ನವಾಗಿ ಪ್ರತಿಕ್ರಿಯಿಸಿದೆ. ವಿಶ್ವ ಪರಿಸರ ದಿನಾಚರಣೆಯಾದ ಇಂದು ಕೇರಳದ ಮಲಪ್ಪುರಂ ಜಿಲ್ಲೆಯ ದೇವಾಲಯದ ಆವರಣದಲ್ಲಿ ಕೋಮು ಸೌಹಾರ್ದತೆಯ ಭಾಗವಾಗಿ ‘ಮೈತ್ರಿ’ ಎಂಬ ಸಸಿಯನ್ನು ನೆಡಲಾಗಿದೆ.
ಮಲಪ್ಪುರಂನ ಕುನ್ನುಮ್ಮಲ್ ಶ್ರೀ ತ್ರಿಪುರಾಂತಕ ದೇವಸ್ಥಾನದ ಆವರಣದಲ್ಲಿ, ದೇವಾಲಯದ ಅರ್ಚಕ ಮಣಿಕಂಡನ್ ಎಂಬಾದಿರಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಂಡ ಸಯ್ಯಿದ್ ಮುನವ್ವರ್ ಅಲಿ ಶಿಹಾಬ್ ತಂಙಲ್ ಸೇರಿಕೊಂಡು ಸಪೋಟಾ ಸಸಿಗಳನ್ನು ನೆಟ್ಟು, ಅದಕ್ಕೆ ‘ಮೈತ್ರಿ’ ಎಂದು ಹೆಸರಿಟ್ಟರು. ಮಲಯಾಳಂ ಭಾಷೆಯಲ್ಲಿ ‘ಮೈತ್ರಿ’ ಎಂದರೆ ‘ಸ್ನೇಹ’ ಎಂದರ್ಥ.
ಈ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿರುವ ಮುಸ್ಲಿಂ ಲೀಗ್ ಮುಖಂಡ ಶಿಹಾಬ್ ತಂಙಲ್ “ಈ ಸಸಿ ಬೆಳೆದು ಮರವಾಗಿ, ಪ್ರಕೃತಿ ಪ್ರೇಮದೊಂದಿಗೆ, ಸಹಿಷ್ಣುತೆಯ ಗುರುತಾಗಿ, ನಮಗೆ ಎಂದೆಂದೂ ನೆರಳಾಗಲಿ” ಎಂದು ಬರೆದಿದ್ದಾರೆ.
മലപ്പുറം-കുന്നുമ്മൽ ശ്രീ ത്രിപുരാന്തക ക്ഷേത്ര-അങ്കണത്തിൽ ലോക പരിസ്ഥിതി ദിനമായ ഇന്ന് ക്ഷേത്ര പൂജാരി ശ്രീ മണികണ്ഠൻ…
Posted by Sayyid Munavvar Ali Shihab Thangal on Thursday, June 4, 2020
ಗರ್ಭಿಣಿ ಕಾಡು ಆನೆಯ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಮಲಪ್ಪುರಂ ಜಿಲ್ಲೆಯ ವಿರುದ್ಧದ ದ್ವೇಷ ಅಭಿಯಾನದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯು ಹೆಚ್ಚು ಮಹತ್ವ ಪಡೆದಿದೆ.
ಕೇರಳದ ಪಾಲಕ್ಕಡ್ನಲ್ಲಿ ಆನೆ ಸಾವನಪ್ಪಿದ ಘಟನೆ ನಡೆದರೂ ಸಹ ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿಯಾಗಿರುವ ಮನೇಕಾ ಗಾಂಧಿ, ಘಟನೆ ನಡೆದ ಸ್ಥಳವನ್ನು ಮಲಪ್ಪುರಂ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಮಲಪ್ಪುರಂ ಮುಸ್ಲಿಂ ಬಾಹುಳ್ಯ ಜಿಲ್ಲೆಯಾಗಿರುವುದು. ಹಾಗಾಗಿ ಇದನ್ನು ‘ಅತ್ಯಂತ ಹಿಂಸಾತ್ಮಕ ಜಿಲ್ಲೆ’ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದರು.
ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸಹ ತನ್ನ ಟ್ವೀಟ್ನಲ್ಲಿ ಆನೆ ಹತ್ಯೆ ಸ್ಥಳವನ್ನು ಪಾಲಕ್ಕಾಡ್ ಬದಲಾಗಿ ಮಲಪ್ಪುರಂ ಎಂದೇ ನಮೂದಿಸಿದ್ದರು.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಲಪ್ಪುರಂನಲ್ಲಿ ಸ್ಥಳೀಯ ಜನರಿಂದ ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸು ಹಣ್ಣನ್ನು ನೀಡಲಾಗಿದೆ ಎಂದು ಮೊದಲು ವರದಿಯಾಗಿದ್ದರೂ, ನಂತರ ಘಟನೆಯೂ ಆನೆಯೂ ಸತ್ತು ಹೋಗಿರುವುದು ಮಲಪ್ಪುರಂನಲ್ಲಿ ಅಲ್ಲ ನೆರೆಯ ಪಾಲಕ್ಕಾಡ್ ಜಿಲ್ಲೆಯಲ್ಲಿ ಎಂದು ತಿಳಿದುಬಂದಿದೆ. ಅಲ್ಲದೆ ಇದಕ್ಕೆ ಯಾರೂ ಉದ್ದೇಶ ಪೂರ್ವಕವಾಗಿ ಹಣ್ಣನ್ನು ತಿನ್ನಿಸಿಲ್ಲ, ಕಾಡುಹಂದಿಗಳಿಗೆ ಇಟ್ಟಿದ್ದ ಹಣ್ಣನ್ನು ಆನೆ ಆಕಸ್ಮಿಕವಾಗಿ ತಿಂದಿದೆ ಎಂದು ತಿಳಿದುಬಂದಿದೆ.
ಆನೆಯ ಸಾವಿಗೆ ಕಾರಣವಾದ ಒಬ್ಬ ರೈತನನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.
“ಮಲಪ್ಪುರಂ ಯಾವಾಗಲೂ ಧಾರ್ಮಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಪ್ರದಾಯವನ್ನು ಹೊಂದಿದೆ. ಆದ್ದರಿಂದ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದ ದ್ವೇಷ ಅಭಿಯಾನ ನಡೆಯುತ್ತಿರುವಾಗ, ನಾವು ಅದನ್ನು ಅಂತಹದೇ ಮಾನವೀಯ ಭಾವನಾ ಸೂಚಕಗಳಿಂದ ಎದುರಿಸಬೇಕಾಗುತ್ತದೆ” ಎಂದು ಶಿಹಾಬ್ ತಂಙಲ್ ತಿಳಿಸಿದ್ದಾರೆ ಎಂದು ಒಮನೋರಮ ವರದಿ ಮಾಡಿದೆ.
ಇಂತಹ ಘಟನೆಯ ಭಾಗವಾಗಲು ತುಂಬಾ ಸಂತೋಷವಾಗಿದೆ ಎಂದು ದೇವಾಲಯದ ಅರ್ಚಕ ಮಣಿಕಂಡನ್ ಎಂಬಾದಿರಿ ಹೇಳಿದರು. “ನಾವು ಎಂದಿಗೂ ಇತರ ಸಮುದಾಯಗಳಿಂದ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿಲ್ಲ. ಇಲ್ಲಿ ನಾವು ಯಾವಾತ್ತೂ ಸೌಹಾರ್ದಯುತವಾಗಿ ವಾಸಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಕೇರಳದ ಧಾರ್ಮಿಕ ಸಹಬಾಳ್ವೆಯ ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸುವ ಒಂದು ಹೆಜ್ಜೆಯಾಗಿ ದೇವಾಲಯದ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಮುಸ್ಲಿಂ ಲೀಗ್ ಪಕ್ಷದ ಯುವಜನ ವಿಭಾಗವಾದ ‘ಯೂತ್ ಲೀಗ್’ ಆಯೋಜಿಸಿತ್ತು.
ಓದಿ: 3 ಶಂಕಿತರಿದ್ದಾರೆ: ಗರ್ಭಿಣಿ ಆನೆ ಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ


