ರಾಜ್ಯ ಬಿಜೆಪಿ ನೇತೃತ್ವದ ಸರಕಾರ ರೈತರ ಕೃಷಿ ಉತ್ಪನ್ನಗಳ ಮಾರಾಟದಲ್ಲಿಯೂ ಮಾಫಿಯಾ ಸೃಷ್ಠಿ ಮಾಡುತ್ತಿದೆ. ರೈತರು ಇನ್ನು ಸುಮ್ಮನೆ ಕುಳಿತರೆ ಬೀದಿ ಪಾಲಾಗುವ ಪರಿಸ್ಥಿತಿ ಬರಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ವಿಜಯಪುರದಲ್ಲಿ ಇಂದು ತಿಳಿಸಿದ್ದಾರೆ.
ಜೂನ್ 27 ರಿಂದ ಒಂದು ವಾರಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರಾಜ್ಯದ 1,000 ಭಾಗಗಳಲ್ಲಿ ಹೋರಾಟ ನಡೆಸಲು ರೈತ ಹಾಗೂ ಕಾರ್ಮಿಕ ಸಂಗಟನೆಗಳು ನಿರ್ಧರಿಸಿದ್ದು, ಇದಕ್ಕಾಗಿ 10 ಸಂಘಟನೆಗಳು ಸೇರಿಕೊಂಡು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ರಚಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರ ಮೂರು ಸುಗ್ರಿವಾಜ್ಞೆಗಳನ್ನು ತಂದಿದ್ದು, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿ ಒಂದು ದೇಶ ಒಂದು ಮಾರುಕಟ್ಟೆ ಹೆಸರಿನಲ್ಲಿ ಇಡೀ ದೇಶದ ಕೃಷಿ ಮಾರುಕಟ್ಟೆಯನ್ನು ಹಾಳು ಮಾಡಿದೆ. ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸುತ್ತಿದೆ.” ಎಂದು ಅವರು ಆರೋಪಿಸಿದ್ದಾರೆ.
“ಈ ಕಾಯಿದೆಗಳು ರೈತರ ವಿರೋಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾಯಿದೆಗಳನ್ನು ರದ್ದು ಮಾಡಲು ಅಖಿಲ ಭಾರತ ಕಿಸಾನ ಸಂಘರ್ಷ ಸಮಿತಿ ಜೂನ್ 10 ರಂದು ಸಭೆ ನಡೆಸಿ ಹೋರಾಟದ ರೂಪುರೇಷೆ ನಿರ್ಧರಿಸಿದೆ. ಅಲ್ಲದೇ, ಇದರ ಜೊತೆ ಕರ್ನಾಟಕದಲ್ಲಿ ತಿದ್ದುಪಡಿ ಮಾಡಲಾಗಿರುವ 1961 ಭೂ ಕಾಯಿದೆ ತಿದ್ದುಪಡಿಯನ್ನು ವಿರೋಧಿಸಿ ಈ ಹೋರಾಟ ನಡೆಸಲಾಗುತ್ತಿದೆ” ಎಂದು ಮಾರುತಿ ಮಾನ್ಪಡೆ ತಿಳಿಸಿದ್ದಾರೆ.
“ಯಾರು ಬೇಕಾದವರೂ ಕೃಷಿ ಭೂಮಿಯನ್ನು ಖರೀದಿಸುವುದರಿಂದ ಭೂ ಮಾಫಿಯಾ ಹೆಚ್ಚಾಗುತ್ತದೆ. ರಾಜ್ಯ ಬಿಜೆಪಿ ನೇತೃತ್ವದ ಸರಕಾರ ರೈತರ ಕೃಷಿ ಉತ್ಪನ್ನಗಳ ಮಾರಾಟದಲ್ಲಿಯೂ ಮಾಫಿಯಾ ಸೃಷ್ಠಿ ಮಾಡುತ್ತಿದ್ದು, ರೈತರು ಇನ್ನು ಸುಮ್ಮನೆ ಕುಳಿತರೆ ಅನ್ನದಾತರು ಬೀದಿ ಪಾಲಾಗುವ ಪರಿಸ್ಥಿತಿ ಬರಲಿದೆ” ಎಂದು ಅವರು ಹೇಳಿದ್ದಾರೆ.
“ಈ ಕಾಯಿದೆಯಿಂದ ವ್ಯವಸಾಯದಲ್ಲಿ ತೊಡಗಿರುವ ಎಲ್ಲ ರೈತರು, ಗೇಣಿದಾರರು, ಕೃಷಿ ಕೂಲಿಕಾರರು, ಕಾರ್ಮಿಕರು, ಕಸಬುದಾರರು ಮತ್ತು ಇದನ್ನೇ ನಂಬಿ ಕೆಲಸ ಮಾಡುವ ಸಣ್ಣ ವ್ಯಾಪಾರಿಗಳು, ಕೃಷಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.
“ಒಟ್ಟಾರೆ ಗ್ರಾಮೀಣ ಪ್ರದೇಶವನ್ನು ಸ್ಮಶಾನ ಮಾಡುವ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿ ರಾಜ್ಯವನ್ನು ತೀವ್ರ ಸಂಕಷ್ಟಕ್ಕೆ ನೂಕುವ ಹುನ್ನಾರ ಇದರ ಹಿಂದೆ ಅಡಗಿದೆ” ಎಂದು ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.