ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಖೈದಿಯೊಬ್ಬನಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಮಧುಗಿರಿಯ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಜಗೋಪಾಲ್ ಇತ್ತೀಚೆಗೆ ಪೂಜಾರ ಹಳ್ಳಿಯಲ್ಲಿ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಲು ಬಂದಿದ್ದಾಗ ಅವರ ಮೇಲೆ ಅಶ್ವತ್ಥಪ್ಪ ಮತ್ತು ಕೃಷ್ಣಮೂರ್ತಿ ಜಾತಿ ನಿಂದನೆ ಮಾಡಿದ್ದರು. ರಾಜಗೋಪಾಲ್ ಮೇಲೆ ಹಲ್ಲೆಯನ್ನು ನಡೆಸಿದ್ದರು. ಹೀಗಾಗಿ ರಾಜಗೋಪಾಲ್ ಕೋಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗಾಗಿ ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ರಕ್ತ ಮತ್ತು ಗಂಟಲು ಸ್ರಾವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದರು.. ನ್ಯಾಯಾಲಯದಿಂದ ಅರೋಪಿಗಳನ್ನು ಜೈಲಿನಲ್ಲಿರಿಸಲಾಗಿತ್ತು.
ಇಂದು ಪರೀಕ್ಷೆಯ ವರದಿ ಬಂದಿದ್ದು, ವಿಚಾರಣಾಧೀನ ಕೈದಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಜೈಲಿನಿಂದ ಖೈದಿಯನ್ನು ಕೊರೊನಾ ಆಸ್ಪತ್ರೆಗೆ ದಾಖಲಿಸಿ, ಕೋಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಇದೇ ಮೊದಲ ಬಾರಿಗೆ ಕೊಡಿಗೇನ ಹಳ್ಳಿ ಠಾಣೆಯನ್ನು ಸೀಲ್ ಡೌನ್ ಮಾಡಿದ್ದು ಜನರನ್ನು ಭೀತಿಗೊಳ್ಳುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಶಾಸಕರು ಕೈಚೆಲ್ಲಿ ಕುಳಿತಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಇದನ್ನೂ ಓದಿ: ಇಂದಿನಿಂದ ಸಿಎಂ ಯಡಿಯೂರಪ್ಪ ವರ್ಕ್ ಫ್ರಂ ಹೋಮ್: ಕಾರಣವೇನು?