“ಚಪ್ಪಾಳೆ, ಹೂಮಳೆಗಳ ಗೌರವ ಸಾಕು! ಗೌರವಯುತ ಜೀವನ ನಡೆಸಲು ಸೂಕ್ತ ಗೌರವಧನ ಬೇಕು” ಘೋಷಣೆ ಇಂದು ಬೆಂಗಳೂರಿನಲ್ಲಿ ಮಾರ್ದನಿಸಿದೆ. ಜುಲೈ 10 ರಿಂದ ಹೋರಾಟಕ್ಕಿಳಿದಿರುವ ರಾಜ್ಯದ ಆಶಾ ಕಾರ್ಯಕರ್ತರು ಇಂದು ಬೆಂಗಳೂರಿಗೆ ಧಾವಿಸಿ ದನಿಯೆತ್ತಿದ್ದಾರೆ.
ಮಾಸಿಕ 12,000 ವೇತನ ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕಳೆದ 20 ದಿನಗಳಿಂದ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇಂದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಕಳೆದ ನಾಲ್ಕು ತಿಂಗಳುಗಳಿಂದ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿದ್ದರೂ ಸರ್ಕಾರ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸಿಲ್ಲ. ಈಗ ಸಿಗುತ್ತಿರುವ ಪ್ರೋತ್ಸಾಹಧನ ಯಾವುದಕ್ಕೂ ಸಾಲುತ್ತಿಲ್ಲ. ಹಾಗಾಗಿ 12,000 ಮಾಸಿಕ ವೇತನ ಮತ್ತು ಕೆಲಸ ಮಾಡುವ ವೇಳೆ ಸೂಕ್ತ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಆಶಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಲವು ಜಿಲ್ಲೆಗಳಿಂದಾ ನೂರಾರು ಆಶಾ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದ್ದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ನಗರದ ಮೌರ್ಯ ಸರ್ಕಲ್ ಬಳಿ ಪ್ರತಿಭಟನಾಕಾರರನ್ನು ತಡೆದಿದ್ದು ಅಲ್ಲಿಯೇ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆದಿದೆ.
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ಸಮಯದಲ್ಲಿಯೂ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಅವಶ್ಯಕ ಆರೋಗ್ಯ ರಕ್ಷಾಣ ಸಲಕರಣೆಗಳು ಸರ್ಕಾರ ನೀಡುತ್ತಿಲ್ಲ, ಮಾಸಿಕ ವೇತನ ನಿಗಧಿ ಮಾಡಿಲ್ಲ ಎಂದು ದೂರಿದ್ದಾರೆ.
ಈ ಹಿಂದೆ ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಹತ್ತಾರು ಭಾರಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿದೆ. ಆದರೆ ಸರ್ಕಾರ ಕೇವಲ ಭರವಸೆಗಳಲ್ಲೇ ಕೈತೊಳೆದುಕೊಂಡಿದೆ. ಆದರೆ ಈ ಬಾರಿ ನಮ್ಮ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೆಲ್ಲಾ ಆಶಾ ಕಾರ್ಯಕರ್ತರ ಪ್ರತಿಭಟನೆ ಎಂದರೆ ಬೆಂಗಳೂರು ಗುಲಾಬಿ ನಗರವಾಗಿ ಪರಿವರ್ತನೆಯಾಗುತ್ತಿತ್ತು. ಎಲ್ಲಿ ನೋಡಿದರು ಗುಲಾಬಿ ಬಣ್ಣದ ಸೀರೆಯುಟ್ಟ ಆಶಾ ಕಾರ್ಯಕರ್ತರ ದಂಡು ಕಂಡುಬರುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣವಾಗಿ ಎಲ್ಲಾ ಆಶಾ ಕಾರ್ಯಕರ್ತರು ಈ ಬಾರಿ ಬೆಂಗಳೂರಿಗೆ ಬಂದಿಲ್ಲ. ತಾವಿರುವ ಜಿಲ್ಲೆಗಳಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರತಿಭಟನೆಯಲ್ಲಿಯೂ ಸಹ ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಕಾಲದಲ್ಲೂ ‘ಆಶಾ’ರೋಧನ..! : ಈಗಲಾದರೂ ಮರುಗುವುದೇ ಸರ್ಕಾರ?


